“ಎರಡು ವರ್ಷಗಳ ಹಿಂದೆ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ, ಶಾಸಕರನ್ನು ಕೊಂಡುಕೊಂಡು ವಾಮಮಾರ್ಗದ ಮೂಲಕ ಯಡಿಯೂರಪ್ಪ ಅಧಿಕಾರಕ್ಕೆ ಬಂದರು. ಅದಕ್ಕೆ ಈ ಸರ್ಕಾರವನ್ನು ಅನೈತಿಕ ಸರ್ಕಾರ ಎಂದು ಕರೆಯುತ್ತೇವೆ” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗುರುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ನಡೆದ, ಬಿಜೆಪಿ ಸರ್ಕಾರದ 2 ವರ್ಷಗಳ ಆಡಳಿತದ ವೈಫಲ್ಯಗಳ ಕುರಿತು ಪತ್ರಿಕಾಗೋಷ್ಠಿ ಮತ್ತು ಕಿರು ಹೊತ್ತಿಗೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಬಿಜೆಪಿ ವೈಫಲ್ಯಗಳ ಪುಸ್ತಕವನ್ನು ಬಿಡುಗಡೆ ಮಾಡಿದ ಅವರು, “ಭ್ರಷ್ಟಾಚಾರ ಮತ್ತು ಕಪ್ಪುಹಣದ ಮೂಲಕವೆ ರಚಿಸಲ್ಪಟ್ಟ ಸರ್ಕಾರ ದುರಾಡಳಿತ, ಭ್ರಷ್ಟಾಚಾರವನ್ನು ಮತ್ತು ಶೂನ್ಯ ಅಭಿವೃದ್ದಿ ಮಾಡಿದೆ. ಹೆಣ್ಣುಮಕ್ಕಳಿಗೆ ಮತ್ತು ಮಕ್ಕಳಿಗೆ ನೀಡುವ ಮೊಟ್ಟೆಯಲ್ಲೂ ಅವರು ದುಡ್ದು ಹೊಡೆದಿದ್ದಾರೆ. ಕೊರೊನಾ ಸೋಂಕು ಬಂದಾಗ ಅದರ ಸಲಕರಣೆಯಲ್ಲೂ ಅವರು ಭ್ರಷ್ಟಾಚಾರ ಮಾಡಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಪ್ರಜೆಗಳ ಖಾಸಗಿ ಬದುಕಿನೊಳಗೆ ಇಣುಕಿ ನೋಡುವ ಚಟ ಸಂವಿಧಾನ ವಿರೋಧಿ: ಸಿದ್ದರಾಮಯ್ಯ
“ಮೊದಲನೆ ಅಲೆ ಮತ್ತುಎರಡನೆ ಅಲೆಯಲ್ಲಿ 36 ಸಾವಿರ ಜನರು ಸಾವಿಗೀಡಾಗಿದ್ದಾರೆ ಎಂದು ಸರ್ಕಾರ ಹೇಳುತ್ತದೆ, ಆದರೆ ನನ್ನ ಲೆಕ್ಕಾಚಾರಗಳ ಪ್ರಕಾರ ಇದರ ಪ್ರಮಾಣ ಹತ್ತು ಪಟ್ಟು ಹೆಚ್ಚಿದೆ. ಅಂದರೆ ಮೂರುವರೆ ಲಕ್ಷ ಜನರು ಕೊರೊನಾದಿಂದ ಸಾವಿಗೀಡಾಗಿದ್ದಾರೆ. ಚಾಮರಾಜನಗರದಲ್ಲಿ ನಡೆದ ಘಟನೆಯಲ್ಲೇ ಅವರು ಸುಳ್ಳು ಹೇಳಿದ್ದಾರೆ. ಇದೊಂದು ಉದಾಹರಣೆ ಮಾತ್ರ. ಇಡೀ ದೇಶದಲ್ಲಿ ಐವತ್ತು ಲಕ್ಷ ಜನರು ಸತ್ತಿದ್ದಾರೆ. ಇದಕ್ಕೆಲ್ಲಾ ಯಾರು ಹೊಣೆ” ಎಂದು ಕೇಳಿದ್ದಾರೆ.
ಕೊರೊನಾ ರೋಗಕ್ಕೆ ಬಳಸುವ ಔಷಧಿಗಳ ಮೇಲೂ ಜಿ.ಎಸ್.ಟಿ ಹಾಕಿದಂತಹಾ ಅಮಾನವೀಯ ಮನುಷ್ಯ @narendramodi. ಇದನ್ನು @BSYBJP ಅವರಾಗಲೀ, ರಾಜ್ಯದಿಂದ ಆಯ್ಕೆಯಾದ @BJP4Karnataka ಸಂಸದರಾಗಲೀ ಯಾವತ್ತಾದರೂ ಪ್ರಶ್ನಿಸಿದ್ದಾರೆಯೇ?
ಇಲ್ಲಿ ರಾಜಾಹುಲಿ, ಮೋದಿಯವರ ಮುಂದೆ ಇಲಿ. 14/21#ಭ್ರಷ್ಟ_ಬಿಜೆಪಿ
— Siddaramaiah (@siddaramaiah) July 29, 2021
ಪತ್ರಿಕಾಗೋಷ್ಟಿಯ ನಂತರ ಟ್ವೀಟ್ ಮಾಡಿದ ಅವರು, “ಯಡಿಯೂರಪ್ಪನವರ ಸರ್ಕಾರಕ್ಕೆ ಜುಲೈ 26 ಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಾಧನಾ ಕಾರ್ಯಕ್ರಮವನ್ನು ಮಾಡಿ, ಕಷ್ಟದ ಕಾಲದಲ್ಲೂ ತಾವೇನೋ ಸಾಧನೆ ಮಾಡಿದ್ದೇವೆ ಎಂದು ಸುಳ್ಳುಗಳನ್ನು ಹೇಳಿದ್ದಾರೆ. ನನ್ನ ಪ್ರಕಾರ ಭ್ರಷ್ಟಾಚಾರವೇ ಇವರ ಎರಡು ವರ್ಷದ ದೊಡ್ಡ ಸಾಧನೆ” ಎಂದು ಕಿಡಿ ಕಾರಿದ್ದಾರೆ.
ಕೇಂದ್ರದಲ್ಲಿ ಯು.ಪಿ.ಎ ಸರ್ಕಾರವಿದ್ದಾಗ ಅಡುಗೆ ಅನಿಲ ಬೆಲೆ ರೂ.413 ಇತ್ತು, ಈಗ @narendramodi ಅವರ ಅಚ್ಚೇ ದಿನ್ ನ ಪರಿಣಾಮ ಅಡುಗೆ ಅನಿಲ ಬೆಲೆ ರೂ.815 ಆಗಿದೆ. ದೇಶದ ಜನ ಬಡವರಾಗುತ್ತಿದ್ದಾರೆ, ಆದರೆ ಮೋದಿಯವರ ಆಪ್ತ ವಲಯದವರ ಆಸ್ತಿ ದುಪ್ಪಟ್ಟಾಗುತ್ತಿದೆ. 19/21#ಭ್ರಷ್ಟ_ಬಿಜೆಪಿ
— Siddaramaiah (@siddaramaiah) July 29, 2021
“ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಬೆಳಗಾವಿಯಲ್ಲಿ ಅಧಿವೇಶನವನ್ನೇ ಮಾಡಿಲ್ಲ, 371(ಜೆ) ಅಡಿ ಹೈದ್ರಾಬಾದ್ ಕರ್ನಾಟದ ಅಭಿವೃದ್ಧಿಗೆ ನೀಡಬೇಕಿದ್ದ ಅನುದಾನವನ್ನು 1 ರೂಪಾಯಿ ಕೂಡ ಬಿಡುಗಡೆ ಮಾಡಿಲ್ಲ. ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಿದರೆ ಸಾಕೆ? ಕರ್ನಾಟಕ ಕಲ್ಯಾಣವಾಗುವುದು ಬೇಡವೇ?” ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಒಬ್ಬ ಭ್ರಷ್ಟನ ಬದಲು ಮತ್ತೊಬ್ಬ ಭ್ರಷ್ಟ: ಸಿಎಂ ಬದಲಾವಣೆ ಕುರಿತು ಸಿದ್ದರಾಮಯ್ಯ ಪ್ರತಿಕ್ರಿಯೆ