Homeಕರ್ನಾಟಕಸಂಘಪರಿವಾರಕ್ಕೆ ಬೇಡವಾದರೇ ಕಲ್ಲಡ್ಕ ಪ್ರಭಾಕರ ಭಟ್ಟ?!

ಸಂಘಪರಿವಾರಕ್ಕೆ ಬೇಡವಾದರೇ ಕಲ್ಲಡ್ಕ ಪ್ರಭಾಕರ ಭಟ್ಟ?!

- Advertisement -
- Advertisement -

ದಕ್ಷಿಣ ಕನ್ನಡದ ಸಂಘ ಪರಿವಾರದಲ್ಲಿ ನಡೆಯುತ್ತಿರುವ ಶೀತಲ ಸಮರ ಈ ಚುನಾವಣೆಯಿಂದ ಬೀದಿಗೆ ಬಂದಿದೆ. ಕಳೆದೆರೆಡು ದಶಕದಿಂದ ಕರಾವಳಿಯ ಅವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಬಿಜೆಪಿಯ ತೆರೆಮರೆಯ ಪ್ರಶ್ನಾತೀತ ತಂತ್ರಗಾರನಾಗಿದ್ದ ಕಲ್ಲಡ್ಕ ಪ್ರಭಾಕರ ಭಟ್ಟರು ಈಗ ಸಂಘ ಪರಿವಾರಕ್ಕೇ ಬೇಡವಾಗಿದ್ದಾರಾ ಎಂಬ ಸಂಶಯ ಕೇಸರಿ ಪಡೆಯ ಪ್ರಚಾರ ವೈಖರಿ ನೋಡಿದವರನ್ನು ಕಾಡಲು ಶುರು ಮಾಡಿದೆ. ಕರಾವಳಿಯ ಮೂರು ಜಿಲ್ಲೆಗಳ ಬಿಜೆಪಿ ಸಂಸದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಿಂದ ಹಿಡಿದು ಪ್ರಚಾರದ ಪ್ರತಿ ಹಂತದಲ್ಲೂ ಭಟ್ಟರನ್ನು ಬದಿಗಿಡಲಾಗಿತ್ತು. ಮೋದಿ ಮಂಗಳೂರಿಗೆ ಬಂದಾಗಲೂ ಭಟ್ಟರಿಗೆ ಯಾವ ಮಾನ-ಮರ್ಯಾದೆಯೂ ಇರಲಿಲ್ಲ.

ಅದೊಂದು ಕಾಲವಿತ್ತು. ಕರಾವಳಿ ಬಿಜೆಪಿಯ ಗ್ರಾಮ ಪಂಚಾಯ್ತಿ ಕ್ಯಾಂಡಿಡೇಟ್‍ನಿಂದ ಲೋಕಸಭೆ ಹುರಿಯಾಳಿನ ಆಯ್ಕೆ ಕಲ್ಲಡ್ಕ ಭಟ್ಟರ ಇಷ್ಟಾನಿಷ್ಟದಂತೆಯೇ ನಡೆಯುತ್ತಿತ್ತು. ಜೊತೆಗೆ ಉಡುಪಿಯ ನಾಜೂಕಯ್ಯ ವೇದವ್ಯಾಸ ಆಚಾರ್ಯ ಮತ್ತು ಕುಂದಾಪುರದ ವಿಪ್ರ ಭೀಷ್ಮ ಎ.ಜಿ.ಕೊಡ್ಗಿ ಇರುತ್ತಿದ್ದರು. ಯಡ್ಡಿ ಸಿಎಂ ಆಗಿದ್ದಾಗ ಆತನ ಸರ್ಕಾರದ ಅಂಕಿ-ಸಂಖ್ಯೆಯ ಮೆದುಳಾಗಿದ್ದ ಆಚಾರ್ಯ ಮಂತ್ರಿಯಾಗಿರುವಾಗಲೇ ಹಠಾತ್ ನಿಧನರಾದರು; ಕುಂದಾಪುರದ ಕೊಡ್ಗಿ, ಸ್ಥಳೀಯ ಶೂದ್ರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯನ್ನು ಪಳಗಿಸಲಾಗದ ಹತಾಶೆಯಿಂದ ರಾಜಕಾರಣದಿಂದ ದೂರಾದರು. ಆಗ ಕಲ್ಲಡ್ಕ ಭಟ್ಟರು ಬಿಜೆಪಿಯ ಏಕಮೇವಾದ್ವಿತೀಯ ನಾಯಕನಾಗಿ ಹೋದರು! ಯಾವ ಮಟ್ಟಿಗೆಂದರೆ ಪುತ್ತೂರಿನ ಜನಸಂಘ ಕಾಲದ ಶಾಸಕನೂ ತನ್ನ ಖಾಸಾ ಭಾಮೈದುನನೂ ಆದ ರಾಮಭಟ್ಟರನ್ನೇ ಮೂಲೆಗೆ ಸರಿಸಿ ಅಟ್ಟಹಾಸದಿಂದ ಹಾರಾಡತೊಡಗಿದರು.

ಇವತ್ತು ಕರಾವಳಿ, ಕೋಮುವಾದದ ರಣರಂಗವಾಗಿ ಭೀತಿಯ ಓಟ್ ಬ್ಯಾಂಕ್ ರಾಜಕಾರಣ ಹದವಾಗಿದ್ದರೆ, ಅದು ಕಲ್ಲಡ್ಕರ ಕೊಡುಗೆ! ಹಾಗಾಗಿ ಭಟ್ಟರು ಹೇಳಿದವರಿಗೆ ಪರಿವಾರ ಎಮ್ಮೆಲ್ಲೆ, ಎಂಪಿ, ಜಿಪಂ, ತಾಪಂ ಮೆಂಬರಿಕೆ ಟಿಕೆಟ್ ಕೊಡುತ್ತಿತ್ತು. ಆರ್‍ಎಸ್‍ಎಸ್‍ನಲ್ಲಿ ಭಟ್ಟರ ಮಾತೇ ಕರಾವಳಿ ರಾಜಜಕಾರಣದ ಮಟ್ಟಿಗೆ ಅಂತಿಮವಾಣಿಯಾಗಿತ್ತು. ಬಿಜೆಪಿಯ ಸಂಸದ, ಶಾಸಕರಿಗೆಲ್ಲಾ ಭಟ್ಟರೆಂದರೆ ಒಂಥರಾ ಅವ್ಯಕ್ತ ಭಯ-ಭಕ್ತಿ. ಸಾರ್ವಜನಿಕವಾಗೇ ಭಟ್ಟರ ಕಾಲಿಗೆ ಡೈ ಹೊಡೆಯದ ಸಂಸದ-ಶಾಸಕ ಬಿಜೆಪಿಯಲ್ಲಿರಲು ಸಾಧ್ಯವೇ ಇಲ್ಲವೆಂಬಂಥ ಪರಿಸ್ಥಿತಿ ನಿರ್ಮಾಣ ಆಗಿತ್ತು!

ಈ ‘ದೊರೆತನ’ವನ್ನು ಭಟ್ಟರು ಸ್ವಾರ್ಥ ಸಾಧನೆಗೆ, ಆರ್ಥಿಕ ಉನ್ನತಿಗೆ ವ್ಯವಸ್ಥಿತವಾಗಿ ಬಳಸಿಕೊಳ್ಳತೊಡಗಿದರು. ತನ್ನ ಶಿಕ್ಷಣ ಸಂಸ್ಥೆಗೆ ‘ದೇಣಿಗೆ’ ಕೊಡದ ಶಾಸಕರಿಗೆ ಕಿರುಕುಳ ಕೊಡಲು ಶುರು ಮಾಡಿದರು. ಪುತ್ತೂರಿನ ಬಿಜೆಪಿ ಶಾಸಕಿ ಶಕುಂತಲಾ ಶೆಟ್ಟಿ ಗುರುಕಾಣಿಕೆ ಕೊಡಲಾಗದೆ ‘ಕಾಫಿರ್’ ಎನಿಸಿಕೊಂಡು ಕಾಂಗ್ರೆಸ್ ಪಾಲಾಗಬೇಕಾಗಿ ಬಂತು. ಭಟ್ಟರ ವಿರುದ್ಧ ವಯೋವೃದ್ಧ ರಾಮಭಟ್ಟರು ಬಂಡಾಯವೆದ್ದರೂ ಪ್ರಯೋಜನ ಆಗಲಿಲ್ಲ. ಹಲ್ಮುಖಿ ಸದಾನಂದ ಗೌಡ ಅಂಜುತ್ತ-ಅಳುಕುತ್ತ ಭಟ್ಟರ ವಿರುದ್ಧ ಒಂದೊಂದು ಪದ ಪಟಾಕಿ ಸಿಡಿಸಿದ್ದರು. ಭಟ್ಟರ ಕೆಂಗಣ್ಣಿಗೆ ತುತ್ತಾದ ಈ ಅರೆಭಾಷೆ ಗೌಡರಿಗೆ ಮತ್ತೆ ದಕ್ಷಿಣ ಕನ್ನಡದಿಂದ ಎಂಪಿಯಾಗುವ ಧೈರ್ಯ ಬರಲಿಲ್ಲ. ತನ್ನ ಬಾಲಕ್ಕೆ ಬೆಂಕಿ ಇಡುವ ಭಯದಿಂದ ಗೌಡ ಪಕ್ಕದ ಉಡುಪಿ-ಚಿಕ್ಕಮಗಳೂರಿಗೆ ಪಲಾಯನ ಮಾಡಬೇಕಾಗಿ ಬಂತು. ಭಟ್ಟರಿಗೆ ಕಪ್ಪ ಒಪ್ಪಿಸಿ ಹೈರಾಣಾದ ದೊಡ್ಡ ಪಟ್ಟಿಯೇ ಬಿಜೆಪಿಯಲ್ಲಿದೆ.

ಕುಂದಾಪುರದ ಐ.ಎಂ.ಜಯರಾಮ ಶೆಟ್ಟಿ ಕಲ್ಲಡ್ಕ ಭಟ್ಟಗೆ ಕಾಸು ಕೊಟ್ಟೇ ಎಂಪಿ ಟಿಕೆಟ್ ಪಡೆದಿದ್ದರು. ಕಳಪೆ ರಸಗೊಬ್ಬರ, ಬೀಜ ಉದ್ಯಮಿಯಾಗಿದ್ದ ಶೆಟ್ಟಿಯ ಜುಟ್ಟು ಹಿಡಿದು ಕುಣಿಸುತ್ತಿದ್ದರು. ಭಟ್ಟ ಮತ್ತು ಆಚಾರ್ಯರಿಗೆ ಕಾಸು ಕೊಡಲಾಗದಿದ್ದಾಗ ಶೆಟ್ಟಿ ಬಿಜೆಪಿಯಲ್ಲಿ ಉಳಿಯಲಾಗಲಿಲ್ಲ.

ಸುಳ್ಯದ ದಲಿತ ಚೆಡ್ಡಿ ಶಾಸಕ ಅಂಗಾರನಂತೂ ಭಟ್ಟರ ಕೇಸರಿ ಸಂಘ-ಸಂಸ್ಥೆಗಳಿಗೆ ದೊಡ್ಡ ಧನಾಧಾರವೆಂಬ ಪುಕಾರುಗಳಿವೆ. ಈ ಪಾಪದ ದಲಿತ ಸುಳ್ಯಕ್ಕೆ ನಯಾಪೈಸೆಯ ಒಳಿತು ಮಾಡದಿದ್ದರೂ ತಾನು ಬಲಿತು ಗುರು ಶಿಷ್ಯರನ್ನು ಸಂಪ್ರೀತಗೊಳಿಸುತ್ತಾ ಬಂದಿದ್ದಾನೆ. ಶಿಪ್ಪಿಂಗ್ ಉದ್ಯಮಿ ನಾಗರಾಜ ಶೆಟ್ಟಿ ಬಂಟ್ವಾಳದ ಶಾಸಕನಾಗಿದ್ದು ಭಟ್ಟರ ಕೃಪೆಯಿಂದ. ಆದರೆ ಭಟ್ಟರನ್ನು ನಿರಂತರವಾಗಿ ‘ಖುಷಿ’ ಪಡಿಸಲಾಗದೇ ಆತ ಭೀತಿಯಿಂದ ಹೊರಹೋಗಬೇಕಾಗಿ ಬಂತು! ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿ ಭಟ್ರಿಗೆ ಸೆಡ್ಡುಹೊಡೆದ ತಪ್ಪಿಗೆ ಮಂತ್ರಿಗಿರಿಯಿಂದ ‘ವಂಚಿತ’ನಾಗಬೇಕಾಯ್ತು.

ಭಟ್ಟರ ಗುರುದಕ್ಷಿಣೆ ದಾಹಕ್ಕೆ ಕಳೆದೊಂದು ದಶಕದಿಂದ ಬಿಜೆಪಿ-ಸಂಘಪರಿವಾರ ಎರಡೂ ತತ್ತರಿಸಿ ಹೋದವು. ಈ ಬಗ್ಗೆ ಸಂಘ ಪರಿವಾರದಲ್ಲಿ ದೊಡ್ಡ ಚರ್ಚೆ ಎಬ್ಬಿಸಿತು! ಸ್ವಾಮಿ ರಾಘುನ ಪರವಹಿಸಿ ಭಟ್ಟರು ವಕಾಲತ್ತು ಶುರುಹಚ್ಚಿಕೊಂಡಿದ್ದು ಆರ್‍ಎಸ್‍ಎಸ್‍ನಲ್ಲಿ ಅಸಮಾಧಾನ ಮೂಡಿಸಿತ್ತು. ಆರ್‍ಎಸ್‍ಎಸ್‍ನ ಅತ್ಯುನ್ನತ ಹೈಕಮಾಂಡಿನ ಮಾಂಡಲೀಕನಂತಿರುವ ದತ್ತಾತ್ರೇಯ ಹೊಸಬಾಳೆ ಬಳಗ ರಾಘುನ ರಂಗೀಲಾ ಚಟುವಟಿಕೆ ವಿರುದ್ಧ ಬಂಡೆದ್ದು ಆತನ ಪೀಠೋಚ್ಛಾಟನೆಗೆ ಅಣಿಯಾಗಿದ್ದರು. ಆ ಸಂದರ್ಭದಲ್ಲಿ ಕಲ್ಲಡ್ಕ ಭಟ್ರು ಮಾತ್ರ ಹವ್ಯಕ ಕುಲಕಂಠಕ ರಾಘುನ ಬಚಾಯಿಸಲು ಹವಣಿಸಿದ್ದರು. ಭಟ್ಟರ ಧನ ದೌರ್ಬಲ್ಯ ಬಲ್ಲ ರಾಘು ಮಾನ್ಯ ಆರ್‍ಎಸ್‍ಎಸ್‍ನಲ್ಲೂ ಒಡಕು ಮೂಡುವಂತೆ ಕಾಂಚಾಣ ಕಾರಸ್ಥಾನ ನಡೆಸಿದ್ದಾನೆಂದು ಹವ್ಯಕ ವಲಯವೇ ಪಿಸುಗುಡುತ್ತಿದೆ.

ಭಟ್ಟರ ದುಡ್ಡಿನ ದಾಹ ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಮುಜುಗರ ಮೂಡಿಸಿತ್ತು. ಭಟ್ಟರ ವ್ಯವಹಾರ ಹೀಗೆ ಮುಂದುವರೆದರೆ ಆರ್‍ಎಸ್‍ಎಸ್-ಬಿಜೆಪಿಗೆ ಕೆಟ್ಟ ಹೆಸರು ಬರುತ್ತದೆಂದು ಆತಂಕ ಶುರುವಾಗಿತ್ತು.

ಭಟ್ಟರನ್ನು ಬದಿಗೆ ಸರಿಸಲು ಸ್ಕೆಚ್ ರೆಡಿಯಾಗತೊಡಗಿದ್ದೇ ಆಗ. ಹಾಗೆ ನೋಡಿದರೆ ಭಟ್ಟರ ಬಗ್ಗೆ ಸಂಘ ಪರಿವಾರದಲ್ಲಿ ವಿರೋಧ ಉದ್ಭವವಾದದ್ದು 2014 ಲೋಕಸಭಾ ಚುನಾವಣೆ ಹೊತ್ತಲ್ಲೇ. ತನಗೆ ವಿಧೇಯತೆ ತೋರದ ಮಾಜಿ ಶಿಷ್ಯ ನಳಿನ್‍ಕುಮಾರ್ ಕಟೀಲ್‍ಗೆ ಮತ್ತೆ ಎಂಪಿ ಟಿಕೆಟ್ ಕೊಡುವ ಮನಸ್ಸು ಭಟ್ಟರಿಗೆ ಇರಲಿಲ್ಲ. ಹಾಗಾಗಿ ಆತನ ಅನೈತಿಕ ಪುರಾಣವೊಂದು ಬೀದಿಗೆ ಬರುವಂತೆ ತನ್ನ ಹಿಂಬಾಲಕರ ಮೂಲಕ ಭಟ್ಟರು ನೋಡಿಕೊಂಡಿದ್ದರು.

ಭಟ್ಟರ ಈ ಕಿತಾಪತಿಯನ್ನು ಆರ್‍ಎಸ್‍ಎಸ್‍ನ ದೊಡ್ಡವರಿಗೆ ಮನಮುಟ್ಟುವಂತೆ ವಿವರಿಸಿದ್ದ ಕಟೀಲ್ ಗುರು ವಿರುದ್ಧ ಸರಿಯಾಗೇ ಪಿಟ್ಟಿಂಗ್ ಇಟ್ಟು ಮತ್ತೆ ಟಿಕೆಟ್ ತಂದಿದ್ದರು. ಈ ಅಸಮಾಧಾನ ಹೆಚ್ಚಾಗುತ್ತಾ ಹೋಯಿತು. ಭಟ್ಟರ ಹಣಿಯಲು ಪ್ಲಾನ್ ಹಾಕಿಕೊಂಡಿದ್ದ ಪರಿವಾರಿಗಳು ಕಟೀಲ್‍ನ ಛೂಬಿಟ್ಟರು. ಆತ ಹೇಳಿದವರಿಗೆ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಟಿಕೆಟ್ ಕೊಡಲಾಯಿತು. ಭಟ್ಟರ ಮಾತು ನಡೆಯಲಿಲ್ಲ. ಮುಗಿದ ಲೋಕಸಭಾ ಚುನಾವಣೆಯಲ್ಲಿ ಮತ್ತೆ ನಳಿನ್‍ಗೆ ಟಿಕೆಟ್ ತಪ್ಪಿಸಲು ಭಟ್ಟರು ತಿಪ್ಪರಲಾಗ ಹಾಕಿದರು. ಭಟ್ಟರ ಹಣಿಯಲು ಇದೇ ಸರಿಯಾದ ಸಮಯ ಎಂದೆಣಿಸಿದ್ದ ಕೇಸರಿ ಚಿಂತಕರ ತಂಡ ಕಟೀಲ್‍ನನ್ನೇ ಅಭ್ಯರ್ಥಿ ಮಾಡಿದರು. ಕೆರಳಿದ ಕಲ್ಲಡ್ಕ ಭಟ್ಟರು ಬಿಜೆಪಿ ಪ್ರಚಾರಕ್ಕೆ ಹೋಗಲಿಲ್ಲ.
ಕಟೀಲ್ ವಿರುದ್ಧ ರಹಸ್ಯ ಕಾರ್ಯಾಚರಣೆ ನಡೆಸಿದರು. ಮೋದಿ ಮೇಲೆ ಪಕ್ಷ ಅವಲಂಬಿಸಿರುವುದು ಅಪಾಯಕಾರಿ ಎಂದು ಸ್ಟೇಟ್‍ಮೆಂಟ್ ಒಗಾಯಿಸಿದರು. ಹಿಂದುತ್ವದ ಪ್ರಶ್ನೆ ಬಂದಾಗ ನಳಿನ್‍ಗಿಂತ ಕಾಂಗ್ರೆಸ್ ಹುರಿಯಾಳು ಮಿಥುನ್ ರೈನೇ ಬೆಟರ್ ಎಂದು ಹೇಳಿದರು. ಈ ವೀಡಿಯೊ ವೈರಲ್ ಆಯಿತು. ನಳಿನ್‍ಗೆ ದೊಡ್ಡ ಹೊಡೆತ ಕೊಟ್ಟಿತು. ಭಟ್ಟರಿಗೆ ಬುದ್ಧಿ ಕಲಿಸಬೇಕೆಂಬ ಹಠದಿಂದ ಕೇಸರಿಪಡೆಯೂ ವ್ಯವಸ್ಥಿತವಾಗಿ ಕೆಲಸ ಮಾಡಿದೆ. ಆದರೆ ನಳಿನ್ ದಂಡಪಿಂಡ ಸಂಸದನೆಂಬ ಅಸಮಾಧಾನ ಮತ್ತು ಭಟ್ಟರ ಅಸಹಕಾರ ಕಾಂಗ್ರೆಸ್‍ಗೆ ವರವಾಗಿದೆ. ಹೀಗಾಗಿ ಕತ್ತುಕತ್ತಿನ ಹೋರಾಟ ನಡೆದಿದೆ. ಯಾರು ಬೇಕಿದ್ದರೂ ಗೆಲ್ಲಬಹುದೆಂಬ ಪರಿಸ್ಥಿತಿ ಇರುವುದರಿಂದ ಬೆಟ್ಟಿಂಗ್ ಸಹ ನಡೆಯುತ್ತಿಲ್ಲ.

ಒಂದಂತೂ ಖರೆ. ಈ ಪಾರ್ಲಿಮೆಂಟ್ ಎಲೆಕ್ಷನ್ ಭಟ್ಟರನ್ನು ಬಿಜೆಪಿ-ಆರ್‍ಎಸ್‍ಎಸ್‍ನಲ್ಲಿ ಮೂಲೆಗುಂಪು ಮಾಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸದ್ಯದ ಪರಿಸ್ಥಿತಿಯಲ್ಲಿ ಇದು ಒಂದು ಒಳ್ಳೆಯ ಉದಾಹರಣೆ.
    ಪಾಪದ ಕೊಡ ತುಂಬಿದ ನಂತರ ಯಾರೂ ಉಳಿಯಬಾರದು

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...