ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಬಸವರಾಜ ಬೊಮ್ಮಾಯಿಯವರು ಇಂದು ನವದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದು, ಸಚಿವ ಸಂಪುಟ ವಿಸ್ತರಣೆಗೆ ಮುಂದಾಗಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಈ ಬಾರಿ ಡಿಸಿಎಂ ಸ್ಥಾನ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, “ದೆಹಲಿಯಲ್ಲಿ ವರಿಷ್ಠರೊಂದಿಗೆ ಚರ್ಚೆಯಾಗಿದೆ. 29 ಜನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕುರಿತು ಪಟ್ಟಿಯನ್ನು ರಾಜ್ಯಭವನಕ್ಕೆ ಕಳಿಸಿದ್ದೇನೆ” ಎಂದಿದ್ದಾರೆ.
ನಮ್ಮ ಸಚಿವ ಸಂಪುಟದಲ್ಲಿ ಅನುಭವಿಗಳು ಮತ್ತು ಹೊಸಬರು ಸಹ ಇದ್ದಾರೆ. 8 ಲಿಂಗಾಯತ, 7 ಒಕ್ಕಲಿಗ, 7 ಒಬಿಸಿ, 3 ಪರಿಶಿಷ್ಟ ಜಾತಿ ಮತ್ತು 1 ಪರಿಶಿಷ್ಟ ಪಂಗಡ, 1 ಬ್ರಾಹ್ಮಣ, 1 ರೆಡ್ಡಿ ಸಮುದಾಯ ಮತ್ತು ಒಬ್ಬ ಮಹಿಳಾ ಶಾಸಕಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ನಮ್ಮ ನಾಯಕರಾದ ಬಿ.ಎಸ್ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಈ ಸಚಿವ ಸಂಪುಟ ರಚನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಜೆ.ಪಿ ನಡ್ಡಾರವರು ಮತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ರವರು ಯಡಿಯೂರಪ್ಪನವರ ಮಗ ಬಿ.ವೈ ವಿಜೇಯೇಂದ್ರರವರ ಜೊತೆ ಮಾತನಾಡಿದ್ದಾರೆ. ಸಚಿವ ಸಂಪುಟದ ಪಟ್ಟಿಯಲ್ಲಿ ಬಿ.ವೈ ವಿಜೇಯೇಂದ್ರ ಹೆಸರು ಇಲ್ಲ ಎಂದು ಸಿಎಂ ತಿಳಿಸಿದ್ದಾರೆ.
ನಾನು ಸಿಎಂ ಆದ ಕೂಡಲೇ ಪ್ರವಾಹ ಪೀಡಿತ ಪ್ರದೇಶಕ್ಕೆ ತೆರಳಿ ಪರಿಹಾರ ಘೋಷಿಸಿದ್ದೇನೆ. ರೈತ ಮಕ್ಕಳಿಗೆ 1 ಸಾವಿರ ಕೋಟಿ ರೂ ಮೀಸಲಿಟ್ಟು ಹೊಸ ಯೋಜನೆ ಸ್ಕಾಲರ್ ಶಿಪ್ ಯೋಜನೆ ಘೋಷಿಸಿದ್ದೇನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ ರವರು ಹೊಸ ಸಚಿವ ಸಂಪುಟದಲ್ಲಿ ಇಲ್ಲ ಎಂಬುದು ತಿಳಿದುಬಂದಿದೆ. ಈ ಕುರಿತು ಟ್ವೀಟ್ ಮಾಡಿರುವ ಅವರು, “ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು” ಎಂದು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ
ನನ್ನ ಹೃತ್ಪೂರ್ವಕ ಧನ್ಯವಾದಗಳು
???
— S.Suresh Kumar (@nimmasuresh) August 4, 2021
ಇದನ್ನೂ ಓದಿ: ಒಲಿಂಪಿಕ್ಸ್ ಬಾಕ್ಸಿಂಗ್: ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟ ಹೆಣ್ಣುಮಗಳು ಲವ್ಲಿನಾ