Homeಅಂಕಣಗಳುಸುದ್ದಿಯೇನೇ ಮನೋಲ್ಲಾಸಿನಿ: ಎಲ್ಲಾ ಸರಿ ಈ ಪೆಗಸಸ್ ಅಂದರೆ ಏನು?

ಸುದ್ದಿಯೇನೇ ಮನೋಲ್ಲಾಸಿನಿ: ಎಲ್ಲಾ ಸರಿ ಈ ಪೆಗಸಸ್ ಅಂದರೆ ಏನು?

- Advertisement -
- Advertisement -

ಒಲಿಂಪಿಕ್ ಶುರು ಆಗಲಿಕ್ಕೆ ಬಂದವು. ಅದಕ್ಕ ಸಂಬಂಧಪಟ್ಟ ಒಂದು ಕತಿ ಕೇಳೋಣ. ಒಂದಾನೊಂದು ಕಾಲದಾಗ, ಏಟೊಂದು ಮುದ ಇದ್ದ ಕಾಲದಾಗ ಗ್ರೀಕ್ ದೇಶದೊಳಗ ಒಬ್ಬವ ರಾಜಾ ಇದ್ದ. ಅವನ ಹೆಸರು ಪೊಸಯಿಡೋನ. ಆತ ಸಮುದ್ರ, ಭೂಕಂಪನ ಹಾಗೂ ಕುದುರೆಗಳ ದೇವರು. ಅವನ ಕೈಯಾಗ ಒಂದು ತ್ರಿಶೂಲ ಇತ್ತು. ತನ್ನ ತ್ರಿಶೂಲದಿಂದ ಭೂಮಿಮ್ಯಾಲೆ ಗೆರೆ ಹೊಡದು ನೀರಿನ ಝರಿಗಳನ್ನು ಆತ ಸೃಷ್ಟಿ ಮಾಡುತ್ತಿದ್ದ. ಇಡೀ ವಿಶ್ವವನ್ನೇ ಅಲುಗಾಡಿಸಬಲ್ಲ ಶಕ್ತಿ ಉಳ್ಳವನು ಅಂತ ಅವನಿಗೆ ‘ಭೂಕಂಪನಾಧೀಶ’ ಅಂತ ಹೆಸರು ಇತ್ತು. ಆತ ಹುಚ್ಚು ಕುದುರೆಗಳನ್ನು ಹತೋಟಿಗೆ ತರುವ ಕುಶಲತೆ ಇದ್ದವನು ಅನ್ನುವುದು ಅವನ ಹೆಗ್ಗಳಿಕೆ. ಎಲ್ಲಕ್ಕಿಂತ ಮುಖ್ಯವಾಗಿ ಆತ ಒಲಿಂಪಿಕ್ ಆಟಗಾರ.

ಅಣ್ಣಾ ತಮ್ಮಂದಿರ ನಡುವೆ ಆಸ್ತಿ ಬಟವಾಡೆ ಆದ ನಂತರ ತನ್ನ ಪಾಲಿಗೆ ಬಂದ ಸಮುದ್ರವನ್ನ ಇಟಗೊಂಡು ತಮ್ಮ ಪೊಸಯಿಡೋನ ತಣ್ಣಗೆ ಕೂತವನು. ದೇವ ಸಹಜ ಆಸೆ-ಆಕಾಂಕ್ಷೆಗಳಿಂದ ಬಳಲಿದವನು. ಒಂದುನೂರಕ್ಕಿಂತ ಹೆಚ್ಚು ಪತ್ನಿ-ಉಪ ಪತ್ನಿಯರ ಕಟ್ಟಿಕೊಂಡು ಸುಮಾರು ಮೂರುನೂರು ಜನ ಮಕ್ಕಳಿಗೆ ಜನ್ಮ ಕೊಟ್ಟವನು.

ಅವನ ಹೆಂಡತಿ ಮೆಡುಸ್ಸಾ. ಅಕಿನ್ನ ಯಾರಾದರೂ ಕಣ್ಣಿನೊಳಗ ಕಣ್ಣು ಇಟ್ಟು ನೋಡಿದರ ಅವರು ಕಲ್ಲಾಗಿಬಿಡತಿದ್ದರು. ಅಕಿ ತಲಿಮ್ಯಾಲೆ ಕೂದಲು ಇರಲಿಲ್ಲ. ಅದರ ಬದಲಿಗೆ ಸಣ್ಣ ಸಣ್ಣ ಹಾವು ಇದ್ದವು. ಆ ಹಾವುಗಳನ್ನ ಅಕಿ ತನ್ನ ಸೇವಕರ ತರಹ ಉಪಯೋಗ ಮಾಡತಿದ್ದಳು. ಅಕಿಗೆ ಅಣಿಮಾ-ಗರಿಮಾ ಶಕ್ತಿಗಳು ಸಿದ್ಧಿಸಿಬಿಟ್ಟಿದ್ದವು. ತಾನು ಬಯಸಿದಲ್ಲಿ ಪ್ರವಾಸ ಮಾಡುವ ಶಕ್ತಿ ಇತ್ತು.

ಕೊನೆಗೆ ಅವಳ ಸಂಹಾರ ಮಾಡಿದವ ಯಾರು ಅಂದರ ಗ್ರೀಕ್ ದೇವತೆ ಪರ್ಸಿಯಸ್. ಆತ ತನ್ನ ಕಣ್ಣು ಕಟ್ಟಿಕೊಂಡು ಅವಳ ರುಂಡ ಕತ್ತರಿಸಿಬಿಟ್ಟ. ಆ ರುಂಡವನ್ನು ತನ್ನ ಈಟಿಗೆ ಚುಚ್ಚಿಕೊಂಡು ತಿರುಗಾಡುತ್ತಿದ್ದ. ಮೆಡುಸ್ಸಾ ಸತ್ತ ಮೇಲೆ ಸಹಿತ ಅವಳ ಶಾಪ ಕೊಡುವ ಶಕ್ತಿ ಹೋಗಲಿಲ್ಲ. ಇದನ್ನು ಅರಿತ ಪರ್ಸಿಯಸ್ ಅವಳ ತಲೆಯನ್ನ ಒಂದು ಆಯುಧದ ರೀತಿ ಬಳಸಿ ತನ್ನ ವೈರಿಗಳನ್ನು ಕೊಂದ.

ಇಷ್ಟೆಲ್ಲಾ ಆತಲ್ಲಾ, ಈಗ ನೋಡ್ರಿ. ಇಲ್ಲೇ ಐತಿ ಮಜಾ. ಮೆಡುಸ್ಸಾನ ಹತ್ಯೆ ಮಾಡುವಾಗ ಪರ್ಸಿಯಸ್ ಒಂದು ಚಮತ್ಕಾರಿ ವಾಹನ ಬಳಸಿದ್ದ. ಅದು ಯಾವುದು ಅಂದರ ಆಕಾಶದಲ್ಲಿ ಹಾರಾಡಬಲ್ಲ ಬಿಳಿಯ ಕುದುರೆ. ತನ್ನ ಎರಡೂ ಕಡೆಗಳಲ್ಲಿ ಇದ್ದ ರೆಕ್ಕೆಗಳನ್ನು ಬಳಸಿ ಅದು ಹಾರಬಹುದಿತ್ತು. ಮೂರುಲೋಕ ಸಂಚಾರ ಮಾಡಬಹುದಿತ್ತು.

ಆ ಶ್ವೇತಾಶ್ವದ ಹೆಸರು ಪೆಗಸಸ್. ಈ ದೈವಿ ಕುದುರೆಯ ತಾಯಿ ತಂದೆಗಳು ಯಾರು ಅಂದರ ಮೆಡುಸ್ಸಾ ಮತ್ತು ಪೊಸಯಿಡೋನ. ತನ್ನ ತಾಯಿಯ ಕೊಲೆಗಾರ ತನ್ನನ್ನು ವಾಹನವನ್ನಾಗಿ ಬಳಸಲಿಕ್ಕೆ ಹತ್ತಿಬಿಟ್ಟಾನು ಅಂತ ಅದಕ್ಕ ಗೊತ್ತಿತ್ತೋ ಇಲ್ಲೋ, ಒಟ್ಟಿನಲ್ಲಿ ತನ್ನ ಹೆತ್ತ ತಾಯಿಯ ಕೊಲೆಗೆ ಅದು ಭಾಗಿ ಆತು. ಹಿಂಗ ಮಾತೃ ಹತ್ಯೆ ಪಾಪದ ಲೇಪ ಅಂಟಿದ ಈ ಕುದುರೆ ಒಂದು ದಿನ ತನ್ನ ಮೇಲೆ ಏರಿದ ಸವಾರನನ್ನು ಕೆಳಗೆ ಕೆಡವಿ ಕೊಂದುಬಿಟ್ಟಿತು.

ಈ ಪೆಗಸಸ್ ಬುದ್ಧಿವಂತರ ದೇಶ ಅಂತ ಹೆಸರು ಪಡೆದ ಇಸ್ರೇಲ್‌ನ ಅತಿ ಬುದ್ಧಿವಂತರು ಸೃಷ್ಟಿಸಿದ ತಂತ್ರಾಂಶ. ಇದನ್ನು ಎನ್‌ಎಸ್‌ಒ ಅನ್ನೋ ಕಂಪನಿಯವರು ಕೇವಲ ಸರಕಾರಿ ಸಂಸ್ಥೆಗಳಿಗೆ ಮಾತ್ರ ಮಾರಾಟ ಮಾಡತಾರೆ. ಅದನ್ನು ಭಯೋತ್ಪಾದಕರು, ರಾಷ್ಟ್ರ ವಿರೋಧಿ ಶಕ್ತಿಗಳು ಮುಂತಾದವರ ವಿರುದ್ಧ ಗೂಢಚಾರಿಕೆ ಮಾಡಲಿಕ್ಕೆ ಉಪಯೋಗ ಮಾಡತಾರ.

ಭಾರತದ ಘನ ಸರಕಾರ ತೆರಿಗೆದಾರರು ಬೆವರು-ರಕ್ತ ಸುರಿಸಿ ಕಟ್ಟಿದ ಸುಂಕದ ಹಣವನ್ನು ತೊಗೊಂಡು ಈ ಬಿಳಿ ಕುದುರೆಯ ಬಲಕ್ಕೆ ಕಟ್ಟಿಬಿಟ್ಟೆದ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಇರೋ ದೇಶ ಸರ್ವಾಧಿಕಾರಿ ದೇಶಗಳು ಮತ್ತು ಅರೆ ಪ್ರಜಾಪ್ರಭುತ್ವವಾದಿ ದೇಶಗಳ ಸಾಲಿನಲ್ಲಿ ಸೇರಿಕೊಂಡುಬಿಟ್ಟದ.

ಅಜರ್ಬೈಜಾನ್ ಬಹರೈನ್, ಸೌದಿ ಅರೇಬಿಯಾ, ಹಂಗೇರಿ, ಮೆಕ್ಸಿಕೋ, ಮುಂತಾದ ದೇಶಗಳ ಜೊತೆಗೆ ಸ್ಪರ್ಧೆಗೆ ಬಿದ್ದಂಗ ಮಾಡಿ ಎರಡು ವರ್ಷದಲ್ಲಿ ಕನಿಷ್ಟ 600 ಕೋಟಿ ರೂಪಾಯಿ ಲಪಟಾಯಿಸಿಬಿಟ್ಟದ. ಸುಮಾರು ಮೂರು ನೂರು ಜನರ ಮ್ಯಾಲೆ ಎರಡು ವರ್ಷಗಟ್ಟಲೆ ಗೂಢಚಾರಿಕೆ ಮಾಡಿ ಅವರ ಖಾಸಗಿ ಮಾಹಿತಿ ಎಲ್ಲ ಸಂಗ್ರಹ ಮಾಡೆದ.

ಬರೆ ಇಷ್ಟ ಇದ್ದರ ಇದು ಸುದ್ದಿ ಆಗ್ತಾ ಇರಲಿಲ್ಲ. ಈ ಬಿಳಿ ರೆಕ್ಕೆಯ ಕುದುರೆಯಿಂದ ಯಾರದಾದರೂ ಫೋನುಗಳನ್ನು ಅದರ ಮಾಲೀಕರಿಗೆ ಗೊತ್ತಿಲ್ಲದೆ ಚಾಲೂ-ಬಂದ್ ಮಾಡಬಹುದು. ಅವರ ಫೋನು ಕ್ಯಾಮರಾದಿಂದ ಫೋಟೋ ತೆಗಿಬಹುದು, ವಿಡಿಯೋ ತೆಗಿಬಹುದು. ಅವರ ಮೆಸೇಜು, ವಾಟ್ಸಪ್ಪು, ಈಮೇಲೂ, ಇತ್ಯಾದಿಗಳ ಕಾಪಿ ಮಾಡಬಹುದು. ಅವರ ಬ್ಯಾಂಕ್ ವಹಿವಾಟಿನ ಮಾಹಿತಿ ಪಡೆಯಬಹುದು. ಅವರ ಆರೋಗ್ಯದ ಎಲ್ಲ ಮಾಹಿತಿ-ಉದಾಹರಣೆಗೆ ಅವರಿಗೆ ಇರುವ ಕಾಯಿಲೆ, ಅವರು ಆಪರೇಷನ್ ಮಾಡಿಸಿಕೊಂಡ ಮಾಹಿತಿ, ತೊಗೊಳ್ಳುವ ಔಷಧಿ, ಅವರ ವೈದ್ಯರ ನಂಬರ್ ಎಲ್ಲ ಸಂಗ್ರಹ ಮಾಡಬಹುದು.

ಇನ್ನೊಂದು ಖತರನಾಕ ವಿಚಾರ ಏನು ಅಂದರ ಎಲ್ಲೋ ದೂರ ಇಸ್ರೇಲ್-ಅಮೆರಿಕ ದೆಹಲಿಯೊಳಗ ಕುಳಿತುಕೊಂಡ ಇಂಜಿನಿಯರ್‌ಗಳು ಅಥವಾ ಪೊಲೀಸರು ನಿಮ್ಮ ಫೋನಿನ ಒಳಗ ನಿಮ್ಮನ್ನು ಕಾನೂನಿನ ಕುಣಿಕೆಗೆ ಸಿಕ್ಕಿಸುವಂತಹ ಮಾಹಿತಿ ಕಳಿಸಬಹುದು. ಅದು ನಿಮಗೆ ಗೊತ್ತಿರಲಾರದೆ ನಿಮ್ಮ ಫೋನಿನ ಒಳಗೆ ಬಂದು ಕೂತುಬಿಡುತ್ತದೆ. ನೀವು ಫೋನು ಬದಲು ಮಾಡಿದರೂ ಹೋಗೋದಿಲ್ಲ.

ನೀವು ನಿಮ್ಮ ಸ್ನೇಹಿತರಿಗೆ “ಇವತ್ತು ಸಂಜೆ ಎಂಟು ಗಂಟೆಗೆ ನಮ್ಮ ರೂಮಿನೊಳಗ ಒಂದು ಮಂಡಕ್ಕಿ ಮಿರ್ಚಿ ಮಾಡೋಣ. ಎಲ್ಲರೂ ಬನ್ನಿ. ಬರುವಾಗ ಒಂದು ಅರ್ಧ ಲೀಟರ್ ಹಾಲು, ಎರಡು ನೂರು ಗ್ರಾಂ ಚಹಾಪುಡಿ ತೊಗೊಂಡು ಬರ್ರಿ” ಅಂತ ಸಂದೇಶ ಕಳಿಸಿದರಿ ಅಂತ ತಿಳಕೋರಿ. ನಿಮ್ಮ ವಿರೋಧಿಗಳು “ಇವತ್ತು ಸಂಜೆ ಎಂಟು ಗಂಟೆಗೆ ನಮ್ಮ ರೂಮಿನೊಳಗ ಒಂದು ಟೈಮ್ ಬಾಂಬ್ ತಯಾರು ಮಾಡೋಣ. ಎಲ್ಲರೂ ಬನ್ನಿ. ಬರುವಾಗ ಒಂದು ಅರ್ಧ ಲೀಟರ್ ಸೋಡಿಯಂ ನೈಟ್ರೇಟ್ ದ್ರಾವಣ, ಎರಡು ನೂರು ಗ್ರಾ ಆರ್‌ಡಿ ಎಕ್ಸ್ ತೊಗೊಂಡು ಬರ್ರಿ” ಅಂತ ಬದಲು ಮಾಡಬಹುದು.

ಅದರ ಆಧಾರದ ಮೇಲೆ ನಿಮ್ಮನ್ನ ದೇಶದ್ರೋಹದ ಕಾನೂನು ಅಡಿಯಲ್ಲಿ ಒದ್ದು ಒಳಗಹಾಕಬಹುದು.

ಹಿಂದಿ ಪಿಕ್ಚರ್‌ದಾಗ ಪೊಲೀಸ್ ಇನ್ಸ್ಪೆಕ್ಟರ್ ಅಮರೀಷ ಪುರಿ ’ಅಬೇ ಸಾಲೇ, ನಿನ್ನ ಮನಿಯೊಳಗ ಗಾಂಜಾ ಪೊಟ್ಟಣ ಇಟ್ಟು ಬಿಡತೆನಿ. ನಿನ್ನನ್ನ ಜೈಲಿಗೆ ಹಾಕತೆನಿ’ ಅಂತ ಧಮಕಿ ಕೊಡತನಲ್ಲ, ಅದಕ್ಕೂ ಇದಕ್ಕೂ ಏನು ವ್ಯತ್ಯಾಸ ಇಲ್ಲ. ಹಿಂಗ ಆಗಬಹುದು ಅಂತ ಅಲ್ಲ. ಆಗಿ ಹೊಗೇದ.

“ಇದೇನು ಹೊಸದಲ್ಲ. ಹಿಂದಿನ ಎಲ್ಲ ಸರಕಾರಗಳು ಗೂಢಚಾರಿಕೆ ಮಾಡಿದವರೇ” ಅಂತ ಹೇಳಿ ನಮ್ಮ ಡೋಂಟ್ ಕೇರ್ ಕುಮಾರಣ್ಣ ಅವರು ಹೇಳಿಕೆ ಕೊಟ್ಟಾರ. ಹಿಂದಿನವರು ಗೂಢಚಾರಿಕೆ ಮಾಡಿರಬಹುದು. ಅದರ ಅಮರೀಷ ಪುರಿ ತಂತ್ರ ಉಪಯೋಗಿಸಿ ನಿಮ್ಮ ಫೋನ್‌ದಾಗ ಬಾಂಬ್ ತಯಾರಿಸುವ ಸಂದೇಶ ಕಳಿಸಿಲ್ಲ. ಹಂಗ ಮಾಡಲಿಕ್ಕೆ ಆವಾಗ ತಂತ್ರಜ್ಞಾನನೂ ಇರಲಿಲ್ಲ, ಅಂತ ತಿಳಿರಿ.

ಈಗ ಸದ್ಯ ಟಿವಿ ಎರಡು ದೊಡ್ಡ ಸುದ್ದಿ ತೋರಸಲಿಕ್ಕೆ ಹತ್ತಿದಾವು. ಒಂದು ಈ ಗ್ರೀಕ್ ಪುರಾಣದ ಕತಿ. ಇನ್ನೊಂದು ನಮ್ಮ ಕುಡ್ಲದ ಹುಡುಗಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರ ಪುರಾಣದ ಕತಿ. ಸುಮ್ಮನೇ ಕುಂದರಲಾರದೆ ಕುಂದ್ರಾ ಅವರು ತಯಾರಿಸಿದರು ಎನ್ನಲಾದ ಅಶ್ಲೀಲ ಚಿತ್ರದ ಬಿಸಿ ಬಿಸಿ ಸುದ್ದಿ. ನೀವು ಯಾವುದನ್ನು ನೋಡತಿರಿ ಅನ್ನೋದರ ಮ್ಯಾಲೆ ನಿಮ್ಮ ಮತ್ತು ಈ ದೇಶದ ಭವಿಷ್ಯ ನಿರ್ಭರ ಆಗತದ.

ಅಲ್ಲವೇ ಮನೋಲ್ಲಾಸಿನಿ?


ಇದನ್ನೂ ಓದಿ: ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಐಟಿ ಸಂಸದೀಯ ಸಮಿತಿ ಮುಂದೆ ಪೆಗಾಸಸ್ ಪ್ರಕರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...