ಶಾಮ್ಲಿ ಜಿಲ್ಲಾಡಳಿತವು ಉತ್ತರ ಪ್ರದೇಶದ ಶಾಮ್ಲಿಯಲ್ಲಿ ಇಂದಿನಿಂದ ಏಪ್ರಿಲ್ 3 ರವರೆಗೆ ದೊಡ್ಡ ಸಮಾವೇಶಗಳನ್ನು ನಿಷೇಧಿಸಿದೆ. ಆದಾಗ್ಯೂ, ಭಾರತೀಯ ಕಿಸಾನ್ ಯೂನಿಯನ್, ರಾಷ್ಟ್ರೀಯ ಲೋಕ ದಳ, (ಆರ್ಎಲ್ಡಿ) ಮತ್ತು ಇತರ ಸಂಘಟನೆಗಳು ನಾಳೆಯೆ ಸಮಾವೇಶ ನಡೆಸುವುದಾಗಿ ಹೇಳಿವೆ.
ಕೃಷಿ ಕಾನೂನುಗಳ ರದ್ಧತಿಗೆ ವಿರೋಧಿಸಿ, ನವೆಂಬರ್ನಿಂದ ದೆಹಲಿ ಗಡಿಯ ಸಮೀಪ ನಡೆಯುತ್ತಿರುವ ರೈತ ಪ್ರತಿಭಟನೆಗಳನ್ನು ಬೆಂಬಲಿಸಲು ಫೆಬ್ರವರಿ 5 ಮತ್ತು ಫೆಬ್ರವರಿ 15 ರ ನಡುವೆ ಉತ್ತರಪ್ರದೇಶದಾದ್ಯಂತ ಸರಣಿ ಸಭೆಗಳನ್ನು ಬಿಕೆಯು ಜೊತೆ ಸೇರಿ ಆರ್ಎಲ್ಡಿ ಆಯೋಜಿಸಿದೆ. ಸೆಪ್ಟೆಂಬರ್ನಲ್ಲಿ ಸಂಸತ್ತು ಅಂಗೀಕರಿಸಿದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕೋರಿ ಲಕ್ಷಾಂತರ ರೈತರು ರಾಷ್ಟ್ರ ರಾಜಧಾನಿಯ ಹೊರವಲಯದಲ್ಲಿ ಮೊಕ್ಕಾಂ ಹೂಡಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ‘ರೈತರ ನರಮೇಧ ನಡೆಸುತ್ತಿರುವ ಮೋದಿ’ – ಟ್ವಿಟರ್ನಲ್ಲಿ ಭುಗಿಲೆದ್ದ ಆಕ್ರೋಶ
ಪಾಪ್ ತಾರೆ ರಿಹಾನ್ನಾ, ಪರಿಸರ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್, ಅಮೆರಿಕ ಮತ್ತು ಬ್ರಿಟನ್ನಿನ ಕೆಲವು ಜನಪ್ರತಿನಿಧಿಗಳು ಸೇರಿದಂತೆ ಅಂತರರಾಷ್ಟ್ರೀಯ ಗಣ್ಯರು ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಆಂದೋಲನಕ್ಕೆ ಅಪಾರ ಪ್ರಮಾಣದ ಬೆಂಬಲ ವ್ಯಕ್ತವಾಗುತ್ತಿದೆ.
ಫೆಬ್ರವರಿ 4 ಮತ್ತು ಏಪ್ರಿಲ್ 3 ರ ನಡುವೆ ಶಾಮ್ಲಿಯಲ್ಲಿ ದೊಡ್ಡ ಸಮಾವೇಶಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿಕೆಯಲ್ಲಿ ತಿಳಿಸಿದೆ. ಈ ಅವಧಿಯಲ್ಲಿ ಮಹಾಶಿವರಾತ್ರಿ, ಹೋಳಿ ಹಬ್ಬ ಬರುತ್ತವೆ ಮತ್ತು ಅನೇಕ ಸಂಸ್ಥೆಗಳು ಪರೀಕ್ಷೆಗಳನ್ನು ನಡೆಸುವ ಸಾಧ್ಯತೆ ಇರುವ ಕಾರಣ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಹರಿಯಾಣದಲ್ಲೂ ಈಗ ಸರಣಿ ಮಹಾಪಂಚಾಯತ್ಗಳನ್ನು ಆಯೋಜಿಸಲಾಗಿದೆ. ಸಮಾವೇಶಕ್ಕೆ ಅಪಾರ ಜನ ಸೇರುತ್ತಿದ್ದು, ಇದು ಯುಪಿ ಮತ್ತು ಹರಿಯಾಣ ಸರ್ಕಾರಗಳಿಗೆ ಹಿನ್ನಡೆ ಎಂದೇ ಭಾವಿಸಲಾಗಿದೆ. ಕಳೆದ ವಾರ, ಉತ್ತರಪ್ರದೇಶದ ಬಾಗಪತ್ನ ಬರಾತ್ನಲ್ಲಿ ಮಹಾಪಂಚಾಯತ್ಗೆ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು. ಭಾರತೀಯ ಕಿಸಾನ್ ಯೂನಿಯನ್ ಮುಖಂಡ ನರೇಶ್ ಟಿಕಾಯತ್ ಅವರು ಯುಪಿಯ ಮುಜಾಫರ್ನಗರದಲ್ಲಿ ಕಳೆದ ವಾರ ಬೃಹತ್ ಸಮಾವೇಶ ನಡೆಸಿದ್ದರು.
ಇದನ್ನೂ ಓದಿ: ಹೋರಾಟ ಬೆಂಬಲಿಸಿದ್ದಕ್ಕೆ FIR: ಬೆದರಿಕೆಗೆ ಮಣಿಯಲ್ಲ, ನಾನಿನ್ನೂ ರೈತರ ಪರ ಎಂದ ಗ್ರೇಟಾ ಥನ್ಬರ್ಗ್