ಕೇಂದ್ರ ಸರ್ಕಾರದ ವಿರುದ್ದ 106 ದಿನಗಳಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಹೋರಾಟಗಾರರು, ಇದೀಗ ಬಿಸಿಲಿನಿಂದ ರಕ್ಷಣೆ ಪಡೆಯಲು ಸಿಂಘು ಮತ್ತು ಟಿಕ್ರಿ ಗಡಿಗಳಲ್ಲಿ ಇಟ್ಟಿಗೆಗಳಿಂದ ಎರಡು ಅಂತಸ್ತಿನ ಮನೆಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದಾರೆ.
ಸಿಂಘು ಗಡಿಯಲ್ಲಿರುವ ಪ್ರತಿಭಟನಾ ಸ್ಥಳಕ್ಕಿಂತ ಕೆಲವೆ ಕಿಲೋಮೀಟರ್ ಮುಂದಕ್ಕೆ ಚಲಿಸಿದಾಗ ಈ ಮನೆಗಳನ್ನು ನೋಡಬಹುದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಈ ಹಿಂದೆ ಅಲ್ಲಿ ರೈತರು ಡೇರೆಗಳನ್ನು ಹಾಕಿ ಪ್ರತಿಭಟನೆ ನಡೆಸುತ್ತಿದ್ದರು. ಈಗ ಅದೇ ಸ್ಥಳಗಳಲ್ಲಿ ಇಟ್ಟಿಗೆಗಳನ್ನು ಬಳಸಿಕೊಂಡು ಮನೆಗಳನ್ನು ನಿರ್ಮಿಸಲಾಗುತ್ತಿದೆ. ಈ ಇಟ್ಟಿಗೆಗಳನ್ನು ಪಂಜಾಬ್ನಿಂದ ತರಿಸಲಾಗುತ್ತಿದೆ.
ಸಂಯುಕ್ತಾ ಕಿಸಾನ್ ಮೋರ್ಚಾದ (ಎಸ್ಕೆಎಂ) ಮಾಧ್ಯಮ ಸೆಲ್ನ ಮುಖ್ಯಸ್ಥರಾದ ಕರಮ್ಜಿತ್ ಸಿಂಗ್, “ಶುಕ್ರವಾರ ಪಂಜಾಬ್ನ ರೈತ ಮುಖಂಡರು ಸಿಂಘು ಗಡಿಯಲ್ಲಿ ಬೇಸಿಗೆಯ ಬಿಸಿಲಿನಿಂದ ರಕ್ಷಣೆ ಪಡೆಯಲು ಇಟ್ಟಿಗೆಗಳ ಮನೆಗಳನ್ನು ನಿರ್ಮಿಸುವ ಬಗ್ಗೆ ಚರ್ಚಿಸಿದ್ದರು. ಗಡಿಯಲ್ಲಿ ಈಗಾಗಲೆ ನಾಲ್ಕು ಮನೆಗಳನ್ನು ನಿರ್ಮಿಸಲಾಗಿದ್ದು, ಅವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಈ ಎಲ್ಲಾ ಮನೆಗಳು ಎರಡು ಅಂತಸ್ತಿನವುಗಳಾಗಿವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಹಿಳಾ ದಿನ: ರೈತ ಹೋರಾಟದಲ್ಲಿ ಮಹಿಳೆಯರು – ಇಲ್ಲಿವೆ ಗಮನ ಸೆಳೆದ ಚಿತ್ರಗಳು
“ಗಡಿಯಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಇರುವುದರಿಂದ, ಎರಡು ಅಂತಸ್ತಿನ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಆಂದೋಲನವು ಒಂದು ವೇಳೆ ಮತ್ತಷ್ಟು ದೀರ್ಘ ಕಾಲ ನಡೆಯುವ ಸಾಧ್ಯತೆಯಿದ್ದರೆ, ನಮ್ಮ ಸಿದ್ಧತೆಗಳು ಕೂಡಾ ಅದಕ್ಕೆ ತಕ್ಕದಾಗಿರಬೇಕು” ಎಂದು ಅವರು ತಿಳಿಸಿದ್ದಾರೆ.
ರೈತ ಹೋರಾಟವು ಚಳಿಗಾಲದ ಸಮಯದಲ್ಲಿ ಪ್ರಾರಂಭವಾಗಿರುವುರಿಂದ, ರೈತರು ಮೊದಲಿಗೆ ಪ್ಲಾಸ್ಟಿಕ್ ಡೇರೆಗಳನ್ನು ಮಾತ್ರ ನಿರ್ಮಿಸಿದ್ದರು. ಇದೀಗ ಬೇಸಿಗೆ ಪ್ರಾರಂಭವಾಗಿರುವುದರಿಂದ ಅಂತಹ ಡೇರೆಗಳಲ್ಲಿ ಉಳಿಯುವುದು ಕಷ್ಟವಾಗುತ್ತದೆ.
ರಾತ್ರಿಯಲ್ಲಿ ಸೊಳ್ಳೆಗಳು ಮತ್ತು ಹಗಲಿನಲ್ಲಿ ಸುಡುವ ಬಿಸಿಲು ಇರುವುದರಿಂದ ರೈತರು ಇಟ್ಟಿಗೆಯ ಮನೆಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಮನೆಗಳನ್ನು ನಿರ್ಮಿಸುತ್ತಿರುವ ರೈತರ ತಯಾರಿಯು ಕೇಂದ್ರ ಸರ್ಕಾರ ಮೂರು ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸುವವರೆಗೂ ತಮ್ಮ ಮನೆಗಳಿಗೆ ವಾಪಾಸಾಗುವುದಿಲ್ಲ ಎಂಬ ಬದ್ದತೆಯನ್ನು ಎತ್ತಿ ತೋರಿಸುತ್ತಿದೆ.
ಇದನ್ನೂ ಓದಿ: ಅಂತರಾಷ್ಟ್ರೀಯ ಮಹಿಳಾ ದಿನ: ಕೃಷಿ ಕಾಯ್ದೆಗಳ ವಿರುದ್ಧ ಬೀದಿಗಿಳಿದ ಲಕ್ಷಾಂತರ ಮಹಿಳೆಯರು!