Homeಕರ್ನಾಟಕವಿಜಯಾ ಬ್ಯಾಂಕ್ ವಿಲೀನ - ನಷ್ಟದ ಗುಜರಾತಿ ಬ್ಯಾಂಕ್ ಉಳಿಸಲು ಕನ್ನಡದ ಬ್ಯಾಂಕ್ ಬಲಿಕೊಟ್ಟರಾ ಮೋದಿ?

ವಿಜಯಾ ಬ್ಯಾಂಕ್ ವಿಲೀನ – ನಷ್ಟದ ಗುಜರಾತಿ ಬ್ಯಾಂಕ್ ಉಳಿಸಲು ಕನ್ನಡದ ಬ್ಯಾಂಕ್ ಬಲಿಕೊಟ್ಟರಾ ಮೋದಿ?

- Advertisement -
- Advertisement -

| ನಹುಷ |

ಏಪ್ರಿಲ್ 1ರಂದು ವಿಲೀನದ ಹೆಸರಿನಲ್ಲಿ ಅಜಮಾಸು ಒಂಬತ್ತು ದಶಕಗಳ ಇತಿಹಾಸವಿದ್ದ ಕನ್ನಡ ನೆಲದ ವಿಜಯ ಬ್ಯಾಂಕ್‌ನ ಉಸಿರು ನಿಲ್ಲಿಸಲಾಗಿದೆ. ಮೇಲ್ನೋಟಕ್ಕೆ ಇದು ವ್ಯವಹಾರವನ್ನು ಸರಳಗೊಳಿಸುವ ಪ್ರಕ್ರಿಯೆಯಂತೆ ಕಂಡುಬಂದರೂ ಆಂತರ್ಯದಲ್ಲಿ ಅಪಾಯಕಾರಿ ಕಾರ್ಪೊರೇಟ್ ಅಜೆಂಡಾವನ್ನು ಹೊಂದಿದೆ. ವಿಜಯಾ ಬ್ಯಾಂಕ್ ಸಿಬ್ಬಂದಿಗಳು ಪ್ರತಿಭಟನೆ ನಡೆಸಿ ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡಾದೊಳಗೆ ವಿಲೀನ ಮಾಡುವುದನ್ನು ವಿರೋಧಿಸಿದರೂ ತಲೆ ಕೆಡಿಸಿಕೊಳ್ಳದ ಕೇಂದ್ರ ಸರ್ಕಾರದ ಕ್ರಮದ ಹಿಂದೆ ಬೇರೆಯದೇ ಲೆಕ್ಕಾಚಾರಗಳಿವೆ. ಬ್ಯಾಂಕ್‌ಗಳು ಉದ್ಯಮಿಗಳಿಗೆ ಕೋಟಿಗಟ್ಟಲೆ ಸಾಲ ಕೊಟ್ಟು, ಅವರೆಲ್ಲ ಅನಾಯಾಸವಾಗಿ ದೇಶ ಬಿಟ್ಟು ಪರಾರಿಯಾಗಿ ಸಾಲ ಕೊಟ್ಟ ಬ್ಯಾಂಕುಗಳನ್ನೇ ದಿವಾಳಿಯಂಚಿಗೆ ತಳ್ಳುತ್ತಿರುವ ಈ ಹಂತದಲ್ಲಿ ಮೋದಿ ಸರ್ಕಾರ ಕೈಗೊಂಡಿರುವ ಈ ಕ್ರಮ ಬೇರೆಯದೇ ಹಕೀಕತ್ತುಗಳನ್ನು ಒಳಗೊಂಡಿದೆ. ಏನು ಆ ಹಕೀಕತ್ತುಗಳು, ಜನರ ದುಡ್ಡು ಹೇಗೆಲ್ಲ ಯಾಮಾರುವ ಸಾಧ್ಯತೆ ಇದೆ ಅನ್ನೋದನ್ನು ಈ ಲೇಖನದಲ್ಲಿ ವಿವರವಾಗಿ ಚರ್ಚಿಸಲಾಗಿದೆ.

ರಿಸರ್ವ್ ಬ್ಯಾಂಕಿನ ಮೀಸಲು ನಿಧಿ ಬಳಸಿಕೊಳ್ಳಲು ಹೆಣಗಾಡಿ ಸೋತ ಕೇಂದ್ರ ಸರ್ಕಾರ ಈಗ ಬ್ಯಾಂಕ್ ವಿಲೀನದ ವಿಕೃತ ಆಟ ಆರಂಭಿಸಿದೆ! ನಷ್ಟದಲ್ಲಿರುವ ಬ್ಯಾಂಕುಗಳನ್ನು ಲಾಭದ ಬ್ಯಾಂಕ್‌ನಲ್ಲಿ ಸೇರಿಸುವ ಮೋದಿ ತಂಡದ ಮಸಲತ್ತಿನಲ್ಲಿ ಇಡೀ ಬ್ಯಾಂಕಿಂಗ್ ಕ್ಷೇತ್ರವನ್ನೇ ಖಾಸಗಿಯವರಿಗೆ ವಹಿಸುವ ರಹಸ್ಯ ಕಾರ್ಯಸೂಚಿ ಅಡಗಿದೆ. ವಿಲೀನದ ನಂತರ ಸಹಜವಾಗೇ ಹಾನಿಗೊಳಗಾಗುವ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡುವ ಹುನ್ನಾರವಿದು!

ಇಂದಿರಾ ಗಾಂಧಿಯವರು ಬ್ಯಾಂಕ್ ರಾಷ್ಟ್ರೀಕರಣದ ದಿಟ್ಟ ನಿರ್ಧಾರದಿಂದ ಬ್ಯಾಂಕುಗಳು ಜನಸಾಮಾನ್ಯರಿಗೂ ಕೈಗೆಟಕುವಂತೆ ಮಾಡಿದ್ದರು. ಆದರೆ ಮೋದಿಯವರು ಮತ್ತೆ ಬ್ಯಾಂಕುಗಳನ್ನು ಖಾಸಗೀಕರಣ ಮಾಡಿ ವಂಚಕ ವರ್ತಕರಿಗಷ್ಟೇ ಸೀಮಿತಗೊಳಿಸುತ್ತಿದ್ದಾರಾ ಎಂಬ ಅನುಮಾನ ಇತ್ತೀಚಿನ ಅವರ ನಡೆಗಳಿಂದ ಮೂಡುತ್ತದೆ. ಕೆಲವು ತಿಂಗಳ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರು-ವಿಶ್ವೇಶ್ವರಯ್ಯನವರ ಕಾಲದಲ್ಲಿ ಸ್ಥಾಪನೆಯಾಗಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಲೀನ ಮಾಡಲಾಗಿತ್ತು. ಈಗ ಕರಾವಳಿ ಜನ ಜೀವನದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ವಿಜಯ ಬ್ಯಾಂಕನ್ನು ಗುಜರಾತಿ ಬನಿಯಾಗಳ ಬ್ಯಾಂಕ್ ಆಫ್ ಬರೋಡದಲ್ಲಿ ವಿಲೀನ ಮಾಡಲಾಗಿದೆ. ಮಹಾರಾಷ್ಟ್ರದ ದೇನಾ ಬ್ಯಾಂಕ್ ಸಹ ಈ ವಿಲೀನದಲ್ಲಿ ಸೇರಿದೆ. ಮೊದಲು ಕರಾವಳಿಯ ಕೆನರಾ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್‌ಗಳನ್ನೆಲ್ಲ ಸೇರಿಸಿ ಒಂದೇ ಬ್ಯಾಂಕ್ ಮಾಡಲಾಗುತ್ತದೆಂಬ ಮಾತು ಕೇಳಿಬಂದಿತ್ತು. ಆದರೆ ಲಾಭದ ವಿಜಯಾ ಬ್ಯಾಂಕನ್ನು ಮಾತ್ರ ನಷ್ಟದ ಬ್ಯಾಂಕ್ ಆಫ್ ಬರೋಡದಲ್ಲಿ ವಿಲೀನದ ಕರಾಮತ್ತು ನಡೆದಿದೆ.

ಸುಂದರ ರಾಮ ಶೆಟ್ಟಿ

ವಿಜಯ ಬ್ಯಾಂಕ್ ಅಂದರೆ, ಅದು ಕರ್ನಾಟಕ-ಕರಾವಳಿಯ ತುಳುವರ ಅಸ್ಮಿತೆಯ ಆಸ್ತಿ; ಸ್ಥಳೀಯ ಬಂಟ ಸಮುದಾಯದ ಆತ್ಮಾಭಿಮಾನದ ಸಂಕೇತ. ಈ ಸಮುದಾಯದ ಶ್ರಮ-ಸಾಹಸದ ಫಲವಾಗಿ ವಿಜಯ ಬ್ಯಾಂಕ್ ಲಾಭದಾಯಕ ಆರ್ಥಿಕ ಆಡಳಿತದ ಬರೋಬ್ಬರಿ 2,129 ಶಾಖೆಗಳ ಬೃಹತ್ ಪ್ರತಿಷ್ಠಿತ ಉದ್ಯಮವಾಗಿ ದೇಶಾದ್ಯಂತ ಕಂಗೊಳಿಸುತ್ತಿತ್ತು! 23 ಅಕ್ಟೋಬರ್ 1931ರಲ್ಲಿ ಎ.ಬಿ.ಶೆಟ್ಟಿ (ಅತ್ತಾವರ ಬಾಲಕೃಷ್ಣ ಶೆಟ್ಟಿ) ಪ್ರಗತಿಪರ ರೈತರ ಸಹಕಾರದಿಂದ ಬಂಟ್ಸ್ ಹಾಸ್ಟೆಲ್ ಬಳಿಯ ಪುಟ್ಟ ಕೊಠಡಿಯಲ್ಲಿ ಬ್ಯಾಂಕ್ ಹುಟ್ಟುಹಾಕಿದ್ದರು. ವಿಜಯ ದಶಮಿ ದಿನದಂದು ಬ್ಯಾಂಕ್ ಸ್ಥಾಪನೆಯಾಗಿದ್ದರಿಂದ ಅದಕ್ಕೆ “ವಿಜಯ ಬ್ಯಾಂಕ್” ಎಂದು ನಾಮಕರಣ ಮಾಡಲಾಗಿತ್ತು. ತುಳುನಾಡಿನ ದುರ್ಬಲ ರೈತರು, ಅಮಾಯಕ ಮಂದಿಯ ಆರ್ಥಿಕ ಅನುಕೂಲದ ಉದ್ದೇಶದಿಂದ ಜನ್ಮತಳೆದಿದ್ದ ವಿಜಯ ಬ್ಯಾಂಕಿಗೆ ಆಧುನಿಕ ಸ್ಪರ್ಶ ಕೊಟ್ಟು ದೇಶಾದ್ಯಂತ ಹಬ್ಬಿಸಿದ್ದು ಮುಲ್ಕಿ ಸುಂದರ ರಾಮಶೆಟ್ಟಿ. ಆ ಕಾಲದ ಮಂಗಳೂರಿನ ಪ್ರತಿಷ್ಠಿತ ಬ್ಯಾಂಕ್ ಅನ್ನಿಸಿದ್ದ ಜಯಲಕ್ಷ್ಮೀ ಬ್ಯಾಂಕ್ ಸೇರಿದಂತೆ ಇನ್ನಿತರ ಹದಿನಾಲ್ಕು ಬ್ಯಾಂಕ್‌ಗಳು ವಿಜಯ ಬ್ಯಾಂಕ್‌ನಲ್ಲಿ ವಿಲೀನವಾಗಿದ್ದವು.

ಎ.ಬಿ ಶೆಟ್ಟಿ

ಪ್ರಗತಿಪರ ರೈತರ ಪರಿಶ್ರಮದಿಂದ ಪ್ರಗತಿಯತ್ತ ಸಾಗಿದ ವಿಜಯ ಬ್ಯಾಂಕ್‌ನ 27 ಶಾಖೆಗಳು 1975ರಲ್ಲಿ ಒಂದೇ ದಿನ ತೆರೆಯಲ್ಪಟ್ಟಿದ್ದು ಬ್ಯಾಂಕಿಂಗ್ ವಲಯದಲ್ಲೊಂದು ಅಚ್ಚಳಿಯದ ಸಾಧನೆ! ಇವತ್ತು ವಿಜಯ ಬ್ಯಾಂಕಿನ 583 ಶಾಖೆಗಳು ಕರ್ನಾಟಕದಲ್ಲಿದ್ದರೆ, ಉಳಿದದ್ದು ದೇಶದ ವಿವಿಧೆಡೆ ಗ್ರಾಹಕಸ್ನೇಹಿಯಾಗಿ ವ್ಯವಹರಿಸುತ್ತಿದ್ದವು. ಗ್ರಾಮಿಣ ಪ್ರದೇಶದಲ್ಲೇ ಶೇ.50ರಷ್ಟು ಶಾಖೆಗಳಿರುವುದು ವಿಜಯ ಬ್ಯಾಂಕಿನ ಹೆಚ್ಚುಗಾರಿಕೆ. ಸಿಂಡಿಕೇಟ್ ಬ್ಯಾಂಕಿಗೆ ಹೇಗೆ ಕೊಂಕಣಿಗರ ಬ್ಯಾಂಕ್ ಎಂದೇ ಛಾಪು ಬಿದ್ದಿದೆಯೋ ಹಾಗೆ ವಿಜಯಾ ಬ್ಯಾಂಕ್ ಅಂದರೆ, ಬಂಟರ ಬ್ಯಾಂಕ್ ಎಂದೇ ಹೆಸರುವಾಸಿ. ಈ ಎರಡು ಬ್ಯಾಂಕುಗಳಿಂದ ಎಲ್ಲ ಸಮುದಾಯದವರಿಗೆ ಪ್ರಯೋಜನವಾಗಿದೆ.

ಬಂಟರು ದೇಶಕ್ಕೆ ಕೊಟ್ಟ ಕೊಡುಗೆಯಲ್ಲಿ ವಿಜಯಾ ಬ್ಯಾಂಕ್ ಎದ್ದು ಕಾಣುವಂತದ್ದು. ರಾಜ್ಯದ ಹಿಡಿತದಲ್ಲಿರುವ ಬ್ಯಾಂಕುಗಳಲ್ಲಿ ವಿಜಯಾ ಬ್ಯಾಂಕ್ ನಿರಂತರ ಲಾಭದ ಬ್ಯಾಂಕ್ ಎಂದೇ ಗುರುತಿಸಿಕೊಂಡಿದೆ. ಇಂಥ ಹೆಗ್ಗಳಿಕೆ ಸಾಧನೆಯ ಜನಾನುರಾಗಿ ಬ್ಯಾಂಕನ್ನು ನಾಮಾವಶೇಷ ಮಾಡಲು ಮೋದಿಯ ಕೇಂದ್ರ ಸರ್ಕಾರ ಸಂಚು ಹೂಡಿರುವುದಾದರು ಯಾಕೆ? ಈ ಪ್ರಶ್ನೆಗೆ ಸರ್ಕಾರದ ಬಳಿ ಸಮರ್ಪಕವಾದ ಉತ್ತರವೇ ಇಲ್ಲ.

ಗುಜರಾತಿ ಲಾಬಿ ಅವಸಾನದ ಅಂಚಲ್ಲಿರುವ ತಮ್ಮ ಬ್ಯಾಂಕ್ ಆಫ್ ಬರೋಡ ಎಂಬ ಬರಡು ಆರ್ಥಿಕ ಅಡ್ಡೆಯನ್ನು ಬಚಾವು ಮಾಡಲು ವಿಜಯಾ ಬ್ಯಾಂಕಿನ ಬಲಿ ಕೇಳುತ್ತಿದೆ!! ಮುಳುಗುತ್ತಿರುವ ಮಹಾರಾಷ್ಟ್ರದ ದೇನಾ ಬ್ಯಾಂಕನ್ನು ನೆಪಕ್ಕಷ್ಟೇ ಈ ವಿಲೀನದಲ್ಲಿ ಸೇರಿಸಲಾಗಿದೆ. ಮೂರು ಬ್ಯಾಂಕನ್ನು ಸ್ಯಾಂಡ್‌ವಿಚ್ ಮಾಡಿ ಪಾಪರ್ ಹಾದಿಯಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಹೆಸರನ್ನು ಏಕೀಕೃತ ಸಂಸ್ಥೆಗೆ ಇಡಲಾಗಿದೆ.

ವಿಲೀನದ ವಿರುದ್ಧ ಬ್ಯಾಂಕ್ ನೌಕರರ ಪ್ರತಿಭಟನೆ

ಇದೊಂದು ಗುಜರಾತಿ ಬನಿಯಾ ಗ್ಯಾಂಗಿನ ವಂಚನೆ-ಮೋಸದ ವಿಲೀನ! ದೊಡ್ಡ-ದೊಡ್ಡ ವರ್ತಕರು, ಉದ್ಯಮಿಗಳು ಸಾಲ ಮರುಪಾವತಿ ಮಾಡದೆ ಉಂಡೆನಾಮ ತಿಕ್ಕಿದ್ದರಿಂದ ಬರೋಡ ಬ್ಯಾಂಕು ಬಾಗಿಲು ಎಳೆದುಕೊಳ್ಳುವಂತಾಗಿದೆ. ಗುಜರಾತಿನ ದೋಖಾ ದಂಧೆದಾರರು ಹೇಗೆ ಬ್ಯಾಂಕುಗಳನ್ನು ಯೋಜನಾಬದ್ಧವಾಗಿ ದೋಚಿದ್ದಾರೆಂಬುದಕ್ಕೆ ಬರೋಡಾ ಬ್ಯಾಂಕು ಭಾನ್ಗಡಿ ಜೀವಂತ ನಿದರ್ಶನ! ಇಂಥ ಟೈಟಾನಿಕ್ ಹಡಗನ್ನು ಎತ್ತುವ ಹಠಕ್ಕೆ ಬಿದ್ದಿರುವ ಕೇಂದ್ರ ಹಣಕಾಸು ಇಲಾಖೆಗೆ ಕಂಡದ್ದು ಕರ್ನಾಟಕ ಮೂಲದ ಸಮೃದ್ಧ ವಿಜಯಾ ಬ್ಯಾಂಕ್. 2017-18ರ ವಿತ್ತೀಯ ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಇಪ್ಪತ್ತೊಂದು ಬ್ಯಾಂಕುಗಳಲ್ಲಿ ವಿಜಯಾ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ ಬಿಟ್ಟರೆ ಉಳಿದೆಲ್ಲವೂ ಹಾನಿಯಲ್ಲಿ ಏದುಸಿರು ಬಿಡುತ್ತಿದ್ದವು. ವಿಜಯಾ ಬ್ಯಾಂಕ್ ಭರ್ಜರಿ 727 ಕೋಟಿ ರೂ. ಲಾಭದ ಸಾಧನೆ ಮಾಡಿತ್ತು. ಇದು ಗುಜರಾತಿ ಗ್ಯಾಂಗಿನ ಕಣ್ಣು ಕುಕ್ಕಿತು.

ಗುಜರಾತಿನ ಬರೋಡಾ ಬ್ಯಾಂಕ್ ಮತ್ತು ಮಹಾರಾಷ್ಟçದ ದೇನಾ ಬ್ಯಾಂಕ್ ಪೈಪೋಟಿಗೆ ಬಿದ್ದಂತೆ ನಷ್ಟ ಮಾಡಿಕೊಂಡಿವೆ. 2017-18ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಬರೋಡ ಬ್ಯಾಂಕ್‌ಗೆ 3.102.34 ಕೋಟಿ ಹಾನಿಯಾಗಿದೆ. ಅತ್ತ ದೇನಾ ಬ್ಯಾಂಕ್‌ಗೆ 2016-17ರ ಸೆಪ್ಟಂಬರ್‌ಗೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ 416.70 ಕೋಟಿ ರೂಪಾಯಿ ಟೋಪಿ ಬಿದ್ದಿದೆ! ಹಿಂದಿನ ವರ್ಷ ಇದೇ ಅವಧಿಯಲ್ಲಿ ಆದದ್ದಕಿಂತ ದುಪ್ಪಟ್ಟು ನಷ್ಟವಾಯಿತೆಂದು ದೇನಾ ಬ್ಯಾಂಕ್ ಹೇಳಿಕೆ ನೀಡಿದೆ. ಕೆಟ್ಟ ಸಾಲಗಳಿಗಾಗಿನ ಬರೋಡ ಬ್ಯಾಂಕ್ ಮೀಸಲು ನಿಧಿ 2016-17ನೇ ಸಾಲಿನಲ್ಲಿ 2.425.07 ಕೋಟಿ; 2017-18ನೇ ವರ್ಷದಲ್ಲಿ ಕೆಟ್ಟ ಸಾಲಗಳ ಮಿಸಲು ನಿಧಿ 7.052.53 ಕೋಟಿಯಷ್ಟು ಏರಿಕೆಯಾಗಿದೆ. ಹಾಗಂತ ಬರೋಡ ಬ್ಯಾಂಕ್ ವರದಿಯೇ ಹೇಳುತ್ತಿದೆ.

ಬೇಕಾಬಿಟ್ಟಿ ಸಾಲ ಕೊಟ್ಟಿರೋ ಬರೋಡ ಬ್ಯಾಂಕ್ ಅದನ್ನು ಮರುಪಾವತಿ ಮಾಡಿಸಿಕೊಳ್ಳಲಾಗದೆ ಎಡವಿದೆ. ಅಸಮರ್ಥ ಕಾರ್ಯವೈಖರಿಯ ಈ ಗುಜರಾತಿ ಬ್ಯಾಂಕ್ ಬದುಕಿಸಲು ಮೋದಿ ಸರ್ಕಾರ ಬ್ಯಾಂಕಿಂಗ್ ಕ್ಷೇತ್ರದ ಫೈನಾನ್ಸಿಯಲ್ ಟೆಕ್‌ಟೀಸ್ ತನ್ನದೆಂಬಂತೆ ಬಿಂಬಿಸುತ್ತಿದೆ. ದುರ್ಬಲ ಬ್ಯಾಂಕ್ ಉಳಿಸಲು ಸದೃಢ ಬ್ಯಾಂಕನ್ನು ನುಂಗಿ ಹಾಕೋದು ಯಾವ ಸೀಮೆ ನ್ಯಾಯ? ದುರ್ಬಲ ಬ್ಯಾಂಕ್-ಬಲಿಷ್ಟ ಬ್ಯಾಂಕ್ ಒಂದಾಗಿಸುವುದಕ್ಕೆ ಆಕ್ಷೇಪ ಬರಲಾರದು. ಆದರೆ ಯಾವ ಪ್ರಮಾದ ಮಾಡದ ನ್ಯೂನತೆ ಇಲ್ಲದ ಬ್ಯಾಂಕಿನ ಹೆಸರೇಕೆ ಅಳಿಸಲಾಗುತ್ತಿದೆ? ಸದ್ರಿ ವಿಲೀನ ಪ್ರಕ್ರಿಯೆಯಲ್ಲಿ ಶಕ್ತಿಶಾಲಿ, ಕಳಂಕ ರಹಿತ ಆರ್ಥಿಕ ವಹಿವಾಟಿನ ಸಂಸ್ಥೆ ವಿಜಯ ಬ್ಯಾಂಕ್ ನ್ಯಾಯಯುತವಾಗಿ ದಿವಾಳಿಗೊಂಡ ದೇನಾ ಮತ್ತು ಬರೋಡ ಬ್ಯಾಂಕ್‌ನ ಬೋರ್ಡ್ ತೆಗೆದು ವಿಜಯ ಬ್ಯಾಂಕ್ ಎಂದು ಹೆಸರಿಡಬೇಕಿತ್ತು. ಇದು ನೈಸರ್ಗಿಕ ನ್ಯಾಯತತ್ವವಷ್ಟೇ ಅಲ್ಲ ನೈತಿಕ ನಡೆಯೂ ಹೌದು. ಇಂಥ ನೀತಿ ಮೋದಿ ಮತ್ತವರ ಸಲಹೆಗಾರ ಪಂಡಿತರಿಗೆ ಅದ್ಹೇಗೆ ಅರ್ಥವಾದೀತು?

ಮೋದಿಯವರ ರಾಜ್ಯ ಗುಜರಾತಿ ಬ್ಯಾಂಕ್‌ನ ಹೆಸರನ್ನು ನಿರ್ಲಜ್ಜವಾಗಿ ಮೆರೆಸಲು ವಿಜಯ ಬ್ಯಾಂಕಿನ ಅಸ್ತಿತ್ವವನ್ನೇ ತುಳಿದು ಹಾಕಿದೆ. ಕರ್ನಾಟಕದ ಮಣ್ಣಿನ ಮಕ್ಕಳು ಕಟ್ಟಿ ಬೆಳೆಸಿದ ಬ್ಯಾಂಕನ್ನು ಗುಜರಾತಿಗಳು ಅಪಹರಿಸಿದ್ದಾರೆ. ಈಗ ವಿಜಯ ಬ್ಯಾಂಕ್ ಅನ್ನು ಆಪೋಷನ ತೆಗೆದುಕೊಂಡಂತೆ ನಂತರದ ದಿನಗಳಲ್ಲಿ ಬ್ಯಾಂಕುಗಳ ತವರು ಕರಾವಳಿಯ ಕೆನರಾ, ಕಾರ್ಪೋರೇಷನ್, ಸಿಂಡಿಕೇಟ್ ಬ್ಯಾಂಕುಗಳನ್ನು ಒಂದೊಂದಾಗಿ ಉತ್ತರ ಭಾರತದ ಮುಳುಗುವ ಬ್ಯಾಂಕುಗಳ ಉಳಿಸಲು ಬೇಟೆ ಆಡಿದರೆ ಅಚ್ಚರಿಯಿಲ್ಲ.

ಈ ವಿಲೀನದ ವಿಕೃತಿ ಹಲವು ತಿಂಗಳಿಂದ ನಡೆಯುತ್ತಲೇ ಇತ್ತು. ವಿಜಯಾ ಬ್ಯಾಂಕಿನ ಉದ್ಯೋಗಿಗಳು ಹಾಗೂ ನಿವೃತ್ತ ನೌಕರರು ವಿಲೀನ ಬೇಡವೆಂದು ಪ್ರತಿಭಟನೆ ಮಾಡಿದ್ದರು. ಪ್ರತಿರೋಧದ ಮೂಲಕ ಕೇಂದ್ರ ಸರ್ಕಾರದ ಪ್ರಭೃತಿಗಳ ಕಣ್ಣುತೆರೆಸಲು ಪ್ರಯತ್ನಿಸಿದ್ದರು. ಆದರೆ ಇದ್ಯಾವುದನ್ನು ಆಳುವ ವರ್ಗ ಕಿವಿ ಮೇಲೆ ಹಾಕಿಕೊಳ್ಳಲೇ ಇಲ್ಲ. ಏಕಪಕ್ಷೀಯವಾಗಿ ಕೇಂದ್ರ ಸಚಿವ ಸಂಪುಟ ವಿಲೀನಕ್ಕೆ ತಥಾಸ್ತು ಎಂದಿದೆ! ಇಷ್ಟಾದರೂ ಕೇಂದ್ರದಲ್ಲಿ ಮಂತ್ರಿಯಾಗಿರುವ ಕರಾವಳಿಯ ಸದಾನಂದಗೌಡ, ಅನಂತ್ಕುಮಾರ ಹೆಗಡೆ, ಸಂಸದ ನಳೀನ್‌ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಮೊದಲಾದವರು ತಮ್ಮದೇ ಸರ್ಕಾರದ ಮುಂದೆ ಕನ್ನಡ ನೆಲದ ಬ್ಯಾಂಕು ಉಳಿಸಲು ಪ್ರಯತ್ನ ನಡೆಸಲಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...