ಜನವರಿ 26ರ ಗಣರಾಜ್ಯೋತ್ಸವದಂದು ಪ್ರತಿಭಟನಾ ನಿರತ ರೈತರು ದೆಹಲಿ ಪ್ರವೇಶಿಸಬೇಕೆ ಅಥವಾ ಬೇಡವೆ ಎಂಬುದನ್ನು ನಿರ್ಧರಿಸುವ ಪ್ರಾಥಮಿಕ ಅಧಿಕಾರ ದೆಹಲಿ ಪೊಲೀಸರಿಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರು ಕರೆ ನೀಡಿರುವ ಜನವರಿ 26ರ ಟ್ರಾಕ್ಟರ್ ರ್ಯಾಲಿಯನ್ನು ತಡೆಯಬೇಕೆಂದು ದೆಹಲಿ ಪೋಲಿಸರು ಸಲ್ಲಿಸಿರುವ ಪಿಐಎಲ್ ಆಲಿಸುತ್ತಿರುವ ಮುಖ್ಯ ನ್ಯಾಯಮೂರ್ತಿಗಳನ್ನೊಳಗೊಂಡ ನ್ಯಾಯಪೀಠ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ. ದೆಹಲಿಗೆ ಪ್ರವೇಶಿಸುವುದರಿಂದ ಉದ್ಭವಿಸುವ ಕಾನೂನು ಸುವ್ಯವಸ್ಥೆ ಪರಿಸ್ಥಿತಿಯನ್ನು ನಿರ್ಧರಿಸುವವರು ದೆಹಲಿ ಪೊಲೀಸರು ಎಂದು ನ್ಯಾಯಪೀಠ ಹೇಳಿದೆಯೆಂದು ಲೈವ್ಲಾ ವರದಿ ಮಾಡಿದೆ.
ಯಾರು ದೆಹಲಿಗೆ ಪ್ರವೇಶಿಸಬೇಕು, ಎಷ್ಟು ಜನ ಪ್ರವೇಶಿಸಬಹುದು, ಯಾರು ಪ್ರವೇಶಿಸಬಾರದು ಎಂಬುದನ್ನು ನಿರ್ಧರಿಸುವ ಪ್ರಾಥಮಿಕ ಅಧಿಕಾರ ನಮಗಿಲ್ಲ. ಅದನ್ನು ನಿರ್ಧರಿಸಬೇಕಾಗಿರುವವರು ದೆಹಲಿ ಪೊಲೀಸರು ಎಂದು ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್ಗೆ ತಿಳಿಸಿದ್ದೇವೆ. ಕಾನೂನಿನಡಿ ಇರುವ ಎಲ್ಲಾ ಅಧಿಕಾರ ಬಳಸಲು ನೀವು ಸ್ವಂತಂತ್ರರು ಎಂದು ಅಟಾರ್ನಿ ಜನರಲ್ರವರಿಗೆ ಸಿಜೆಐ ಎಸ್.ಎ ಬೋಬಡೆ ಹೇಳಿದ್ದಾರೆ.
ಈ ಕುರಿತು ನ್ಯಾಯಾಲಯ ಒಂದು ಆದೇಶ ನೀಡಿದರೆ ಅದು ನಮ್ಮ ಅಧಿಕಾರವನ್ನು ಮತ್ತಷ್ಟು ಶಶಕ್ತಗೊಳಿಸುತ್ತದೆ ಅಟಾರ್ನಿ ಜನರಲ್ ಮನವಿ ಮಾಡಿದಾಗ “ಕಾನೂನಿನಡಿಯಲ್ಲಿ ನಿಮಗೆ ಆ ಅಧಿಕಾರವಿದೆ ಎಂದು ನ್ಯಾಯಾಲಯ ಹೇಳಬೇಕೆಂದು ಭಾರತ ಸರ್ಕಾರ ಬಯಸುತ್ತದೆಯೇ’ ಎಂದು ಸಿಜೆಐ ಪ್ರಶ್ನಿಸಿದ್ದಾರೆ.
ನಾವು ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ, ಹಾಗಾಗಿ ಕೋರ್ಟ್ ಒಂದು ಆದೇಶ ನೀಡಿದರೆ ಎಲ್ಲಾ ವಿಷಯಗಳನ್ನು ಅದು ನೋಡಿಕೊಳ್ಳಬಹುದು ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ. ಇಲ್ಲ, ನಾವು ಎಲ್ಲಾ ವಿಷಯಗಳನ್ನು ನೋಡಿಕೊಳ್ಳಲು ಸಾಧ್ಯವಿಲ್ಲ ಪ್ರತಿಭಟನೆಯ ವಿಚಾರವನ್ನು ಮಾತ್ರ ನೋಡಿಕೊಳ್ಳುತ್ತೇವೆ. ಕೋರ್ಟ್ ಮಧ್ಯಪ್ರವೇಶವನ್ನು ತಪ್ಪು ಗ್ರಹಿಸಬೇಡಿ ಎಂದು ಸಿಜೆಐ ಸ್ಪಷ್ಟಪಡಿಸಿದ್ದಾರೆ.
ಒಂದು ಸಣ್ಣ ಪ್ರತಿಭಟನಾ ನಿರತ ರೈತ ಗುಂಪು ಜನವರಿ 26ರ ಗಣರಾಜ್ಯೋತ್ಸವದಂದು ದೆಹಲಿಗೆ ಟ್ರಾಕ್ಟರ್, ಟ್ರಾಲಿ ಪೆರೇಡ್ ನಡೆಸಲು ನಿರ್ಧಿರಿಸಿದೆ. ಇದರಿಂದ ಸರ್ಕಾರದ ಪರೇಡ್ಗೆ ತೊಂದರೆಯಾಗಲಿದ್ದು, ಕಾನೂನು ಸುವ್ಯವಸ್ಥೆ ಹದಗೆಡಲಿದೆ ಮತ್ತು ದೇಶಕ್ಕೆ ಮುಜುಗರವಾಗಲಿದೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ.
ಭಾರತ ಸರ್ಕಾರಕ್ಕೆ ಕಾನೂನು ಸುವ್ಯವಸ್ಥೆಯನ್ನು, ಸದ್ಯದ ಪರಿಸ್ಥಿತಿಯನ್ನು ನಿಭಾಯಿಸುವ ಅಧಿಕಾರವಿದೆ. ಅದನ್ನು ಕೋರ್ಟ್ ಒತ್ತಿ ಹೇಳಬೇಕಾದ ಅಗತ್ಯವಿಲ್ಲ ಎಂದು ಹೇಳಿದ ಸಿಜೆಐ ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ 20ಕ್ಕೆ ಮುಂದೂಡಿದ್ದಾರೆ.
ಇದನ್ನೂ ಓದಿ: ಟ್ರಾಕ್ಟರ್ ರ್ಯಾಲಿಯನ್ನು ಶಾಂತಿಯುತವಾಗಿ ನಡೆಸಿಯೆ ತೀರುತ್ತೇವೆ: ಹೋರಾಟ ನಿರತ ರೈತರು