Homeಮುಖಪುಟಭಾರತದ ನಿಜ ಸುಧಾರಣಾವಾದ ಪರಂಪರೆಯನ್ನು ಗುರುತಿಸಲು ಕಾರಣವಾದ ಗೇಲ್ ಆಮ್‌ವೆಟ್

ಭಾರತದ ನಿಜ ಸುಧಾರಣಾವಾದ ಪರಂಪರೆಯನ್ನು ಗುರುತಿಸಲು ಕಾರಣವಾದ ಗೇಲ್ ಆಮ್‌ವೆಟ್

- Advertisement -
- Advertisement -

ಅಪ್ರತಿಮ ವಿದ್ವಾಂಸರು ಹಾಗೂ ಫುಲೆ-ಅಂಬೇಡ್ಕರ್ ಚಿಂತನೆಯನ್ನು ಆಧರಿಸಿದ ಹೋರಾಟಗಳ ಸಿದ್ಧಾಂತವನ್ನು ಕಟ್ಟಿಕೊಟ್ಟ ಗೇಲ್ ಆಮ್‌ವೆಟ್ (Gail Omvedt) ಇತ್ತೀಚೆಗೆ ನಿಧನರಾದರು. ನಾನು ಅನೇಕ ಲೇಖನಗಳಲ್ಲಿ ಎಲಿನರ್ ಝೆಲಿಯಟ್ ಮತ್ತು ಗೇಲ್ ಆಮ್‌ವೆಟ್ ಅವರನ್ನು ದಲಿತ ಅಧ್ಯಯನಗಳ ’ದೊಡ್ಡವ್ವ-ಚಿಗವ್ವ’ ಎಂದೂ ಕರೆದಿದ್ದೇನೆ. ಅಲ್ಲದೆ ಅಪೂರ್ವವಾದ ಈ ಮಹಿಳಾ ವಿದ್ವಾಂಸರ ’ಕಳ್ಳುಬಳ್ಳಿಗೆ’ ಅನುಪಮಾ ರಾವ್ ಅವರನ್ನು ಸೇರಿಸಿದ್ದೇನೆ. ಈ ಮೂವರು ವಿದ್ವಾಂಸರು ಫುಲೆ, ಅಂಬೇಡ್ಕರ್ ಹಾಗೂ ಮಹಾರಾಷ್ಟ್ರದ ದಲಿತ-ಚಳವಳಿಗಳ ಬಗ್ಗೆ ಮಾಡಿದ ಸಂಶೋಧನೆಗಳು, ವಿಶ್ಲೇಷಣೆಗಳು ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ಗುಣಮಟ್ಟದ್ದವು. ಅದೇ ಹೊತ್ತಿಗೆ ಬಹು ಕ್ಲಿಷ್ಟವಾಗಿಬಿಟ್ಟಿರುವ ಬರಹದ ಮಾದರಿಯನ್ನು ಬಳಸದೆ ಸರಳವಾಗಿ ಆದರೆ ಸಾಂದ್ರವಾಗಿ ಬರೆಯುವ ವಿದ್ವಾಂಸರು ಇವರು. ನಾನು ಇವರ ಬರಹಗಳಿಂದ ಕಲಿತಿರುವುದು ಅಪಾರವಾಗಿರುವುದರಿಂದ ಅವರ ವಿದ್ಯಾರ್ಥಿಯೆಂದು ಹೆಮ್ಮೆಯಿಂದ  ಅಂದುಕೊಳ್ಳುತ್ತೇನೆ.

ಗೇಲ್ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿಗಾಗಿ ಸಂಶೋಧನೆ ಮಾಡಲು ಆಯ್ದುಕೊಂಡ ವಿಷಯ ಜೋತಿಬಾ ಫುಲೆ ಅವರು ಪ್ರಮುಖವಾಗಿ ಮುನ್ನಡೆಸಿದ ಜಾತಿವ್ಯವಸ್ಥೆ ವಿರೋಧಿ ಚಳವಳಿಗಳ ಸಂದರ್ಭವನ್ನು ಕುರಿತು. ಅದಕ್ಕಾಗಿ ಅವರು ಭಾರತಕ್ಕೆ ಬಂದು ಮಹಾರಾಷ್ಟ್ರದ ಹೋರಾಟಗಾರ್ತಿಯಾದ ಇಂದುತಾಯಿ ಪಾಟಿನಕರ್ ಅವರ ಜೊತೆಗೂಡಿದರು. ಮುಂದೆ ಭರತ ಪಾಟಿನ್‌ಕರ್ ಅವರನ್ನು ಮದುವೆಯಾಗಿ ಕಾಸೆಗಾಂವ್‌ನಲ್ಲಿ ನೆಲೆಸಿದರು. ಅನೇಕ ಕಾರ್ಮಿಕ, ಮಹಿಳಾ ದಲಿತ ಹೋರಾಟಗಳಲ್ಲಿ ಭಾಗಿಯಾದರು. ಮಾರ್ಕ್ಸ್‌ವಾದ ಮತ್ತು ಫುಲೆ-ಅಂಬೇಡ್ಕರ್ ಸಿದ್ಧಾಂತಗಳನ್ನು ವಿಮರ್ಶಾತ್ಮಕವಾಗಿಯೆ ಒಗ್ಗೂಡಿಸಿಕೊಂಡು 20ಕ್ಕೂ ಹೆಚ್ಚು ಕೃತಿಗಳನ್ನು ಬರೆದರು. ಇವುಗಳಲ್ಲಿ ಅನೇಕ ಕೃತಿಗಳು ಸೈದ್ಧಾಂತಿಕವಾದ ಖಚಿತತೆ ಮತ್ತು ವಿಸ್ತಾರವಾದ ಓದು ಹಾಗೂ ಸಂಶೋಧನೆಗಳಿಂದಾಗಿ ಬೆಲೆಬಾಳುವ ಕೃತಿಗಳು. ಈ ಕೃತಿಗಳ ವಸ್ತು ವೈವಿಧ್ಯಪೂರ್ಣವಾದರೂ ಒಟ್ಟು ಬರಹದಲ್ಲಿ ಒಂದು ಸೈದ್ಧಾಂತಿಕ ಏಕಸೂತ್ರತೆಯಿದೆ. ಈ ಲೇಖನದಲ್ಲಿ ಈ ಕುರಿತು ಒಂದು ಟಿಪ್ಪಣಿಯನ್ನು ನಿಮ್ಮ ಮುಂದಿಡುತ್ತಿದ್ದೇನೆ.

ವಸಾಹತುಶಾಹಿ ಸಂದರ್ಭದಲ್ಲಿ ಶೂದ್ರರಿಗೆ ಶಿಕ್ಷಣ, ಮಹಿಳೆಯರಿಗಾಗಿ ಶಾಲೆಗಳು ಹಾಗೂ ಬ್ರಾಹ್ಮಣವಿರೋಧಿ ಪ್ರತಿಭಟನೆಗಳಿಂದಾಗಿ ಜೋತಿಬಾ ಫುಲೆ ಸಾಮಾಜಿಕ ಹೋರಾಟಗಾರರಾಗಿ ಪ್ರಸಿದ್ಧರು. ಆದರೆ ಅವರ ಬರಹ ಮತ್ತು ಚಿಂತನೆಗಳ ಬಗ್ಗೆ ವಿವರವಾದ ವಿಶ್ಲೇಷಣೆ ನಡೆದದ್ದು ತೀರ ತಡವಾಗಿ. ರೋಸಾಲಿಂಡ್ ಜಿ ಹ್ಯಾನ್‌ಲನ್‌ಳಂಥ ಸಂಶೋಧಕರಿಂದಾಗಿ ಜೋತಿಬಾ ಅವರ ಕುರಿತು ಚಾರಿತ್ರಿಕ ಹಾಗೂ ಸೈದ್ಧಾಂತಿಕ ಚರ್ಚೆಗಳು ಸಾಧ್ಯವಾದವು. ಈ ಚರ್ಚೆಗಳಿಗೆ ಒಂದು ಮೊನಚು ದೊರೆತದ್ದು ಗೇಲ್ ಆಮ್‌ವೆಟ್ ಅವರ ಬರಹಗಳಿಂದ. ಅವರ ಪ್ರಕಾರ ವಸಾಹತುಶಾಹಿ ಶಿಕ್ಷಣದಿಂದಾಗಿ ಆರಂಭವಾದ ಸಮಗ್ರ ಮಂಥನವೊಂದನ್ನು ಭಾರತೀಯ ಪುನರುಜ್ಜೀವನವೆಂದು ಕರೆದು ಅದನ್ನು ಭಾರತೀಯ ರಾಷ್ಟ್ರವಾದದೊಂದಿಗೆ ಮೇಳವಿಸಿಬಿಡುವುದು ತಪ್ಪು. ಈ ಪುನರುಜ್ಜೀವನಕ್ಕೆ ಎರಡು ವೈಚಾರಿಕ ಹಾಗೂ ಸಾಂಸ್ಕೃತಿಕ ಚಹರೆಗಳಿದ್ದವು.

ಒಂದು ರಾಜಾರಾಮ್ ಮೋಹನ್‌ರಾಯ್ ಅವರಂಥ ’ಭದ್ರಲೋಕ’ ಅಂದರೆ ಶಿಕ್ಷಿತ ಮೇಲ್ವರ್ಗ, ಮೇಲ್‌ಜಾತಿಗಳಿಂದ ಆರಂಭವಾದದ್ದು. ಇದು ಸತಿಪದ್ಧತಿ, ಬಾಲ್ಯವಿವಾಹ, ವಿಧವೆಯರ ಬವಣೆ, ಇಂಗ್ಲಿಷ್ ಹಾಗೂ ಆಧುನಿಕ ಶಿಕ್ಷಣದ ಅವಶ್ಯಕತೆ – ಇಂಥವುಗಳನ್ನು ತನ್ನ ಸಮಾಜಸುಧಾರಣೆಯ ಕಾರ್ಯಸೂಚಿಗಳನ್ನಾಗಿ ಆಯ್ದುಕೊಂಡಿತು. ಅನೇಕ ಧಾರ್ಮಿಕ, ಸಾಮಾಜಿಕ ಪದ್ಧತಿಗಳನ್ನು ಉಗ್ರವಾಗಿ ಟೀಕಿಸಿದರೂ ಬಹುಸಂಖ್ಯಾತ ಅಥವಾ ಯಜಮಾನ್ಯ ಭಾರತೀಯ ಸಂಸ್ಕೃತಿ ಹಾಗೂ ಧರ್ಮಗಳ ಬಗ್ಗೆ ನಂಬಿಕೆ ಇಟ್ಟುಕೊಂಡಿತ್ತು. ವೇದ, ಉಪನಿಷತ್ತುಗಳು ಜಗತ್ತಿನ ಶ್ರೇಷ್ಠ ಧಾರ್ಮಿಕ ಕೃತಿಗಳು, ಒಂದು ಕಾಲದಲ್ಲಿ ವರ್ಣಾಶ್ರಮ ಹಾಗೂ ಜಾತಿಗಳು ಭಾರತೀಯ ಸಮಾಜದ ಸಾಮರಸ್ಯವನ್ನು ಕಾಪಾಡಿದ ರಚನೆಗಳು ಇತ್ಯಾದಿ ನಂಬಿಕೆಗಳು ಈ ವರ್ಗಕ್ಕೆ ಇದ್ದವು. ಹೀಗಾಗಿ ಒಂದು ಕಡೆಗೆ ಆಧುನಿಕತೆಯ ಪರವಾಗಿದ್ದರೂ, ಮೂಲದಿಂದ ಸ್ವಲ್ಪ ಪುನರುತ್ಥಾನವಾಗಿದ್ದರೂ, ಚರಿತ್ರೆ ಹಾಗೂ ಧಾರ್ಮಿಕತೆಯಲ್ಲಿ ನಂಬಿಕೆ ಹೊಂದಿದ್ದವು. ಹೀಗಾಗಿ ಪಶ್ಚಿಮದ ಓರಿಯಂಟಲಿಸ್ಟರ ಹಾಗೆ ಇವರೂ ಕೂಡ ಶ್ರೇಷ್ಠ ಆರ್ಯ ಜನಾಂಗದವರಲ್ಲಿ ನಂಬಿಕೆ ಹೊಂದಿದ್ದು ಮಾತ್ರವಲ್ಲ ಬ್ರಾಹ್ಮಣರು ಆರ್ಯ ಜನಾಂಗದವರು ಎಂದೇ ನಂಬಿದ್ದರು.

ಶ್ರೇಷ್ಠ ಹಿಂದೂ ಸಂಸ್ಕೃತಿಯ ಅವಸಾನಕ್ಕೆ ಮುಸ್ಲಿಮ್ ದಾಳಿಕೋರರೇ ಕಾರಣವೆಂದೂ ನಂಬಿದ್ದರು. ಸ್ವತಃ ರಾಜಾರಾಮ ಮೋಹನ್‌ರಾಯ್ ಅವರು ಪರ್ಶಿಯನ್, ಅರೇಬಿಕ್ ಭಾಷೆಗಳ ಪಂಡಿತರಾಗಿದ್ದು ಇಸ್ಲಾಮ್‌ನ ಏಕದೇವೋಪಾಸನೆಯ ಬಗ್ಗೆ ಗೌರವ ಹೊಂದಿದ್ದರು. ಆದರೆ ಮಹಾರಾಷ್ಟ್ರದ ಸುಧಾರಣಾವಾದಿಗಳಾದ ಎಂ.ಜಿ. ರಾನಡೆ, ಲೋಕಮಾನ್ಯ ತಿಲಕ ಇವರೆಲ್ಲ ಹಿಂದೂ ಸಂಸ್ಕೃತಿ, ಧರ್ಮಗಳ ಪಾರಮ್ಯವನ್ನು ನಂಬಿದ್ದರು. ಭಾರತೀಯ ಎಂದರೆ ’ಹಿಂದೂ’ ಎನ್ನುವ ಸಮೀಕರಣವನ್ನು ಈ ಚಿಂತಕರು ಅನುಷ್ಠಾನಕ್ಕೆ ತಂದರು. ಅವರ ಸೌಮ್ಯವಾದಿ ಚಿಂತನೆಗಳೇ ಮುಂದೆ ಹಿಂದುತ್ವ ಚಿಂತನೆಗೆ ಆಧಾರವಾದವು. ಗೇಲ್ ಆಮ್‌ವೆಟ್ ಆಧಾರಸಹಿತ ವಾದಿಸುವಂತೆ ಇವರು ವರ್ಣಾಶ್ರಮವನ್ನು, ಜಾತಿವ್ಯವಸ್ಥೆಯನ್ನು ಸಿದ್ಧಾಂತದಲ್ಲಿ ಮತ್ತು ನಡವಳಿಕೆಯಲ್ಲಿ ವಿರೋಧಿಸಲಿಲ್ಲ. ಅಲ್ಲದೆ ಶೂದ್ರ ಹಾಗೂ ದಲಿತ ಧರ್ಮಗಳು, ನಂಬಿಕೆಗಳು ಇವುಗಳ ಪರಿಚಯವೇ ಅವರಿಗೆ ಇರಲಿಲ್ಲ.

ಅಂಬೇಡ್ಕರ್ ಅವರ ಬಗೆಗಿನ ತಮ್ಮ ಸುಂದರವಾದ ಕೃತಿಯಲ್ಲಿ ಆಮ್‌ವೆಟ್ ಗಾಂಧಿಯವರನ್ನು ಇದೇ ಚಿಂತನಾ ಪರಂಪರೆಯ ವಾರಸುದಾರರು ಎಂದು ಗುರುತಿಸುತ್ತಾರೆ. ವರ್ಣಾಶ್ರಮ ಹಾಗೂ ಜಾತಿಪದ್ಧತಿಗಳನ್ನು ಭಾರತೀಯ ಸಮಾಜದ ಸಾಮರಸ್ಯದ ಆಧಾರಗಳು ಎಂದು ಒಪ್ಪಿದ್ದ ಗಾಂಧಿ ಅಸ್ಪೃಶ್ಯತೆಯನ್ನು ತೀವ್ರವಾಗಿ ವಿರೋಧಿಸಿದರು. ಕ್ರಮೇಣವಾಗಿ ಜಾತಿವ್ಯವಸ್ಥೆಯ ಬಗೆಗಿನ ನಂಬಿಕೆಯನ್ನು ಬದಲಾಯಿಸಿಕೊಂಡರು. ಆದರೆ, ಆ ಬದಲಾವಣೆ ಭಾರತೀಯ ಸಂಸ್ಕೃತಿ ಹಾಗೂ ರಾಷ್ಟ್ರದ ಕಲ್ಪನೆಯಲ್ಲಿ ಬಹಳ ಭಿನ್ನವೇನೂ ಆಗಿರಲಿಲ್ಲ. ಅಲ್ಲದೆ ಬ್ರಾಹ್ಮಣ ವಿರೋಧಿ ಶೂದ್ರ ಪರಂಪರೆಗಳ ಬಗ್ಗೆ ಅವರಿಗೆ ಪರಿಚಯವೂ ಇರಲಿಲ್ಲ.

ಭಾರತೀಯ ಪುನರುಜ್ಜೀವನದ ಇನ್ನೊಂದು ಧಾರೆಯೆಂದರೆ ಜೋತಿಬಾ ಫುಲೆಯವರ ಅಬ್ರಾಹ್ಮಣ್ಯ ಚಿಂತನೆ. ಈ ಚಿಂತನಾ ಮಾರ್ಗವು ಜಾತಿಯನ್ನು ಭಾರತೀಯ ಸಮಾಜದ ಅತಿ ಪ್ರಮುಖ ಲಕ್ಷಣ ಹಾಗೂ ಸಮಸ್ಯೆಯೆಂದು ಗುರುತಿಸುತ್ತದೆ. ಫುಲೆಯವರು ಕಟ್ಟಿಕೊಂಡ ಚರಿತ್ರಾ ರಚನೆಯ ಪ್ರಕಾರ ಶೂದ್ರ ಹಾಗೂ ರೈತಾಪಿ ಸಮುದಾಯದವರಾದ ಕುಣಬಿಗಳು ಭಾರತದ ಮೂಲನಿವಾಸಿಗಳು. ಹೊರಗಿನಿಂದ ಬಂದ ಆರ್ಯ ಆಕ್ರಮಣಕಾರರು ಇವರನ್ನು ಸೋಲಿಸಿ, ಅಪಾರ ಶೋಷಣೆಗೆ ಒಳಪಡಿಸಿ ಗುಲಾಮಗಿರಿಯನ್ನು ಅಸ್ತಿತ್ವಕ್ಕೆ ತಂದರು. ಇದು ಅಮೆರಿಕದ ಅಥವಾ ಪಶ್ಚಿಮದ ಮಾದರಿಯ ಗುಲಾಮಗಿರಿಯಲ್ಲ. ಇದು ಭಟ್‌ಜಿ (ಬ್ರಾಹ್ಮಣ ಪುರೋಹಿತಶಾಹಿ) ಶೇಟ್‌ಜಿ (ರೈತಾಪಿ ಜನರನ್ನು ಶೋಷಣೆ ಮಾಡುತ್ತಿದ್ದ ವ್ಯಾಪಾರಿವರ್ಗ) ವರ್ಗಗಳು ಜಂಟಿಯಾಗಿ ಅನುಷ್ಠಾನಕ್ಕೆ ತಂದ ಗುಲಾಮಗಿರಿ. ಇದರ ವಿಶೇಷತೆಯೆಂದರೆ ಧರ್ಮ ಹಾಗೂ ಧಾರ್ಮಿಕ ನಂಬಿಕೆಗಳನ್ನು ಗುಲಾಮಗಿರಿಯ ಸಾಧನಗಳನ್ನಾಗಿ ಬಳಸಿಕೊಳ್ಳಲಾಯಿತು. ಮನುಸ್ಮೃತಿಯಂಥ ಕೃತಿಗಳ ಸಹಾಯದಿಂದ ವರ್ಣಾಶ್ರಮದ ಆಧಾರದ ಮೇಲೆ ಈ ಗುಲಾಮಗಿರಿಯನ್ನು ಬಲಪಡಿಸಲಾಯಿತು. ಜೋತಿಬಾ ಅವರು ಬ್ರಿಟಿಷ್ ವಸಾಹತುಶಾಹಿಯ ಪರವಾಗಿದ್ದರು ಎಂದು ಸಂಪ್ರದಾಯವಾದಿಗಳು ಹೇಳುತ್ತಾರೆ.

ಆದರೆ ಜೋತಿಬಾ ಬ್ರಿಟಿಷ್ ವಸಾಹತುಶಾಹಿಯ ಶೋಷಿತ ಶಕ್ತಿಯನ್ನು ಗುರುತಿಸಿದರು ಮತ್ತು ಅದು ಶೂದ್ರ ದಲಿತರಿಗೆ ಶಿಕ್ಷಣ, ಏಕರೂಪಿ ಕಾಯಿದೆ ಹಾಗೂ ಒಂದು ಸೀಮಿತವಾದ ಆಧುನಿಕತೆಯನ್ನು ತಂದಿದ್ದನ್ನು ಸ್ವಾಗತಿಸಿದರು. ಆದರೆ ಹೊಸ ಸಂದರ್ಭದ ಪ್ರಯೋಜನ ಪಡೆದು ಇಂಗ್ಲಿಷ್ ಶಿಕ್ಷಣ ಪಡೆದು ಅಥವಾ ಪರಂಪರಾಗತ ಅಧಿಕಾರದಿಂದ ವಸಾಹತುಶಾಹಿಯ ಬೆಂಬಲಕ್ಕೆ ನೌಕರಶಾಹಿಯಾಗಿ ಭಟ್‌ಜಿ ವರ್ಗವು ನಿಂತಿದ್ದನ್ನು ಉಗ್ರವಾಗಿ ವಿರೋಧಿಸಿದರು. ವಸಾಹತುಶಾಹಿಯು ಸ್ಥಳೀಯ ಮುಂಚೂಣಿವರ್ಗದ ಬ್ರಾಹ್ಮಣ ಹಾಗೂ ಇತರ ಮೇಲ್ಜಾತಿಗಳಿಗೆ ಅಪಾರವಾದ ಅಧಿಕಾರವನ್ನು ಕೊಟ್ಟಿದ್ದನ್ನು ಜೋತಿಬಾ ಆ ಕಾಲದಲ್ಲಿಯೇ ಕರಾರುವಾಕ್ಕಾಗಿ ಗುರುತಿಸಿದರು. ಅಲ್ಲದೆ ಆಮ್‌ವೆಟ್ ಹೇಳುವಂತೆ ವಸಾಹತುಶಾಹಿ ಸರಕಾರವು ಶಿಕ್ಷಿತ ಮಧ್ಯಮವರ್ಗದ ಅಹವಾಲುಗಳನ್ನು ಕೇಳಿಸಿಕೊಳ್ಳುತ್ತಿತ್ತು.

ಆದರೆ ಪರಂಪರೆಯ ಗುಲಾಮಗಿರಿಯನ್ನೇ ಕಿತ್ತೆಸೆದು ಶಿಕ್ಷಣ, ಭೂಒಡೆತನ, ನೌಕರಿ ಇವನ್ನೆಲ್ಲ ಕೇಳುತ್ತಿದ್ದ ಶೂದ್ರ ವರ್ಗಗಳ ಕ್ರಾಂತಿಕಾರಿ ಬೇಡಿಕೆಗಳನ್ನು ದೂರವಿಟ್ಟಿತು. ಆಗತಾನೇ ಹುಟ್ಟು ಪಡೆಯುತ್ತಿದ್ದ ರಾಷ್ಟ್ರವಾದವನ್ನು ಜೋತಿಬಾ ಖಚಿತವಾಗಿ ಮೇಲ್ವರ್ಗಗಳ ಸಿದ್ಧಾಂತವಾಗಿ ಗುರುತಿಸಿದ್ದನ್ನು ಆಮ್‌ವೆಟ್ ವಿವರಿಸುತ್ತಾರೆ. ಜೋತಿಬಾ ತಮ್ಮ ’ಅಸೂದ್’ ಕೃತಿಯಲ್ಲಿ, “ಈಗ ಈ ಭಟ್‌ಜಿಗಳು ತಮ್ಮ ಧಾರ್ಮಿಕ ಖಡ್ಗವನ್ನು ಬಚ್ಚಿಟ್ಟುಕೊಂಡು, ಜಾತಿಗಳ ಅಸಮಾನತೆಯನ್ನು ಬಚ್ಚಿಟ್ಟು ರಾಷ್ಟ್ರದ ಬಗ್ಗೆ ಮಾತನಾಡತೊಡಗಿದ್ದಾರೆ” ಎಂದು ಹೇಳಿದ್ದನ್ನು ಉದ್ಧರಿಸುತ್ತಾರೆ. ಇದೇ ರಾಷ್ಟ್ರವಾದವು ಹಿಂದೂ ರಾಷ್ಟ್ರವಾಗಿ ಪರಿವರ್ತಿತವಾದದ್ದನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರು ಅರ್ಥಮಾಡಿಕೊಂಡು ಜಾತಿವ್ಯವಸ್ಥೆಯನ್ನೇ ಕೇಂದ್ರಕ್ಕೆ ತಂದರು. ಜಾತಿವಿನಾಶವಿಲ್ಲದಿದ್ದರೆ ಸ್ವತಂತ್ರ ಭಾರತ ರಾಷ್ಟ್ರದಲ್ಲಿ ಬೌದ್ಧ ಧರ್ಮದ ಕ್ರಾಂತಿಯ ವಿರುದ್ಧ ಬ್ರಾಹ್ಮಣ್ಯದ ಪ್ರತಿಕ್ರಾಂತಿಯನ್ನು ಆರಂಭಿಸಿದ ವರ್ಗಗಳೇ ಅಧಿಕಾರಕ್ಕೆ ಬರುತ್ತಿವೆಯೆಂದು ಬಾಬಾಸಾಹೇಬ್ ಸರಿಯಾಗಿ ಗುರುತಿಸಿದರು. ಅವರು ಕೂಡ ಬ್ರಿಟಿಷ್ ಪರವಾಗಿದ್ದರು ಎನ್ನುವ ಅಪಪ್ರಚಾರವನ್ನು ಬಾಬಾಸಾಹೇಬರ ವಿರುದ್ಧ ಈಗಲೂ ನಡೆಯುತ್ತಿರುವುದನ್ನು ಗಮನಿಸಬಹುದು.

ಆಮ್‌ವೆಟ್ ಗಾಂಧಿಯವರನ್ನು ಹಿಂದೂ ರಾಷ್ಟ್ರವಾದದ ಸೌಮ್ಯ ಮುಖ್ಯವೆಂದು ಗುರುತಿಸಿ ಫುಲೆ-ಅಂಬೇಡ್ಕರ್ ಅವರ ಪರ್ಯಾಯ ರಾಷ್ಟ್ರವಾದಿ ಚಿಂತನೆಯನ್ನು ಸಮರ್ಥಿಸುತ್ತಾರೆ. ಇದನ್ನು ಒಪ್ಪದಿದ್ದವರೂ ಗಂಭೀರವಾಗಿ ಓದಲೇಬೇಕಾದ ಕೃತಿಗಳನ್ನು ಗೇಲ್ ಆಮ್‌ವೆಟ್ ಬರೆದಿದ್ದಾರೆ. ಅವುಗಳ ಮೂಲಕ ಆಧುನಿಕ ಭಾರತದ ಚರಿತ್ರೆಯ ರಚನೆ ಹಾಗೂ ರಾಷ್ಟ್ರವಾದದ ಚರ್ಚೆಗಳಲ್ಲಿ ಇರುವ ನ್ಯೂನತೆಗಳನ್ನು ಸಶಕ್ತವಾಗಿ ವಿಶ್ಲೇಷಿಸಿದ್ದಾರೆ. ಚರಿತ್ರೆಯ ರಚನೆಯಲ್ಲಿ ಸಬ್‌ಆಲ್ಟರ್ನ್ ಅಧ್ಯಯನಗಳ ನಂತರವೂ ಬಹುದೊಡ್ಡ ನ್ಯೂನತೆಗಳು ಉಳಿದುಕೊಂಡಿವೆ. ವಿಶೇಷವಾಗಿ ದಲಿತ ಸಮುದಾಯಗಳ ಅನುಭವಗಳನ್ನು ಮುನ್ನೆಲೆಗೆ ತರುವುದರಲ್ಲಿ ಕಂದಕಗಳೇ ಇವೆ.

ಗೇಲ್ ಆಮ್‌ವೆಟ್ ತಮ್ಮ ಸಂಶೋಧನೆಯನ್ನು ಫುಲೆ ಅವರಿಂದ ಆರಂಭಿಸಿದ್ದರೂ ಚರಿತ್ರೆಯ ಹಿಂದಿನ ಘಟ್ಟಗಳಲ್ಲಿನ ಭಕ್ತಿ ಪರಂಪರೆಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದರು. 5 ವರ್ಷಗಳ ಸಂಶೋಧನೆಯ ಫಲವಾಗಿ ಅವರು ಬರೆದ ‘Seeking Begumpura’ ಶ್ರೇಷ್ಠ ಕೃತಿಯಾಗಿದೆ. ದಲಿತ ಸಂತನಾಗಿದ್ದ ರವಿದಾಸ್ ತನ್ನ ಕನಸಿನ ಆದರ್ಶದ ನಗರವನ್ನು ’ಬೇಗಮ್‌ಪುರ’ ಅಂದರೆ ’ದುಃಖವಿಲ್ಲದ ನಗರ’ ಎಂದು ಕಲ್ಪಿಸಿಕೊಂಡಿದ್ದ. ಅವನ ಹಾಗೆಯೆ ಭಕ್ತಿ, ಅನುಭಾವ ಪರಂಪರೆಯ ಅನೇಕರು ತಮ್ಮ ಆಡಳಿತದ Utopiaಗಳನ್ನು ಕಟ್ಟಿಕೊಂಡರು. ಅದು ಅವರು ಕಂಡು ಅನುಭವಿಸಿದ ಜಗತ್ತಿನ ವಿಮರ್ಶೆಯೂ ಆಗಿತ್ತು, ಅವರ ಅಪೇಕ್ಷೆಯ ಆದರ್ಶ ಜಗತ್ತೂ ಆಗಿತ್ತು. ಇದನ್ನು ಕೇಂದ್ರದಲ್ಲಿಟ್ಟುಕೊಂಡು ನಾಮ್‌ದೇವ್, ತುಕಾರಾಮ್, ಕಬೀರ್, ತಮಿಳು ಸಂತ ಪರಂಪರೆ, ಅಮ್ಯಾತಿ ದಾಸ್‌ನ ಬೌದ್ಧ ಪರಂಪರೆ, ವಚನಕಾರರು ಇವರೆಲ್ಲರನ್ನು ಸೂಕ್ಷ್ಮವಾದ ಓದು ಮತ್ತು ಚಾರಿತ್ರಿಕ ತಿಳುವಳಿಕೆಯ ಬೆಂಬಲದಿಂದ ಅವರು ಈ ಕೃತಿಯಲ್ಲಿ ಚರ್ಚಿಸುತ್ತಾರೆ. ಕೃತಿಯಲ್ಲಿ ವಸಹತುಶಾಹಿ, ಜಾತಿವ್ಯವಸ್ಥೆಯ ಬಗೆಗಿನ ಆಧುನಿಕ ಚಿಂತನೆಗಳು ಇವೆಲ್ಲವೂ ಚರ್ಚೆಗೆ ಒಳಪಡುತ್ತವೆ. ನಾನು ಓದಿದ ಅಪರೂಪದ ಕೃತಿಗಳಲ್ಲಿ ಇದು ಒಂದು. ಮಹಿಳೆಯರು ಮತ್ತು ಹಿಂಸೆಯನ್ನು ಕುರಿತ ಅವರ ಕೃತಿ, ಜಾತಿಯ ಬಗೆಗಿನ ಕೃತಿ ಹೀಗೆ ದೀರ್ಘವಾದ ಪಟ್ಟಿ ಇದೆ. ಇವೆಲ್ಲವುಗಳನ್ನು ಓದಿರಬಹುದಾದ ಯುವ ಚಿಂತಕರ ಒಂದು ಪಡೆಯೇ ಕನ್ನಡದಲ್ಲಿದೆ. ಆದರೆ ಅವರೆಲ್ಲ ಗೇಲ್ ಆಮ್‌ವೆಟ್ ಚಿಂತನೆಯನ್ನು ಕನ್ನಡದಲ್ಲಿ ಬರೆದು ವಿಸ್ತಾರವಾಗಿ ಚರ್ಚಿಸಬೇಕು. ಫುಲೆ-ಅಂಬೇಡ್ಕರ್‌ವಾದಿ-ಮಾರ್ಕ್ಸ್‌ವಾದಿ ಚಿಂತನೆಗೆ ಇದರಿಂದ ಹೊಸ ಆಯಾಮವೇ ಬರಬಹುದು. ಅವರ ಉಳಿದ ಅನೇಕ ಕೃತಿಗಳ ಬಗ್ಗೆ ಬರೆಯಬೇಕಿದೆ. ಸಾಧ್ಯವಾದರೆ…

ಪ್ರೊ. ರಾಜೇಂದ್ರ ಚೆನ್ನಿ

ಪ್ರೊ. ರಾಜೇಂದ್ರ ಚೆನ್ನಿ
ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು, ಕಥೆಗಾರರು, ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕರು. ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗಾಗಿ ನಡೆಯುತ್ತಿರುವ ದಕ್ಷಿಣಾಯನ ಅಭಿಯಾನದ ಸಂಚಾಲಕರು


ಇದನ್ನೂ ಓದಿ: ರೈತ ಮಹಿಳೆಗೆ ಪರಿಹಾರ ವಿಳಂಬ: ನ್ಯಾಯಾಂಗ ನಿಂದನೆ ಆರೋಪದಲ್ಲಿ ಆಂಧ್ರದ IAS ಅಧಿಕಾರಿಗಳಿಗೆ ಜೈಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...