ರಾಜ್ಯದ ಗಮನ ಸೆಳೆದಿದ್ದ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದ ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಮದುವೆಗೆ ಅದೇ ತಾಲೂಕು ಹಾಗೂ ಪ್ರದೇಶದ ವ್ಯಾಪ್ತಿಗೆ ಸೇರಿರುವ ಪೊಲೀಸ್ ಅಧಿಕಾರಿಗಳು ಹಾಜರಾಗಿದ್ದಾರೆ. ಆ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸ್ ಅಧಿಕಾರಿಗಳ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ. ಅಲ್ಲದೇ ಆ ಮೂವರು ಅಧಿಕಾರಿಗಳಿಗೆ ಕಡ್ಡಾಯ ರಜೆ ಶಿಕ್ಷೆ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಯಲ್ಲಾಲಿಂಗ ಎಂಬ ಕುರುಬ ಸಮುದಾಯಕ್ಕೆ ಸೇರಿದ್ದ ವಿದ್ಯಾರ್ಥಿ ಖಾಸಗಿ ಸುದ್ದಿವಾಹಿನಿಗೆ ತಮ್ಮ ಗ್ರಾಮದ ಸಮಸ್ಯೆಗಳನ್ನು ಹೇಳಿದ್ದಕ್ಕೆ ಆತನನ್ನು 2015ರ ಜನವರಿ 11 ರಂದು ಕೊಲೆಗೈಯ್ಯಲಾಗಿತ್ತು. ಆತನ ಶವ ಕೊಪ್ಪಳದ ರೈಲು ನಿಲ್ದಾಣದಲ್ಲಿ ಪತ್ತೆಯಾದ ನಂತರ ಅನುಮಾನ ಬಂದಿದ್ದರಿಂದ ಹೆಚ್ಚಿನ ತನಿಖೆಯ ನಂತರ ಕೊಲೆ ಎಂದು ತಿಳಿದುಬಂದಿತ್ತು. ಈ ಪ್ರಕರಣ ರಾಜ್ಯದಂತ ದೊಡ್ಡ ಆಕ್ರೋಶಕ್ಕೆ ಕಾರಣವಾಗಿತ್ತಲ್ಲದೇ ಬೃಹತ್ ‘ಹುಲಿಹೈದರ್ ಚಲೋ’ ಹೋರಾಟ ಸಹ ನಡೆದಿತ್ತು. ಈ ಕೊಲೆ ಆರೋಪದಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿಯವರ ಆಪ್ತರು ಎನ್ನಲಾದ ಹನುಮೇಶ್ ನಾಯಕ್ ಮತ್ತು ಮಹಾಂತೇಶ ನಾಯಕ್ ಸೇರಿ 9 ಜನರನ್ನು ಬಂಧಿಸಲಾಗಿತ್ತು.
ಅಂದು ಬಿಜೆಪಿ ಪಕ್ಷ ಸಹ ಕೊಪ್ಪಳದಲ್ಲಿ ದೊಡ್ಡ ಪ್ರತಿಭಟನೆ ನಡೆಸಿತ್ತು. ಅಂದಿನ ವಿಪಕ್ಷ ನಾಯಕರಾಗಿದ್ದ ಯಡಿಯೂರಪ್ಪನವರು ಜಿಲ್ಲೆಗೆ ಆಗಮಿಸಿ ಆರೋಪಿ ಹನುಮೇಶ ನಾಯಕ ಮತ್ತು ಮಹಾಂತೇಶ್ ನಾಯಕ್ ಬಂಧನಕ್ಕೆ ಒತ್ತಾಯಿಸಿದ್ದರು. ಅಂದಿನ ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತಲ್ಲದೇ ಸಚಿವ ಶಿವರಾಜ ತಂಗಡಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯ್ತು. ಇಷ್ಟೆಲ್ಲಾ ಪ್ರತಿಭಟನೆ-ಆಕ್ರೋಶಕ್ಕೆ ಕಾರಣವಾದ ಈ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿದ್ದ ಮಹಾಂತೇಶ್ ನಾಯಕ್ ಮದುವೆಗೆ ಅದೇ ವ್ಯಾಪ್ತಿಯ ಪೊಲೀಸರು ಭಾಗವಹಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಗಂಗಾವತಿಯ ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ, ಗಂಗಾವತಿಯ ಸಿಪಿಐ ಉದಯರವಿ, ಕನಕಗಿರಿಯ ಪಿಎಸ್ಐ ತಾರಾಬಾಯಿಯವರನ್ನು ಕಡ್ಡಾಯ ರಜೆ ಶಿಕ್ಷೆ ನೀಡಿ ಕಳಿಸಲಾಗಿದೆ ಎಂದು ಎಸ್ಪಿ ಟಿ.ಶ್ರೀಧರ್ ಆದೇಶ ಹೊರಡಿಸಿದ್ದಾರೆ.
ಹುಲಿಹೈದರ್ ಚಲೋ ಹೋರಾಟದಲ್ಲಿ ಭಾಗವಹಿಸಿದ್ದ ಕರ್ನಾಟಕ ಜನಶಕ್ತಿಯ ಕುಮಾರ್ ಸಮತಳರವರು ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿ “ಯಲ್ಲಾಲಿಂಗನ ಕೊಲೆ ಪ್ರಕರಣ ಇನ್ನು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗ ಅದರ ಆರೋಪಿಗಳ ಮದುವೆಯಲ್ಲಿ ತನಿಖೆ ನಡೆಸಬೇಕಾದ ಪೊಲೀಸ್ ಅಧಿಕಾರಿಗಳು ಹೇಗೆ ಭಾಗವಹಿಸಲು ಸಾಧ್ಯ? ಇದು ಯಾವ ಸಂದೇಶ ನೀಡುತ್ತದೆ? ಇದು ನಾಳೆದಿನ ಪ್ರಕರಣದ ಮೇಲೆ ಪ್ರಭಾವ ಬೀರುವುದಿಲ್ಲವೇ? ಈ ಪೊಲೀಸರು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಕಾನೂನು ಮೀರಿ ವರ್ತಿಸಿದ್ದಾರೆ. ನಾಳೆ ಈ ಪ್ರಕರಣದಲ್ಲಿ ದುರ್ಬಲಗೊಂಡಲ್ಲಿ ಅದಕ್ಕೆ ಈ ಪೊಲೀಸ್ ಅಧಿಕಾರಿಗಳೇ ನೇರ ಕಾರಣರಾಗಿತ್ತಾರೆ. ಹಾಗಾಗಿ ಆ ಪೊಲೀಸ್ ಅಧಿಕಾರಗಳ ಮೇಲೆ ಇನ್ನು ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದರು.
“ಇದು ತೀರಾ ಅವಮಾನಕಾರಿ ಮತ್ತು ನಾಚಿಕೆಗೇಡಿನ ನಡವಳಿಕೆ. ಪೊಲೀಸ್ ಅಧಿಕಾರಿಗಳು ಸಾರ್ವಜನಿಕವಾಗಿ ಇದಕ್ಕಿಂತ ಕೀಳುದರ್ಜೆಗೆ ಇಳಿಯಲು ಸಾಧ್ಯವೇ? ಜಾಮೀನಿನ ಮೇಲೆ ಹೊರಗಿರುವ ಕೊಲೆ ಆರೋಪಿತರ ಖಾಸಗಿ ಸಮಾರಂಭಗಳಿಗೆ ಪೊಲೀಸರು ಸಮವಸ್ತ್ರದಲ್ಲಿ ಹಾಜರಾಗಿ ಹಾರ ಹಾಕಿಸಿಕೊಂಡು ಗೌರವ ಕೊಟ್ಟು/ಸ್ವೀಕರಿಸಿ ಬರಲು ಪೊಲೀಸ್ ನಡಾವಳಿ ನಿಯಮಗಳಲ್ಲಿ ಅವಕಾಶ ಇದೆಯೇ? ಪೊಲೀಸರ ಈ ನಿರ್ಲಜ್ಜ ನಡವಳಿಕೆಯನ್ನು KRS ಪಕ್ಷ ಖಂಡಿಸುತ್ತದೆ. ಈ ಕುರಿತು ದೂರು ನೀಡುತ್ತೇವೆ” ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರವಿಕೃಷ್ಣರೆಡ್ಡಿಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಮ್ಮಿಶ್ರ ಸರ್ಕಾರ ಉರುಳುಲು ಪೆಗಾಸಸ್ ಕಾರಣ? HDK, ಸಿದ್ದು ಆಪ್ತ ಸಹಾಯಕರ, ಜಿ.ಪರಮೇಶ್ವರ್ ಫೋನ್ ಹ್ಯಾಕ್!


