Homeಚಳವಳಿರೈತ ಹೋರಾಟ ನೆಲದಲ್ಲಿ ಕೊಲೆ: ನಿಹಾಂಗ್‌‌ ಬೆಂಬಲಿತ ವ್ಯಕ್ತಿ ಪೊಲೀಸರಿಗೆ ಶರಣು

ರೈತ ಹೋರಾಟ ನೆಲದಲ್ಲಿ ಕೊಲೆ: ನಿಹಾಂಗ್‌‌ ಬೆಂಬಲಿತ ವ್ಯಕ್ತಿ ಪೊಲೀಸರಿಗೆ ಶರಣು

ಒಬ್ಬಾತ ಕೊಂದಿದ್ದಾನೆ, ಆತನನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ನಡೆಯುತ್ತಿದೆ. ಆದರೆ ಈ ಘಟನೆ ರೈತ ಹೋರಾಟಕ್ಕೆ ಯಾವುದೇ ಸಮಸ್ಯೆ ಉಂಟು ಮಾಡುವುದಿಲ್ಲ: ರಾಕೇಶ್‌ ಟಿಕಾಯತ್‌

- Advertisement -
- Advertisement -

ಪ್ರತಿಭಟನಾ ನಿರತ ದೆಹಲಿಯ ಸಿಂಘು ಗಡಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಈ ಕೊಲೆಯನ್ನು ತಾನೇ ಮಾಡಿದ್ದಾಗಿ ನಿಹಾಂಗ್‌ ಗುಂಪಿನ ಸದಸ್ಯ ಒಪ್ಪಿಕೊಂಡಿದ್ದಾರೆ.

ನಿಹಾಂಗ್ ಗುಂಪಿನ ಸರವ್ ಜಿತ್ ಸಿಂಗ್ ಶುಕ್ರವಾರ ಸಂಜೆ ಪೊಲೀಸರಿಗೆ ಶರಣಾಗಿದ್ದು, ಹತ್ಯೆಯ ಹೊಣೆ ಹೊತ್ತಿದ್ದಾನೆ. ಆತನನ್ನು ಬಂಧಿಸಿರುವ ಪೊಲೀಸರು, ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಮೃತರನ್ನು ಪಂಜಾಬ್‌ನ ತರ್ನ್‌ ತರನ್ ಜಿಲ್ಲೆಯ ಚೀಮಾ ಕಲಾ ಹಳ್ಳಿಯ ದರ್ಶನ್ ಸಿಂಗ್ ಎಂಬುವರ ಮಗ ಲಖ್ಬೀರ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಯುವಕ ನಿಹಾಂಗ್‌ ಗುಂಪಿನ ಜೊತೆಯಲ್ಲಿಯೇ ಇದ್ದರು ಎನ್ನಲಾಗಿದೆ.

ಮೃತ ಲಖ್ಬೀರ್‌‌ ಸಿಂಗ್‌ ಅವರು, ಸುಮಾರು 35 ವರ್ಷ ವಯಸ್ಸಿನವರು. ದಲಿತರಾಗಿರುವ ಅವರು ಕಾರ್ಮಿಕರಾಗಿದ್ದು, ದತ್ತು ಪುತ್ರ, ಒಬ್ಬ ಸಹೋದರಿ, ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಈ ಹಿಂದೆ ಸೋನಿಪತ್‌ಗೆ ಭೇಟಿ ನೀಡಬೇಕಿದ್ದ ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್, “ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದರು. ಖಟ್ಟರ್ ಅವರು ಚಂಡಿಗಡದಲ್ಲಿನ ಅವರ ನಿವಾಸದಲ್ಲಿ ಸಭೆ ನಡೆಸಿ, ಹತ್ಯೆಯ ಸಂಬಂಧ ಗೃಹ ಸಚಿವ ಅನಿಲ್ ವಿಜ್ ಮತ್ತು ಹರಿಯಾಣ ಪೊಲೀಸ್ ಡಿಜಿಪಿ ಜೊತೆಗೆ ಚರ್ಚಿಸಿದ್ದರು.

ಇದನ್ನೂ ಓದಿರಿ: ರೈತರ ಹತ್ಯಾಕಾಂಡ: ಅಮಿತ್ ಶಾ ಮನೆ ಮುಂದೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ

ಸ್ಥಳೀಯ ಕುಂಡ್ಲಿ ಪೊಲೀಸರು ಎಚ್ಚರಿಕೆ ವಹಿಸಿದ ಬಳಿಕ  ಬೆಳಿಗ್ಗೆ ಐದು ಗಂಟೆಯ ವೇಳೆಗೆ ಮೃತದೇಹ ಪತ್ತೆಯಾಗಿತ್ತು. ಸೋನಿಪತ್‌ ಪೊಲೀಸ್‌ ಸೂಪರಿಡೆಂಟೆಡ್‌‌ ಜೆ.ಎಸ್‌.ರಾಂಧ್ವಾ ಅವರು, ಪ್ರಮುಖ ಸುಳಿವುಗಳು ದೊರೆತಿವೆ ಎಂದು ಹೇಳಿದ್ದರು. ಐಜಿಪಿ (ರೋಹ್ಟಕ್‌ ರೇಂಜ್‌) ಸಂದೀಪ್ ಖಿರ್ವಾರ್ ಫೋರೆನ್ಸಿಕ್ ತಂಡವು ಪ್ರದೇಶವನ್ನು ಪರಿಶೀಲಿಸಿರುವುದಾಗಿ ಎಎನ್‌ಐಗೆ ತಿಳಿಸಿದ್ದರು.

ಹತ್ಯೆಗೆ ಸಂಬಂಧಿಸಿದಂತೆ ಮೂರು ವೀಡಿಯೊಗಳು ಹರಿದಾಡಿದ್ದವು. ನಿಹಾಂಗ್‌ಗಳಂತೆ ಧರಿಸಿರುವ ಗಂಡಸರ ದೊಡ್ಡ ಗುಂಪನ್ನು ಒಂದು ವಿಡಿಯೋದಲ್ಲಿ ಕಾಣಬಹುದು. ನಿಹಾಂಗ್‌ನ ಸಿಖ್ ಗುಂಪು – ಲಖ್ಬೀರ್ ಸಿಂಗ್ ಸುತ್ತ ನಿಂತು ಅವನಿಗೆ ಪ್ರಶ್ನೆಗಳನ್ನು ಕೇಳುತ್ತಿರುವುದನ್ನು ನೋಡಬಹುದು. ಲಖ್ಬೀರ್‌ನ ಎಡಗೈ ಕತ್ತರಿಸಿದ ನಂತರ ಗುಂಪು ಆತನ ಮೇಲೆ ನಿಂತಿರುವುದನ್ನು ಒಂದು ವಿಡಿಯೋದಲ್ಲಿ ಕಾಣಬಹುದು ಎಂದು ವರದಿಗಳಾಗಿವೆ.

ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್ ಅನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ಲಖ್ಬೀರ್ ಸಿಂಗ್ ಅವರನ್ನು ಹೊಡೆದು ಸಾಯಿಸಲಾಗಿದೆ. ಆತನ ಎಡಗೈ ಮತ್ತು ಬಲಗಾಲನ್ನು ಕತ್ತರಿಸಲಾಗಿದೆ ಎಂದು ವರದಿಗಳು ಹೇಳುತ್ತವೆ. ನಂತರ ಆತನ ಕೊಲೆಗಾರರು ಶವವನ್ನು ಪೊಲೀಸ್ ಬ್ಯಾರಿಕೇಡ್‌ಗೆ ಕಟ್ಟಿದ್ದರು ಎಂದು ತಿಳಿದುಬಂದಿದೆ.

ಹತ್ಯೆ ಸಂಬಂಧ ಹರಿಯಾಣ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸೋನಿಪತ್‌ನ ಕುಂಡ್ಲಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 302 (ಕೊಲೆ) ಮತ್ತು 34 ಅಡಿಯಲ್ಲಿ ಅನಾಮಧೇಯ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಸಂಯುಕ್ತ ಕಿಸಾನ್‌ ಮೋರ್ಚಾ ಖಂಡನೆ

ಘಟನೆ ಕುರಿತು ಸಂಯುಕ್ತ ಕಿಸಾನ್‌ ಮೋರ್ಚಾ ಎಸ್‌ಕೆಎಂ ಪತ್ರಿಕಾ ಹೇಳಿಕೆ ನೀಡಿತ್ತು. “ಸಿಂಘು ಗಡಿಯಲ್ಲಿ ಪಂಜಾಬ್‌ನ ಒಬ್ಬ ವ್ಯಕ್ತಿಯನ್ನು (ತರ್ನ್ ತರನ್ ಜಿಲ್ಲೆಯ ಚೀಮಾ ಕಲಾ ಹಳ್ಳಿಯ ದರ್ಶನ್ ಸಿಂಗ್ ಎಂಬುವರ ಮಗ ಲಖ್ಬೀರ್ ಸಿಂಗ್) ವಿರೂಪಗೊಳಿಸಿ ಕೊಲೆ ಮಾಡಲಾಗಿದೆ ಎಂಬುದು ಸಂಯುಕ್ತ ಕಿಸಾನ್ ಮೋರ್ಚಾ ಗಮನಕ್ಕೆ ಬಂದಿದೆ. ಒಂದು ನಿಹಾಂಗ್ ಗುಂಪು ಘಟನೆಯ ಹೊಣೆ ಹೊತ್ತಿದ್ದು, ಧಾರ್ಮಿಕ ಗ್ರಂಥವನ್ನು ಅಪವಿತ್ರಗೊಳಿಸಲು ಪ್ರಯತ್ನ ಮಾಡಿದ್ದರಿಂದ ಹೀಗೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಮೃತ ವ್ಯಕ್ತಿ ಇದೇ ಗುಂಪಿನೊಂದಿಗೆ ಹಲವು ದಿನಗಳಿಂದ ಇದ್ದರು” ಎಂದು ಉಲ್ಲೇಖಿಸಿತ್ತು.

“ಈ ಕ್ರೂರ ಹತ್ಯೆಯನ್ನು ಎಸ್‌ಕೆಎಂ ಖಂಡಿಸುತ್ತದೆ. ಈ ಘಟನೆಯ ಎರಡೂ ಪಕ್ಷಗಳಾದ ಈ ನಿಹಾಂಗ್ ಗುಂಪು ಮತ್ತು ಮೃತ ವ್ಯಕ್ತಿಗೂ ಸಂಯುಕ್ತ ಕಿಸಾನ್ ಮೋರ್ಚಾದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇವೆ. ನಾವು ಯಾವುದೇ ಧಾರ್ಮಿಕ ಪಠ್ಯ ಅಥವಾ ಚಿಹ್ನೆಯ ಪವಿತ್ರತೆಗೆ ವಿರುದ್ಧವಾಗಿದ್ದೇವೆ” ಎಂದು ಸ್ಪಷ್ಟನೆ ನೀಡಿದೆ.

“ಆದರೆ, ಧಾರ್ಮಿಕತೆಯ ಆಧಾರದ ಮೇಲೆ ಯಾವುದೇ ವ್ಯಕ್ತಿ ಅಥವಾ ಗುಂಪು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಅನುಮತಿಸುವುದಿಲ್ಲ. ಕೊಲೆ ಆರೋಪ ಮತ್ತು ಅಪವಿತ್ರತೆಯ ಪಿತೂರಿ ಹಿಂದಿರುವವರ ಬಗ್ಗೆ ತನಿಖೆ ಮಾಡಿ, ತಪ್ಪಿತಸ್ಥರನ್ನು ಕಾನೂನಿನ ಪ್ರಕಾರ ಶಿಕ್ಷಿಸಬೇಕು ಎಂದು ಒತ್ತಾಯಿಸುತ್ತೇವೆ. ಸಂಯುಕ್ತ ಕಿಸಾನ್ ಮೋರ್ಚಾ ಯಾವುದೇ ಕಾನೂನುಬದ್ಧ ಕ್ರಮದಲ್ಲಿ ಪೊಲೀಸರು ಮತ್ತು ಆಡಳಿತದೊಂದಿಗೆ ಸಹಕರಿಸುತ್ತದೆ” ಎಂದು ಭರವಸೆ ನೀಡಿದೆ.

ಜೊತೆಗೆ “ಈ  ಪ್ರಜಾತಾಂತ್ರಿಕ ಶಾಂತಿಯುತ ರೈತ ಚಳವಳಿಯು ಯಾವುದೇ ರೀತಿಯ ಹಿಂಸೆಯನ್ನು ವಿರೋಧಿಸುತ್ತದೆ” ಎಂದು ತನ್ನ ಹೇಳಿಕೆಯಲ್ಲಿ ಎಸ್‌ಕೆಎಂ ತಿಳಿಸಿದೆ.

ರೈತ ಹೋರಾಟಕ್ಕೆ ಸಮಸ್ಯೆಯಾಗದು: ಟಿಕಾಯತ್‌

“ಈಗ ನಡೆದಿರುವ ಘಟನೆ ವಿಷಾದನೀಯ. ಒಬ್ಬಾತ ಕೊಂದಿದ್ದಾನೆ, ಆತನನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ನಡೆಯುತ್ತಿದೆ. ಆದರೆ ಈ ಘಟನೆ ರೈತ ಹೋರಾಟಕ್ಕೆ ಯಾವುದೇ ಸಮಸ್ಯೆ ಉಂಟು ಮಾಡುವುದಿಲ್ಲ” ಎಂದು ರೈತ ನಾಯಕ ರಾಕೇಶ್ ಟಿಕಾಯತ್‌‌‌ ಹೇಳಿಕೆ ನೀಡಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿರಿ: ರೈತ ಹೋರಾಟ: ರಾವಣನ ಬದಲು ಪ್ರಧಾನಿ ಮೋದಿ ಪ್ರತಿಕೃತಿ ದಹಿಸಿ ದಸರಾ ಆಚರಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ನೀವು ನಮ್ಮ ಬೆನ್ನೆಲುಬು; ಪಕ್ಷದ ಡಿಎನ್‌ಎ..’; ಕಾಂಗ್ರೆಸ್ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಸಂದೇಶ

0
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಪಕ್ಷದ ಕಾರ್ಯಕರ್ತರಿಗೆ ಹೃದಯಸ್ಪರ್ಶಿ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದಾರೆ. ಕಾಂಗ್ರೆಸ್‌ನ ಅಧಿಕೃತ ಹ್ಯಾಂಡಲ್‌ನಿಂದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ರಾಹುಲ್ ಗಾಂಧಿ,...