ಕೇರಳದ ಹೊಸ ಸಚಿವ ಸಂಪುಟದಲ್ಲಿ ಆರೋಗ್ಯ ಖಾತೆ ಮತ್ತೆ ಮಹಿಳೆಯ ಕೈಗೇ ಬಂದಿದೆ. ಈ ಸಲ ಟೀಚರ್ ಜಾಗದಲ್ಲಿ ಪತ್ರಕರ್ತೆ ಇದ್ದಾರೆ. ಟೀಚರ್ ಅವರಷ್ಟೇ ಇವರೂ ತುಂಬ ಕ್ರಿಯಾಶೀಲರು ಎನ್ನಲಾಗಿದೆ.
ಅರಣ್ಮುಲ ಕ್ಷೇತ್ರದ ಶಾಸಕಿ ವೀಣಾ ಜಾರ್ಜ್ ಅವರನ್ನು ಆರೋಗ್ಯ ಸಚಿವರಾಗಿ ಆಯ್ಕೆ ಮಾಡಲಾಗಿದೆ. ಹೊಸ ಹುದ್ದೆಯ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ವೀಣಾ ಜಾರ್ಜ್, ಪಕ್ಷವು ವಹಿಸಿದ ಕರ್ತವ್ಯಗಳನ್ನು ಪೂರೈಸಲು ತನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ ಎಂದು ಕೇರಳದ ಮಾತೃಭೂಮಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮೇ 18 ರಂದು, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಎಂ) ನಾಯಕ ಪಿಣರಾಯಿ ವಿಜಯನ್ ತಮ್ಮ ಸಂಪುಟವನ್ನು ಆಯ್ಕೆ ಮಾಡಿದರು. ಆದರೆ ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ನಿಪಾ ಮತ್ತು ಕೋವಿಡ್ ವಿರುದ್ಧ ಕೇರಳದ ಹೋರಾಟದ ಮುಖವಾದ ಶೈಲಜಾ ‘ಟೀಚರ್’ ಅವರನ್ನು ಕೈಬಿಟ್ಟರು. ಬದಲಾಗಿ, ಅವರನ್ನು ಪಕ್ಷದ ವಿಪ್ ಆಗಿ ನೇಮಿಸಲಾಗುತ್ತಿದೆ.
ಶೈಲಜಾರೇ ಆರೋಗ್ಯ ಸಚಿವೆಯಾಗಿ ಮುಂದುವರೆಯಬೇಕಿತ್ತು ಎಂಬ ವಾದಗಳ ನಡುವೆಯೇ, ಪಿಣರಾಯಿ ಅವರನ್ನು ಹೊರತುಪಡಿಸಿ ಎಲ್ಲ ಹೊಸಮುಖಗಳಿಗೆ ಸಚಿವ ಸ್ಥಾನ ನೀಡಿರುವ ಎಲ್ಡಿಎಫ್ ಆರೋಗ್ಯ ಖಾತೆಗೆ ಶಾಸಕಿ ವೀಣಾ ಜಾರ್ಜ್ ಅವರನ್ನು ಆಯ್ಕೆ ಮಾಡಿದೆ.
ವೀಣಾ ಜಾರ್ಜ್ ಶಾಸಕಿಯಾಗುವ ಮೊದಲು ವಿವಿಧ ಮಲಯಾಳಂ ಮಾಧ್ಯಮಗಳಲ್ಲಿ ಪತ್ರಕರ್ತೆಯಾಗಿ ಮತ್ತು ಸುದ್ದಿ ನಿರೂಪಕರಾಗಿ ಕೆಲಸ ಮಾಡಿದ್ದಾರೆ ಎಂದು ದಿ ಕ್ವಿಂಟ್ ವರದಿ ಮಾಡಿದೆ.
21 ಸದಸ್ಯರ ಕೇರಳ ಕ್ಯಾಬಿನೆಟ್ ಮೇ 20 ರ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದೆ.
ಬೇಪುರ ಸ್ಥಾನದಿಂದ ಮೊದಲ ಬಾರಿಗೆ ಶಾಸಕರಾಗಿರುವ ಸಿ.ಎಂ ವಿಜಯನ್ ಅವರ ಅಳಿಯ ಪಿ.ಎ. ಮೊಹಮ್ಮದ್ ರಿಯಾಜ್ ಲೋಕೋಪಯೋಗಿ ಇಲಾಖೆ ಸಚಿವರಾಗಲಿದ್ದರೆ, ಕೆ.ಎನ್. ಬಾಲಗೋಪಾಲ್ ಅವರು ಹೊಸ ಹಣಕಾಸು ಸಚಿವರಾಗಲಿದ್ದಾರೆ.
ಮತ್ತೊಬ್ಬ ಮಹಿಳಾ ಶಾಸಕಿ ಆರ್. ಬಿಂದು ಕೇರಳದ ಹೊಸ ಉನ್ನತ ಶಿಕ್ಷಣ ಸಚಿವರಾಗಲಿದ್ದಾರೆ.
ಪಕ್ಷದ ತೀರ್ಮಾನಗಳಿಗೆ ಆದ್ಯತೆ ನೀಡುವ ಎಡಪಕ್ಷಗಳಲ್ಲಿ ಶೈಲಜಾ ಟೀಚರ್ ಸೇರಿದಂತೆ ಎಲ್ಲರೂ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದಾರೆ ಎನ್ನಲಾಗಿದೆ.
ಸ್ಥಳೀಯ ಸಂಸ್ಥೆ ಮತ್ತು ಪಂಚಾಯತ್ ಚುನಾವಣೆಗಳಲ್ಲಿ ಕೇರಳದ ಎಡ ಪಕ್ಷಗಳು ಹೊಸಬರಿಗೆ, ಯುವಕರಿಗೆ ಮತ್ತು ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಿದ್ದವು ಮತ್ತು ಹಲವಾರು ಕಡೆ ಮಹಿಳೆಯರಿಗೇ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಸ್ಥಾನ ಅಥವಾ ಮೇಯರ್ ಸ್ಥಾನ ನೀಡಿದ್ದವು.
ಈಗ ಶೈಲಜಾ ಟೀಚರ್ ಜಾಗಕ್ಕೆ ವೀಣಾ ಜರ್ನಲಿಸ್ಟ್ ಬಂದಿದ್ದಾರೆ. ಅದು ಸಿಪಿಎಂ ಪಕ್ಷದ ನೀತಿಯೂ ಆಗಿದೆ. ಟೀಚರ್ ಈಗ ಚೀಫ್ ವಿಪ್ ಆಗಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ; ಕೇರಳ ಸಂಪುಟದಿಂದ ಶೈಲಜಾ ಟೀಚರ್ ಕೈಬಿಟ್ಟಿದ್ದು ಏಕೆ? ಅವರೇ ಸಿಎಂ ಆಗಬೇಕಿತ್ತಲ್ಲವೆ?: ಜಾಲತಾಣದಲ್ಲಿ ಭಾರೀ ಚರ್ಚೆ