Homeಮುಖಪುಟಭಾರತದ ವಿವಿಧ ಭಾಷೆಗಳ ಇತ್ತೀಚಿನ ಸಿನಿಮಾಗಳಲ್ಲಿ ದಲಿತ ಕಥನಗಳು; ಭಾಗ-1

ಭಾರತದ ವಿವಿಧ ಭಾಷೆಗಳ ಇತ್ತೀಚಿನ ಸಿನಿಮಾಗಳಲ್ಲಿ ದಲಿತ ಕಥನಗಳು; ಭಾಗ-1

- Advertisement -
- Advertisement -

ಈ ದೇಶದ ಸಿನಿಮಾ ಉದ್ಯಮಕ್ಕೆ ನೂರು ವರ್ಷದ ಇತಿಹಾಸವಿದೆ. ಈ ನೂರು ವರ್ಷಗಳಲ್ಲಿ ನಮ್ಮ ಸಿನಿಮಾಗಳು ಎಷ್ಟು ದೂರ ಕ್ರಮಿಸಿವೆ, ಆಯಾ ಕಾಲಘಟ್ಟದ ತಲ್ಲಣಗಳಿಗೆ ಎಷ್ಟು ಸ್ಪಂದಿಸಿವೆ, ನಮ್ಮ ಸುತ್ತಲಿನ ಸಮಾಜವನ್ನು ವಸ್ತುನಿಷ್ಠವಾಗಿ ಬಿಂಬಿಸಿದ್ದಾವೆಯೇ ಎಂದು ಒಮ್ಮೆ ಹಿಂತಿರುಗಿ ನೋಡಿದರೆ ನಿರಾಸೆ ಕಟ್ಟಿಟ್ಟ ಬುತ್ತಿ. ಈ ದೇಶದ ಬಹುಪಾಲು ಸಿನಿಮಾಗಳು ಅಗ್ಗದ ಮನರಂಜನೆಯ ಸರಕು ಎಂಬ ಅಪವಾದವನ್ನ ಮೀರಿ ಬೆಳೆದದ್ದು ಅತಿ ಕಡಿಮೆ ಎನ್ನಬಹುದು. ಪ್ರೇಕ್ಷಕನಿಗೆ ಯೋಗ್ಯವಾದದ್ದನ್ನು ನೀಡಿ ಅವನ ಪ್ರಜ್ಞೆಯನ್ನ ಬೆಳೆಸುವ ಬದಲು ತಮ್ಮ ಸಿನಿಮಾಗಳ ಮುಖಾಂತರ ತಲೆತಲೆಮಾರುಗಳ ಆಲೋಚನೆಯನ್ನೆ ತುಂಬಿ ಸಮಾಜವನ್ನು ಹಳ್ಳ ಹಿಡಿಸಿ ಅವನತಿಗೆ ನೂಕುವ ಪರಂಪರೆಯನ್ನು ಮುಂದುವರೆಸಿದ ಹೆಗ್ಗಳಿಕೆಯೇ ಭಾರತದ ಸಿನಿಮಾ ರಂಗದ್ದು. ಇದಕ್ಕೆ ಅಪವಾದ ಇಲ್ಲ ಅಂತಲ್ಲ. ಆದರೆ ಅವು ಬೆರಳೆಣಿಕೆಯಷ್ಟು ಮಾತ್ರ. ಅವುಗಳಿಗೆ ಇರುವ ಸೀಮಿತ ಅವಕಾಶದ ಕಾರಣವಾಗಿಯೋ ಅಥವಾ ಬೌದ್ಧಿಕ ಅಹಂಕಾರವೋ ಅವು ತಮ್ಮದೇ ಪ್ರತ್ಯೇಕ ದಾರಿಯಲ್ಲಿ ಚಲಿಸುತ್ತಿದ್ದಾವೆ.
ಅಂದರೆ ಅವು ಪ್ರೇಕ್ಷಕರ ಮಧ್ಯೆ ಜನಪ್ರಿಯವಾಗಿ ಮನೆಮಾತಾಗಿದ್ದೂ ಕಡಿಮೆ ಎಂಬರ್ಥದಲ್ಲಿ.

ಕಳೆದ ಎಂಟು ವರ್ಷಗಳಿಂದೀಚೆಗೆ ಭಾರತೀಯ ಸಿನಿಮಾ ಕ್ಷೇತ್ರಕ್ಕೆ ಕೊಂಚ ವಾಸ್ತವದ ಹೊಸ ಗಾಳಿ ಬೀಸಿದೆ. ಈ ಗಾಳಿ ಮುಂದಿನ ದಿನಗಳಲ್ಲಿ ವಿಶಾಲವಾಗಿ ಪಸರಿಸುತ್ತದೆ ಎಂಬ ಆಶಾವಾದ ದಿನೆ ದಿನೆ ಹೆಚ್ಚಾಗುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ತಮಿಳು, ಮಲೆಯಾಳಂ, ಮರಾಠಿ ಮತ್ತು ಹಿಂದಿಯ ಭಾಷೆಗಳ ಕೆಲವು ಸಿನಿಮಾಗಳನ್ನು ಗಮನಿಸಿದರೆ ಈ ಹೊಸ ಗಾಳಿಯ ಬೆಳವಣಿಗೆಯನ್ನು ಬಹಳ ಸ್ಪಷ್ಟವಾಗಿ ಗುರುತಿಸಬಹುದು.

ಮರಾಠಿಯಲ್ಲಿ ನಾಗರಾಜ್ ಮಂಜುಳೆ ನಿರ್ದೇಶನದ ’ಫಂಡ್ರಿ’ ಮತ್ತು ’ಸೈರಾಟ್’, ಮಲೆಯಾಳಂನ ವಿಧು ವಿನ್ಸೆಂಟ್‌ರ ’ಮ್ಯಾನ್ ಹೋಲ್’, ರಾಜೀವ್ ರವಿಯವರ ’ಕಮ್ಮಾಟಿ ಪಾಡಂ’, ತಮಿಳಿನಲ್ಲಿ ಪ.ರಂಜಿತ್‌ರ ’ಮದ್ರಾಸ್’, ’ಕಬಾಲಿ’, ’ಕಾಲ’ ಮತ್ತು ’ಸರ್‌ಪಟ್ಟ ಪರಂಬರೈ’, ಮಾರಿ ಸೆಲ್ವರಾಜ್‌ರ ’ಪರಿಯೇರುಂ ಪೆರುಮಾಳ್’ ಮತ್ತು ’ಕರ್ಣನ್’ ಮತ್ತು ’ವೆಟ್ರಿ ಮಾರನ್’ರ ’ಅಸುರನ್’, ಹಿಂದಿಯಲ್ಲಿ ನೀರಜ್ ಗಾಯ್ವಾನ್‌ರ ’ಮಸಾನ್’, ಅನುಭವ ಸಿನ್ಹಾರ ’ಆರ್ಟಿಕಲ್-15’ – ಹೀಗೆ ಇನ್ನೂ ಇರಬಹುದು, ಆದರೆ ನಾನು ಗಮನಿಸಿದ ಇಷ್ಟು ಸಿನಿಮಾಗಳು ಭಾರತದ ವಾಸ್ತವಗಳನ್ನು ತಮ್ಮ ನಿರೂಪಣೆಯ ಮೂಲಕ ಹೇಳಲು ಪ್ರಯತ್ನಿಸಿವೆ. ಇಷ್ಟು ವರ್ಷ ಬೆಳ್ಳಿತೆರಗೆ ಅಂಟಿಕೊಂಡಿದ್ದ ಪೊರೆಯನ್ನು ಕಳಚಿ ಆ ಮೂಲಕ ಪ್ರಜ್ಞಾವಂತ ಪ್ರೇಕ್ಷಕರನ್ನ ಸೃಷ್ಟಿ ಮಾಡುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ.

ಈ ಮೇಲೆ ಹೆಸರಿಸಿದ ಎಲ್ಲಾ ಸಿನಿಮಾಗಳನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ಆಳೆಯುವುದು ಸಾಧ್ಯವಿಲ್ಲವಾದರೂ, ಭಾರತೀಯ ಸಿನಿಮಾ ದಾರಿಯಲ್ಲಿ ಇವುಗಳಿಗೆ ವಿಶೇಷವಾದ ಸ್ಥಾನವಿದೆ. ನಮ್ಮಲ್ಲಿ ಸಹಜವಾಗಿ ಕಮರ್ಷಿಯಲ್, ಬ್ರಿಡ್ಜ್, ಕಲಾತ್ಮಕ ಮುಂತಾದ ಹೆಸರುಗಳಲ್ಲಿ ಸಿನಿಮಾಗಳನ್ನ ವಿಂಗಡಿಸಿ ನೋಡುವುದಿದೆ. ಆದರೆ ಮೇಲೆನ ಈ ಸಿನಿಮಾಗಳನ್ನ ಅವುಗಳ ಕಟ್ಟುವಿಕೆಯಲ್ಲಿ ನಿರ್ದೇಶಕರ ಮೂಲ ಉದ್ದೇಶದ ಆಧಾರದ ಮೇಲೆ ’ಜನಪ್ರಿಯವಲ್ಲದ – ಜನಪ್ರಿಯ ಮಾದರಿ’ ಎಂದು ವಿಭಾಗಿಸಿಕೊಂಡು ಇವುಗಳ ಸಣ್ಣ ಪರಿಚಯ ಮಾಡಿಕೊಡಲು ಬಯಸುತ್ತೇನೆ.

ಜನಪ್ರಿಯವಲ್ಲದ ಶೈಲಿ

ಮಂಜುಳೆಯವರ ’ಫಂಡ್ರಿ’, ವಿಧು ವಿನ್ಸೆಂಟ್ರ ’ಮ್ಯಾನ್ ಹೋಲ್’ ಮತ್ತು ನೀರಜ್ ಗಾಯ್ವಾನ್ರ ’ಮಸಾನ್’ ಈ ಮೂರು ಸಿನಿಮಾಗಳಲ್ಲಿ ನಿರ್ದೇಶಕರು ತಮ್ಮ ಅಲೋಚನೆಯನ್ನ ಯಾವ ಕ್ರಮದಲ್ಲಿ ಯಾವ ದೃಶ್ಯಕಟ್ಟುಗಳ ಮುಖಾಂತರ ಮತ್ತು ಯಾವ ತಾರಾಗಣದಲ್ಲಿ ಹೇಳಿದರೆ ಹೆಚ್ಚು ಪ್ರೇಕ್ಷಕನಿಗೆ ಬೇಗ ತಲುಪುತ್ತದೆ ಎಂಬ ಸಂಗತಿಗಿಂತ ಬಹುಶಃ ತಾನು ಸಿನಿಮಾದಲ್ಲಿ ಹೇಳಬೇಕಂದಿರುವ ಐಡಿಯಾ ಅಥವಾ ಅಲೋಚನಾ ಕ್ರಮವನ್ನ ಸಾಧ್ಯವಾದಷ್ಟು ಹೆಚ್ಚು ಪರಿಣಾಮಕಾರಿಯಾಗಿ ದೃಶ್ಯ ಕಟ್ಟುಗಳ ಮುಖಾಂತರ ಕಟ್ಟಬೇಕು ಎಂಬುದಷ್ಟೆ ಮೂಲ ಉದ್ದೇಶವಾಗಿದೆ ಅನಿಸುತ್ತೆ.

ನಾಗರಾಜ್ ಮಂಜುಳೆಯ ’ಫಂಡ್ರಿ’ ಭಾರತೀಯ ಸಿನಿಮಾ ಚರಿತ್ರೆಯಲ್ಲಿ ಒಂದು ಮೈಲಿಗಲ್ಲು. ಇವತ್ತು ಅದನ್ನ ಮೈಲಿಗಲ್ಲು ಎಂದು ಗುರುತಿಸದೇ ಇರಬಹುದು. ಆದರೆ ಮುಂದಿನ ದಿನಗಳಲ್ಲಿ ಆ ರೀತಿ ಗುರುತಿಸುವ ಸಂದರ್ಭ ಬಂದೇ ಬರುತ್ತೆ. ಜಾತಿ ದೌರ್ಜನ್ಯದ ಬಗ್ಗೆ ಯಾವುದೇ ಧಾವಂತವಿಲ್ಲದೆ ತಣ್ಣಗೆ ಎಳೆ ಎಳೆಯಾಗಿ ಅಷ್ಟೇ ಗಾಢವಾಗಿ ತೆರೆ ಮೇಲೆ ಈ ಸಿನಿಮಾವನ್ನು ತಂದಿದ್ದಾರೆ ಮಂಜುಳೆ. ’ಜಬ್ಯಾ’ ಪಾತ್ರದ ಕನಸು, ಪ್ರೀತಿ, ಜಾತಿ ಕಾರಣಕ್ಕೆ
ಅವನು ಅನುಭವಿಸುವ ಅವಮಾನಗಳು – ಇವುಗಳಲ್ಲಿ ಕೆಲವನ್ನು ನೇರವಾಗಿ ಕೆಲವನ್ನು ಪ್ರತಿಮೆಗಳ ಮುಖಾಂತರ ಮಂಜುಳೆ ಕಟ್ಟುತ್ತಾ ಹೋಗುತ್ತಾರೆ. ಜಬ್ಯಾ ಕಾಣುವ ’ಕಪ್ಪು ಗುಬ್ಬಚ್ಚಿ’ ಹಕ್ಕಿ ಕನಸೋ ವಾಸ್ತವೋ! ಆದರೆ ಆ ರೀತಿಯ ಪ್ರತಿಮೆ ಬಹಳ ಅದ್ಭುತವಾದೆ. ಸಿನಿಮಾದ ಕೊನೆಯ ಅರ್ಧಗಂಟೆಯಲ್ಲಿ ಮೂಡಿರುವ ಜಾತಿ ಕ್ರೌರ್ಯದ ಚಿತ್ರಣವಂತೂ ಭಾರತದ ಸಿನಿಮಾ ನಿರೂಪಣೆಯಲ್ಲಿ ’ಅಜರಾಮರ’. ಅದರಲ್ಲೂ ಕಡೆಯ ದೃಶ್ಯ ಜಬ್ಯಾನ ಪ್ರತಿರೋಧ ಮುಂದಿನ ಸಿನಿಮಾ ನಿರ್ದೇಶಕರಿಗೆ ’ಮುನ್ನುಡಿ’.

ವಿಧು ವಿನ್ಸೆಂಟ್ ಅವರ ಮಲೆಯಾಳಂ ಭಾಷೆಯ ’ಮ್ಯಾನ್ ಹೋಲ್, ’ಫಂಡ್ರಿ’ಯಷ್ಟೇ ಪರಿಣಾಮಕಾರಿಯಾದ ಸಿನಿಮಾ. ವಿಚಿತ್ರ ಅನಿಸೋದು ಇದು ಕೇರಳದ ಹೊರಗೆ ಹೆಚ್ಚು ಪ್ರದರ್ಶನವಾಗಲಿ ಚರ್ಚೆಯಾಗಲಿ ಆಗಲಿಲ್ಲ. ಇದು 2016ರ ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFK) ಮುಖ್ಯ ಸ್ಪರ್ಧೆಗೆ ಆಯ್ಕೆಯಾಗಿತ್ತು. ವಿಧು ವಿನ್ಸೆಂಟ್ ಈ ರೀತಿ ಆಯ್ಕೆಯಾದ ಮೊದಲ ಮಹಿಳಾ ನಿರ್ದೇಶಕಿ. ಕೇರಳ ರಾಜ್ಯ ಪ್ರಶಸ್ತಿ ಕೂಡ ಈ ಸಿನಿಮಾಗೆ ಲಭಿಸಿದೆ. ಚಿತ್ರದ ಪ್ರಧಾನ ಪಾತ್ರ ’ಶಾಲಿನಿ’ ಸಾಮಾಜಿಕ ಬಹಿಷ್ಕಾರದ ಭಯದಿಂದ ತನ್ನ ಜಾತಿ ಹಿನ್ನೆಲೆಯನ್ನು ಬಚ್ಚಿಟ್ಟುಕೊಂಡಿರುತ್ತಾಳೆ. ತಂದೆ ಹ್ಯೂಮನ್ ಸ್ಕಾವೆಂಜರ್. ಮ್ಯಾನ್ ಹೋಲ್‌ನಲ್ಲಿ ಕೆಲಸ ಮಾಡುವಾಗಲೇ ಮರಣ ಹೊಂದುತ್ತಾನೆ. ಈ ಸುದ್ದಿಯಿಂದ ಶಾಲೆಯಲ್ಲಿ ಶಾಲಿನಿಯ ಜಾತಿ ಬಹಿರಂಗವಾಗುತ್ತೆ.

ಜಾತಿಕಾರಣವಾಗಿ ಶಾಲಿನಿ ಈಗಾಗಲೇ ಯಾರು ಸ್ನೇಹಿತರಾಗಿದ್ದರೋ ಅವರಿಂದಲೇ ನಿರಾಕರಿಸಲ್ಪಡುತ್ತಾಳೆ. ತಂದೆ ಮ್ಯಾನ್ ಹೋಲ್‌ನಲ್ಲಿ ಕೆಲಸ ಮಾಡುವ ಅನಿವಾರ್ಯತೆ, ಜಾತಿ ಕಾರಣವಾಗಿ ತಾನು ಅನುಭವಿಸಬೇಕಾದ ಅವಮಾನ ಮತ್ತು ತನ್ನ ಸಮುದಾಯ ಶಿಕ್ಷಣದಿಂದ ವಂಚಿತರಾಗಿ ಪ್ರತಿಭಟಿಸುವ ಸಣ್ಣ ಧೈರ್ಯವನ್ನು ಕಳೆದುಕೊಂಡಿರುವ ಸಂಗತಿಗಳು ಶಾಲಿನಿಯನ್ನು ಕಾನೂನು ಪದವಿ ಪಡೆಯಲು ಪ್ರೇರೇಪಿಸುತ್ತವೆ. ಮುಂದೆ ವಕೀಲೆಯಾಗಿ ಈ ರೀತಿ ದೌರ್ಜನ್ಯಕ್ಕೆ ಒಳಗಾದ ತನ್ನ ಸಮುದಾಯದವರ ಪರವಾಗಿ ಕಾನೂನು ಹೋರಾಟ ಪ್ರಾರಂಭಿಸುತ್ತಾಳೆ. ಅದಕ್ಕೂ ಸರಿಯಾದ ನ್ಯಾಯ ಸಿಗದಿದ್ದಾಗ, ಎಲ್ಲರನ್ನೂ ಸಂಘಟಿಸಿ ರಸ್ತೆಯಲ್ಲಿ ಪ್ರತಿಭಟನೆ ಮಾಡುವ ದೃಶ್ಯದೊಂದಿಗೆ ಸಿನಿಮಾ ಮುಗಿಯುತ್ತದೆ. ಇಲ್ಲಿ ಸಿನಿಮಾ ಕುರಿತಂತೆ ನನ್ನ ನಿರೂಪಣೆ ಬಹಳ ಸರಳವಾಗಿದೆ. ಆದರೆ, ವಿಧು ವಿನ್ಸೆಂಟ್ ಬಹಳ ಅದ್ಭುತವಾಗಿ ದೃಶ್ಯದಲ್ಲಿ ಹಿಡಿದಿಟ್ಟಿದ್ದಾರೆ. ಯಾವ ಮಾಗಿದ ದೃಶ್ಯ ಕಲಾಕಾರನಿಗೂ ಕಡಿಮೆಯೇನಿಲ್ಲ ವಿನ್ಸೆಂಟ್.

ನೀರಜ್ ಗಾಯ್ವಾನ್‌ರ ’ಮಸಾನ್’ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳ ಹೆಸರು ಮಾಡಿದ ಸಿನಿಮಾ. ಕಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದು ಮಾತ್ರವಲ್ಲ ಪ್ರತಿಷ್ಠಿತ ಎರಡು ಪ್ರಶಸ್ತಿಗಳನ್ನು ಪಡೆಯಿತು. ನ್ಯೂಯಾರ್ಕ್ ಫಿಲಂ ಫೆಸ್ಟಿವಲ್‌ನಲ್ಲಿ ಓಪನಿಂಗ್ ಸಿನಿಮಾವಾಗಿ ಪ್ರದರ್ಶನಗೊಂಡ ಹೆಗ್ಗಳಿಕೆ ’ಮಸಾನ್’ದು. ಈ ಸಿನಿಮಾದಲ್ಲಿ ಬರುವ ಎರಡು ಪ್ರಧಾನ ಪಾತ್ರಗಳು ಸಾಮಾಜಿಕವಾಗಿ ಬಹಳ ಅಂತರವಿರುವ ಎರಡು ಜಾತಿಗಳನ್ನು ಪ್ರತಿನಿಧಿಸುತ್ತಾರೆ. ದೇವಿಪಾತಕ್ ಪಾತ್ರ ಬ್ರಾಹ್ಮಣ ಸಮುದಾಯವನ್ನು ಮತ್ತು ದೀಪಕ್ ಕುಮಾರ್ ಪಾತ್ರ ದೊಮ್ ಎಂಬ ಕೆಳ ಜಾತಿಯನ್ನು ಪ್ರತಿನಿಧಿಸುತ್ತಾರೆ. ಕಥೆ ನಡೆಯುವ ಪರಿಸರ ವಾರಣಾಸಿ ನಗರದ ಗಂಗಾ ನದಿಯ ತಟದಲ್ಲಿರುವ ಸ್ಮಶಾನದ ಸುತ್ತಮುತ್ತ. ಈ ಎರಡು ಪಾತ್ರಗಳು, ತಾವು ದೈಹಿಕವಾಗಿ ಈಗಿರುವ ಪರಿಸರದಿಂದ ತಪ್ಪಿಸಿಕೊಳ್ಳಲು ಮತ್ತು ಮಾನಸಿಕವಾಗಿ ತಾವು ಪ್ರೀತಿಸಿದವರನ್ನು ಕಳೆದುಕೊಂಡ ದುಃಖದಿಂದ ಹೊರಬರಲು ಪ್ರಯತ್ನಿಸುತ್ತಾರೆ.

ಈ ಚಲನೆಯನ್ನ ಸಿನಿಮಾ ಪ್ರಸ್ತುತಪಡಿಸುತ್ತದೆ. ಆದರೆ, ಗಾಯ್ವಾನ್ ತಳ ಸಮುದಾಯದ ಪರಿಸ್ಥಿತಿಯನ್ನಷ್ಟೆ ಸಿನಿಮಾದಲ್ಲಿ ತರುತ್ತಾರೆ. ಆದರೆ ವಾಸ್ತವದಲ್ಲಿರುವ ದೌರ್ಜನ್ಯವನ್ನ ಎಲ್ಲೂ ನಿರೂಪಿಸುವುದಿಲ್ಲ. ಇನ್ನೂ ಮೇಲ್ಜಾತಿಯ ದೇವಿಪಾತಕ್ ಮೇಲೆ ವ್ಯವಸ್ಥೆ ನಡೆಸುವ ದೌರ್ಜನ್ಯವನ್ನ ಒತ್ತಿ ಹೇಳಲಾಗಿದೆ. ಆದರೆ ಕೆಳ ಜಾತಿಯ ದೀಪಕ್ ಪ್ರೀತಿಸುವ ಮೇಲ್ಜಾತಿ ಹುಡುಗಿ ’ನನ್ನ ಮನೆಯವರು ವಿರೋಧಿಸಿದವರು ಸರಿಯೇ ನಾನು ನಿನ್ನನ್ನು ಮದುವೆ ಆಗುತ್ತೇನೆ’ ಎನ್ನುತ್ತಾಳೆ ಆದರೆ, ಈ ಜಾತಿ ಸಂಘರ್ಷಕ್ಕೆ ಮುಂಚಿತವಾಗಯೇ ದೀಪಕ್ ಪ್ರೀತಿಸಿದ ಹುಡುಗಿ ಸಾಯುತ್ತಾಳೆ. ಗಾಯ್ವಾನ್ ತಾನು ಹೇಳಬೇಕಾದ ಕತೆ/ಸಂಗತಿಗಳನ್ನು ದೃಶ್ಯಗಳಲ್ಲಿ ಬಹಳ ಅದ್ಭುತವಾಗಿ ನರೇಟ್ ಮಾಡಿದ್ದಾರೆ.

ಜನಪ್ರಿಯ ಶೈಲಿ

ನಾಗರಾಜ್ ಮಂಜುಳೆಯ ’ಸೈರಾಟ್’, ರಾಜೀವ್ ರವಿಯ ರಾಜೀವ್ ರವಿಯವರ ’ಕಮ್ಮಾಟಿ ಪಾಡಂ’, ಪ.ರಂಜಿತ್ ರ ’ಮದ್ರಾಸ್’, ’ಕಬಾಲಿ’, ’ಕಾಲ’ ಮತ್ತು ’ಸರ್‌ಪಟ್ಟ ಪರಂಬರೈ’, ಮಾರಿ ಸೆಲ್ವರಾಜ್‌ರ ’ಪರಿಯೇರುಂ ಪೆರುಮಾಳ್’ ಮತ್ತು ’ಕರ್ಣನ್’ ಮತ್ತು ವೆಟ್ರಿ ಮಾರನ್‌ರ ’ಅಸುರನ್’ ಮತ್ತು ಅನುಭವ್ ಸಿನ್ಹಾ ಅವರ ’ಆರ್ಟಿಕಲ್-15’ ಸಿನಿಮಾಗಳ ಬಗ್ಗೆ ಸಂಕ್ಷಿಪ್ತವಾಗಿ ಮುಂದಿನ ಭಾಗದಲ್ಲಿ ಚರ್ಚಿಸಲಾಗುವುದು.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ.


ಇದನ್ನೂ ಓದಿ: ‘ಮೊದಲು ಆಕಾಶ.. ಈಗ ನಿಂತ ನೆಲವನ್ನೂ ಕಸಿಯುತ್ತಿದ್ದಾರೆ!’; ಫ್ಲೈಯಿಂಗ್‌ ಎಲಿಫೆಂಟ್ಸ್‌ ಕಿರುಚಿತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...