ನಮ್ಮ ತೋಟದ ಸಾಲಿಗೆ ನೀವೂ ಬನ್ನಿ… ಭಾಗ-8
- ಕೃಷ್ಣಮೂರ್ತಿ ಬಿಳಿಗೆರೆ
ಬಯಲು ಸೀಮೆಯ ಭಾಗದಲ್ಲೀಗ ನವಿಲುಗಳ ಸುಗ್ಗಿ. ನಾವು ಸಣ್ಣ ಹುಡುಗರಾಗಿದ್ದಾಗ ಇವುಗಳನ್ನು ಝೂಗಳಲ್ಲಿ ಮಾತ್ರ ನೋಡುವುದು ಸಾಧ್ಯವಾಗುತ್ತಿತ್ತು. ಮಲೆನಾಡಿನ ಭಾಗಕ್ಕೆ ಶಾಲಾ ಟೂರ್ ಹೋದಾಗ ನವಿಲುಗಳ ದರ್ಶನವಾಗುತ್ತಿದ್ದ ನೆನಪು.
ಈಗ ನಮ್ಮ ತೋಟ – ಹೊಲಗಳಿಂದ ಈ ನವಿಲುಗಳನ್ನು ಓಡಿಸುವುದು ರೈತರಿಗೆ ಕಷ್ಟವಾಗಿದೆ ಎಂದರೆ ಇವುಗಳ ಸಂಖ್ಯೆ ಎಷ್ಟು ಅತಿಯಾಗಿದೆ ಎಂಬುದನ್ನು ಊಹಿಸಬಹುದು. ಹೊಲಗಳಲ್ಲಿ ಬಿತ್ತನೆಯಾದ ಬೀಜಗಳು ಮೊಳಕೆಯೊಡೆಯುವ ಮುನ್ನವೇ ನವಿಲುಗಳು ಸಾಲು ಹಿಡಿದು ನುಂಗಿಹಾಕುತ್ತಿವೆ. ಚಿಗುರೊಡೆದ ಅಲ್ಪಸ್ವಲ್ಪ ಬೆಳೆಗಳ ಪೈರುಗಳನ್ನು ತಿನ್ನದೆ ಬಿಡುತ್ತಿಲ್ಲ. ಹಾಗೆ ನೋಡಿದರೆ ತೋಟಗಳಲ್ಲಿ ಅವುಗಳ ಹಾವಳಿ ಕಡಿಮೆ ಎಂದೇ ಹೇಳಬೇಕು. ಅವು ಈಗ ತೆಂಗಿನ ಕಾಯಿಗಳನ್ನು ಕುಕ್ಕಿ ತಿನ್ನುವುದನ್ನು ರೂಢಿ ಮಾಡಿಕೊಂಡಿವೆ ಎಂಬ ಆಪಾದನೆಯಿದೆಯಾದರೂ ಅದಿನ್ನೂ ಸಾಬೀತಾಗಿಲ್ಲ.
ಬೆಟ್ಟಗುಡ್ಡ, ಕಾಡುಮೇಡು, ಹಳ್ಳಕೊಳ್ಳಗಳಲ್ಲಿ ಹೇಗೋ ಹಾಗೆ ಬದುಕಿಕೊಂಡು ಸ್ವತಂತ್ರವಾಗಿ ಬದುಕುತ್ತಿದ್ದ ಈ ರಾಷ್ಟ್ರಪಕ್ಷಿ ಈಗ ಊರೊಳಕ್ಕೆ ನುಗ್ಗಿ ಮನೆಯಾಚೆಯಲ್ಲಿ ಇರಿಸುವ ಮುಸುರೆಯನ್ನು ಕದ್ದು ಕುಡಿಯುವ ಸ್ಥಿತಿಗೆ ಬಂದಿದೆ. ಅವೀಗ ಜನರೊಂದಿಗೆ ಬದುಕುವ ಪರಿಪಾಠ ರೂಢಿಸಿಕೊಳ್ಳುತ್ತಿವೆ. ತೋಟ, ಹೊಲಗಳನ್ನು ಬಿಟ್ಟು ಕದಲುತ್ತಿಲ್ಲ. ಹದ್ದು ಮೀರಿದ ಗಣಿಗಾರಿಕೆ, ಕಲ್ಲು ಕ್ವಾರಿ ಡೈನಮೈಟ್ ಆರ್ಭಟ, ಕಾಡುಮೇಡು, ಹುಲ್ಲುಗಾವಲು, ಹಳ್ಳಕೊಳ್ಳಗಳ ಒತ್ತುವರಿ ಮುಂತಾದ ಮನುಷ್ಯ ಕೇಡಿಗ ಕೆಲಸಗಳು ಆನೆ, ನವಿಲು, ಚಿರತೆ, ಕರಡಿ, ತೋಳ ಮತ್ತಿತರ ಕಾಡು ಜೀವಿಗಳನ್ನು ನಿರಾಶ್ರಿತರಾಗಿ ಅಲೆಯುವಂತೆ ಮಾಡಿದೆ. ವಿಚಿತ್ರವೆಂದರೆ ಈ ಎಲ್ಲ ಕಾಡು ಜೀವಿಗಳು ಏನೂ ತಪ್ಪು ಮಾಡದ ರೈತರ ಹೊಲ ತೋಟಗಳಿಗೆ ಲಗ್ಗೆ ಇಟ್ಟು ಕಾಡುತ್ತಿವೆ. ಅಲ್ಲದೆ ಮನೆ ಬಾಗಿಲಿಗೆ ಬಂದು ನೀವೇ ಸಾಕಿ ಎನ್ನುತ್ತಿವೆ. ಕೆಲವು ಪ್ರಾಣಿಗಳಂತೂ ರೈತರನ್ನು ಬಲಿತೆಗೆದುಕೊಳ್ಳುತ್ತಿವೆ. ಯಾರೋ ಮಾಡಿದ ತಪ್ಪಿಗೆ ರೈತರು ದಂಡ ತೆರಬೇಕಾಗಿದೆ. ಇದರಲ್ಲಿ ರೈತರ ಪಾಲು ಇಲ್ಲವೇ ಇಲ್ಲ ಎನ್ನುವುದು ಸಾಧ್ಯವಿಲ್ಲವಾದರೂ ಪ್ರಮಾಣ ಅಲ್ಪ ಪ್ರಮಾಣದ್ದು. ಇರಲಿ ನಾವೀಗ ನವಿಲಿನ ಕಡೆ ಬರೋಣ.
ನಮ್ಮ ತೋಟದಲ್ಲಿ ಕೇವಲ ಹತ್ತು ವರ್ಷಗಳ ಹಿಂದೆ ನವಿಲುಗಳನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ. ಈಗ ಅದು ನವಿಲುಗಳ ವಾಸಸ್ಥಾನ, ಜನ್ಮಸ್ಥಾನ ಎಲ್ಲವೂ ಆಗಿದೆ.
ತೋಟಕ್ಕೆ ಪ್ರವೇಶಿಸಿದ ತಕ್ಷಣ ನವಿಲುಗಳ ನಾನಾ ಬಗೆಯ ದರ್ಶನವಾಗುತ್ತದೆ. ಅದು ದಶರೂಪ ದರ್ಶನ. ಕೀಟ ಆಯುವ, ಕಷ್ಟ ಪಟ್ಟು ಹಾರಿ ಮರದ ಮೇಲಕ್ಕೆ ಹೋಗಿ ಕೂರುವ, ಹೆಣ್ಣು ನವಿಲು ಒಲಿಸಲು ಕುಣಿಯುವ, ಹಾವಿನ ಮೇಲೆ ಆಕ್ರಮಣ ಮಾಡುವ, ತಮ್ಮ ಸಹಚರರಿಗೆ ಅಪಾಯದ ಸೂಚನೆ ಕೊಡಲು ಕೂಗುವ, ಮೊಟ್ಟೆಗಳಿಗೆ ಕಾವು ಕೊಡುವ ಹೀಗೆ…
ನಾವು ಸಣ್ಣವರಾಗಿದ್ದಾಗ ಒಂದೇ ಒಂದು ಎಸಳು ನವಿಲುಗರಿಗಾಗಿ ನಾವು ಪರಿತಪಿಸುತ್ತಿದ್ದೆವು. ಪುಸ್ತಕದೊಳಗೆ ಅದು ಮರಿಹಾಕುವ ಕನಸುಗಳನ್ನು ನಮ್ಮೊಳಗೆ ಅದ್ಯಾರು ಬಿತ್ತಿದ್ದರೋ ಗೊತ್ತಿಲ್ಲ, ಈಗ ನೋಡಿದರೆ ನವಿಲುಗರಿಗಳು ತೋಟದ ಅನೇಕ ಭಾಗಗಳಲ್ಲಿ ಅನಾಥವಾಗಿ ಬಿದ್ದು ಒದ್ದಾಡುತ್ತಿವೆ.
ನವಿಲಿನ ಮೊಟ್ಟೆಗಳ ಬಗೆಗೆ ಇನ್ನೂ ಕೆಲವು ವಿಚಾರಗಳನ್ನು ಪ್ರಸ್ತಾಪಿಸಬೇಕು. ಈ ಸಲ ಮುಂಗಾರು ಮಳೆಯ ಪುಣ್ಯ ಸ್ನಾನಕ್ಕೆ ಬಂಡೆದ್ದು ಹುಟ್ಟಿದ ಮಾಮೇರಿ ಹುಲ್ಲು ಎದೆಯುದ್ದ ಬೆಳೆದು ನಿಂತಾಗ ತೆಂಗಿನ ಕಾಯಿ ಕೆಡವುವ ಕಾಯಕದ ಆನಂದಯ್ಯ ಕಾಯಿ ಕೆಡವಲು ಈ ಹುಲ್ಲು ನೆಪಮಾಡಿ ನಿರಾಕರಿಸಿದಾಗ ಕತ್ತರಿಸುವುದು ಅನಿವಾರ್ಯವಾಯ್ತು. ಗ್ರಾಸ್ ಕಟರ್ ಮಿಷನಿನ್ನಿಂದ ಹುಲ್ಲು ಹೊಡೆಯುತ್ತಾ ಸಾಗುತ್ತಿದ್ದಾಗ ಇದ್ದಕ್ಕಿದ್ದಂತೆ ಮುಷ್ಟಿ ಗಾತ್ರದ ತನ್ನ ಬರೋಬರಿ ಐದು ಮೊಟ್ಟೆಗಳಿಗೆ ಕಾವು ಕೂತಿದ್ದ ನವಿಲು ಪಕ್ಷಿ ಹಾರಿ ಕಣ್ಮರೆಯಾಯಿತು. ಅಷ್ಟೊಂದು ಸದ್ದಿನೊಂದಿಗೆ ನಾನು ತೀರಾ ಹತ್ತಿರ ಹೋಗುವವರೆಗೂ ಆ ನವಿಲು ತನ್ನ ಅಂಡ ರೂಪಿ ಜೀವಗಳನ್ನು ಅವುಚಿಕೊಂಡು ಕುಂತೇ ಇದ್ದದ್ದು ಅದರ ಬದ್ಧತೆಗೆ ಸಾಕ್ಷಿಯಾಗಿತ್ತು. ಆದರೆ ತಾನು ಈ ಮನುಷ್ಯನ ಕೈಗೇ ಸಿಕ್ಕಿಬಿಡುವ ಜೀವಭಯದಿಂದ ತನ್ನ ಕುಡಿಗಳನ್ನು ಕಡೆಗಣಿಸಿ ಹಾರಿಹೋಯಿತು.
ತಾನಿದ್ದರೆ ಇಂಥ ಮೊಟ್ಟೆಗಳನ್ನು ಇನ್ನೊಮ್ಮೆ ಇಟ್ಟು ಸೃಷ್ಟಿಸಿಕೊಳ್ಳಬಹುದೆಂಬ ಪ್ರಕೃತಿ ಸಹಜ ಪ್ರವೃತ್ತಿಯಿಂದ ಅದು ತನ್ನ ಮೊಟ್ಟೆಗಳ ಆಸೆಯನ್ನು ತ್ಯಜಿಸಿ ಹಾರಿಹೋಗಿರಬೇಕು. ಇಂಥ ಅದೆಷ್ಟೋ ಮೊಟ್ಟೆಗಳನ್ನು ಅದು ಕಳೆದುಕೊಂಡಿರಬೇಕು… ಆದರೆ ನಾನು ಮೊಟ್ಟೆಗಳನ್ನು ಹತ್ತಿರದಿಂದ ನೋಡಿ ದಿಗ್ಬ್ರಮೆಗೊಂಡೆ. ಅವು ಮೌನವಾಗಿಯೂ ದಿಟ್ಟವಾಗಿಯು ಇರುವಂತೆ ನನಗೆ ಅನಿಸಿತು. ಆ ಮೊಟ್ಟೆಗಳು ರುಚಿಕರ ಆಹಾರವಾಗಿ ಗೋಚರಿಸದೇ ಕರುಣಾಜನಕ ಜೀವಗಳಾಗಿ ಕಂಡವು. ಮಾಂಸಾಹಾರ ಸಸ್ಯಾಹಾರಗಳಲ್ಲಿ ವ್ಯತ್ಯಾಸವರಿಯದ ನನಗೆ ಆ ಮೊಟ್ಟೆಗಳನ್ನು ಮಾತ್ರ ಬೇಯಿಸಿ ತಿನ್ನುವ ಮನಸ್ಸಾಗಲಿಲ್ಲ. ಆ ಮೊಟ್ಟೆಗಳು ಓಡಿಹೋಗುವ ಶಕ್ತಿ ಪಡೆದಿದ್ದರೆ ನಾನೂ ಅಟ್ಟಿಸಿಕೊಂಡು ಹೋಗಿ ಬೇಟೆಯಾಡುತ್ತಿದ್ದೆನೋ ಏನೋ…
ಅಂತೂ ಆ ಮೊಟ್ಟೆಗಳ ಸಹವಾಸಕ್ಕೆ ಹೋಗಲಿಲ್ಲ. ನಾನು ತೋಟ ಬಿಟ್ಟು ತೊಲಗುವುದನ್ನೇ ನಿರೀಕ್ಷಿಸಿ ಆ ತಾಯಿ ನವಿಲು ತನ್ನ ಮೊಟ್ಟೆಗಳಿಗೆ ಒದಗಿರಬಹುದಾದ ದುರ್ಗತಿಯನ್ನು ಊಹಿಸಿ ಅಲ್ಲಿಗೆ ಧಾವಿಸಿರಬಹುದು. ಮೊಟ್ಟೆಗಳು ಅಪಹರಿಸಲ್ಪಡದೆ ಸ್ವಸ್ಥಾನದಲ್ಲೇ ಇರುವುದನ್ನು ಕಂಡು ಆಶ್ಚರ್ಯಗೊಂಡು ಕಾವು ಕೂರುವ ಧ್ಯಾನಕ್ಕೆ ಇಳಿದಿರಬಹುದು. ಈ ಮಧ್ಯೆ ಅಣಬೆಗಳನ್ನು ನವಿಲಿನ ಮೊಟ್ಟೆಗಳನ್ನೂ, ಜೊತೆಗೆ ಮೊಲ ಮತ್ತು ಕಾಡು ಹಂದಿಗಳ ಹೆಜ್ಜೆ ಗುರುತುಗಳನ್ನು ಹುಡುಕಿಕೊಂಡು ಓಡಾಡುವವರು ಯಾಕೋ ಅಪರೂಪವಾಗಿದ್ದಾರೆ ಎನಿಸುತ್ತಿದೆ… ಸುಲಭ ದರದಲ್ಲಿ ಸಿಕ್ಕುತ್ತಿರುವ ಬಾಯಲರ್ ಕೋಳಿಗಳ ಮೆತ್ತನೆ ಮಾಂಸವೇನಾದರೂ ಇದಕ್ಕೆ ಕಾರಣವಾಗಿರಬಹುದೇ?
***
(ಕೃಷ್ಣಮೂರ್ತಿ ಬಿಳಿಗೆರೆಯವರು ಹುಳಿಯಾರು ಬಿಎಂಎಸ್ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)
ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-4: ಸಹಜ ಕೃಷಿ ಅಲ್ಲ, ಉಳುಮೆ ಇಲ್ಲದ ತೋಟ ನಮ್ಮದು