ಉತ್ತರ ಪ್ರದೇಶದ ಲಖಿಂಪುರ್ಖೇರಿಯಲ್ಲಿ ರೈತರ ಮೇಲೆ ಸಚಿವರ ಪುತ್ರ ಹಾಗೂ ಆತನ ಗೂಂಡಾಪಡೆ ವಾಹನಗಳನ್ನು ಹತ್ತಿಸಿ ಕೊಲ್ಲುವ ವೇಳೆ ಓರ್ವ ಪತ್ರಕರ್ತನೂ ಹತ್ಯೆಗೀಡಾಗಿದ್ದಾನೆ.
ವರದಿಗಾರಿಕೆಗೆ ತೆರಳಿದ್ದ ಪತ್ರಕರ್ತ ರಮಣ್ ಕಶ್ಯಪ್ ಅವರು ಭಾನುವಾರ ನಡೆದ ಘಟನೆಯಲ್ಲಿ ಸಾವಿಗೀಡಾಗಿದ್ದಾರೆ. ಪತ್ರಕರ್ತನ ಸಾವಿನ ತನಿಖೆಗೆ ನ್ಯಾಯಾಂಗ ನೇತೃತ್ವದಲ್ಲಿ ವಿಶೇಷ ತನಿಖಾ ದಳ ರಚಿಸಬೇಕು ಎಂದು ಭಾರತದ ಎಡಿಟರ್ಸ್ ಗಿಲ್ಡ್ ಒತ್ತಾಯಿಸಿದೆ.
ಘಟನೆಯ ತನಿಖೆ ನಡೆಸಲು ಕಶ್ಯಪ್ ಅವರ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಪಡೆದುಕೊಳ್ಳಬೇಕು ಎಂದು ಪತ್ರಕರ್ತರ ಸಂಘ ಒತ್ತಾಯಿಸಿದೆ.
“ಭಯೋತ್ಪಾದಕರ ದಾಳಿ ಎಂದರೆ ರೈತರಲ್ಲಿ ಭಯವನ್ನು ಹುಟ್ಟಿಸುವುದು ಎಂದರ್ಥ. ಪತ್ರಕರ್ತ ಕಶ್ಯಪ್ ಅವರ ಕೊಲೆಯು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ” ಎಂದು ಗಿಲ್ಡ್ ಹೇಳಿಕೆ ನೀಡಿದೆ.
ಕಶ್ಯಪ್ ಅವರ ಸಾವಿನ ಕುರಿತು ವಿವಿಧ ಅಭಿಪ್ರಾಯಗಳಿವೆ. “ಸ್ಪಷ್ಟವಾಗುವ ಸಂಗತಿ ಎಂದರೆ ಪ್ರತಿಭಟನೆಗೆ ತೆರಳಿದ್ದ ರೈತರ ಮೇಲೆ ವಾಹನಗಳು ಹರಿದಾಗ, ರೈತರೊಂದಿಗೆ ತಪ್ಪಿಸಿಕೊಳ್ಳಲು ಯತ್ನಿಸುವಾಗ ಕಶ್ಯಪ್ ಅವರನ್ನೂ ಕೊಲ್ಲಲಾಗಿದೆ” ಎಂದು ಗಿಲ್ಡ್ ಅಭಿಪ್ರಾಯಪಟ್ಟಿದೆ.
ಕಶ್ಯಪ್ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡುವ ಜೊತೆಗೆ, ಕಶ್ಯಪ್ ಅವರ ಪತ್ನಿಗೆ ಸರ್ಕಾರ ಉದ್ಯೋಗವನ್ನು ನೀಡಬೇಕು ಎಂದು ಲಿಖಿಂಪುರ್ ಖೇರಿಯ ಪತ್ರಕರ್ತರು ಒತ್ತಾಯಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿರಿ: ಲಖಿಂಪುರ್ ರೈತರ ಹತ್ಯೆ ಪ್ರಕರಣ: ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
ಸಚಿವರ ಪುತ್ರ ಕೃತ್ಯದಲ್ಲಿ ಭಾಗಿ: ಗಾಯಾಳು ರೈತ ಹೇಳಿಕೆ
ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ಕು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ ಎರಡು ದಿನಗಳ ನಂತರ ಗಾಯಾಳು ರೈತ ಮುಖಂಡ ಹೇಳಿಕೆ ನೀಡಿದ್ದು, ಪ್ರತಿಭಟನಾಕಾರರ ಮೇಲೆ ಹರಿದ ಕಾರನ್ನು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಚಾಲನೆ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ದೆಹಲಿಯ ಮೇದಂತದಲ್ಲಿ ಆಸ್ಪತ್ರೆಗೆ ದಾಖಲಾಗಿರುವ ರೈತ ಮುಖಂಡ ತೇಜಿಂದರ್ ಸಿಂಗ್ ವಿರ್ಕ್, 72 ಗಂಟೆಗಳ ನಂತರವೂ ಆರೋಪಿಗಳನ್ನು ಬಂಧಿಸದಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.
ಭಾನುವಾರ ಕೇಂದ್ರ ಸಚಿವ ಅಜಯ್ ಮಿಶ್ರಾ ಭೇಟಿ ಮತ್ತು ಉಪಮುಖ್ಯಮಂತ್ರಿ ಕೇಶವ್ ಶರ್ಮಾ ವಿರುದ್ಧ ನಡೆದ ಪ್ರತಿಭಟನೆಯನ್ನು ರೈತ ಮುಖಂಡ ಮತ್ತು ಎಸ್ಕೆಎಂ ಸದಸ್ಯ ತೇಜಿಂದರ್ ಸಿಂಗ್ ವಿರ್ಕ್ ಆಯೋಜಿಸಿದ್ದರು.
ಜೊತೆಗೆ ಮಾತನಾಡಿರುವ ತೇಜಿಂದರ್ ವಿರ್ಕ್, “ಇದು ನಮ್ಮನ್ನು ಕೊಲ್ಲುವ ಪಿತೂರಿಯಾಗಿತ್ತು. ಅಜಯ್ ಮಿಶ್ರಾ ಅವರು ಲಖಿಂಪುರವನ್ನು ಬಿಟ್ಟು ಉತ್ತರ ಪ್ರದೇಶದಲ್ಲಿ ರೈತರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿರುದ್ಧ ನಾವು ಪ್ರತಿಭಟನೆ ನಡೆಸುತ್ತಿದ್ದೆವು. ನಾವು ಪೊಲೀಸರು ಮತ್ತು ಆಡಳಿತದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೆವು. ಅವರ ಮೇಲೆ ಕಪ್ಪು ಬಾವುಟ ಬೀಸಲು ಮಾರ್ಗದುದ್ದಕ್ಕೂ ನಿಂತಿದ್ದೆವು” ಎಂದಿದ್ದಾರೆ.
“ಅವರ ಮಾರ್ಗ ಬದಲಾಗಿದೆ ಎಂದು ನಮಗೆ ಮಧ್ಯಾಹ್ನ 3 ಗಂಟೆಗೆ ತಿಳಿಯಿತು. ನಾವು ಶಾಂತಿಯುತವಾಗಿ ಹಿಂತಿರುಗಲಾರಂಭಿಸಿದೆವು. ಇದ್ದಕ್ಕಿದ್ದಂತೆ, ವೇಗವಾಗಿ ಬಂದ ಕಾರುಗಳು ನಮಗೆ ಹಿಂದಿನಿಂದ ಡಿಕ್ಕಿ ಹೊಡೆದವು. ಕಾರು ಗಂಟೆಗೆ 100 ಕಿಮೀ ವೇಗದಲ್ಲಿತ್ತು. ಅವರು ಉದ್ದೇಶಪೂರ್ವಕವಾಗಿ ನಮ್ಮ ಮೇಲೆ ಕಾರು ಹರಿಸಿದರು. ಅಜಯ್ ಮಿಶ್ರಾ ಅವರ ಮಗ ಮತ್ತು ಅವನ ಸಹಚರರು ಕಾರಿನಲ್ಲಿದ್ದರು. ಆಗ ನನಗೆ ಪ್ರಜ್ಞೆ ತಪ್ಪಿತು” ಎಂದು ಮಾಹಿತಿ ನೀಡಿದ್ದಾರೆ.
ಕೇಂದ್ರ ಸಚಿವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿರುವ ರೈತ ಮುಖಂಡ, “ನಾನು ಸಾಕ್ಷಿ ಹೇಳಲು ಸಿದ್ಧನಿದ್ದೇನೆ. ಯೋಗಿ ಆದಿತ್ಯನಾಥ್ ಸರ್ಕಾರ ದಾಳಿಕೋರರಿಗೆ ಸಹಾಯ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.
ಭಾನುವಾರದ ಹಿಂಸಾಚಾರದಲ್ಲಿ ತೀವ್ರವಾಗಿ ಗಾಯಗೊಂಡಿರುವ ಸಂಯುಕ್ತ ಕಿಸಾನ್ ಮೋರ್ಚಾದ ಸದಸ್ಯ ತೇಜಿಂದರ್ ಸಿಂಗ್ ವಿರ್ಕ್ ಸದ್ಯ ದೆಹಲಿಯ ಮೇದಂತದಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿರಿ: ಲಖಿಂಪುರ್ ಖೇರಿ ಹತ್ಯಾಕಾಂಡ: ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಲು ವಕೀಲರ ಪತ್ರ


