ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟ 48ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಸುಪ್ರೀಂ ಕೋರ್ಟ್ನಲ್ಲಿ ಈ ವಿಚಾರದ ತೀರ್ಪು ಪ್ರಕಟವಾಗಲಿದೆ. ಆದರೆ ನಿನ್ನೆಯ ಸುಪ್ರೀಂ ಕೋರ್ಟ್ನ ಕಾಯ್ದೆಗೆ ತಾತ್ಕಾಲಿಕ ತಡೆ ನೀಡಬೇಕು ಮತ್ತು ಪರಿಹಾರಕ್ಕಾಗಿ ಸಮಿತಿ ರಚಿಸಬೇಕೆಂಬ ಆದೇಶವನ್ನು ರೈತ ಮುಖಂಡರು ತಿರಸ್ಕರಿಸಿದ್ದಾರೆ. No appeal only Repeal ಎಂಬುದಾಗಿ ರೈತರು ಸ್ಪಷ್ಟಪಡಿಸಿದ್ದು, ರೈತ ಹೋರಾಟ ಅದೇ ದಿಟ್ಟತೆಯೊಂದಿಗೆ ಮುಂದುವರೆಯಲಿದೆ ಎಂದು ಘೋಷಿಸಿದ್ದಾರೆ.
ರೈತ ಹೋರಾಟದ ಮುಖವಾಣಿಯಾಗಿರುವ ಕಿಸಾನ್ ಏಕ್ತಾ ಮೋರ್ಚಾ ಟ್ವಿಟ್ಟರ್, ಫೇಸ್ಬುಕ್, ಯೂಟ್ಯೂಬ್ಗಳಲ್ಲಿ ಪ್ರತಿದಿನವು ಒಂದೊಂದು ಹೋರಾಟದ ಹ್ಯಾಷ್ಟ್ಯಾಗ್ಗಳನ್ನು ನೀಡಲಾಗುತ್ತದೆ. ಈ ಹ್ಯಾಷ್ಟ್ಯಾಗ್ ಬಳಸಿ ಟ್ವೀಟ್ ಮಾಡಲು ಕರೆ ನೀಡಲಾಗುತ್ತದೆ. ಅದರಂತೆ ಇಂದು No appeal only Repeal ಎಂದು ಘೋಷಿಸಿರುವ ರೈತರು #FarmersAppealLawsRepeal ಎಂಬ ಹ್ಯಾಷ್ಟ್ಯಾಗ್ ನೀಡಿದ್ದಾರೆ.
ಅಲ್ಲದೆ “ಗೌರವಾನ್ವಿತ ಸುಪ್ರೀಂ ಕೋರ್ಟ್ ಕೃಷಿ ಕಾಯ್ದೆಗಳ ಜಾರಿಯನ್ನು ತಡೆಯುವ ಸುಪ್ರೀಂ ಕೋರ್ಟ್ ಸಲಹೆಯನ್ನು ಎಲ್ಲ ಸಂಘಟನೆಗಳು ಸ್ವಾಗತ್ತಿಸುತ್ತವೆ. ಆದರೆ ರೈತ ಸಂಘಟನೆಗಳು ಸಾಮೂಹಿಕವಾಗಿ ಹಾಗೂ ವ್ಯಕ್ತಿಗತವಾಗಿ ಸುಪ್ರೀಂ ಕೋರ್ಟ್ ನೇಮಿಸಲಿರುವ ಸಮಿತಿಯ ಸಭೆಗಳಲ್ಲಿ ಭಾಗವಹಿಸುವುದಿಲ್ಲ” ಎಂದು ರೈತ ಮುಖಂಡರು ಘೋಷಿಸಿದ್ದಾರೆ.
ರೈತರು ಮತ್ತು ಅವರ ಪ್ರತಿನಿಧಿಗಳಾಗಿ ನಾವು ಸುಪ್ರೀಂ ಕೋರ್ಟ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ, ಅದರ ಸಲಹೆಯನ್ನು ಒಪ್ಪಿಕೊಳ್ಳದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ. ನಮ್ಮ ಹೋರಾಟವು ದೇಶದಲ್ಲಿರುವ ಲಕ್ಷಾಂತರ ರೈತರ ಒಳಿತಿಗಾಗಿ ನಡೆಯುತ್ತಿದೆ ಮತ್ತು ಸಾರ್ವಜನಿಕ ಹಿತಾಸಕ್ತಿ ಹೊಂದಿದೆ. ಸರ್ಕಾರವು ಈ ಪ್ರತಿಭಟನೆಯನ್ನು ಪಂಜಾಬ್ ರೈತರಿಗಷ್ಟೇ ಸೀಮಿತಗೊಳಿಸುತ್ತಿದ್ದು, ಹರ್ಯಾಣ, ಉತ್ತರ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಮಧ್ಯ ಪ್ರದೇಶ, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಿಂದ ಆಗಮಿಸಿದ ರೈತರು ದೆಹಲಿ ಗಡಿಯಲ್ಲಿ ಸೇರಿದ್ದಾರೆ. ಅಷ್ಟೇ ಅಲ್ಲ ವಿವಿಧ ರಾಜ್ಯಗಳಲ್ಲೂ ಪ್ರತಿಭಟನೆ ನಡೆಯುತ್ತಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಇದನ್ನೂ ಓದಿ: ಜನವರಿ 26 ಕ್ಕೆ ಬೃಹತ್ ಟ್ರ್ಯಾಕ್ಟರ್ ರ್ಯಾಲಿ: ಬೆದರಿ ಸುಪ್ರೀಂ ಕೋರ್ಟ್ ಮೊರೆ ಹೋದ ಕೇಂದ್ರ ಸರ್ಕಾರ!