ತನ್ನ ಜಮೀನನ್ನು ವಶಪಡಿಸಿದ್ದ ಗೂಂಡಾಗಳ ವಿರುದ್ದ ಹೋರಾಟ ನಡೆಸುತ್ತಿದ್ದ ದಲಿತ ಆರ್ಟಿಐ ಹೋರಾಟಗಾರರೊಬ್ಬರನ್ನು, ಮೇಲ್ಜಾತಿಯ ಜನರು ಹತ್ಯೆಗೈದಿರುವ ಘಟನೆ ಗುಜರಾತ್ನ ಭಾವನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ಮಂಗಳವಾರ ನಡೆದಿದೆ. ಈ ವೇಳೆ ತನ್ನ ತಂದೆಯನ್ನು ಕೊಲ್ಲದಂತೆ ಅಡ್ಡಿಪಡಿಸಿದ ಮಗಳ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ಜಿಲ್ಲೆಯ ಘೋಘಾ ತಾಲೂಕಿನ ಸನೋದರ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಹತ್ಯೆಗೀಡಾದ ಹೋರಾಟಗಾರನ್ನು ಅಮ್ರಾಭಾಯ್ ಬೋರಿಚಾ (50) ಎಂದು ಗುರಿತಿಸಲಾಗಿದೆ. ದುಷ್ಕರ್ಮಿಗಳು ಅವರ ಮೇಲೆ ಈಟಿ, ಕಬ್ಬಿಣದ ಪೈಪ್ ಮತ್ತು ಕತ್ತಿಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಅವರ ಕುಟುಂಬ ಸದಸ್ಯರ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
“ಮೊದಲು ಅವರು ನಮ್ಮ ಮೇಲೆ ಕಲ್ಲು ಎಸೆದರು. ನನ್ನ ತಂದೆ ರಕ್ಷಣೆಗಾಗಿ ಮನೆಯೊಳಗೆ ಧಾವಿಸುತ್ತಿದ್ದಂತೆ, ಹಲ್ಲೆಕೋರರು ಗೇಟ್ ಮುರಿದು, ಅಡ್ಡಗಟ್ಟಿ ಈಟಿ, ಕಬ್ಬಿಣದ ಪೈಪ್ ಮತ್ತು ಕತ್ತಿಯಿಂದ ಹಲ್ಲೆ ನಡೆಸಿ ಕೊಂದುಹಾಕಿದರು” ಎಂದು ಬೋರಿಚಾ ಅವರ ಮಗಳು ನಿರ್ಮಲಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಂಗಳವಾರ ಸಂಜೆ 4.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಿಂಘು ಗಡಿ: ದಲಿತ ಕಾರ್ಮಿಕ ಹೋರಾಟಗಾರ್ತಿ ನೊದೀಪ್ ಕೌರ್ ಬಂಧನ ಯಾಕಾಗಿದೆ?
“ತಂದೆ ಮತ್ತು ನಾನು ಹೊರಗೆ ನಿಂತಿದ್ದಾಗ ನಮ್ಮ ಹಳ್ಳಿಯ ದರ್ಬಾರ್ಗಳ (ಕ್ಷತ್ರಿಯರು) ಸುಮಾರು 50 ಸದಸ್ಯರು ನಮ್ಮ ಮನೆಯ ಮುಂದಿನಿಂದ ಡಿಜೆ ಸಂಗೀತ ನುಡಿಸುತ್ತಾ ಹೋಗಿದ್ದಾರೆ. ಸ್ವಲ್ಪ ಸಮಯದ ನಂತರ ಹಿಂತಿರುಗಿದ ಅವರು ನಮ್ಮ ಮೇಲೆ ಕಲ್ಲು ಎಸೆಯಲು ಪ್ರಾರಂಭಿಸಿದರು. ನಮಗೆ ಪೊಲೀಸ್ ರಕ್ಷಣೆ ಇದೆ, ಅದನ್ನೂ ಮೀರಿ ಅವರು ಈಟಿ, ಕೊಡಲಿ, ಪೈಪ್ ಮತ್ತು ಕತ್ತಿಗಳಿಂದ ಹಲ್ಲೆ ನಡೆಸಿದ್ದಾರೆ” ಎಂದು ನಿರ್ಮಲಾ ಹೇಳಿದ್ದಾರೆ.
ದಾಳಿಯಲ್ಲಿ ಗಾಯಗೊಂಡ ನಿರ್ಮಲಾ ಅವರನ್ನು ಭಾವನಗರದ ಸರ್ ತಕ್ತಾಸಿಂಜಿ ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ತಮ್ಮ ತಂದೆಯ ಮೇಲೆ 2013 ರಲ್ಲೂ ಹಲ್ಲೆ ನಡೆಸಲಾಗಿತ್ತು ಈ ವೇಳೆ ಅವರ ಕಾಲನ್ನು ಮುರಿಯಲಾಗಿತ್ತು ಎಂದು ನಿರ್ಮಲಾ ಹೇಳಿದ್ದಾರೆ.
ಘಟನೆಯ ಬಗ್ಗೆ ಶಾಸಕ ಜಿಗ್ನೇಶ್ ವಿವರಿಸುವ ವಿಡಿಯೋ ನೋಡಿ
ದಲಿತ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿರುವ ಅಹಮದಾಬಾದ್ ಮೂಲದ ಎನ್ಜಿಒದ ಕಾರ್ಯಕರ್ತ ಅರವಿಂದ್ ಮಕ್ವಾನಾ ಹೇಳುವಂತೆ, “ಸುಮಾರು ಒಂದು ತಿಂಗಳ ಹಿಂದೆ ಬೋರಿಚಾ ಅವರು ಕ್ಷತ್ರಿಯರ ವಿರುದ್ಧ ಘೋಘಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಆದರೆ ಘೋಗಾದ ಸಬ್ ಇನ್ಸ್ಪೆಕ್ಟರ್ ಪಿ.ಆರ್.ಸೋಲಂಕಿ ಎಫ್ಐಆರ್ ನೋಂದಾಯಿಸಲಿಲ್ಲ. ಇದಕ್ಕಾಗಿ ಬೋರಿಚಾ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಈ ಮಧ್ಯೆ, ಕ್ಷತ್ರಿಯರ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿತು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮುಖ್ಯಮಂತ್ರಿಯನ್ನು ಕಂಡಕಂಡಲ್ಲಿ ಘೇರಾವ್ ಮಾಡಿ: ರೈತ-ದಲಿತ ಕಾರ್ಮಿಕ ಐಕ್ಯ ಹೋರಾಟ ಸಮಿತಿ ಕರೆ
ಬೋರಿಚಾ ಹತ್ಯೆಗೆ ಸಂಬಂಧಿಸಿದಂತೆ ರಾತ್ರಿ 10.30 ರವರೆಗೆ ಘೋಘಾ ಪೊಲೀಸ್ ಠಾಣೆಯಲ್ಲಿ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಎನ್ನಲಾಗಿದೆ. ಈ ಬಗ್ಗೆ ಪಿಎಸ್ಐ ಸೋಲಂಕಿ, ಭಾವನಗರ ಎಸ್ಪಿ ಮತ್ತು ಐಜಿ ವರದಿಗಾರರ ದೂರವಾಣಿ ಕರೆಗಳಿಗೆ ಉತ್ತರಿಸಲಿಲ್ಲ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿಯಲ್ಲಿ ಹೇಳಿದೆ.
ಬೋರಿಚಾ ಸನೋದರ್ ಗ್ರಾಮದ ಏಕೈಕ ದಲಿತ ಕುಟುಂಬಿಕನಾಗಿದ್ದು, ಕ್ಷತ್ರಿಯರು ಅವರ ಕೃಷಿ ಭೂಮಿಯನ್ನು ಮತ್ತು ವಸತಿ ಜಮೀನನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಮಕ್ವಾನಾ ಆರೋಪಿಸಿದ್ದಾರೆ.
“ಸುಮಾರು ಒಂದು ತಿಂಗಳ ಹಿಂದೆ, ಆರೋಪಿಗಳು ಬೋರಿಚಾ ಅವರ ವಸತಿ ಜಾಗವನ್ನು ಅತಿಕ್ರಮಿಸಿಕೊಂಡಿದ್ದರು. ಅವರು ಪೊಲೀಸರಿಗೆ ದೂರು ನೀಡಿದ್ದರು ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಮಕ್ವಾನಾ ತಿಳಿಸಿದ್ದಾರೆ.
ಘಟನೆಯನ್ನು ಗುಜರಾತ್ ಶಾಸಕ, ಊನಾ ಚಳವಳಿಯ ನಾಯಕ ಜಿಗ್ನೇಶ್ ಮೇವಾನಿ ಖಂಡಿಸಿದ್ದು, ಹೋರಾಟಗಾರರು, ಪ್ರಭಾವಿ ಸೆಲೆಬ್ರಿಟಿಗಳು ಮತ್ತು ಪತ್ರಕರ್ತರು ಈ ಘಟನೆಯ ಬಗ್ಗೆ ಧ್ವನಿ ಎತ್ತುವಂತೆ ವಿನಂತಿಸಿದ್ದಾರೆ.
ಇದನ್ನೂ ಓದಿ: ’ಅಸಮಾನತೆಗಾಗಿ ಮೀಸಲಾತಿ’ ಹೋರಾಟದ ಭರಾಟೆಯಲ್ಲಿ ಅಬ್ರಾಹ್ಮಣರಿಗೆ ಮೀಸಲಾತಿ ದಕ್ಕುವುದು ಸುಲಭವಲ್ಲ!
ಐತಿಹಾಸಿಕ ಹೋರಾಟದಲ್ಲಿರುವ ರೈತರು ದೆಹಲಿಯ ಬಿರು ಬಿಸಿಲಿನಿಂದ ರಕ್ಷಣೆ ಹೊಂದಲು ಮಾಡುತ್ತಿರುವುದೇನು?