ಏಪ್ರಿಲ್ 16ರ ಬೆಳಿಗ್ಗೆ 6 ಗಂಟೆಯಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೂರು ದಿನ ಮತ್ತು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಎರಡು ದಿನ ಯಾವುದೇ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಬಾರದೆಂದು ಚುನಾವಣಾ ಆಯೋಗ ನೊಟೀಸ್ ನೀಡಿದೆ.
ಕಳೆದ ಕೆಲವು ದಿನಗಳ ಹಿಂದೆ ನಡೆದಿದ್ದ ಅಲಿ-ಬಜರಂಗಬಲಿ ವಾಕ್ಸಮರದ ಪರಿಣಾಮವಾಗಿ ಚುನಾವಣಾ ಆಯೋಗ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿಯಲ್ಲಿ ಯೋಗಿಗೆ 72 ಗಂಟೆ, ಮಾಯಾವತಿಗೆ 48 ಗಂಟೆ ಚುನಾವಣಾ ಪ್ರಚಾರಕ್ಕೆ ನಿರ್ಬಂಧ ಹೇರಿದೆ. ಇಷ್ಟು ದಿನ ಎಷ್ಟೇ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿದ್ದರೂ ಆಯೋಗ ಕ್ರಮ ಕೈಗೊಳ್ಳುತ್ತಿಲ್ಲವೆಂದು ಭಾರೀ ಆರೋಪ ಕೇಳಿಬಂದಿತ್ತು. ಈಗ ಕೋರ್ಟ್ ಆಯೋಗಕ್ಕೆ ಚಾಟೀ ಬೀಸಿದ ನಂತರ ಎಚ್ಚೆತ್ತುಕೊಂಡ ಆಯೋಗ ಈ ಕ್ರಮಕ್ಕೆ ಮುಂದಾಗಿದೆ.
ಕೆಲ ದಿನಗಳ ಹಿಂದೆ ಮಾಯಾವತಿಯವರು ಉತ್ತರ ಪ್ರದೇಶದ ಮುಸ್ಲಿಮರಿಗೆ ಕರೆ ನೀಡಿ, ‘ನೀವು ಕಾಂಗ್ರೆಸ್ಗೆ ಮತ ನೀಡಿ ನಿಮ್ಮ ಮತವನ್ನು ವ್ಯರ್ಥ ಮಾಡಿಕೊಳ್ಳಬೇಡಿ’ ಎಂದು ಹೇಳಿದ್ದರು. ಇದರ ಸದುಪಯೋಗ ಪಡೆಯಲು ಮುಂದಾದ ಯೋಗಿ ಆದಿತ್ಯನಾಥ್, ಮುಸ್ಲಿಂ ಲೀಗ್ ಹಸಿರು ವೈರಸ್ ಇದ್ದ ಹಾಗೆ ಎಂದು ಹೇಳಿ ‘ನೋಡಿ ನೋಡಿ, ಅವರು ಅಲಿಯ (ಮುಸ್ಲಿಂ) ಕಡೆಯವರು. ನಾವು ಭಜರಂಗಬಲಿಯ (ಹಿಂದೂ) ಕಡೆಯವರು’ ಎಂದಿದ್ದರು.
ಅದಕ್ಕೆ ಬದಾಯೂನಲ್ಲಿ ನಡೆದ ಎರಡನೇ ಜಂಟಿ ರ್ಯಾಲಿಯಲ್ಲಿ, ಅಖಿಲೇಶ್ ಯಾದವ್ಗಿಂತ ಮುಂಚೆ ಮಾತಾಡಿದ ಮಾಯಾವತಿ ‘ನಮಗೆ ಅಲಿ ಮತ್ತು ಭಜರಂಗಬಲಿ ಎರಡೂ ಬೇಕು. ಏಕೆಂದರೆ ಅಲಿಯನ್ನು ಪ್ರವಾದಿ ಮಹಮ್ಮದರ ಉತ್ತರಾಧಿಕಾರಿಯಾಗಿ ಮಹಮ್ಮದೀಯರು ಆರಾಧಿಸುತ್ತಾರೆ, ಇನ್ನು ಭಜರಂಗಬಲಿ ನಮ್ಮ ಜಾತಿಯವನೇ. ಹಾಗಾಗಿ ಇಬ್ಬರೂ ನಮ್ಮವರೇ’ ಎಂದು ತಿರುಗೇಟು ನೀಡಿದ್ದರು.
ಈ ಕೋಮುಪ್ರಚೋದಿತ ಹೇಳಿಕೆಗಳನ್ನು ನೀಡಿದ್ದ ಕಾರಣಕ್ಕಾಗಿ ಚುನಾವಣಾ ಆಯೋಗ ಈ ಇಬ್ಬರಿಗೂ ಮೊದಲೇ ನೊಟೀಸ್ ನೀಡಿತ್ತು. ಸುಪ್ರೀಂ ಕೋರ್ಟ್ನ ಚೀಫ್ ಜಸ್ಟೀಸ್ ರಂಜನ್ ಗಗೋಯ್ ನೇತೃತ್ವದ ಪೀಠ ಚುನಾವಣಾ ಆಯೋಗಕ್ಕೆ ತಮ್ಮ ಅಧಿಕಾರ ಬಳಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರ ಪರಿಣಾಮ ಈ ನಿಲುವು ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಇವರಿರ್ವರೂ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.