ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಗುಂಡೇಟಿಗೆ ಇಬ್ಬರು ಬಿಹಾರಿ ಕಾರ್ಮಿಕರು ಬಲಿಯಾಗಿದ್ದಾರೆ. ಈ ತಿಂಗಳಲ್ಲಿ ಭಯೋತ್ಪಾದಕರಿಗೆ ಬಲಿಯಾದ ನಾಗರಿಕರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಕಲ್ಗುಮ್ ಜಿಲ್ಲೆಯ ವಾನ್ಪೋವ್ನಲ್ಲಿ ಭಾನುವಾರ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಇಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬ ಕಾರ್ಮಿಕ ಗಾಯಗೊಂಡಿದ್ದಾನೆ.
J&K: Two non-local labourers killed and one injured after being fired upon by terrorists at Wanpoh area of Kulgam. Police & Security Forces cordoned off the area. Details awaited. pic.twitter.com/52H4vgOFCe
— ANI (@ANI) October 17, 2021
ಕಣಿವೆ ಪ್ರಾಂತ್ಯದಲ್ಲಿ ಬಿಹಾರದ ಗೋಲ್ಗುಪ್ಪ ವ್ಯಾಪಾರಿ ಹಾಗೂ ಉತ್ತರ ಪ್ರದೇಶದ ಬಡಗಿಯ ಹತ್ಯೆಯ ಒಂದು ದಿನದ ಬಳಿಕ ಮತ್ತೊಮ್ಮೆ ಭಯೋತ್ಪಾದಕರಿಂದ ದಾಳಿಯಾಗಿದೆ.
ಗೋಲ್ಗುಪ್ಪ ವ್ಯಾಪಾರಿ ಅರ್ಬಿನ್ ಕುಮಾರ್ ಶಾ ಅವರು ಶ್ರೀನಗರದಲ್ಲಿ, ಬಡಗಿ ಸಗೀರ್ ಅಹಮದ್ ಅವರು ಪುಲ್ವಾಮದಲ್ಲಿ ಭಯೋತ್ಪಾದಕರ ದಾಳಿಗೆ ತುತ್ತಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಗರಿಕರ ಮೇಲೆ ನಡೆದ ದಾಳಿಯಲ್ಲಿ ಜೀವ ಕಳೆದುಕೊಂಡ 11 ಮಂದಿಯಲ್ಲಿ ಐವರು ಹೊರರಾಜ್ಯಗಳಿಂದ ಬಂದವರಾಗಿದ್ದಾರೆ. ಕಾಶ್ಮೀರದಿಂದ ಇತರ ರಾಜ್ಯಗಳ ಜನರನ್ನು ಹೊರಗೆ ಓಡಿಸಲು ಭಯೋತ್ಪಾದಕರು ಬಯಸಿದಂತಿದೆ ಎಂದು ಮೂಲಗಳು ಹೇಳಿವೆ.
ಈ ಹತ್ಯೆಗಳು ಕಣಿವೆಯಲ್ಲಿ ಭಯವನ್ನು ಹುಟ್ಟುಹಾಕಿದ್ದು, ಸಂಚಾರಿ ಶಿಬಿರಗಳಲ್ಲಿ ವಾಸಿಸುತ್ತಿರುವ ಕಾಶ್ಮೀರಿ ಪಂಡಿತ್ ಕುಟುಂಬಗಳು ಹೊರಹೋಗಲು ಉತ್ತೇಜಿಸಿವೆ. ಕಾಶ್ಮೀರಿ ವಲಸಿಗರಿಗಾಗಿ ಜಾರಿಗೊಳಿಸಲಾಗಿದ್ದ ಪ್ರಧಾನ ಮಂತ್ರಿಯವರ ವಿಶೇಷ ಯೋಜನೆಯಡಿ ಕೆಲಸಗಳನ್ನು ಪಡೆದು ಕಣಿವೆಗೆ ಮರಳಿದ್ದ ಸರ್ಕಾರಿ ನೌಕರರ ಕುಟುಂಬಗಳು ಸೇರಿದಂತೆ ಹತ್ತಾರು ಕುಟುಂಬಗಳು ಹೊರಬಂದಿವೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಬಿಹಾರಿ ಕಾರ್ಮಿಕರ ಹತ್ಯೆಯ ಬಳಿಕ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ಕುಮಾರ್ ಕರೆ ಮಾಡಿದ್ದಾರೆ.
“ಈ ಹತ್ಯೆಗಳಲ್ಲಿ ಪಾಕ್ ಕಮಾಂಡೋಗಳ ಕೈವಾಡವಿದೆ” ಎಂದು ಶಂಕಿಸಲಾಗಿದೆ ಎಂದು ಮೂಲಗಳು ಹೇಳಿವೆ. “ನಾವು ಭಯೋತ್ಪಾದಕರನ್ನು ಸದೆಬಡಿಯುತ್ತೇವೆ” ಎಂದು ಲೆಫ್ಟಿನೆಂಟ್ ಗವರ್ನರ್ ತಿಳಿಸಿದ್ದಾರೆ.
ದಾಳಿಗಳ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಪ್ರತ್ಯೇಕತಾವಾದಿಗಳೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ಕೇಂದ್ರಾಡಳಿತ ಪ್ರದೇಶದಾದ್ಯಂತ ಸುಮಾರು 900 ಜನರನ್ನು ಬಂಧಿಸಿದ್ದಾರೆ.
ಭದ್ರತಾ ಪಡೆಗಳು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಪೊಲೀಸರ ಪ್ರಕಾರ, ಕಳೆದ ಒಂದು ವಾರದಲ್ಲಿ 13 ಭಯೋತ್ಪಾದಕರು ಹತರಾಗಿದ್ದಾರೆ.
“ನಾಗರಿಕರ ಹತ್ಯೆಗಳ ನಂತರ ಒಂಬತ್ತು ಎನ್ಕೌಂಟರ್ಗಳಲ್ಲಿ 13 ಭಯೋತ್ಪಾದಕರನ್ನು ಸಾಯಿಸಿದ್ದೇವೆ. ಶ್ರೀನಗರದಲ್ಲಿ ಐವರು ಭಯೋತ್ಪಾದಕರಲ್ಲಿ ಮೂವರನ್ನು 24 ಗಂಟೆಗಳಲ್ಲಿ ನಾವು ಸಾಯಿಸಿದ್ದೇವೆ” ಎಂದು ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ: ರೈತ ಹೋರಾಟ ನೆಲದಲ್ಲಿ ಕೊಲೆ: ನಿಹಾಂಗ್ ಬೆಂಬಲಿತ ವ್ಯಕ್ತಿ ಪೊಲೀಸರಿಗೆ ಶರಣು