ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಸುಪ್ರೀಂಕೋರ್ಟ್ನ ಹಿರಿಯ ವಕೀಲ ಕಪಿಲ್ ಸಿಬಲ್ ಇಂದು ಪತ್ರಿಕಾಗೋಷ್ಠಿಯಲ್ಲಿ ಕುಟುಕು ಕಾರ್ಯಾಚರಣೆಯಲ್ಲಿ ಬಯಲಾದ ಭಾರೀ ಬೃಹತ್ ಎನ್ನಬಹುದಾದ ಹಗರಣವೊಂದರ ವಿವರಗಳನ್ನು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹಲವು ವಿಡಿಯೋ ತುಣುಕುಗಳನ್ನೂ ಪ್ರದರ್ಶಿಸಿದ್ದಲ್ಲದೇ, ಸುದೀರ್ಘವಾದ ವಿಡಿಯೋವನ್ನೂ ಪತ್ರಕರ್ತರ ಮುಂದಿಟ್ಟಿದ್ದಾರೆ. ಪಿಟಿಐ ಸುದ್ದಿ ಸಂಸ್ಥೆಯಿಂದ ಪಡೆದ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಹಲವು ಸುದ್ದಿ ಸಂಸ್ಥೆಗಳು ಈ ಸುದ್ದಿಯನ್ನು ದೇಶದ ಮುಂದಿಟ್ಟಿದ್ದಾರೆ.
ನೋಟು ರದ್ದತಿಯ ಸಂದರ್ಭದಲ್ಲಿ ಸರ್ಕಾರೀ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಮತ್ತು ಬಿಜೆಪಿಯ ನಾಯಕರ ಒಂದು ಜಾಲ ಕಾನೂನು ಬಾಹಿರವಾಗಿ ನೋಟುಗಳನ್ನು ಬದಲಿಸಿಕೊಂಡರೆಂದು ಅದು ಹೇಳುತ್ತದೆ. ಕ್ಯಾಬಿನೆಟ್ ಸಚಿವಾಲಯದ ಸಿಬ್ಬಂದಿಯೆಂದು ಹೇಳಲಾದ ರಾಹುಲ್ ರಾತ್ರೇಕರ್ ಎಂಬಾತನ ಪ್ರಕಾರ ಬಿಜೆಪಿ ಅಧ್ಯಕ್ಷ ಅಮಿತ್ಷಾ ನೇತೃತ್ವದ ತಂಡವು 35-40% ಕಮೀಷನ್ ಪಡೆದುಕೊಂಡು ಇವೆಲ್ಲವನ್ನೂ ಮಾಡಿದೆ. ವಿವಿಧ ಮಂತ್ರಿಗಳು ಮತ್ತು ಉದ್ದಿಮೆಪತಿಗಳ ಭಾರೀ ಮೊತ್ತದ ಹಣವನ್ನು ವಿಮಾನಗಳಲ್ಲಿ ಹಿಂಡನ್ ಏರ್ಬೇಸ್ಗೆ ತರಲಾಯಿತು ಮತ್ತು ಅಲ್ಲಿಂದ ರಿಸರ್ವ್ ಬ್ಯಾಂಕ್ಗೆ ಕೊಂಡೊಯ್ಯಲಾಯಿತು, ಸುಮಾರು 20,000 ಕೋಟಿ ರೂ.ಗಳಷ್ಟು ವಹಿವಾಟನ್ನು ತಾನೇ ಖುದ್ದು ನೋಡಿದ್ದಾಗಿ ಆತ ಹೇಳುತ್ತಾನೆ.
ಕಪಿಲ್ ಸಿಬಲ್ ಅವರು ಹೇಳುವಂತೆ ‘ಆರ್ಬಿಐನಲ್ಲಿ ವಹಿವಾಟನ್ನು ಪುನರಪಿ ಮಾಡಲು ಜಿಯೋದಿಂದ ಪಡೆದುಕೊಂಡ ಡಾಟಾಬೇಸ್ಅನ್ನು ದುರ್ಬಳಕೆ ಮಾಡಿಕೊಳ್ಳಲಾಯಿತು ಮತ್ತು -ಹಿಂದೆಯೂ ಸುದ್ದಿಯಾಗಿರುವ -ಊರ್ಜಿತ್ ಪಟೇಲರ ಸಹಿ ಇದ್ದ 2000 ರೂ.ಗಳ ನೋಟುಗಳನ್ನು 6 ತಿಂಗಳ ಹಿಂದೆಯೇ ಮುದ್ರಿಸಲಾಗಿತ್ತೆಂದು ರಾಹುಲ್ ರಾತ್ರೇಕರ್ ವಿವರಿಸುತ್ತಾನೆ’.
ಇಂಡಸ್ಇಂಡ್ ಬ್ಯಾಂಕ್ನ ಅಧಿಕಾರ ಸಂಜಯ್ ಚನ್ನೇ ಎಂಬಾತನೆಂದು ಹೇಳಲಾಗುವ ವ್ಯಕ್ತಿ ಇರುವ ಇನ್ನೊಂದಷ್ಟು ವಿಡಿಯೋಗಳಲ್ಲಿ ಮತ್ತಷ್ಟು ಘಾತುಕವಾದ ಸಂಗತಿಗಳಿವೆ. ಸಿಸಿಟಿವಿ ಕ್ಯಾಮೆರಾಗಳೂ ಇಲ್ಲದ ಮುಂಬೈ ಮತ್ತು ಗುಜರಾತ್ನ ಕೆಲವು ಗೋದಾಮುಗಳ ವಿಚಾರ ಅಲ್ಲಿ ಬರುತ್ತದೆ. ಹಳೆಯ ನೋಟುಗಳು ಮತ್ತು ಹೊಸದಾಗಿ ಮುದ್ರಿತವಾದ 2,000 ರೂ.ಗಳಿಂದ ತುಂಬಿರುವ ದೊಡ್ಡ ದೊಡ್ಡ ಬಾಕ್ಸ್ಗಳನ್ನು ಆತ ತೋರಿಸುತ್ತಾನೆ. ಆತ ಜಯ್ಷಾ (ಅಮಿತ್ಷಾ ಮಗ), ನಿತಿನ್ ಪಟೇಲ್ (ಗುಜರಾತಿನ ಉಪಮುಖ್ಯಮಂತ್ರಿ) ರಿಂದ ತಾನು 100 ಕೋಟಿಗಳಷ್ಟು ಹಳೆಯ ನೋಟುಗಳನ್ನು ಪಡೆದು, ನಂತರ ಆರ್ಟಿಜಿಎಸ್ ಮೂಲಕ ಹಿಂತಿರುಗಿಸಿದ್ದಾಗಿ ಹೇಳುತ್ತಾನೆ.
ಕಪಿಲ್ ಸಿಬಲ್ ಪ್ರಕಾರ ‘ನೋಟು ರದ್ದತಿ ಎಂಬುದು ಭಾರತದ ಇತಿಹಾದ ಅತ್ಯಂತ ದೊಡ್ಡ ಹಗರಣ. ಆದರೆ, ನಮ್ಮ ತನಿಖಾ ಸಂಸ್ಥೆಗಳು ವಿರೋಧ ಪಕ್ಷದವರ ಮೇಲೆ ದಾಳಿ ನಡೆಸುತ್ತವೆ. ಅಧಿಕಾರದಲ್ಲಿರುವವರನ್ನಲ್ಲ’.
ನೋಟು ರದ್ದತಿಯ ಕುರಿತು ಇಂತಹ ಹಲವು ಆರೋಪಗಳು ಕೇಳಿ ಬಂದವಾದರೂ, ನಿರ್ದಿಷ್ಟವಾದ ‘ಪುರಾವೆ’ಗಳು ಇರಲಿಲ್ಲ. ಈಗ ಒಂದು ಕುಟುಕು ಕಾರ್ಯಾಚರಣೆಯ ವಿಡಿಯೋ ಹೊರಬಂದಿದೆ. ಇದರ ಕುರಿತು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆಯಂತೂ ಆಗಲೇಬೇಕಿದೆ.