Homeಕರೋನಾ ತಲ್ಲಣಕೃಷಿಕರ ಮೂಲೋತ್ಪಾಟನೆಗೆ ಸರ್ಕಾರ ಸಂಚು ಹೂಡಿದೆ: ಚಂಸು ಪಾಟೀಲ

ಕೃಷಿಕರ ಮೂಲೋತ್ಪಾಟನೆಗೆ ಸರ್ಕಾರ ಸಂಚು ಹೂಡಿದೆ: ಚಂಸು ಪಾಟೀಲ

ಡಿಸೇಲ್, ಪೆಟ್ರೋಲ್ ದರಗಳ ನಿರಂತರ ಏರಿಕೆ ಕೃಷಿ ಮೇಲೂ ಪರಿಣಾಮ ಬೀರುತ್ತಿದ್ದು, ಕೃಷಿ ವೆಚ್ಚವನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಆದರೆ ಆದಾಯವೆಂಬುದು ಮರೀಚಿಕೆಯಾಗಿದೆ.

- Advertisement -
- Advertisement -

ಹಳ್ಳಕ್ಕೆ ಬಿದ್ದ ಗೂಳಿಗೆ ಆಳಿಗೊಂದು ಕಲ್ಲು ಎಂಬ ಗಾದೆ ಇದೆ‌. ಕೊರೊನಾ ಸಾಂಕ್ರಾಮಿಕ ರೋಗದ ಈ ಕಾಲಘಟ್ಟದಲ್ಲಿ ಇದು ರೈತರ ಪರಿಸ್ಥಿತಿ‌ಗೆ ಸರಿಯಾಗಿ ಅನ್ವಯಿಸುತ್ತದೆ. ಲಾಕ್‌ಡೌನ್ ಸಂದರ್ಭದಲ್ಲಿ ಬಹುತೇಕ ಉತ್ಪಾದನಾ ಚಟುವಟಿಕೆಗಳು ಸ್ತಬ್ಧ‌ಗೊಂಡಿದ್ದರೂ ಕೃಷಿ ಕ್ಷೇತ್ರ ಇದಕ್ಕೆ ಹೊರತಾಗಿದೆ. ಕೃಷಿಕರು ಎಂದಿನಂತೆ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಲಾಕ್‌ಡೌನ್ ಅವರ ಪಾಲಿಗೆ ಹೆಚ್ಚು ಅನಾನುಕೂಲತೆಗಳನ್ನು ತಂದೊಡ್ಡಿದೆ. ಈ ಸಂಕಷ್ಟದ ಸಮಯದಲ್ಲೂ ದೃತಿಗೆಡದೆ ತಮ್ಮ ಕಾಯಕದಲ್ಲಿ ತೊಡಗಿಕೊಂಡಿದ್ದರೂ ಕೃಷಿಕರು ಮತ್ತು ಕೃಷಿ ಕಾರ್ಮಿಕರು ಮತ್ತಷ್ಟು ಸಂಕಷ್ಟಕ್ಕೆ ಗುರಿಯಾಗುತ್ತಿರುವುದು ವಿಪರ್ಯಾಸ‌ವೇ ಸರಿ.

ಡಿಸೇಲ್, ಪೆಟ್ರೋಲ್ ದರಗಳ ನಿರಂತರ ಏರಿಕೆ ಕೃಷಿಯ ಮೇಲೂ ಪರಿಣಾಮ ಬೀರುತ್ತಿದೆ. ಕೃಷಿ ಕ್ಷೇತ್ರ ಯಾಂತ್ರೀಕರಣಗೊಳ್ಳುತ್ತಲೇ ಇದೆ. ಟ್ರ್ಯಾಕ್ಟರ್‌ಗಳ ಬಳಕೆ, ಒಕ್ಕಣೆ ಯಂತ್ರಗಳ ಬಳಕೆ ಅನಿವಾರ್ಯ‌ವಾಗಿವೆ. ಇಂಧನ ಬೆಲೆಗಳ ಏರಿಕೆ ಸಹಜವಾಗಿ ಕೃಷಿಯ ಖರ್ಚನ್ನೂ ಹೆಚ್ಚಿಸುತ್ತಿವೆ. ಬಹುಪಾಲು ಮಧ್ಯಮವರ್ಗದ ರೈತರು, ಸಣ್ಣ ಮತ್ತು ಅತಿ ಸಣ್ಣ ರೈತರು ಉಳುಮೆಗೆ ಬಾಡಿಗೆ ಟ್ರ್ಯಾಕ್ಟರ್‌ಗಳನ್ನು ಅವಲಂಬಿಸಿದ್ದರೆ, ದೊಡ್ಡ ಹಿಡುವಳಿ ಹೊಂದಿರುವ ರೈತರು ಸ್ವಂತ ಟ್ರ್ಯಾಕ್ಟರ್ ಹೊಂದಿರುತ್ತಾರೆ. ಶೇಂಗಾ, ಭತ್ತ, ಜೋಳ, ಗೋವಿನ ಜೋಳ, ಸೂರ್ಯಪಾನ ಮೊದಲಾದ ಪ್ರಮುಖ ಬೆಳೆಗಳ ಕೊಯ್ಲು ಮತ್ತು ಒಕ್ಕಣೆ ಈಗ ಯಂತ್ರಗಳಿಂದಲೇ ನಡೆಯುತ್ತಿದೆ. ಇಲ್ಲೂ ಸಣ್ಣ ಹಿಡುವಳಿಯ ರೈತರು ಬಾಡಿಗೆ ಯಂತ್ರಗಳನ್ನೇ ಅವಲಂಬಿಸಿರುತ್ತಾರೆ. ಹೀಗೆ ಕೃಷಿ ಚಟುವಟಿಕೆಗಾಗಿನ ಖರ್ಚಿನ ಪ್ರಮಾಣ ಒಂದು ಕಡೆ ಹೆಚ್ಚಾಗುತ್ತಲೇ ಸಾಗಿದೆ. ಆದರೆ, ಅದಕ್ಕೆ ಪೂರಕವಾಗಿ ಆದಾಯ ಹೆಚ್ಚದಿರುವುದು ಅವರನ್ನು ಸಾಲಗಾರರನ್ನಾಗಿ ಮಾಡುತ್ತಿದೆ. ಲಾಕ್‌ಡೌನ್ ಸಂದರ್ಭದಲ್ಲಂತೂ ರೈತರು ತಾವು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಸಿಗದೇ, ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದಾರೆ.

ಎರಡು ವರ್ಷಗಳ ಹಿಂದೆ ಒಮ್ಮೆ ಗೋವಿನಜೋಳದ ಬೆಲೆ ಕ್ವಿಂಟಾಲ್‌ಗೆ  2400 ರವರೆಗೆ ಏರಿತ್ತು ಮಾರನೇ ವರ್ಷವೇ ಅದು 1200 ಕ್ಕೆ ಬಂದಿತ್ತು. ಲಾಕ್‌ಡೌನ್‌ನಲ್ಲಿ ರೈಲುಸಂಚಾರ ಸ್ಥಗಿತಗೊಂಡು, ವ್ಯಾಗನ್‌ಗಳಲ್ಲಿ  ಸಾಗಾಣಿಕೆಯಾಗುತ್ತಿದ್ಧ ಗೋವಿನಜೋಳ ಸ್ಥಳೀಯ ಮಾರುಕಟ್ಟೆಗಳನ್ನು ತುಂಬಿ ಅಲ್ಲಿ ಮಾರಾಟವಾಗದೇ ಒಮ್ಮೆಲೆ ಬೆಲೆಕುಸಿತ ಉಂಟಾಗಿತ್ತು. ಇದ್ಯಾವುದನ್ನೂ ಊಹಿಸಿರದ ರೈತ ತಾನು ಬೆಳೆದ ಬೆಳೆಗೆ ನಿರೀಕ್ಷಿತ ಬೆಲೆ ಸಿಗದೇ ಹೋದಾಗ ಹತಾಶನಾಗುವುದೂ ಸಹಜ. ಯಾವ ಬೆಳೆ ಬೆಳೆದರೆ ಒಳ್ಳೆಯ ಬೆಲೆ ಸಿಕ್ಕೀತು ಎಂಬ ಗೊಂದಲದಲ್ಲಿ ಎಲ್ಲ ಬೆಳೆಗಳದೂ ಇದೇ ಸ್ಥಿತಿಯಾದಾಗ ಯಾವ ಬೆಳೆ ಬೆಳೆಯಬೇಕೆಂಬುದೇ ಅವನಿಗೆ ತೋಚದಂತಾಗುತ್ತದೆ. ಬೆಲೆಗಳ ಅಸ್ಥಿರತೆ ರೈತರ ಬದುಕನ್ನು ನರಕಸದೃಶವಾಗಿಸುತ್ತಿದೆ.  ದೆಹಲಿಯ ಗಡಿ ಭಾಗಗಳಲ್ಲಿ ಕಳೆದ ಏಳು ತಿಂಗಳಿನಿಂದ ಸತ್ಯಾಗ್ರಹ ನಿರತರಾಗಿರುವ ರೈತರು ಬೆಂಬಲಬೆಲೆಯನ್ನು ಕಾನೂನುಬದ್ದಗೊಳಿಸಬೇಕೆಂದು ಆಗ್ರಹಿಸುತ್ತಿರುವುದೂ ಇದೇ ಕಾರಣಕ್ಕಾಗಿ ಎಂಬುದು ಸ್ವಯಂವೇದ್ಯ.

ಲಾಕ್‌ಡೌನ್ ಮಧ್ಯೆಯೂ ಕೃಷಿ ಕ್ಷೇತ್ರ ಕ್ರಿಯಾಶೀಲವಾಗಿದೆ‌. ರೈತರು ವಿವಿಧ ಬೆಳೆಗಳನ್ನು ಬೆಳೆಯುತ್ತಲೇ ಇದ್ದಾರೆ. ಹೀಗೆ ಬೆಳೆದ ಬೆಳೆಗೆ ಅಗತ್ಯ ಮಾರುಕಟ್ಟೆ, ಸೂಕ್ತ ಬೆಲೆ ಸಿಗದೇ ರೈತರು
ಬೆಳೆ ಬೆಳೆಯದೇ ಇರಲಿಕ್ಕೂ ಆಗದೇ, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೇ, ಇತ್ತ ದರಿ ಅತ್ತ ಪುಲಿ ಎಂಬಂತೆ ಏನು ಮಾಡಬೇಕೆಂಬುದು ತಿಳಿಯದೇ ನಿಟ್ಟುಸಿರು ಬಿಡುವಂತಾಗಿದೆ.

ಕಿಲೋಗೆ 25/30 ರೂ. ಮಾರುತಿದ್ದ ಕ್ಯಾಬೀಜ ಈ ಸಂದರ್ಭದಲ್ಲಿ ಹತ್ತರೊಳಗೇ ಮಾರಾಟವಾಗುತ್ತದೆ. ಎಲ್ಲ ತರಕಾರಿ ಬೆಳೆಗಳ ಸ್ಥಿತಿಯೂ ಹೀಗೆ ಇದೆ. ರೈತರಿಂದ ಅಗ್ಗದ ಬೆಲೆಗೆ ಕೊಳ್ಳುವ ವ್ಯಾಪಾರಸ್ಥರು ಅತ್ತ ಗ್ರಾಹಕರನ್ನೂ ಸುಲಿಗೆ ಮಾಡುತ್ತಿರುತ್ತಾರೆ. ಆದರೆ, ಅದನ್ನು ಕಷ್ಟಪಟ್ಟು ಬೆಳೆದ ರೈತ ಮಾತ್ರ ಅದಕ್ಕೆ ಹಾಕಿದ ಶ್ರಮ, ಸಮಯ, ಬಂಡವಾಳ ಎಲ್ಲವನ್ನೂ ಕಳೆದುಕೊಂಡು ಸಾಲಗಾರನಾಗುವ ಸ್ಥಿತಿ ನಿರ್ಮಾಣವಾಗಿದೆ. ಇದು ಇನ್ನೂ ಎಷ್ಟು ದಿನ? ರೈತ ಬೆಳೆದ ಬೆಳೆಗೆ ಖಚಿತ ಬೆಲೆ, ಖಚಿತ ಆದಾಯ ಸಿಗುವುದೇ? ಎಂಬುದು ಸಧ್ಯಕ್ಕೆ ಯಕ್ಷಪ್ರಶ್ನೆಯಾಗಿದೆ.

ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗಬೇಕೆಂಬ ಆಗ್ರಹ ಬಹುದಿನಗಳಿಂದಲೂ ಇದ್ದೇ ಇದೆ‌. ಆದರೆ, ಸರ್ಕಾರವೇ ಇತ್ತೀಚಿನ ವರ್ಷಗಳಲ್ಲಿ ಪ್ರತಿವರ್ಷ ಬೆಳೆಗಳಿಗೆ ಬೆಂಬಲಬೆಲೆ ಘೋಷಿಸುತಿತ್ತು. ವಾಸ್ತವದಲ್ಲಿ ಆ ಬೆಲೆ ರೈತರಿಗೆ ಸಿಕ್ಕಿದ್ದೇ ಇಲ್ಲ. ಶೇಂಗಾದ ಬೆಂಬಲ ಬೆಲೆ 5200 ಇದ್ದರೆ, ಎಪಿಎಂಸಿಗಳಲ್ಲಿ ಅದು ಮಾರೋದು 3000/ 5000 ರೂ. ಒಳಗೇ. ಗೋವಿನ ಜೋಳಕ್ಕೆ ಬೆಂಬಲಬೆಲೆ 1700 ಇದ್ದರೂ ಅದು ಮಾರುತ್ತಿರುವುದು 1000/1500ರೊಳಗೇ. ಹತ್ತಿಯ ಬೆಂಬಲ ಬೆಲೆ 6000 ಇದ್ದರೂ ಅದು ಮಾರುವುದು 3000/5500ರ ಒಳಗೇ. ಹೀಗೆ ಬೆಂಬಲ ಬೆಲೆಗೂ ವಾಸ್ತವ ಬೆಲೆಗೂ ಇಷ್ಟೊಂದು ವ್ಯತ್ಯಾಸ ಇರುವಾಗ ಈ ಬೆಂಬಲ ಬೆಲೆ ಘೋಷಿಸುವುದಾದರೂ ಯಾವ ಪುರುಷಾರ್ಥಕ್ಕೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.  ಇದೇ ಕಾರಣಕ್ಕೆ ಸಂಯುಕ್ತ ಕಿಸಾನ್ ಮೋರ್ಚಾದ ನೇತೃತ್ವದಲ್ಲಿ ದೆಹಲಿಯ ಹೊರ ವಲಯದಲ್ಲಿ ರೈತರು ಐತಿಹಾಸಿಕ ದೀರ್ಘಕಾಲಿಕ ಹೋರಾಟ ಕೈಗೊಂಡಿದ್ದಾರೆ‌. ಸರ್ಕಾರ ಘೋಷಿಸುವ ಬೆಂಬಲಬೆಲೆಗಳನ್ನೇ ಕಾನೂನುಬದ್ದಗೊಳಿಸಿ ಎಂಬುದು ಅವರ ಹಕ್ಕೊತ್ತಾಯವಾಗಿದೆ. ವೈಜ್ಞಾನಿಕ ಬೆಲೆ ಅಲ್ಲದಿದ್ದರೂ ಬೆಂಬಲಬೆಲೆಗಳೆ ವಾಸ್ತವದಲ್ಲಿ ರೈತರ ಬೆಳೆಗಳಿಗೆ ಸಿಕ್ಕರೆ ಅದರಿಂದ ಅವರಿಗೆ ಎಷ್ಟೋ ಆಸರೆ ದೊರೆತಂತಾಗುತ್ತದೆ. ಆದರೆ, ಒಕ್ಕೂಟ ಸರ್ಕಾರ ಈ ಕುರಿತು ಸರಿಯಾಗಿ ಸ್ಪಂದಿಸದೇ ಇರುವುದು ಕೃಷಿಪ್ರಧಾನ ದೇಶವೊಂದರ ದೊಡ್ಡ ದುರಂತವೇ ಸರಿ.

ಇದನ್ನೂ ಓದಿ: ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ ಅಮೆರಿಕಾದ ಕೃಷಿಕರು, ತಜ್ಞರು ಮತ್ತು ರಾಜಕಾರಣಿಗಳು

ಈ ಮಧ್ಯೆ ರಾಸಾಯನಿಕ ಗೊಬ್ಬರಗಳ ಬೆಲೆಗಳನ್ನೂ ಏರಿಸಿ ಮತ್ತೆ ಇಳಿಸಲಾಗಿದೆ. ಈ ತರದ ರೈತರ ಸಹನೆಯ ಪರೀಕ್ಷೆಗಳು ನಡದೇ ಇರುತ್ತವೆ. ಮೊದಲು ಸಹಾಯಧನದ ರೂಪದಲ್ಲಿ ವಿನಾಯ್ತಿಯಲ್ಲಿ ಸಿಗುತಿದ್ದ ಗೊಬ್ಬರಗಳನ್ನು ರೈತರು ಇಂದು ಪೂರ್ಣಬೆಲೆ ತೆತ್ತು ಕೊಳ್ಳುವ ಸ್ಥಿತಿ ಎದುರಾಗಿದೆ. ಒಂದು ವೇಳೆ ನಿರೀಕ್ಷಿತ ಮಳೆ ಬಾರದೆಯೋ, ಹವಾಮಾನ ವೈಪರೀತ್ಯದಿಂದಲೋ ಆ ಬೆಳೆ ಕೈಗೆ ಸಿಗದಿದ್ದರೆ ರೈತನ ಪರಿಸ್ಥಿತಿ ಏನಾದೀತು ಎಂಬ ಬಗ್ಗೆ ಚಿಂತಿಸಬೇಕಾಗಿದೆ.

ಬೆಂಬಲಬೆಲೆಯ ಹಾಗೆಯೇ ಬೆಳೆವಿಮೆ ಯೋಜನೆ ಇದೆ ಆದರೂ ಪ್ರತಿವರ್ಷ ಪ್ರಿಮಿಯಂ ಕಟ್ಟುತಿದ್ದರೂ.. ಯಾವುದೋ ವರ್ಷದ ವಿಮೆ ಬರುತ್ತದೆ. ಅದು ಬಂದಾಗ ಇದು ಯಾವ ವರ್ಷದ್ದು, ಯಾವ ಬೆಳೆಗೆ ಬಂದದ್ದು ಎಂಬುದು ರೈತನಿಗೆ ತಿಳಿಯದಷ್ಟು ಸಂಕೀರ್ಣ ಯೋಜನೆ ಇದಾಗಿದೆ. ಆದಕಾರಣ ಬೆಳೆವಿಮೆ ಯೋಜನೆ ಒಳ್ಳೆಯ ಯೋಜನೆ ಆದರೂ ಅದರ ಪ್ರಯೋಜನ ಪ್ರತಿವರ್ಷವೂ, ಪ್ರತಿಬೆಳೆಗೂ ರೈತನಿಗೆ ದೊರೆಯಬೇಕಾದರೆ ಅದಿನ್ನೂ ಹೆಚ್ಚು ಕ್ರಮಬದ್ದವೂ ಪಾರದರ್ಶಕವೂ ಆಗಬೇಕಿದೆ.

ಗೋಹತ್ಯೆ ನಿಷೇಧದಂತಹ ಕಾನೂನುಗಳ ಜಾರಿ ನಂತರ ರೈತರು ಪಶುಸಂಗೋಪಣೆಯಿಂದಲೇ ವಿಮುಖರಾಗುವಂಥ ಸ್ಥಿತಿ ನಿರ್ಮಾಣವಾಗಿದೆ. ಹೇಗೆಂದರೆ, ಈ ಮೊದಲು ರೈತರು ವಯಸಾದ ದನಕರುಗಳನ್ನು ಅವು ಇನ್ನೂ ಆರೋಗ್ಯಪೂರ್ಣವಾಗಿರುವಾಗಲೇ ಮಾರಾಟ ಮಾಡಿ ಅದೇ ಹಣಕ್ಕೆ ಮತ್ತೆ ಒಂದಿಷ್ಟು ಹಣ ಸೇರಿಸಿ ಹೊಸ ಎತ್ತು, ದನಕರು ಕೊಳ್ಳುತಿದ್ದರು. ಎತ್ತುಗಳನ್ನು ಉಳುಮೆಗೆ, ದನಕರುಗಳನ್ನು ಹೈನುಗಾರಿಕೆಗೆ ಸಾಕುತ್ತಿದ್ದರು. ಗೋಹತ್ಯೆ ನಿಷೇಧದ ನಂತರ ಅವರು ಬಂಜೆದನಗಳನ್ನೂ ಸಾಕಲೇಬೇಕಾದಂತಹ ಅನಿವಾರ್ಯ‌ತೆ ಸೃಷ್ಠಿಯಾಗಿದೆ. ವಯಸ್ಸಾದ ದನಗಳ ಮಾರಾಟ ಕ್ಲಿಷ್ಟದಾಯಕವಾಗಿ ಅವುಗಳ ಚಿಕಿತ್ಸೆ‌ಗೆ ತಗಲುವ ವೈದ್ಯಕೀಯ ವೆಚ್ಚವನ್ನು ಭರಿಸಬೇಕಾಗಿದೆ. ಒಂದು ವೇಳೆ ಅವು ಮನೆಯಲ್ಲೆ ಅಸುನೀಗಿದರೆ ಅವುಗಳ ವಿಲೇವಾರಿ ಮಾಡುವುದೆ ಕಷ್ಟಕರವಾಗಿ ತಲೆಮೇಲೆ ಕೈಹೊತ್ತು ಕೂಡುವಂತಾಗಿದೆ.

ಲಾಕ್‌ಡೌನ್‌ ಸಂದರ್ಭದಲ್ಲಂತೂ ದನದ ಮಾರುಕಟ್ಟೆಗಳು ಬಂದ್ ಆಗಿ ತಮಗೆ ಬೇಕಾದ ಎತ್ತುಗಳನ್ನು ಸಮಯಕ್ಕೆ ಸರಿಯಾಗಿ ಕೊಳ್ಳುವುದೇ ದುಸ್ತರವಾಗಿದೆ. ಈ ಕಾರಣಕ್ಕೆ ಎತ್ತುಗಳ ಬೆಲೆಗಳೂ ಈಗ ಸಿಕ್ಕಾಪಟ್ಟೆ ದುಬಾರಿಯಾಗಿವೆ. ಮೊದಲೆಲ್ಲ ಮೂವತ್ತು ನಲವತ್ತು ಸಾವಿರ ರೂ.ಗಳಿಗೆ ಸಿಗುತ್ತಿದ್ದ ಜೋಡಿ ಎತ್ತುಗಳಿಗೆ ಈಗ ಎಪ್ಪತ್ತು ಎಂಭತ್ತು ಸಾವಿರ ರೂ. ತೆರುವ ಪರಿಸ್ಥಿತಿ ಎದುರಾಗಿದೆ. ಕೃಷಿಗೆ ಎತ್ತುಗಳು ಅನಿವಾರ್ಯ‌ವಾದ ಕಾರಣ ಸಾಲಸೋಲ ಮಾಡಿ ಎತ್ತು ಕೊಳ್ಳುವ ರೈತರು, ಬೀಜ, ಗೊಬ್ಬರ, ಔಷಧಿ ಎಂದು ಸಾಲ ಮಾಡಲೇಬೇಕಾಗುತ್ತದೆ. ಉತ್ತಮ ಬೆಳೆ ಬಂದರೆ ಉತ್ತಮ ಬೆಲೆ ಇಲ್ಲ, ಉತ್ತಮ ಬೆಲೆ ಇರುವ ಬೆಳೆ ಉತ್ತಮ ಇಳುವರಿ ಬರಲಿಲ್ಲ ಎಂದರೆ ರೈತನಿಗೆ ನಷ್ಟ ಕಟ್ಟಿಟ್ಟ ಬುತ್ತಿ.

ಹೀಗೆ ಹತ್ತು ಹಲವು ಸಮಸ್ಯೆ‌ಗಳ ಸುಳಿಯಲ್ಲಿ ಸಿಲುಕಿರುವ ರೈತ ಒಂದೆಡೆ ತನ್ನ ಬದುಕಿಗೆ ಭದ್ರತೆಯೆ ಇಲ್ಲದ ಕಾರಣಕ್ಕೆ ಹತಾಶನಾಗಿ ಆತ್ಮಹತ್ಯೆಗೆ ಶರಣಾಗುವ ಘಟನೆಗಳು ನಿತ್ಯ ನಿರಂತರ ಘಟಿಸುತ್ತಲೇ ಇವೆ. ಇನ್ನೊಂದೆಡೆ ದಿನದಿನಕ್ಕೂ ಕಗ್ಗಂಟಾಗುತ್ತಿರುವ ಕೃಷಿ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರಗಳು ತೋರುತ್ತಿರುವ ನಿರಾಸಕ್ತಿ ಕೃಷಿ ಹಾಗೂ ಕೃಷಿಕರ ಮೂಲೋತ್ಪಾಟನೆಗೆ ಹೂಡಿರುವ ಸಂಚಿನಂತೆ ಭಾಸವಾಗುತ್ತಿದೆ.

  • ಚಂಸು ಪಾಟೀಲ
    ಕೂನಬೇವು
    ತಾ. ರಾಣೇಬೆನ್ನೂರು
    ಜಿ. ಹಾವೇರಿ

(ಕೃಷಿಕರಾದ ಚಂಸು ಪಾಟೀಲರವರು ಲೇಖಕರೂ ಹೌದು. ಬೇಸಾಯದ ಕತಿ ಎಂಬ ಪುಸ್ತಕ ಬರೆದಿರುವ ಇವರು ಸಮಾಜದ ಆಗುಹೋಗುಗಳಿಗೆ ಸದಾ ಪ್ರತಿಕ್ರಿಯಿಸುತ್ತಿರುತ್ತಾರೆ)


ಇದನ್ನೂ ಓದಿ; ಕೊರೊನಾ ತಂದೆಳೆದ ಕೃಷಿ ಸಂಕಷ್ಟಗಳು ಮತ್ತು ಪ್ರಭುತ್ವದ ಹೊಣೆಗಾರಿಕೆ: ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...