ಉತ್ತರ ಪ್ರದೇಶದ ಶಹಜಹಾನ್ಪುರ್ನಲ್ಲಿ ಮಾರ್ಚ್ 2 ರಂದು ಶಾಲೆಗೆ ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ನಾಪತ್ತೆಯಾಗಿರುವ ಘಟನೆ ನಡೆದಿದೆ. ನಾಪತ್ತೆಯಾಗಿರುವ ಬಾಲಕಿಯರಲ್ಲಿ ಒಬ್ಬ ಬಾಲಕಿಯು ಶಾಲೆಯಲ್ಲಿ ಕಾರ್ಯಕ್ರಮ ಇದೆಯೆಂದು ನಗದು ಮತ್ತು ಬಟ್ಟೆಗಳನ್ನು ಒಯ್ದಿದ್ದಾರೆಂದು ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಮೂವರು ಬಾಲಕಿಯರಲ್ಲಿ ಇಬ್ಬರು 15 ವರ್ಷ ಮತ್ತು ಒಬ್ಬ ಬಾಲಕಿ 10 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್ ಆನಂದ್ ಹೇಳಿದ್ದಾರೆ. ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಲು ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಾಲಕಿಯರು ಸದರ್ ಪ್ರದೇಶದ ಬೇರೆ ಬೇರೆ ಕಡೆಯಿಂದ ಬಂದವರಾಗಿದ್ದು, ಒಂದೇ ಶಾಲೆಯಲ್ಲಿ ಓದುವವರಾಗಿದ್ದಾರೆ. ಸೋಮವಾರದಂದು ಶಾಲೆಗೆ ಹೊರಡುತ್ತೇವೆ ಎಂದು ಹೊರಟ ಬಾಲಕಿಯರು ನಾಪತ್ತೆಯಾಗಿದ್ದಾರೆಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ನಗರ) ಪ್ರವೀಣ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ:ನಮಗೆ 5 ವರ್ಷ ಕೊಡಿ; ಬಿಜೆಪಿಯ 25 ವರ್ಷದ ಆಡಳಿತವನ್ನು ಮರೆಯುತ್ತೀರಿ – ಗುಜರಾತ್ನಲ್ಲಿ ಕೇಜ್ರಿವಾಲ್
ನಾಪತ್ತೆಯಾದವರಲ್ಲಿ ಒಬ್ಬ ಬಾಲಕಿ 2,500 ರೂ. ಮತ್ತು ಇನ್ನೊಬ್ಬ ಬಾಲಕಿಯು 2,700 ರೂ. ಹಾಗೂ ಬಟ್ಟೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಬಾಲಕಿಯೊಬ್ಬಳು ತನ್ನ ಕುಟುಂಬ ಸದಸ್ಯರಿಗೆ ಶಾಲೆಯಲ್ಲಿ ಕಾರ್ಯಕ್ರಮವಿದ್ದ ಕಾರಣ ಬಟ್ಟೆಗಳನ್ನು ಪ್ಯಾಕ್ ಮಾಡಿದ್ದಾಗಿ ತಿಳಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ರಾತ್ರಿ ಬಾಲಕಿಯರು ಮನೆಗೆ ಮರಳದಿದ್ದಾಗ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ಕಳೆದ ತಿಂಗಳು ಇದೇ ಜಿಲ್ಲೆಯಲ್ಲಿ ಕೇಂದ್ರದ ಮಾಜಿ ಸಚಿವ ಸ್ವಾಮಿ ಚಿನ್ಮಾಯಾನಂದ್ ಅವರ ಮುಮುಕ್ಷು ಆಶ್ರಮ ನಡೆಸುತ್ತಿದ್ದ ಕಾಲೇಜಿನ ಬಿಎ ಎರಡನೇ ವರ್ಷದ ವಿದ್ಯಾರ್ಥಿನಿಯೊಬ್ಬರು ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೆ ಬಟ್ಟೆಯಿಲ್ಲದೆ, ತೀವ್ರ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ರಾಯ್ ಖೇಡಾ ಗ್ರಾಮದ ಬಳಿಯ ಹೊಲವೊಂದರಲ್ಲಿ ಮೂವರು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಯುವತಿಯು ಸಹಕರಿಸದೆ ಇದ್ದಾಗ ದುಷ್ಕರ್ಮಿಗಳು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಸಂತ್ರಸ್ಥೆ ಯುವತಿಯು ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದರು. ಈ ಪ್ರಕರಣದಲ್ಲಿ ಯುವತಿಯನ್ನು ಹೊಲಕ್ಕೆ ಕಳುಹಿಸಿದ ಸ್ನೇಹಿತೆಯೊಬ್ಬಳನ್ನು ಸೇರಿದಂತೆ ನಾಲ್ವರನ್ನು ಜಿಲ್ಲೆಯ ವಿವಿಧ ಸ್ಥಳಗಳಿಂದ ಬಂಧಿಸಲಾಗಿದೆ.
ಇದನ್ನೂ ಓದಿ: ನೋಟ್ಬ್ಯಾನ್ ಪರಿಣಾಮ ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ: ಮನಮೋಹನ್ ಸಿಂಗ್