ಕಳೆದೆ ಮೂರು ತಿಂಗಳುಗಳಿಂದ ಪಂಜಾಬ್ ರಾಜ್ಯದ ರಾಜಕೀಯ ಬೆಳವಣಿಗೆಗಳ ಕೇಂದ್ರ ಬಿಂದುವಾಗಿರುವ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು, ರಾಹುಲ್ ಗಾಂಧಿ ಭೇಟಿ ನಂತರ ತಮ್ಮ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಹುದ್ದೆಗೆ ನೀಡಿದ್ದ ರಾಜೀನಾಮೆಯನ್ನು ಹಿಂಪಡೆಯುವುದಾಗಿ ತಿಳಿಸಿದ್ದಾರೆ.
ಸೆಪ್ಟಂಬರ್ 28 ರಂದು ಸಿಧು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿರದ್ದರು. “ರಾಜಿಯು ಮನುಷ್ಯನೊಬ್ಬನ ವ್ಯಕ್ತಿತ್ವವನ್ನು ನಾಶಗೊಳಿಸುತ್ತದೆ. ಪಂಜಾಬ್ನ ಭವಿಷ್ಯ ಮತ್ತು ಪಂಜಾಬ್ನ ಕಲ್ಯಾಣಕ್ಕಾಗಿ ನಾನು ಎಂದಿಗೂ ರಾಜಿ ಮಾಡಿಕೊಳ್ಳಲಾರೆ. ಆದ್ದರಿಂದ ನಾನು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಮುಂದಕ್ಕೂ ಕಾಂಗ್ರೆಸ್ ಸೇವೆ ಮುಂದುವರಿಸುತ್ತೇನೆ” ಎಂದು ನವಜೋತ್ ಸಿಧು ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದರು.
ನಾನು ಎಲ್ಲ ಕಾಳಜಿಗಳನ್ನು ಪಕ್ಷದ ಹೈಕಮಾಂಡ್ನೊಂದಿಗೆ, ರಾಹುಲ್ ಗಾಂಧಿಯವರೊಂದಿಗೆ ಹಂಚಿಕೊಂಡಿದ್ದೇನೆ. ಪಂಜಾಬ್ ಅಭಿವೃದ್ದಿಯ ವಿಚಾರದಲ್ಲಿ ಪಕ್ಷದ ಅಧ್ಯಕ್ಷರು, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯವರ ಮೇಲೆ ಸಂಪೂರ್ಣ ಭರವಸೆಯಿದ್ದು, ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಬದ್ಧವಾಗಿದ್ದೇನೆ. ಅವರ ಆದೇಶಗಳನ್ನು ಪಾಲಿಸುತ್ತೇನೆ. ಎಲ್ಲಾ ಸಮಸ್ಯೆಗಳು ಬಗೆಹರಿದಿವೆ ಎಂದು ನವಜೋತ್ ಸಿಂಗ್ ಸಿಧು ಗುರುವಾರದ ಸಭೆ ಬಳಿಕೆ ಹೇಳಿದ್ದರು.
ಪಕ್ಷದ ಮುಖ್ಯಸ್ಥ ಹರೀಶ್ ರಾವತ್ ಮಾತನಾಡಿ ” ಸಿಧು ತಮ್ಮ ಕಾಳಜಿಗಳನ್ನು ರಾಹುಲ್ ಗಾಂಧಿ ಅವರೊಂದಿಗೆ ಹಂಚಿಕೊಂಡಿದ್ದಾರೆ. ಅವರ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಅವರು ತಮ್ಮ ರಾಜೀನಾಮೆ ಪತ್ರವನ್ನು ವಾಪಸ್ ಪಡೆಯಲು ಒಪ್ಪಿದ್ದಾರೆ. ಕೆಲವೇ ದಿನಗಳಲ್ಲಿ ಅವರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮರಳಿದ್ದಾರೆ” ಎಂದಿದ್ದಾರೆ.
ಇದನ್ನೂ ಓದಿ: ಹುದ್ದೆ ಇರಲಿ, ಇಲ್ಲದಿರಲಿ ರಾಹುಲ್, ಪ್ರಿಯಾಂಕ ಜೊತೆಗಿರುವೆ: ನವಜೋತ್ ಸಿಂಗ್ ಸಿಧು