Homeಅಂಕಣಗಳುಹವಾಮಾನ ಬಿಕ್ಕಟ್ಟು; ಇಡೀ ಭೂಮಿ ಧಗಿಸುವ ಮೊದಲು ಎಚ್ಚೆತ್ತುಕೊಳ್ಳಬೇಕಿದೆ!

ಹವಾಮಾನ ಬಿಕ್ಕಟ್ಟು; ಇಡೀ ಭೂಮಿ ಧಗಿಸುವ ಮೊದಲು ಎಚ್ಚೆತ್ತುಕೊಳ್ಳಬೇಕಿದೆ!

- Advertisement -
- Advertisement -

ಅಕ್ಟೋಬರ್ 31ರಿಂದ ನವೆಂಬರ್ 12ರವರೆಗೆ COP-26 ಸಮಾವೇಶ ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಿಗದಿಯಾಗಿದೆ. ಹವಾಮಾನ ಬದಲಾವಣೆಯ ಬಗ್ಗೆ ಸೂಕ್ತ ಮತ್ತು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಪ್ರತಿ ವರ್ಷ ಸಭೆ ಸೇರಿ ಚರ್ಚೆ ಮಾಡಿ ನಿರ್ಣಯಗಳನ್ನು ತೆಗೆದುಕೊಳ್ಳಲು ಆಯೋಜಿಸಲಾಗುವ, ವಿಶ್ವದ ಬಹುತೇಕ ಎಲ್ಲ ದೇಶಗಳ ಈ ’ಕಾನ್ಫರೆನ್ಸ್ ಆಫ್ ಪಾರ್ಟೀಸ್; COP-26’ ಸಮಾವೇಶ ಈ ವರ್ಷ ಹಿಂದೆಂದಿಗಿಂತಲೂ ಹೆಚ್ಚು ಮಹತ್ವ ಪಡೆದುಕೊಂಡಿದೆ. 2015ರಲ್ಲಿ ಪ್ಯಾರಿಸ್‌ನಲ್ಲಿ ನಡೆದ COP-21ರ ಸಮಾವೇಶದ ನಂತರ ನವೆಂಬರ್ 2016ರಲ್ಲಿ ಸುಮಾರು 196 ದೇಶಗಳು ಹವಾಮಾನ ಬದಲಾವಣೆಯ ಬಗ್ಗೆ ಒಮ್ಮತಕ್ಕೆ ಬಂದು ಅಂತಾರಾಷ್ಟ್ರೀಯ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದವು.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2020ರಲ್ಲಿ ಈ ಒಪ್ಪಂದದಿಂದ ಹಿಂದೆ ಸರಿದಿದ್ದರು. ನಂತರ ಆಯ್ಕೆಯಾದ ಅಮೆರಿಕ ಅಧ್ಯಕ್ಷರಾದ ಜೋ ಬೈಡೆನ್ ತಮ್ಮ ಅಧ್ಯಕ್ಷೀಯ ಅಧಿಕಾರ ಬಳಸಿ ಮತ್ತೆ ಈ ಒಪ್ಪಂದದ ಭಾಗವಾಗಿ ಮುಂದುವರೆಯಲು ಕಾನೂನು ಬದಲಾವಣೆ ತಂದಿದ್ದರು. ಪ್ಯಾರಿಸ್ ಒಪ್ಪಂದದ ಮುಖ್ಯ ಕ್ರಮಗಳಲ್ಲಿ ಒಂದು ಜಾಗತಿಕ ತಾಪಮಾನ ಏರಿಕೆ 2 ಡಿಗ್ರೀ ಸೆಲ್ಷಿಯಸ್‌ಗಿಂತಲೂ ಕಡಿಮೆ ಇರುವಂತೆ ನೋಡಿಕೊಳ್ಳುವುದಕ್ಕೆ ದೇಶಗಳು ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿದೆ.

2018ರಲ್ಲಿ ಹಲವು ವಿಜ್ಞಾನಿಗಳು ಅಧ್ಯಯನ ಮಾಡಿ ಯುಎನ್ ಇಂಟರ್‌ಗವರ್‍ನಮೆಂಟಲ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್ (ಐಪಿಸಿಸಿ) ಬಿಡುಗಡೆ ಮಾಡಿದ್ದ ವರದಿಯಲ್ಲಿ ಜಗತ್ತು ಹವಾಮಾನ ಬದಲಾವಣೆಯಿಂದ ಎದುರಿಸುತ್ತಿರುವ ಮತ್ತು ಮುಂದೆ ಬರಲಿರುವ ಸಮಸ್ಯೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಜಾಗತಿಕ ತಾಪಮಾನವನ್ನು ಕೈಗಾರಿಕಾ ಯುಗದ ಪೂರ್ವ ಮಟ್ಟಕ್ಕಿಂತ 1.5 ಡಿಗ್ರೀ ಸೆಲ್ಷಿಯಸ್‌ಗಿಂತ ಹೆಚ್ಚಳವಾಗದಂತೆ ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು ಎನ್ನುತ್ತದೆ ಆ ವರದಿ. ಕಳೆದ ಸುಮಾರು ಎರಡು ಮೂರು ದಶಕಗಳಿಂದ ಹವಾಮಾನ ಬದಲಾವಣೆಯ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿದ್ದರೂ ಅದರ ಗಂಭೀರತೆಗೆ ಅನುಗುಣವಾಗಿ ಬಹುಮಾಧ್ಯಮಗಳಲ್ಲಿ ಅಗತ್ಯ ಮಟ್ಟದ ಜಾಗ ಅದು ಪಡೆದಿಲ್ಲ ಎಂಬುದು ಕೂಡ ಆತಂಕಕಾರಿ ಸಂಗತಿಯೇ ಆಗಿದೆ.

ಜಾಗತಿಕ ತಾಪಮಾನ ಏರಿಕೆಯಿಂದ ಆಗುತ್ತಿರುವ/ಆಗಲಿರುವ ಅನಾಹುತಗಳನ್ನು ಪ್ರಮಾಣಿಸುವುದರಲ್ಲಿ ಇರುವ ಸವಾಲುಗಳು ಬಿಕ್ಕಟ್ಟನ್ನು ಇನ್ನಷ್ಟು ಬಿಗಡಾಯಿಸಲು ಕಾರಣವಾಗಿದೆ. ಹಿಂದೆಂದಿಗಿಂತಲೂ ಹೆಚ್ಚುತ್ತಿರುವ ಪ್ರವಾಹಗಳು, ಬರಗಳು, ಕುಡಿಯುವ ನೀರಿನ ಸಮಸ್ಯೆ, ಸಮುದ್ರ ಮಟ್ಟದ ಏರಿಕೆ, ಚಂಡಮಾರುತದ ಅಪಾಯಗಳು, ಋತುಗಳಲ್ಲಿ ಆಗುತ್ತಿರುವ ಬದಲಾವಣೆ ಹೀಗೆ ಸಮಸ್ಯೆಗಳು ಎದ್ದಾಗ ಹವಾಮಾನ ಬದಲಾವಣೆಯ ಬಗ್ಗೆ ಚರ್ಚೆ ಮರುಕಳಿಸುತ್ತದಾದರೂ, ಇವೆಲ್ಲವೂ ಹಿಂದಿನಿಂದಲೂ ಇದ್ದವೇ ಎಂಬಂತೆ ಮೈಮರೆಯುವ ವಿದ್ಯಮಾನ ಸಾಮಾನ್ಯವಾಗಿದೆ. ಮಾಧ್ಯಮಗಳು ಬಹುತೇಕ ಇಂದು ದೊಡ್ಡ ಉದ್ದಿಮೆದಾರರ ಹಿಡಿತದಲ್ಲಿ ಇರುವುದರಿಂದ, ಹವಾಮಾನ ಬಿಕ್ಕಟ್ಟಿಗೆ ಕಾರಣವಾಗಿರುವ ಸಂಗತಿಗಳು, ಅವರ ಉದ್ದಿಮೆಗಳಿಗೆ ನೇರ ಸಂಬಂಧ ಹೊಂದಿರುವುದರಿಂದ ಹವಾಮಾನ ವಿಜ್ಞಾನಿಗಳ ಎಚ್ಚರಿಕೆಗಳು ಚರ್ಚೆಯಾಗಬೇಕಿರುವ ಮಟ್ಟದಲ್ಲಿ ಬಿತ್ತರವಾಗುವುದಿಲ್ಲ.

ಜಾಗತಿಕ ತಾಪಮಾನಕ್ಕೆ ಮುಖ್ಯಕಾರಣ ಇಂಗಾಲ ಡೈ ಆಕ್ಸೈಡ್ ಅನಿಲ (ಕಾರ್ಬನ್ ಡೈ ಆಕ್ಸೈಡ್) ವಾತಾವರಣದಲ್ಲಿ ವಿಪರೀತವಾಗಿ ಏರಿ ಅದು ಸೂರ್ಯನ ಕಿರಣಗಳ ಶಾಖವನ್ನು ಹಿಡಿದಿಟ್ಟುಕೊಳ್ಳುವುದರಿಂದ ಎಂದು ಗುರುತಿಸಿ ಹಲವು ದಶಕಗಳೇ ಕಳೆದಿವೆ. ಕಾರ್ಬನ್ ಡೈ ಆಕ್ಸೈಡ್ ಏರಿಕೆಗೆ ಮುಖ್ಯ ಕಾರಣ ಕಲ್ಲಿದ್ದಲು, ಪೆಟ್ರೋಲಿಯಂನತಹ ಇಂಧನ ಉರಿಸುವುದು ಮತ್ತು ಕೈಗಾರಿಕೆಗಳು ಹೊರಸೂಸುವ ಅನಿಲಗಳು. 2020ರಲ್ಲಿಯೇ ಸುಮಾರು 34.07 ಬಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ಕಾರ್ಬನ್ ಡೈ ಆಕ್ಸೈಡ್ ಈ ಮೂಲಗಳಿಂದ ಭೂಮಿಯ ವಾತಾವರಣಕ್ಕೆ ಸೇರ್ಪಡೆಯಾಗಿದೆ. ಇದನ್ನು ತಗ್ಗಿಸುವ ಜವಾಬ್ದಾರಿ ಎಲ್ಲ ದೇಶಗಳ ಮೇಲಿದೆ. ಆದರೆ ಬಹಳ ಹಿಂದಿನಿಂದಲೂ ಈ ಇಂಧನಗಳ ಅತಿ ಹೆಚ್ಚು ಬಳಕೆ ಮತ್ತು ಅತಿ ಕೈಗಾರಿಕೀಕರಣದಿಂದ ವಾತಾವರಣಕ್ಕೆ ಅಪಾಯ ಒಡ್ಡಿರುವ ಮುಂದುವರೆದ ದೇಶಗಳು ಇಂದು ತೆಗೆದುಕೊಳ್ಳಬೇಕಿರುವ ಕ್ರಮಗಳ ಬಗ್ಗೆ ಹೆಚ್ಚು ಜವಾಬ್ದಾರಿಯನ್ನು ಹೊರಬೇಕು ಎನ್ನುವುದು ಮುಂದುವರೆಯುತ್ತಿರುವ ದೇಶಗಳ ಅಹವಾಲು. ಇಂತಹ ಸಮಯದಲ್ಲಿ, ಡೊನಾಲ್ಡ್ ಟ್ರಂಪ್‌ನಂತಹ ರಾಜಕಾರಣಿಗಳು ಇಡೀ ಕ್ಲೈಮೇಟ್ ಚೇಂಜ್‌ಅನ್ನೇ ’ಮಹಾ ಸುಳ್ಳು’ ಎಂದು ಬಗೆದು, ಅಂತಾರಾಷ್ಟ್ರೀಯ ಒಪ್ಪಂದದಿಂದ ಹಿಂದೆಹೋಗಲು ತೆಗೆದುಕೊಂಡ ನಿರ್ಣಯ, ಹವಾಮಾನ ಬಿಕ್ಕಟ್ಟನ್ನು ಬಗೆಹರಿಸುವ ಸವಾಲುಗಳಿಗೆ ಸಂಕೇತದಂತೆ ಕಾಣುತ್ತದೆ.

2018ರಲ್ಲಿ ಬಿಡುಗಡೆಯಾದ ಐಪಿಸಿಸಿ ವರದಿ ಇನ್ನು ಮುಂದಿನ 12 ವರ್ಷಗಳಲ್ಲಿ ಇಂಧನಗಳನ್ನು ಸುಡುವುದರಿಂದ ಹೊರಸೂಸುವ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣದಲ್ಲಿ ಕನಿಷ್ಟ 38.2 ಬಿಲಿಯನ್ ಟನ್‌ನಷ್ಟು ತಗ್ಗಿಸಬೇಕು. ಆಗಷ್ಟೇ ಜಾಗತಿಕ ತಾಪಮಾನದ ಏರಿಕೆಯನ್ನು 1.5 ಡಿಗ್ರೀ ಸೆಲ್ಷಿಯಸ್‌ಗಿಂತ ಕಡಿಮೆ ಇರುವಂತೆ ನೋಡಿಕೊಳ್ಳಲು ಸಾಧ್ಯ. ಇದನ್ನು ಸಾಧಿಸಲು ನಾವು ಸೋತರೆ, ಚಂಡಮಾರುತಗಳು, ಪ್ರವಾಹಗಳು ಮತ್ತು ಬರಗಳು ಹಿಂದೆಂದೂ ಕಾಣದ ಪ್ರಮಾಣದಲ್ಲಿ ಜಗತ್ತಿಗೆ ಅಪಾಯವನ್ನು ಒಡ್ಡಲಿವೆ. ಸಾವಿರಾರು ಮಿಲಿಯನ್ ಜನರು ಬಡತನಕ್ಕೆ ತಳ್ಳಲ್ಪಡುತ್ತಾರೆ ಮತ್ತು ಸಾವಿರಾರು ಜೀವ ಪ್ರಬೇಧಗಳು ಅಳಿಯಲಿವೆ ಎಂದು ಎಚ್ಚರಿಸಿತ್ತು. ಆದರೆ ಇದರ ಗಂಭೀರತೆ ಹಲವು ದೇಶಗಳ ಸರ್ಕಾರಗಳಿಗೆ, ಅವುಗಳ ಮುಖಂಡರಿಗೆ ಯಾವುದೇ ರೀತಿಯಲ್ಲಿ ಕಾಡಿಲ್ಲ ಎಂಬ ಸತ್ಯ ನಮ್ಮ ಈ ಗ್ರಹದಲ್ಲಿ ಮುಂದಿನ ಹಲವು ಪೀಳಿಗೆಗಳು ಅನುಭವಿಸಬೇಕಾದ ಕಷ್ಟಕೋಟಲೆಗಳಿಗೆ ಮುನ್ನುಡಿಯಂತಿದೆ.

ನವ ಉದಾರೀಕರಣದ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಕೆಲವೇ ಕೆಲವು ಜನರ ಕೈಲಿ ಬಂಡವಾಳ ಶೇಖರಣೆಯಾಗಿರುವುದು, ಅವರು ಲಾಭಕ್ಕಾಗಿ ಕಾಡುಗಳು, ಜೀವವೈವಿಧ್ಯತೆ ಹೀಗೆ ಪರಿಸರ ಸಮತೋಲನದ ಎಲ್ಲ ಸಂಗತಿಗಳನ್ನೂ ಪಣಕ್ಕಿಟ್ಟು ಮುನ್ನುಗ್ಗುವ ಈ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳದೆ ಹೋದರೆ ಇನ್ನು ಕೆಲವೇ ವರ್ಷಗಳಲ್ಲಿ ಸರಿಪಡಿಸಲು ಸಾಧ್ಯವಾಗದ ಪರಿಸ್ಥಿತಿಗೆ ನಾವು ತಲುಪುತ್ತೇವೆ ಎಂಬ ಎಚ್ಚರಿಕೆಯನ್ನು ನಯೋಮಿ ಕ್ಲೀನ್ ಸೇರಿದಂತೆ ಹಲವು ಪರಿಸರ ಕಾರ್ಯಕರ್ತರು-ಚಿಂತಕರು ಎಚ್ಚರಿಸುತ್ತಾ ಬಂದಿದ್ದಾರೆ. ಅಂತಹ ಆರ್ಥಿಕ ವ್ಯವಸ್ಥೆಗಳ ಬಗ್ಗೆ ಅಥವಾ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿಯೇ ಅಗತ್ಯವಿರುವ ಭಾರಿ ಸುಧಾರಣೆಗಳ ಬಗ್ಗೆ ಹಲವು ಆರ್ಥಿಕ ತಜ್ಞರು ಪ್ರತಿಪಾದಿಸುತ್ತಾ ಬಂದಿದ್ದರೂ ಸುಧಾರಣೆಗೆ ಒಡ್ಡಿಕೊಳ್ಳುವ ದೃಷ್ಟಿಯಲ್ಲಿ ಅವುಗಳು ಜನಪ್ರಿಯತೆ ಪಡೆಯಲು ಇನ್ನೂ ಸಾಧ್ಯವಾಗಿಲ್ಲ. ಆದರೆ ಅಪಾಯದ ತೂಗುಕತ್ತಿ ಮಾತ್ರ ದಿನದಿಂದ ದಿನಕ್ಕೆ ವೇಗವಾಗಿ ಬೀಸುತ್ತಲೇ ಇದೆ.

ಇನ್ನು ಕಾರ್ಬನ್ ಡೈ ಆಕ್ಸೈಡ್‌ಅನ್ನು ವಾತಾವರಣದಿಂದ ತಗ್ಗಿಸುವ ತಂತ್ರಜ್ಞಾನ ಕ್ರಮಗಳು ಕೂಡ ಚರ್ಚೆಯಲ್ಲಿವೆ. ಕಾರ್ಬನ್ ಡೈ ಆಕ್ಸೈಡ್‌ಅನ್ನು ವಾತಾವರಣದಿಂದ ಹೀರಿ ಅದನ್ನು ಬೇರೆ ರಾಸಾಯನಿಕವಾಗಿ ಪರಿವರ್ತಿಸುವ ತಂತ್ರಜ್ಞಾನದ ಪ್ರಯೋಗ ನಡೆದಿದ್ದರೂ ಅದರ ಭಾರಿ ವೆಚ್ಚದ ಕಾರಣಕ್ಕೆ ಅದು ಯಶಸ್ವಿಯಾಗುವುದರ ಬಗ್ಗೆ ಹಲವು ವಿಜ್ಞಾನಿಗಳ ನಡುವೆಯೇ ಸಂಶಯ ಇದೆ. ಇದೇ ರೀತಿಯಲ್ಲಿ ವಾತಾವರಣದ ಸ್ಟ್ರಾಟೋಸ್ಪಿಯರ್‌ನಲ್ಲಿ ಸಲ್ಫೇಟ್ ಕಣಗಳ ಏರೋಸಾಲ್‌ಗಳನ್ನು ಏರೋಪ್ಲೇನ್ ಮೂಲಕ ಸಿಂಪಡಿಸಿ ಸೂರ್ಯನ ಕಿರಣಗಳನ್ನು ಹಿಂದಕ್ಕೆ ಪ್ರತಿಫಲಿಸುವಂತೆ ಮಾಡುವ ತಂತ್ರಜ್ಞಾನದಿಂದಲೂ ಜಾಗತಿಕ ತಾಪಮಾನವನ್ನು ತಗ್ಗಿಸಬಹುದು ಎಂಬುದು ಮತ್ತೊಂದು ತಂತ್ರಜ್ಞಾನ ಆಧಾರಿತ ಪ್ರಯೋಗವಾಗಿದೆ.

ಆದರೆ ಈ ತಂತ್ರಜ್ಞಾನ ಮುಂದೆ ಒಡ್ಡಬಹುದಾದ ದುಷ್ಪರಿಣಾಮಗಳ ಬಗ್ಗೆ ವಿಜ್ಞಾನಿಗಳು ಸಂಶಯ ವ್ಯಕ್ತಪಡಿಸುತ್ತಾರೆ. ಈ ನಿಟ್ಟಿನಲ್ಲಿ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಿಂದ ಮೊದಲುಗೊಂಡು, ಕಾರ್ಬನ್ ಡೈ ಆಕ್ಸೈಡ್‌ಅನ್ನು ಸೂಸುವ ಇಂಧನಗಳನ್ನು ಉರಿಸದೆ ಬದಲಿ ಶಕ್ತಿಯ ಮೂಲಗಳನ್ನು ಹುಡುಕಿಕೊಳ್ಳುವುದೇ ಈ ಸದ್ಯಕ್ಕೆ ಜಗತ್ತಿನ ಮುಂದಿರುವ ಸುಸ್ಥಿರ ಪರಿಹಾರವಾಗಿದೆ. ಇದಲ್ಲದೆ ವೈಯಕ್ತಿಕ ನೆಲೆಯಲ್ಲಿ ಜನರು ತಮ್ಮ ಬಳಕೆಯ ಬಗ್ಗೆ, ಕನ್ಸಂಪ್ಷನ್ ಬಗ್ಗೆ ಸುಸ್ಥಿರತೆಯೆಡೆಗೆ ಹೆಜ್ಜೆ ಹಾಕುವುದನ್ನೂ ಅಭ್ಯಾಸ ಮಾಡಿಕೊಳ್ಳುವ ಅಗತ್ಯ ಇಂದು ಹಿಂದೆಂದಿಗಿಂತಲೂ ಹೆಚ್ಚಿದೆ. ಬರಿದಾಗಿರುವ ಕಾಡುಗಳನ್ನು ಮತ್ತೆ ಚಿಗುರಿಸುವ ಸಲುವಾಗಿ ಅಪಾರ ಮರಗಳನ್ನು ನೆಡುವುದು ದೀರ್ಘಕಾಲಿಕ ಯೋಜನೆಯಾದರೂ ಅದು ಕಾರ್ಬನ್ ಡೈ ಆಕ್ಸೈಡ್ ಅನಿಲವನ್ನು ತಗ್ಗಿಸುವ ಪರಿಣಾಮಕಾರಿ ಕ್ರಮಗಳಲ್ಲಿ ಒಂದಾಗಬಲ್ಲದಾಗಿದೆ. ಇದಕ್ಕೆಲ್ಲಾ ಆದಿಯಾಗಿ, ಸಾರ್ವಜನಿಕರಿಗೆ ಸಮಾನವಾಗಿ ಸಲ್ಲುವ ಆಸ್ತಿಗಳಾದ ನದಿ, ಕೆರೆ, ಹಳ್ಳಕೊಳ್ಳ, ಗೋಮಾಳ, ಕಾಡು ಮುಂತಾದವುಗಳ ಬಗ್ಗೆ ನಮ್ಮೆಲ್ಲರ ಸಹಭಾಗಿತ್ವದ ಒಡೆತನದ ಕಲ್ಪನೆಯನ್ನು ಜಾಗೃತಗೊಳಿಸಿ, ಅವುಗಳನ್ನು ಉಳಿಸಿಕೊಂಡು, ಸಂರಕ್ಷಿಸುವತ್ತ ಜನಸಾಮಾನ್ಯರು ಇಂದು ಚಿಂತಿಸಬೇಕಿದೆ. ಸಹಭಾಗಿತ್ವದ ಒಡೆತನದ ಆಸ್ತಿಗಳನ್ನು ಖಾಸಗಿಯವರ ಪಾಲಾಗದಂತೆ ತಡೆಯಲು ಸರ್ಕಾರಗಳ ಮೇಲೆ ಒತ್ತಡ ಹೇರಬೇಕಾಗಿದೆ.

ಇದು ಜೀವಪ್ರಬೇಧಗಳು ಅತಿ ವೇಗದಲ್ಲಿ ಅಳಿಯುತ್ತಿರುವ ಯುಗವಾಗಿದೆ ಮತ್ತು ಇದಕ್ಕೆ ಕಾರಣಗಳು ಸ್ವಾಭಾವಿಕವಾಗಿರದೆ ಮನುಷ್ಯನೇ ಆಗಿದ್ದಾನೆ. ಜೀವವೈವಿಧ್ಯಗಳನ್ನು ಉಳಿಸಿಕೊಳ್ಳುವ ಜೊತೆಗೆ ಸಮತೋಲನವನ್ನು ಕಾಪಾಡಿಕೊಳ್ಳುವತ್ತಲೂ ಜನಪರ ಆಂದೋಲನಗಳು ಸೃಷ್ಟಿಯಾಗಬೇಕಾದ ಜರೂರತ್ತಿದೆ. ಈ ನಿಟ್ಟಿನಲ್ಲಿ ಚೀನಾದ ಕುನ್‌ಮಿಂಗ್‌ನಲ್ಲಿ ಜಾರಿಯಲ್ಲಿರುವ ವಿಶ್ವಸಂಸ್ಥೆಯ ಜೀವವೈವಿಧ್ಯದ ಬಗೆಗಿನ COP-15 ಸಮಾವೇಶ ಅಗತ್ಯ ಕ್ರಮಗಳಿಗಾಗಿ ನಿರ್ಣಯಗಳನ್ನು ಕೈಗೊಳ್ಳಲಿ ಎಂಬುದು ಆಶಯ ನಮ್ಮದು.

2021ರ ಭೌತಶಾಸ್ತ್ರಕ್ಕಾಗಿ ನೀಡುವ ನೊಬೆಲ್ ಪ್ರಶಸ್ತಿಯನ್ನು ಮೂವರು ಹವಾಮಾನ ವಿಜ್ಞಾನಿಗಳು ಹಂಚಿಕೊಂಡಿದ್ದಾರೆ. ಇದು ಇಂದು ಜಗತ್ತು ಎದುರಿಸುತ್ತಿರುವ ಹವಾಮಾನ ವೈಪರೀತ್ಯಗಳ ಬಗೆಗೆ ಪರಿಹಾರ ಹುಡುಕುವ ದಿಕ್ಕಿನಲ್ಲಿ ಹೆಚ್ಚು ತಿಳಿವಳಿಕೆ ನೀಡಲು ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ ಸಮಸ್ಯೆಗಳನ್ನು ಎದುರುಗೊಳ್ಳಲು ಸಹಕಾರಿಯಾದೀತು.


ಇದನ್ನೂ ಓದಿ: 2021ರ ಫಿಸಿಕ್ಸ್ ನೊಬೆಲ್; Butterfly Effect ಮತ್ತು ಹವಾಮಾನ ಬದಲಾವಣೆ

ಇದನ್ನೂ ಓದಿ: ಜಗತ್ತಿನ ಹಲವೆಡೆ ಪ್ರವಾಹದ ಹಾವಳಿ; ಎಲ್ಲವೂ ಕೊಚ್ಚಿಕೊಂಡು ಹೋಗುವ ದಿನ ಬರುವ ಮುನ್ನ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...