Homeಕರ್ನಾಟಕಪ್ರಯಾಣಿಕನ ಸೊಂಟಕ್ಕೆ ಕಂಪ್ಯೂಟರ್ ನಲ್ಲೇ ಬೆಲ್ಟ್ ಬಾಂಬ್ ಕಟ್ಟಿದ ಚಾನೆಲ್‍ಗಳು 

ಪ್ರಯಾಣಿಕನ ಸೊಂಟಕ್ಕೆ ಕಂಪ್ಯೂಟರ್ ನಲ್ಲೇ ಬೆಲ್ಟ್ ಬಾಂಬ್ ಕಟ್ಟಿದ ಚಾನೆಲ್‍ಗಳು 

ಮಾಧ್ಯಮ ಭಯೋತ್ಪಾದಕರಿಗೆ ಶಿಕ್ಷೆಯಿಲ್ಲವೇ? ನಮ್ಮ ಬೆಂಗಳೂರಿನಲ್ಲಿ ನಡೆದ ಆತಂಕಕಾರಿ ವಿದ್ಯಮಾನ

- Advertisement -
- Advertisement -

| ನಾನುಗೌರಿ ಡೆಸ್ಕ್ |

ತಮ್ಮ ಬದುಕಿನ ಜಂಜಾಟಗಳಲ್ಲಿ ಮುಳುಗಿ ಹೋಗಿರುವ ವ್ಯಕ್ತಿಗಳಿಬ್ಬರು ಎಲ್ಲೋ ಪ್ರಯಾಣಿಸುತ್ತಿರುತ್ತಾರೆ. ಎಲ್ಲರಂತೆ ಉದ್ಯೋಗ, ಸಂಸಾರ, ಕಷ್ಟ ಸುಖ ಎಲ್ಲ ಇರುವ ಸಾಮಾನ್ಯ ಜನ ಅವರು. ಇದ್ದಕ್ಕಿದ್ದಂತೆ ಅವರ ಕುರಿತು ಟಿವಿ ವಾಹಿನಿಗಳಲ್ಲಿ ಅವರು ಭಯೋತ್ಪಾದಕ ಎಂಬ ಸುದ್ದಿ ಬರುತ್ತಿದೆ ಎಂಬುದನ್ನು ನೆರೆಮನೆಯವರು ತಿಳಿಸುತ್ತಾರೆ. ಅಷ್ಟೇ ಅಲ್ಲದೇ ಅಂದಿನ ಹೊಟ್ಟೆಪಾಡಿನ ಕೆಲಸ ಮುಗಿಸಿ ತಮ್ಮಂತೆ ತಾವೇ ರೈಲಿನಲ್ಲಿ ಪ್ರಯಾಣ ಮಾಡಿ ಮನೆ ಸೇರಿಕೊಂಡವರ ವಿಡಿಯೋ ಚಿತ್ರದಲ್ಲಿನ ಆಕೃತಿಯ ಸೊಂಟಕ್ಕೆ ಬೆಲ್ಟ್ ಬಾಂಬನ್ನು ಕಂಪ್ಯೂಟರ್‍ನಲ್ಲಿ ಜೋಡಿಸಿ, ಇವರು ಬಾಂಬ್ ಕಟ್ಟಿಕೊಂಡು ಬಂದಿದ್ದರು ಎಂಬ ಸುದ್ದಿ ಪ್ರಕಟವಾದರೆ? ಅದರಲ್ಲೂ ಆ ವ್ಯಕ್ತಿ ನಿರ್ದಿಷ್ಟ ಧರ್ಮಕ್ಕೆ ಸೇರಿದವರಾಗಿದ್ದು, ಸಮಾಜದಲ್ಲಿ ಈಗಾಗಲೇ ಅಶಾಂತಿ ಇದ್ದು ಟಿವಿ ನೋಡಿದ ಜನ ರೊಚ್ಚಿಗೇಳುವ ಸಾಧ್ಯತೆ ಇರುವಾಗ ಇಂತಹ ಕೆಲಸ ಮಾಡಿದರೆ ನಾಗರಿಕ ಸರ್ಕಾರವೊಂದು ಏನು ಮಾಡಬೇಕು? ಈ ಪ್ರಶ್ನೆಗಳು ನಮ್ಮ ಬೆಂಗಳೂರಿನ ನಮ್ಮ ಮೆಟ್ರೋದಲ್ಲೇ ನಡೆದಿದೆ. ವಿವರಗಳು ನಮ್ಮೆಲ್ಲರನ್ನೂ ಬೆಚ್ಚಿ ಬೀಳಿಸುತ್ತವೆ.

ಘಟನೆ 1: ಮೇ 6ರ ಸೋಮವಾರ ಸಂಜೆ 7.18ಕ್ಕೆ ರಾಜಸ್ಥಾನ ಮೂಲದ ಸಾಜಿದ್ ಖಾನ್ ಎಂಬುವವರು ಬೆಂಗಳೂರಿನ ಮೆಜೆಸ್ಟಿಕ್ ಮೆಟ್ರೊದಲ್ಲಿ ಪ್ರಯಾಣಿಸಲು ಬಂದಿದ್ದಾರೆ. ಇವರು ಪ್ರತಿ ವರ್ಷ ರಂಜಾನ್ ಸಮಯದಲ್ಲಿ ಮಸೀದಿಗಳ ಎದುರು ದಾನ (ಝಕಾತ್) ಪಡೆಯುವುದನ್ನು ರೂಢಿಸಿಕೊಂಡಿದ್ದಾರೆ. ಈ ರೀತಿ ದಾನವಾಗಿ ಪಡೆದಿದ್ದ ಕೆಲವು ನಾಣ್ಯಗಳು ಮತ್ತು ತಾಯತ ಇವರ ಜೇಬಿನಲ್ಲಿದ್ದ ಕಾರಣ ಮೆಟ್ರೊ ಪ್ರವೇಶದ್ವಾರದಲ್ಲಿ ಬೀಪ್ ಶಬ್ದ ಬಂದಿದೆ. ಸೆಕ್ಯುರಿಟಿ ಗಾರ್ಡ್‍ಗಳು ಹೆಚ್ಚಿನ ತಪಾಸಣೆ ನಡೆಸಲು ಮುಂದಾದಾಗ ಸಾಜಿದ್‍ರವರಿಗೆ ಕನ್ನಡ ಭಾಷೆ ಬಾರದ ಕಾರಣ ಗೊಂದಲ ಉಂಟಾಗಿದೆ. ಇದರಿಂದ ಸಾಜಿದ್‍ರವರು ಮೆಟ್ರೊ ಪ್ರವೇಶಿಸದೇ ವಾಪಸ್ ಹೋಗಿದ್ದಾರೆ.

ಇದರ ಮಾರನೆಯ ದಿನ ಎಲ್ಲಾ ಪತ್ರಿಕೆ ಮತ್ತು ಟಿ.ವಿಗಳಲ್ಲಿ ಭಯೋತ್ಪಾದನೆ ಆರಂಭವಾಯಿತು. ಈತ ಆತ್ಮಾಹುತಿ ಬಾಂಬರ್ ಇರಬೇಕು, ಈತನ ಬಳಿ ಗನ್ ಇತ್ತು, ಮೆಟ್ರೊ ಸ್ವಚ್ಚತ ಸಿಬ್ಬಂದಿಗೆ ಸಹಕರಿಸಿದರೆ ಒಂದು ಕೋಟಿ ರೂ ಕೊಡುವುದಾಗಿ ಹೇಳಿದ್ದ, ಶ್ರೀಲಂಕಾದಿಂದ ಉಗ್ರರು ಬೆಂಗಳೂರಿಗೆ ಬಂದಿದ್ದಾರೆ ಎಚ್ಚರವಾಗಿರಿ, ಗಡ್ಡಬಿಟ್ಟ, ಜುಬ್ಬ ಧರಿಸಿದ ವ್ಯಕ್ತಿಗಳು ಕಂಡರೆ ಪೊಲೀಸರಿಗೆ ತಿಳಿಸಿ ಅಥವಾ ನಮಗೆ ತಿಳಿಸಿ ಎಂದೆಲ್ಲಾ ಟಿ.ವಿಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಈ ಮೆಟ್ರೊ ಸಿಬ್ಬಂದಿಗಳು ಸಹ ಟಿವಿಯಲ್ಲಿ ಬರುವ ಕೀಳುಮಟ್ಟದ ಆಸೆಗೆ ಹೌದು ಆತನ ಮುಖಕ್ಕೆ ಬಟ್ಟೆ ಕಟ್ಟಿದ್ದ, ಆತ ಭಯೋತ್ಪದಾಕನೇ ಇರಬೇಕು ಎಂದೆಲ್ಲಾ ಬೂಸಿ ಬಿಟ್ಟಿದ್ದಲ್ಲದೇ ಸಿಸಿಟಿವಿಯ ಫೂಟೇಜ್‍ಗಳನ್ನು ಟಿ.ವಿ ಮಾಧ್ಯಮದವರಿಗೆ ನೀಡಿ ತಾವೇನೊ ಮಹಾನ್ ಸಾಧನೆ ಮಾಡಿದವರಂತೆ ಸಂಭ್ರಮಿಸಿದ್ದಾರೆ.

ಈ ಸಿಸಿಟಿವಿ ಫೂಟೆಜ್ ಸಿಕ್ಕ ಕೂಡಲೇ ಆತನ ದೃಶ್ಯವನ್ನು ಎಡಿಟ್ ಮಾಡಿದ ಕೆಲ ಚಾನೆಲ್‍ಗಳು ಆತನ ಮುಖಕ್ಕೆ ಬಟ್ಟೆ ಕಟ್ಟಿರುವ ರೀತಿ ಎಡಿಟ್ ಮಾಡಿದರು. ಆತನ ಸೊಂಟಕ್ಕೂ ಕೂಡ ಬೆಲ್ಟ್ ಹಾಕಿ ಇದೇ ನೋಡಿ ಬಾಂಬ್ ಎಂದೆಲ್ಲಾ ಗಂಟೆಗಟ್ಟಲೇ ಪ್ರಸಾರ ಮಾಡಿದ್ದಾರೆ.

ವಿಶ್ವಾಸಾರ್ಹ ಪತ್ರಿಕೆ ಎಂದು ಕರೆದುಕೊಳ್ಳುವವರು ಸಹ ‘ಅನುಮಾನಾಸ್ಪದವಾಗಿ ಕಾಣಿಸಿಕೊಂಡ ವ್ಯಕ್ತಿಯು ಆತ್ಮಾಹುತಿ ಬಾಂಬರ್’ ಎಂದು ಮೆಟ್ರೊ ಸಿಬ್ಬಂದಿ ಶಂಕೆ ವ್ಯಕ್ತಪಡಿಸಿದ್ದಾರೆ, ‘ಪ್ರಯಾಣಿಕರ ಸೋಗಿನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಭದ್ರತಾ ತಪಾಸಣೆಗೆ ಒಳಗಾಗಲು ನಿರಾಕರಿಸಿ ಕಾಲ್ಕಿತ್ತಿದ್ದಾನೆ’, ಉತ್ತರ ದ್ವಾರದಲ್ಲಿ ಪ್ರವೇಶಿಸಲು ವಿಫಲವಾದ ಮೇಲೆ 15 ನಂತರ ಪಶ್ಚಿಮ ದ್ವಾರದಲ್ಲಿ ಕಾಣಿಸಿಕೊಂಡಿದ್ದ, ಆಟೋರಿಕ್ಷಾ ಚಾಲಕರು ಮತ್ತು ಮೆಟ್ರೋ ಭದ್ರತಾ ಸಿಬ್ಬಂದಿ ಹಿಡಿಯಲು ಯತ್ನಿಸಿದಾಗ ತಪ್ಪಿಸಿಕೊಂಡಿದ್ದಾನೆ ಎಂದೆಲ್ಲಾ ರೋಚಕ ವರದಿ ಮಾಡಿ ಆತಂಕ ಸೃಷ್ಟಿಸಿದರು.

ಪೊಲೀಸರು ತನಿಖೆ ನಡೆಸಿದಾಗ ಆತ ಅಮಾಯಕ. ಆತ ಎಲ್ಲಿಯೂ ಓಡಿ ಹೋಗಿಲ್ಲ ಬದಲಿಗೆ ಆರ್.ಟಿ ನಗರದ ಮಸೀದಿ ಎದುರು ದಾನ ಪಡೆಯಲು ಕೂತಿದ್ದ ಎಂದು ಸ್ಪಷ್ಟಪಡಿಸಿ ಆತಂಕಪಡಬೇಡಿ ಎಂದಿದ್ದಾರೆ. ಇದ್ಯಾವುದರ ಪರಿವೆಯೂ ಪಾಪ ಸಾಜಿದ್ ಖಾನ್‍ಗಿಲ್ಲ. ಒಂದು ವೇಳೆ ಆತ ಪೊಲೀಸರಿಗೆ ಸಿಗುವ ಬದಲು ಟಿವಿ ಚಾನಲ್‍ನವರಿಗೆ ಸಿಕ್ಕಿದ್ದರೆ ಖಂಡಿತಾ ಆತನನ್ನು ಸ್ಟುಡಿಯೋದಲ್ಲಿ ಕೂಡಿಹಾಕಿ ಏನೆಲ್ಲಾ ಅವಾಂತರ ಮಾಡುತ್ತಿದ್ದರೋ ಏನೋ?

ಘಟನೆ 2: ಮೇ 7ರ ಮಂಗಳವಾರ ಸಂಜೆ 5.45ಕ್ಕೆ 57 ವರ್ಷದ ಗಡಿಯಾರ ವ್ಯಾಪಾರಿಯಾದ ರಿಯಾಝ್ ಅಹ್ಮದ್ ಎಂಬುವವರು ಮೆಜೆಸ್ಟಿಕ್‍ನ ಸುರಂಗ ಮಾರ್ಗದಲ್ಲಿ ಕೆಲಸ ಮುಗಿಸಿ ಮೆಟ್ರೊದಲ್ಲಿ ಮನೆಗೆ ಹೋಗಲು ಬಂದಿದ್ದಾರೆ. ತಪಾಸಣೆ ನಡೆಸಿದ್ದ ಸಿಬ್ಬಂದಿ ಜೇಬಿನಲ್ಲಿರುವುದನ್ನು ಹೊರತೆಗೆಯುವಂತೆ ಹೇಳಿದಾಗ ಅವರು ತೋರಿಸಿ ನಂತರ ಮೆಟ್ರೊದಲ್ಲಿ ಪ್ರಯಾಣಿಸಿ ನಾಯಂಡಹಳ್ಳಿಯ ಮನೆ ತಲುಪಿದ್ದಾರೆ.

ಆಗ ಸ್ವಲ್ಪ ಹೊತ್ತಿನಲ್ಲೇ ಮಾಧ್ಯಮ ಭಯೋತ್ಪಾದನೆ ಆರಂಭವಾಯಿತು. ಮುಖ್ಯವಾಗಿ ಪಬ್ಲಿಕ್ ಟಿ.ವಿ ಗಡ್ಡಬಿಟ್ಟು ಪೈಜಾಮ ಹಾಕಿ ವ್ಯಕ್ತಿ, ಆಹ್ಮಾಹುತಿ.. ಬ್ಲ ಬ್ಲ ಬ್ಲ ಇತ್ಯಾದಿ ಅರಚಾಡಿ ಕೂಗಾಡಿದ್ದಾರೆ. ಟಿವಿ 5 ಎಂಬ ಅವಿವೇಕಿ ಚಾನಲ್ ತಾವು ಮಾಡಿದ ವರದಿಯಿಂದ ರಾ, ಐಬಿ, ಎನ್‍ಐಎ ಸೇರಿದಂತೆ ದೇಶದ ಪ್ರಮುಖ ತನಿಖಾ ಸುದ್ದಿ ಸಂಸ್ಥೆಗಳು ಹೈ ಅಲರ್ಟ್ ಆಗಿವೆ ಎಂದು ಅರಚಿಕೊಂಡಿದೆ. ಈ ಸುದ್ದಿ ನಾವೇ ಮೊದಲು ಪ್ರಸಾರ ಮಾಡಿದ್ದು ಎಂದು ಮತ್ತೆ ಪೈಪೋಟಿಗೆ ಬಿದ್ದಿವೆ.

ಅತ್ತ ಆ ವ್ಯಕ್ತಿ ರಿಯಾಝ್ ಅಹ್ಮದ್‍ರ ಪಕ್ಕದ ಮನೆಯ ವ್ಯಕ್ತಿ ಬಂದು ನಿಮ್ಮ ಪೋಟೊ ಟಿವಿಯಲ್ಲಿ ಬರುತ್ತಿದೆ, ಭಯೋತ್ಪಾದಕ ಎಂದೆಲ್ಲಾ ತೋರಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾನೆ. ಭಯಬಿದ್ದ ರಿಯಾಝ್‍ರವರು ಸ್ನೇಹಿತರ ಜೊತೆ ಸೇರಿ ನೇರ ಉಪ್ಪಾರಪೇಟೆ ಪೊಲೀಸ್ ಸ್ಟೇಷನ್‍ಗೆ ತೆರಳಿ ಪಬ್ಲಿಕ್ ಟಿವಿಯ ವಿರುದ್ಧ ಕಂಪ್ಲೈಂಟ್ ನೀಡಿದ್ದಾರೆ. ತಾನು 30 ವರ್ಷಗಳಿಂದಲೂ ಮೆಜೆಸ್ಟಿಕ್ ಕೆಳಗೆ ರಸ್ತೆ ಬದಿಯಲ್ಲಿ ವಾಚ್ ವ್ಯಾಪಾರ ಮಾಡುತ್ತೇನೆ. ಬಿಬಿಎಂಪಿಯವರು ಕೊಟ್ಟಿರುವ ಪರವಾನಗಿ ಕಾರ್ಡ್ ಕೂಡ ನನ್ನ ಬಳಿ ಇದೆ. ಹೀಗೆಲ್ಲಾ ಇಲ್ಲಸಲ್ಲದ ಸುದ್ದಿ ಹಬ್ಬಿಸಿರುವುದರಿಂದ ನನ್ನ ಗೌರವಕ್ಕೆ ಧಕ್ಕೆ ಉಂಟಾಗಿದೆ. ಗಡ್ಡಬಿಟ್ಟು ಜುಬ್ಬಾ ಪೈಜಾಮ ಹಾಕಿದವರೆಲ್ಲಾ ಭಯೋತ್ಪಾದಕರ? ಎಂದು ಪ್ರಶ್ನಿಸಿದ್ದಾರೆ.

ರಿಯಾಜ್ ಅಹ್ಮದ್

ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಮತ್ತು ರವಿ ಚನ್ನಣ್ಣನವರ್ ‘ಈ ವಿಚಾರದಲ್ಲಿ ಇವರಿಬ್ಬರು ಮುಗ್ಧರಾಗಿದ್ದು ಟಿವಿ ಚಾನೆಲ್‍ನವರೆ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಇಂತ ಘೋರ ಅಪರಾಧ ನಡೆಸಿರುವ ಟಿವಿ ಚಾನೆಲ್‍ಗಳ ಮೇಲೆ ಕ್ರಮ ಕೈಗೊಂಡಿಲ್ಲ. ಯಾರೊಬ್ಬರ ಬಂಧನವೂ ಆಗಿಲ್ಲ.

ಆ ಸಿಸಿಟಿವಿ ದೃಶ್ಯಾವಳಿಗಳನ್ನು ಟಿವಿಯವರಿಗೆ ಕಾನೂನುಬಾಹಿರವಾಗಿ ಕೊಟ್ಟಿದ್ದು ಯಾರು ಮತ್ತು ಏಕೆ? ಈ ರೀತಿ ತಪ್ಪು ಸುದ್ದಿ ಪ್ರಕಟಿಸಿ ಜನರಲ್ಲಿ ಆತಂಕವನ್ನು ಹೆಚ್ಚಿಸುವುದಲ್ಲದೇ ಕೆಲವರು ರೊಚ್ಚಿಗೆದ್ದು ಶಂಕಿತರು ಎಂದು ಸಿಕ್ಕ ಸಿಕ್ಕವರನ್ನು ಥಳಿಸಿ ಕೊಲೆಗೈಯಲು ಮುಂದಾದರೆ ಗತಿ ಏನು? ಈ ಸಮಾಜದಲ್ಲಿ ಶಾಂತಿ ಸಾಮರಸ್ಯ ಉಳಿಯುತ್ತದೆಯೇ? ಈ ಮಾಧ್ಯಮಗಳ ಭಯೋತ್ಪಾದನೆಗೆ ಶಿಕ್ಷೆ ಇಲ್ಲವೇ ಎಂಬ ಪ್ರಶ್ನೆಗಳು ಸಹಜವಾಗಿ ಏಳುತ್ತವೆ. ಹಾಗಾಗಿ ಕೆಲವು ಸಾಮಾಜಿಕ ಚಿಂತಕರನ್ನು ನಾನುಗೌರಿ.ಕಾಂ ಮಾತಾಡಿಸಿತು.

‘ಭಯವನ್ನು ಉತ್ಪಾದಿಸುವುದೇ ಭಯೋತ್ಪಾದನೆಯಾಗಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಧರ್ಮ – ಜಾತಿಯ ಹೆಸರಿನಲ್ಲಿ ಕೆಲವರು ಭಯವನ್ನು ಉತ್ಪಾದಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇನ್ನು ಕೆಲವರು ತಮ್ಮ ಟಿಆರ್‍ಪಿ ಹೆಚ್ಚಿಸಿಕೊಳ್ಳಲು, ಒಂದು ಸಮುದಾಯವನ್ನು ದೂಷಿಸಿ, ಆ ಸಮುದಾಯದ ಬಗ್ಗೆ ಸಾರ್ವಜನಿಕವಾಗಿ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಲು ಭಯವನ್ನು ಉತ್ಪಾದಿಸುತ್ತಾರೆ. ಇದು ಕೇವಲ ಟಿಆರ್‍ಪಿ ವಿಷಯ ಮಾತ್ರವಾಗಿರದೇ ಬಿಜೆಪಿ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶವೂ ಮಾಧ್ಯಮಗಳಿಗಿದ್ದಂತಿದೆ. ಅಂತಿಮವಾಗಿ ದೇಶ ಒಡೆದು ಹೋದರೂ ರಾಜಕೀಯ ಅಧಿಕಾರ ಗಿಟ್ಟಿಸುವುದು ಇವರ ಹಿಂದಿನ ಉದ್ದೇಶವಾಗಿದೆ. ಇದರಲ್ಲಿ ಅಮಾಯಕರು, ಮುಗ್ಧರು ಬಲಿಪಶುಗಳಾಗುವುದು ದುರಂತ.’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಮತ್ತು ಚಿಂತಕ ಕೆ.ಎಲ್.ಅಶೋಕ್.

‘ಇತ್ತೀಚೆಗಿನ ದಿನಗಳಲ್ಲಿ ಈ ಮಾಧ್ಯಮ ಭಯೋತ್ಪಾದನೆ ತೀವ್ರ ರೀತಿಯ ವೇಗವನ್ನು ಪಡೆದುಕೊಳ್ಳುತ್ತಿದೆ. ಎರಡು ಘಟನೆಗಳು ಅದನ್ನು ನಿರೂಪಿಸುತ್ತವೆ. ಇದನ್ನು ಇಲ್ಲಿಯೇ ನಿಯಂತ್ರಿಸದಿದ್ದರೆ ಯಾರ ಹಿಡಿತಕ್ಕೂ ಸಿಗದೇ ದೊಡ್ಡ ಅರಾಜಕ ವಾತಾವರಣ ಸೃಷ್ಟಿಯಾಗಿಬಿಡುತ್ತದೆ. ನೈತಿಕತೆ ಕಳೆದುಕೊಂಡು ಜೀವವಿರೋಧಿಗಳಂತೆ ವರ್ತಿಸುತ್ತಿರುವ ಇವರಿಗೆ ಶಿಕ್ಷೆಯಾಗದೆ ಹೋದರೆ ಈ ರೀತಿಯ ಪತ್ರಿಕೋದ್ಯಮವೆ  ಮಾದರಿಯಾಗಿವ ಅಪಾಯವಿದೆ  ಹಾಗಾಗಿ ಕೂಡಲೇ ಆ ಚಾನೆಲ್‍ನವರ ಮೇಲೆ ತನಿಖೆ ನಡೆಸಿ, ತಪ್ಪಿತಸ್ಥರನ್ನು ಬಂಧಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಸರಿಯಾಗಿ ಪರಿಶೀಲಿಸದೇ, ಸಮರ್ಪಕ ದಾಖಲೆಗಳಿಲ್ಲದೇ ಸುದ್ದಿ ಪ್ರಕಟಿಸಬಾರದೆಂದು ಎಚ್ಚರಿಕೆ ನೀಡುವ ಅಗತ್ಯವಿದೆ’ ಎಂದು ರಾಜಕೀಯ ವಿಶ್ಲೇಷಕ ಮತ್ತು ಬರಹಗಾರ ಬಿ. ಶ್ರೀಪಾದ್ ಭಟ್ ಹೇಳುತ್ತಾರೆ.

‘ಜೊತೆಗೆ ಮುಸ್ಲಿಂ ಸಮುದಾಯಕ್ಕೂ ಸಾಂತ್ವನ ನೀಡಬೇಕಿದೆ. ನೊಂದ ಆ ವ್ಯಕ್ತಿಗಳಿಗೆ ಧೈರ್ಯ ತುಂಬಬೇಕಿದೆ. ಸಮಾಜದಲ್ಲಿ ದೊಡ್ಡ ಜಾಗೃತಿ ಮೂಡಿಸಬೇಕಿದೆ. ವದಂತಿಗಳು ಹರಡದಂತೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ಪೊಲೀಸರು ಮತ್ತು ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ವಹಿಸುವುದಿಲ್ಲ. ಜಾತ್ಯಾತೀತ ಎಂದು ಹೇಳಿಕೊಳ್ಳುವ ಪಕ್ಷಗಳು ಅಧಿಕಾರದಲ್ಲಿದ್ದಾಗಲೂ ಅಂಥದನ್ನು ಮಾಡುವುದಿಲ್ಲ, ಬದಲಿಗೆ ಅಲ್ಪಸಂಖ್ಯಾತರ ಓಟುಗಳು ಸಿಕ್ಕರೆ ಸಾಕು ಎಂಬ ಮಾನಸಿಕತೆ ಅವರದ್ದು’ ಎಂದು ಎಸ್‍ಐಓದ ಅಧ್ಯಕ್ಷ ನಿಹಾಲ್ ನೊಂದು ನುಡಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಹಿಂಗೆ ಟೈಪ್ ಮಾಡುವ ಬದಲು ಹೋಗಿ ಕಂಪ್ಲೇಂಟ್ ಕೊಡಿ.ಓಹ್ ನಮ್ಮದೇನಿದ್ದರೂ ಬರೀ ತೋರ್ಪಡಿಕೆ ಅಲ್ಲವೇ ?
    ಸತ್ಯತೆ ಇದ್ದರೆ ಹೋಗಿ ಚಾನೆಲ್ ಗಳ ವಿರುದ್ಧ ಕಂಪ್ಲೇಂಟ್ ಮಾಡಿ …….

    ಕೈಲಾಗದ ಕಡಿಮೆ nistaru

  2. ನೀವ್ ರಿಪೋರ್ಟ್ ಮಾಡ್ತಿರೋದು ಎಲ್ಲಾ ಕ್ಲಾರಿಫಿಕೇಷನ್ ಸಿಕ್ಕ‌ಮೇಲೆ. ಟಿವಿ ಅವರು ರಿಪೋರ್ಟ್ ಮಾಡಿದ್ದು ಅನುಮಾನ ಬಂದ ಕೂಡಲೇ. ವ್ಯತ್ಯಾಸ ಇಲ್ಲೇ ಇರೋದು. ನೀವು ಬರೆದಿದ್ದು ನೋಡದಿದ್ರೂ ಜನ ಕಳೆದುಕೊಳ್ಳೋದು ಏನೂ ಇಲ್ಲ.‌ ಆದ್ರೆ‌ ಒಂದು ವೇಳೆ, ಬಂದಿದ್ದ ಆಗುಂತಕ ನಿಜಕ್ಕೂ ಸಮಸ್ಯೆ ಆಗಿದ್ದರೆ ಆಗೇನು ಮಾಡ್ತಿದ್ರಿ? ಆ ಆಗುಂತಕ ಬಂದು ಹೋದ ನಂತರ ಶ್ವಾನದಳ, ಬಾಂಬ್ ಸ್ಕ್ವಾಡ್ ಮತ್ತು ಡಿಸಿಪಿ ಸ್ಪೆಷಲ್ ಸ್ಕ್ವಾಡ್ ಮೆಟ್ರೋ ನಿಲ್ದಾಣಕ್ಕೆ ಬಂದು‌ ಕಡ್ಲೇಪುರಿ ತಿನ್ನೋಕೆ ಬಂದಿದ್ರಾ? ಅಷ್ಟಕ್ಕೂ ಆತ ಭಯೋತ್ಪಾದಕ ಇಲ್ಲದೇ ಇರಬಹುದು. ಆದ್ರೆ ಅದರಿಂದ ಒಳ್ಳೇಯದೇ ಆಗಿದೆ‌. ಭದ್ರತೆ ಇಲ್ಲದೇ ಇದ್ದ ಮಜೆಸ್ಟಿಕ್ ನಲ್ಲಿ ಈಗ ಫುಲ್ ಸೆಕ್ಯುರಿಟಿ ಕೊಡೋ ಯೋಜನೆ ಬಂದಿದೆ. ಬೆಂಗಳೂರು ಸ್ಲೀಪರ್ ಸೆಲ್ ಗಳ ತವರು ಅನ್ನೋದು ನಿಮ್ಮಂತ ಚಿಂತಕರಿಗೆ ಹೇಗೆ ಗೊತ್ತಾಗಬೇಕು. ನಿಜವಾಗ್ಲೂ ಉಗ್ರರು ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದಾಗ ನೀವು ಮಾತಾಡಿದ್ರಾ? ಹಂತಕರು ಅರೆಸ್ಟ್ ಆದಾಗಲೂ‌ ಅವರನ್ನ ಅಮಾಯಕರು ಎಂದು ಕರೆದವರು ನೀವು. ತನಿಖಾಧಿಕಾರಿಗಳನ್ನೆ ಅನುಮಾನದ ದೃಷ್ಟಿಯಿಂದ ನೋಡುವವರು‌ ನೀವು. ನಿಮ್ಮಿಂದ ಹೆಚ್ಚಿನದ್ದೇನನ್ನು‌ ನಿರೀಕ್ಷೆ ಮಾಡಲು ಸಾಧ್ಯ.
    ಸುಖಾಸುಮ್ನೆ ಕೈ ಫ್ರೀ ಇದೆ ಅಂತ‌ ಏನೇನೋ‌ ಗೀಚೋದಲ್ಲ. ಸಮಸ್ಯೆ ಆದ ಮೇಲೆ ವ್ಯವಸ್ಥೆಯ ಬಗ್ಗೆ ಗೂಬೆ ಕೂರಿಸೋದು ಬಿಟ್ಟು ಸಮಸ್ಯೆ ಆಗದಂತೆ ತಡೆಯೋದರ ಬಗ್ಗೆ ಯೋಚಿಸಿ. ಒಳ್ಳೆಯದಾಗುತ್ತೆ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...