Homeಅಂಕಣಗಳುಸುದ್ದಿಯೇನೇ ಮನೋಲ್ಲಾಸಿನಿ: ಎಲ್ಲಾ ಸರಿ ಈ ಪೆಗಸಸ್ ಅಂದರೆ ಏನು?

ಸುದ್ದಿಯೇನೇ ಮನೋಲ್ಲಾಸಿನಿ: ಎಲ್ಲಾ ಸರಿ ಈ ಪೆಗಸಸ್ ಅಂದರೆ ಏನು?

- Advertisement -
- Advertisement -

ಒಲಿಂಪಿಕ್ ಶುರು ಆಗಲಿಕ್ಕೆ ಬಂದವು. ಅದಕ್ಕ ಸಂಬಂಧಪಟ್ಟ ಒಂದು ಕತಿ ಕೇಳೋಣ. ಒಂದಾನೊಂದು ಕಾಲದಾಗ, ಏಟೊಂದು ಮುದ ಇದ್ದ ಕಾಲದಾಗ ಗ್ರೀಕ್ ದೇಶದೊಳಗ ಒಬ್ಬವ ರಾಜಾ ಇದ್ದ. ಅವನ ಹೆಸರು ಪೊಸಯಿಡೋನ. ಆತ ಸಮುದ್ರ, ಭೂಕಂಪನ ಹಾಗೂ ಕುದುರೆಗಳ ದೇವರು. ಅವನ ಕೈಯಾಗ ಒಂದು ತ್ರಿಶೂಲ ಇತ್ತು. ತನ್ನ ತ್ರಿಶೂಲದಿಂದ ಭೂಮಿಮ್ಯಾಲೆ ಗೆರೆ ಹೊಡದು ನೀರಿನ ಝರಿಗಳನ್ನು ಆತ ಸೃಷ್ಟಿ ಮಾಡುತ್ತಿದ್ದ. ಇಡೀ ವಿಶ್ವವನ್ನೇ ಅಲುಗಾಡಿಸಬಲ್ಲ ಶಕ್ತಿ ಉಳ್ಳವನು ಅಂತ ಅವನಿಗೆ ‘ಭೂಕಂಪನಾಧೀಶ’ ಅಂತ ಹೆಸರು ಇತ್ತು. ಆತ ಹುಚ್ಚು ಕುದುರೆಗಳನ್ನು ಹತೋಟಿಗೆ ತರುವ ಕುಶಲತೆ ಇದ್ದವನು ಅನ್ನುವುದು ಅವನ ಹೆಗ್ಗಳಿಕೆ. ಎಲ್ಲಕ್ಕಿಂತ ಮುಖ್ಯವಾಗಿ ಆತ ಒಲಿಂಪಿಕ್ ಆಟಗಾರ.

ಅಣ್ಣಾ ತಮ್ಮಂದಿರ ನಡುವೆ ಆಸ್ತಿ ಬಟವಾಡೆ ಆದ ನಂತರ ತನ್ನ ಪಾಲಿಗೆ ಬಂದ ಸಮುದ್ರವನ್ನ ಇಟಗೊಂಡು ತಮ್ಮ ಪೊಸಯಿಡೋನ ತಣ್ಣಗೆ ಕೂತವನು. ದೇವ ಸಹಜ ಆಸೆ-ಆಕಾಂಕ್ಷೆಗಳಿಂದ ಬಳಲಿದವನು. ಒಂದುನೂರಕ್ಕಿಂತ ಹೆಚ್ಚು ಪತ್ನಿ-ಉಪ ಪತ್ನಿಯರ ಕಟ್ಟಿಕೊಂಡು ಸುಮಾರು ಮೂರುನೂರು ಜನ ಮಕ್ಕಳಿಗೆ ಜನ್ಮ ಕೊಟ್ಟವನು.

ಅವನ ಹೆಂಡತಿ ಮೆಡುಸ್ಸಾ. ಅಕಿನ್ನ ಯಾರಾದರೂ ಕಣ್ಣಿನೊಳಗ ಕಣ್ಣು ಇಟ್ಟು ನೋಡಿದರ ಅವರು ಕಲ್ಲಾಗಿಬಿಡತಿದ್ದರು. ಅಕಿ ತಲಿಮ್ಯಾಲೆ ಕೂದಲು ಇರಲಿಲ್ಲ. ಅದರ ಬದಲಿಗೆ ಸಣ್ಣ ಸಣ್ಣ ಹಾವು ಇದ್ದವು. ಆ ಹಾವುಗಳನ್ನ ಅಕಿ ತನ್ನ ಸೇವಕರ ತರಹ ಉಪಯೋಗ ಮಾಡತಿದ್ದಳು. ಅಕಿಗೆ ಅಣಿಮಾ-ಗರಿಮಾ ಶಕ್ತಿಗಳು ಸಿದ್ಧಿಸಿಬಿಟ್ಟಿದ್ದವು. ತಾನು ಬಯಸಿದಲ್ಲಿ ಪ್ರವಾಸ ಮಾಡುವ ಶಕ್ತಿ ಇತ್ತು.

ಕೊನೆಗೆ ಅವಳ ಸಂಹಾರ ಮಾಡಿದವ ಯಾರು ಅಂದರ ಗ್ರೀಕ್ ದೇವತೆ ಪರ್ಸಿಯಸ್. ಆತ ತನ್ನ ಕಣ್ಣು ಕಟ್ಟಿಕೊಂಡು ಅವಳ ರುಂಡ ಕತ್ತರಿಸಿಬಿಟ್ಟ. ಆ ರುಂಡವನ್ನು ತನ್ನ ಈಟಿಗೆ ಚುಚ್ಚಿಕೊಂಡು ತಿರುಗಾಡುತ್ತಿದ್ದ. ಮೆಡುಸ್ಸಾ ಸತ್ತ ಮೇಲೆ ಸಹಿತ ಅವಳ ಶಾಪ ಕೊಡುವ ಶಕ್ತಿ ಹೋಗಲಿಲ್ಲ. ಇದನ್ನು ಅರಿತ ಪರ್ಸಿಯಸ್ ಅವಳ ತಲೆಯನ್ನ ಒಂದು ಆಯುಧದ ರೀತಿ ಬಳಸಿ ತನ್ನ ವೈರಿಗಳನ್ನು ಕೊಂದ.

ಇಷ್ಟೆಲ್ಲಾ ಆತಲ್ಲಾ, ಈಗ ನೋಡ್ರಿ. ಇಲ್ಲೇ ಐತಿ ಮಜಾ. ಮೆಡುಸ್ಸಾನ ಹತ್ಯೆ ಮಾಡುವಾಗ ಪರ್ಸಿಯಸ್ ಒಂದು ಚಮತ್ಕಾರಿ ವಾಹನ ಬಳಸಿದ್ದ. ಅದು ಯಾವುದು ಅಂದರ ಆಕಾಶದಲ್ಲಿ ಹಾರಾಡಬಲ್ಲ ಬಿಳಿಯ ಕುದುರೆ. ತನ್ನ ಎರಡೂ ಕಡೆಗಳಲ್ಲಿ ಇದ್ದ ರೆಕ್ಕೆಗಳನ್ನು ಬಳಸಿ ಅದು ಹಾರಬಹುದಿತ್ತು. ಮೂರುಲೋಕ ಸಂಚಾರ ಮಾಡಬಹುದಿತ್ತು.

ಆ ಶ್ವೇತಾಶ್ವದ ಹೆಸರು ಪೆಗಸಸ್. ಈ ದೈವಿ ಕುದುರೆಯ ತಾಯಿ ತಂದೆಗಳು ಯಾರು ಅಂದರ ಮೆಡುಸ್ಸಾ ಮತ್ತು ಪೊಸಯಿಡೋನ. ತನ್ನ ತಾಯಿಯ ಕೊಲೆಗಾರ ತನ್ನನ್ನು ವಾಹನವನ್ನಾಗಿ ಬಳಸಲಿಕ್ಕೆ ಹತ್ತಿಬಿಟ್ಟಾನು ಅಂತ ಅದಕ್ಕ ಗೊತ್ತಿತ್ತೋ ಇಲ್ಲೋ, ಒಟ್ಟಿನಲ್ಲಿ ತನ್ನ ಹೆತ್ತ ತಾಯಿಯ ಕೊಲೆಗೆ ಅದು ಭಾಗಿ ಆತು. ಹಿಂಗ ಮಾತೃ ಹತ್ಯೆ ಪಾಪದ ಲೇಪ ಅಂಟಿದ ಈ ಕುದುರೆ ಒಂದು ದಿನ ತನ್ನ ಮೇಲೆ ಏರಿದ ಸವಾರನನ್ನು ಕೆಳಗೆ ಕೆಡವಿ ಕೊಂದುಬಿಟ್ಟಿತು.

ಈ ಪೆಗಸಸ್ ಬುದ್ಧಿವಂತರ ದೇಶ ಅಂತ ಹೆಸರು ಪಡೆದ ಇಸ್ರೇಲ್‌ನ ಅತಿ ಬುದ್ಧಿವಂತರು ಸೃಷ್ಟಿಸಿದ ತಂತ್ರಾಂಶ. ಇದನ್ನು ಎನ್‌ಎಸ್‌ಒ ಅನ್ನೋ ಕಂಪನಿಯವರು ಕೇವಲ ಸರಕಾರಿ ಸಂಸ್ಥೆಗಳಿಗೆ ಮಾತ್ರ ಮಾರಾಟ ಮಾಡತಾರೆ. ಅದನ್ನು ಭಯೋತ್ಪಾದಕರು, ರಾಷ್ಟ್ರ ವಿರೋಧಿ ಶಕ್ತಿಗಳು ಮುಂತಾದವರ ವಿರುದ್ಧ ಗೂಢಚಾರಿಕೆ ಮಾಡಲಿಕ್ಕೆ ಉಪಯೋಗ ಮಾಡತಾರ.

ಭಾರತದ ಘನ ಸರಕಾರ ತೆರಿಗೆದಾರರು ಬೆವರು-ರಕ್ತ ಸುರಿಸಿ ಕಟ್ಟಿದ ಸುಂಕದ ಹಣವನ್ನು ತೊಗೊಂಡು ಈ ಬಿಳಿ ಕುದುರೆಯ ಬಲಕ್ಕೆ ಕಟ್ಟಿಬಿಟ್ಟೆದ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಇರೋ ದೇಶ ಸರ್ವಾಧಿಕಾರಿ ದೇಶಗಳು ಮತ್ತು ಅರೆ ಪ್ರಜಾಪ್ರಭುತ್ವವಾದಿ ದೇಶಗಳ ಸಾಲಿನಲ್ಲಿ ಸೇರಿಕೊಂಡುಬಿಟ್ಟದ.

ಅಜರ್ಬೈಜಾನ್ ಬಹರೈನ್, ಸೌದಿ ಅರೇಬಿಯಾ, ಹಂಗೇರಿ, ಮೆಕ್ಸಿಕೋ, ಮುಂತಾದ ದೇಶಗಳ ಜೊತೆಗೆ ಸ್ಪರ್ಧೆಗೆ ಬಿದ್ದಂಗ ಮಾಡಿ ಎರಡು ವರ್ಷದಲ್ಲಿ ಕನಿಷ್ಟ 600 ಕೋಟಿ ರೂಪಾಯಿ ಲಪಟಾಯಿಸಿಬಿಟ್ಟದ. ಸುಮಾರು ಮೂರು ನೂರು ಜನರ ಮ್ಯಾಲೆ ಎರಡು ವರ್ಷಗಟ್ಟಲೆ ಗೂಢಚಾರಿಕೆ ಮಾಡಿ ಅವರ ಖಾಸಗಿ ಮಾಹಿತಿ ಎಲ್ಲ ಸಂಗ್ರಹ ಮಾಡೆದ.

ಬರೆ ಇಷ್ಟ ಇದ್ದರ ಇದು ಸುದ್ದಿ ಆಗ್ತಾ ಇರಲಿಲ್ಲ. ಈ ಬಿಳಿ ರೆಕ್ಕೆಯ ಕುದುರೆಯಿಂದ ಯಾರದಾದರೂ ಫೋನುಗಳನ್ನು ಅದರ ಮಾಲೀಕರಿಗೆ ಗೊತ್ತಿಲ್ಲದೆ ಚಾಲೂ-ಬಂದ್ ಮಾಡಬಹುದು. ಅವರ ಫೋನು ಕ್ಯಾಮರಾದಿಂದ ಫೋಟೋ ತೆಗಿಬಹುದು, ವಿಡಿಯೋ ತೆಗಿಬಹುದು. ಅವರ ಮೆಸೇಜು, ವಾಟ್ಸಪ್ಪು, ಈಮೇಲೂ, ಇತ್ಯಾದಿಗಳ ಕಾಪಿ ಮಾಡಬಹುದು. ಅವರ ಬ್ಯಾಂಕ್ ವಹಿವಾಟಿನ ಮಾಹಿತಿ ಪಡೆಯಬಹುದು. ಅವರ ಆರೋಗ್ಯದ ಎಲ್ಲ ಮಾಹಿತಿ-ಉದಾಹರಣೆಗೆ ಅವರಿಗೆ ಇರುವ ಕಾಯಿಲೆ, ಅವರು ಆಪರೇಷನ್ ಮಾಡಿಸಿಕೊಂಡ ಮಾಹಿತಿ, ತೊಗೊಳ್ಳುವ ಔಷಧಿ, ಅವರ ವೈದ್ಯರ ನಂಬರ್ ಎಲ್ಲ ಸಂಗ್ರಹ ಮಾಡಬಹುದು.

ಇನ್ನೊಂದು ಖತರನಾಕ ವಿಚಾರ ಏನು ಅಂದರ ಎಲ್ಲೋ ದೂರ ಇಸ್ರೇಲ್-ಅಮೆರಿಕ ದೆಹಲಿಯೊಳಗ ಕುಳಿತುಕೊಂಡ ಇಂಜಿನಿಯರ್‌ಗಳು ಅಥವಾ ಪೊಲೀಸರು ನಿಮ್ಮ ಫೋನಿನ ಒಳಗ ನಿಮ್ಮನ್ನು ಕಾನೂನಿನ ಕುಣಿಕೆಗೆ ಸಿಕ್ಕಿಸುವಂತಹ ಮಾಹಿತಿ ಕಳಿಸಬಹುದು. ಅದು ನಿಮಗೆ ಗೊತ್ತಿರಲಾರದೆ ನಿಮ್ಮ ಫೋನಿನ ಒಳಗೆ ಬಂದು ಕೂತುಬಿಡುತ್ತದೆ. ನೀವು ಫೋನು ಬದಲು ಮಾಡಿದರೂ ಹೋಗೋದಿಲ್ಲ.

ನೀವು ನಿಮ್ಮ ಸ್ನೇಹಿತರಿಗೆ “ಇವತ್ತು ಸಂಜೆ ಎಂಟು ಗಂಟೆಗೆ ನಮ್ಮ ರೂಮಿನೊಳಗ ಒಂದು ಮಂಡಕ್ಕಿ ಮಿರ್ಚಿ ಮಾಡೋಣ. ಎಲ್ಲರೂ ಬನ್ನಿ. ಬರುವಾಗ ಒಂದು ಅರ್ಧ ಲೀಟರ್ ಹಾಲು, ಎರಡು ನೂರು ಗ್ರಾಂ ಚಹಾಪುಡಿ ತೊಗೊಂಡು ಬರ್ರಿ” ಅಂತ ಸಂದೇಶ ಕಳಿಸಿದರಿ ಅಂತ ತಿಳಕೋರಿ. ನಿಮ್ಮ ವಿರೋಧಿಗಳು “ಇವತ್ತು ಸಂಜೆ ಎಂಟು ಗಂಟೆಗೆ ನಮ್ಮ ರೂಮಿನೊಳಗ ಒಂದು ಟೈಮ್ ಬಾಂಬ್ ತಯಾರು ಮಾಡೋಣ. ಎಲ್ಲರೂ ಬನ್ನಿ. ಬರುವಾಗ ಒಂದು ಅರ್ಧ ಲೀಟರ್ ಸೋಡಿಯಂ ನೈಟ್ರೇಟ್ ದ್ರಾವಣ, ಎರಡು ನೂರು ಗ್ರಾ ಆರ್‌ಡಿ ಎಕ್ಸ್ ತೊಗೊಂಡು ಬರ್ರಿ” ಅಂತ ಬದಲು ಮಾಡಬಹುದು.

ಅದರ ಆಧಾರದ ಮೇಲೆ ನಿಮ್ಮನ್ನ ದೇಶದ್ರೋಹದ ಕಾನೂನು ಅಡಿಯಲ್ಲಿ ಒದ್ದು ಒಳಗಹಾಕಬಹುದು.

ಹಿಂದಿ ಪಿಕ್ಚರ್‌ದಾಗ ಪೊಲೀಸ್ ಇನ್ಸ್ಪೆಕ್ಟರ್ ಅಮರೀಷ ಪುರಿ ’ಅಬೇ ಸಾಲೇ, ನಿನ್ನ ಮನಿಯೊಳಗ ಗಾಂಜಾ ಪೊಟ್ಟಣ ಇಟ್ಟು ಬಿಡತೆನಿ. ನಿನ್ನನ್ನ ಜೈಲಿಗೆ ಹಾಕತೆನಿ’ ಅಂತ ಧಮಕಿ ಕೊಡತನಲ್ಲ, ಅದಕ್ಕೂ ಇದಕ್ಕೂ ಏನು ವ್ಯತ್ಯಾಸ ಇಲ್ಲ. ಹಿಂಗ ಆಗಬಹುದು ಅಂತ ಅಲ್ಲ. ಆಗಿ ಹೊಗೇದ.

“ಇದೇನು ಹೊಸದಲ್ಲ. ಹಿಂದಿನ ಎಲ್ಲ ಸರಕಾರಗಳು ಗೂಢಚಾರಿಕೆ ಮಾಡಿದವರೇ” ಅಂತ ಹೇಳಿ ನಮ್ಮ ಡೋಂಟ್ ಕೇರ್ ಕುಮಾರಣ್ಣ ಅವರು ಹೇಳಿಕೆ ಕೊಟ್ಟಾರ. ಹಿಂದಿನವರು ಗೂಢಚಾರಿಕೆ ಮಾಡಿರಬಹುದು. ಅದರ ಅಮರೀಷ ಪುರಿ ತಂತ್ರ ಉಪಯೋಗಿಸಿ ನಿಮ್ಮ ಫೋನ್‌ದಾಗ ಬಾಂಬ್ ತಯಾರಿಸುವ ಸಂದೇಶ ಕಳಿಸಿಲ್ಲ. ಹಂಗ ಮಾಡಲಿಕ್ಕೆ ಆವಾಗ ತಂತ್ರಜ್ಞಾನನೂ ಇರಲಿಲ್ಲ, ಅಂತ ತಿಳಿರಿ.

ಈಗ ಸದ್ಯ ಟಿವಿ ಎರಡು ದೊಡ್ಡ ಸುದ್ದಿ ತೋರಸಲಿಕ್ಕೆ ಹತ್ತಿದಾವು. ಒಂದು ಈ ಗ್ರೀಕ್ ಪುರಾಣದ ಕತಿ. ಇನ್ನೊಂದು ನಮ್ಮ ಕುಡ್ಲದ ಹುಡುಗಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರ ಪುರಾಣದ ಕತಿ. ಸುಮ್ಮನೇ ಕುಂದರಲಾರದೆ ಕುಂದ್ರಾ ಅವರು ತಯಾರಿಸಿದರು ಎನ್ನಲಾದ ಅಶ್ಲೀಲ ಚಿತ್ರದ ಬಿಸಿ ಬಿಸಿ ಸುದ್ದಿ. ನೀವು ಯಾವುದನ್ನು ನೋಡತಿರಿ ಅನ್ನೋದರ ಮ್ಯಾಲೆ ನಿಮ್ಮ ಮತ್ತು ಈ ದೇಶದ ಭವಿಷ್ಯ ನಿರ್ಭರ ಆಗತದ.

ಅಲ್ಲವೇ ಮನೋಲ್ಲಾಸಿನಿ?


ಇದನ್ನೂ ಓದಿ: ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಐಟಿ ಸಂಸದೀಯ ಸಮಿತಿ ಮುಂದೆ ಪೆಗಾಸಸ್ ಪ್ರಕರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...