ರಾಮ ಜನ್ಮಭೂಮಿ ಟ್ರಸ್ಟ್ನಲ್ಲಿ ಭಾರಿ ಹಗರಣಗಳು ಬೆಳಕಿಗೆ ಬಂದಿವೆ. ರಾಮನ ಹೆಸರಲ್ಲಿ ಭೂ ದಂಧೆ ನಡೆಯುತ್ತಿದ್ದು ಇದರಲ್ಲಿ ಲ್ಯಾಂಡ್ ಮಾಫಿಯಾ ಭಾಗಿಯಾಗಿದೆ ಎಂಬ ಗಂಭೀರ ಆರೋಪವನ್ನು ಆಮ್ ಆದ್ಮಿ(AAP) ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ ಸಿಂಗ್ ಮತ್ತು ಸಮಾಜವಾದಿ ಪಕ್ಷ(SP)ದ ಮಾಜಿ ಶಾಸಕ ಪವನ್ ಪಾಂಡೆ ಪ್ರತ್ಯೇಕ ಪತ್ರಿಕಾಗೋಷ್ಠಿಗಳಲ್ಲಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಟ್ವೀಟ್ ಮಾಡಿರುವ ಸಂಜಯಸಿಂಗ್ ಅವರು, ಟ್ರಸ್ಟ್ನ ಮುಖ್ಯಸ್ಥ ಚಂಪತ್ ರಾಯ್ ಭೂ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
2 ಕೋಟಿ ರೂ. ಗೆ ಒಂದು ಜಮೀನು ಖರೀದಿಯಾಗುತ್ತದೆ. ಕೇವಲ 5 ನಿಮಿಷಗಳ ನಂತರ ಚಂಪತ್ರಾಯ ನೇತೃತ್ವದಲ್ಲಿ ರಾಮಜನ್ಮಭೂಮಿ ಟ್ರಸ್ಟ್ ಅದೇ ಜಮೀನನ್ನು 18.5 ಕೋಟಿ ರೂ.ಗಳಿಗೆ ಖರೀದಿಸಿದೆ ಎಂದು ಸಂಜಯ್ಸಿಂಗ್ ದಾಖಲೆಗಳ ಸಮೇತ ಅಪಾದನೆ ಮಾಡಿದ್ದಾರೆ.
ಇದನ್ನೂ ಓದಿ: ಅಂಬೇಡ್ಕರ್ ಈಗ ಇದ್ದಿದ್ದರೆ ಬಿಜೆಪಿಗರು ಅವರನ್ನು ಪಾಕ್ ಪರ ಎನ್ನುತ್ತಿದ್ದರು: ಮೆಹಬೂಬಾ ಮುಫ್ತಿ
ಇದು ದೇಶದ ಕೋಟ್ಯಂತರ ಜನರ ನಂಬಿಕೆಗೆ ನೀಡಿದ ಪೆಟ್ಟಾಗಿದೆ. ರೈತರು, ಕಾರ್ಮಿಕರು ಮತ್ತು ಬೀದಿ ಬದಿ ವ್ಯಾಪಾರಿಗಳಿಂದ ಮಂದಿರ ನಿರ್ಮಾಣಕ್ಕೆ ಚಂದಾ ಸಂಗ್ರಹಿಸಿ ಅದನ್ನು ರಾಮನ ಹೆಸರಲ್ಲಿ ಲೂಟಿ ಮಾಡಲಾಗುತ್ತಿದೆ ಎಂದಿರುವ ಅವರು, ಮೋದಿಯವರೇ ಇ.ಡಿ, ಸಿಬಿಐ ತನಿಖೆ ನಡೆಸಿ ಹಗರಣದಲ್ಲಿ ಭಾಗಿಯಾದವರನ್ನು ಜೈಲಿಗೆ ಹಾಕಿ ಎಂದು ಆಗ್ರಹಿಸಿದ್ದಾರೆ.
ಅಯೋಧ್ಯೆಯ ರಾಮ ಮಂದಿರಕ್ಕೆ ಭೂಮಿ ಖರೀದಿಸುವಾಗ ಕೋಟ್ಯಂತರ ಮೊತ್ತದ ಆರ್ಥಿಕ ಅಕ್ರಮಗಳು ನಡೆದಿವೆ ಎಂದು ಸಮಾಜವಾದಿ ಪಕ್ಷದ ಮಾಜಿ ಶಾಸಕ ಪವನ್ ಪಾಂಡೆ ಕೂಡ ಭಾನುವಾರ ಆರೋಪಿಸಿದ್ದಾರೆ.
ಏಕಕಾಲದಲ್ಲಿ ನಡೆದ ಪತ್ರಿಕಾಗೋಷ್ಠಿಗಳಲ್ಲಿ, (ಲಕ್ನೋದಲ್ಲಿ ಸಂಜಯ ಸಿಂಗ್ ಮತ್ತು ಅಯೋಧ್ಯೆಯಲ್ಲಿ ಪವನ್ ಪಾಂಡೆ) ಎರಡು ಭೂ ಖರೀದಿ ಒಪ್ಪಂದಗಳ ಪ್ರತಿಗಳನ್ನು ಮಾಧ್ಯಮಗಳಿಗೆ ನೀಡಲಾಗಿದೆ.
ಮೊದಲ ಒಪ್ಪಂದ
ಅಯೋಧ್ಯೆಯ ಕುಸುಮ್ ಪಾಠಕ್ ಮತ್ತು ಹರೀಶ್ ಪಾಠಕ್ ಎನ್ನುವವರಿಂದ ರವಿ ಮೋಹನ್ ತಿವಾರಿ ಮತ್ತು ಸುಲ್ತಾನ್ ಅನ್ಸಾರಿ ಎಂಬಿಬ್ಬರು 1.20 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಈ ಆಸ್ತಿಯನ್ನು ಖರೀದಿ ಮಾಡುತ್ತಾರೆ. ಈ ಆಸ್ತಿಯ ಮೌಲ್ಯವನ್ನು ಸರ್ಕಾರ ನಿಗದಿಪಡಿಸಿದ ಪ್ರತಿ ಯೂನಿಟ್ ಪ್ರದೇಶದ ದರಕ್ಕೆ ಅನುಗುಣವಾಗಿ 5.79 ಕೋಟಿ ರೂ ಎಂದು ಪಟ್ಟಿ ಮಾಡಲಾಗಿದೆ. ಆದರೆ ಅಂತಿಮವಾಗಿ ಆಸ್ತಿಯ ಮಾರಾಟದ ಬೆಲೆ ಕೇವಲ 2 ಕೋಟಿ ರೂ. ಈ ಮಾರಾಟಕ್ಕಾಗಿ ಪಾವತಿಸಿದ ಸ್ಟಾಂಪ್ ಡ್ಯೂಟಿ ಇದನ್ನು ಪುಷ್ಟೀಕರಿಸುತ್ತದೆ. ಈ ಖರೀದಿಯ ಸಮಯವನ್ನು ಮಾರ್ಚ್ 18, 2021 ರ ಸಂಜೆ 5 ಗಂಟೆ 10 ನಿಮಿಷ ಎಂದು ಅಧಿಕೃತವಾಗಿ ದಾಖಲಿಸಲಾಗಿದೆ.
ಇದನ್ನೂ ಓದಿ: ಲವ್ ಜಿಹಾದ್, ಗೋ ಹತ್ಯೆ ನಿಷೇಧದಂತಹ ನಾಟಕಗಳು ಬಿಜೆಪಿಯನ್ನು ಗೆಲ್ಲಿಸುವುದಿಲ್ಲ- RLD ಮುಖ್ಯಸ್ಥ
ಎರಡನೇ ಒಪ್ಪಂದ
ಅಂದೇ ಮಾರ್ಚ್ 18ರಂದು, ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಇದೇ ಆಸ್ತಿಯನ್ನು ಸುಲ್ತಾನ್ ಅನ್ಸಾರಿ ಮತ್ತು ರವಿಮೋಹನ್ ತಿವಾರಿಯಿಂದ ಖರೀದಿಸಿದೆ. ಸುಲ್ತಾನ್ ಅನ್ಸಾರಿ ಮತ್ತು ರವಿಮೋಹನ್ ತಿವಾರಿಗೆ ಮಾರಾಟವಾದ ಐದೇ ನಿಮಿಷದಲ್ಲಿ ಈ ಖರೀದಿ ನಡೆದಿದೆ. ಖರೀದಿಗೆ ಪಾವತಿಸಿದ ಸ್ಟಾಂಪ್ ಡ್ಯೂಟಿ 1.29 ಕೋಟಿ ರೂ. ಭೂಮಿಯನ್ನು 18.50 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಈ ವಹಿವಾಟಿನ ಸಮಯ ಅದೇ ದಿನ ಸಂಜೆ 5.11 ಎಂದು ದಾಖಲಾಗಿದೆ.
ಐದೇ ನಿಮಿಷದಲ್ಲಿ 9 ಪಟ್ಟು ಏರಿದ ಆಸ್ತಿ ಮೌಲ್ಯ!
“ಒಂದು ಆಸ್ತಿಯ ಮೌಲ್ಯವನ್ನು ಐದು ನಿಮಿಷಗಳಲ್ಲಿ 2 ಕೋಟಿಯಿಂದ 18 ಕೋಟಿ ರೂ.ಗೆ ಏರಿದ್ದನ್ನು ಹಗರಣ ಎನ್ನದೇ ಇರಲಾಗುತ್ತಾ? ಪ್ರತಿ ಸೆಕೆಂಡ್ಗೆ 5 ಲಕ್ಷ ರೂ ದರದಲ್ಲಿ ಆಸ್ಯಿಯ ಮೌಲ್ಯ ಹೆಚ್ಚಾಗಿದ್ದು ಭಾರತದ ಇತಿಹಾಸದಲ್ಲೇ ಮೊದಲು. ಜಾರಿ ನಿರ್ದೇಶನಾಲಯ ಮತ್ತು ಕೇಂದ್ರ ತನಿಖಾ ದಳ ಇದನ್ನು ಪರಿಶೀಲಿಸಬೇಕು. ಟ್ರಸ್ಟ್ ಹಿಂದೂ ಭಕ್ತರ ಹಣವನ್ನು ತಿಂದು ಹಾಕುತ್ತಿದೆ” ಎಂದು ಸಂಜಯ್ಸಿಂಗ್ ಆರೋಪಿಸಿದ್ದಾರೆ.
ಟ್ರಸ್ಟ್ನ ಸದಸ್ಯ ಅನಿಲ್ ಕುಮಾರ್ ಮಿಶ್ರಾ ಮತ್ತು ಅಯೋಧ್ಯೆಯ ಮೇಯರ್ ರಿಷಿಕೇಶ್ ಉಪಾಧ್ಯಾಯ ಕೂಡ ಎರಡೂ ಒಪ್ಪಂದಗಳಲ್ಲಿ ಸಾಮಾನ್ಯ ಸಾಕ್ಷಿಯಾಗಿದ್ದಾರೆ.
ಮಾಜಿ ಶಾಸಕ ಪವನ್ ಪಾಂಡೆ, “ಟ್ರಸ್ಟ್ ಮತ್ತು ಮೇಯರ್ ಈ ವಂಚನೆಯ ಬಗ್ಗೆ ಸಂಪೂರ್ಣವಾಗಿ ತಿಳಿದಿದ್ದರು. ಕೋಟ್ಯಂತರ ಹಿಂದೂಗಳು ಮಂದಿರಕ್ಕಾಗಿ ಬೆವರಿನ ಶ್ರಮದ ದುಡ್ಡು ನೀಡಿದ್ದಾರೆ. ಆದರೆ ಬಿಜೆಪಿ ಬೆಂಬಲಿತ ಕೆಲವು ವ್ಯಕ್ತಿಗಳು ಮತ್ತು ಟ್ಟಸ್ಟ್ ಸದಸ್ಯರು ಲೂಟಿ ನಡೆಸುತ್ತಿದ್ದಾರೆ” ಎಂದು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್ ದರ ಹೆಚ್ಚಳಕ್ಕೆ ಕಾರಣ ತಿಳಿಸಿದ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್!


