Homeಅಂಕಣಗಳುಕಳೆದುಹೋದ ದಿನಗಳುಕಾಫಿ, ಯಾಲಕ್ಕಿ, ಮೆಣಸು, ವೆನಿಲ್ಲಾ, ಶುಂಠಿಯಂತಹ ಬೆಳೆ ಬದಲಾವಣೆಗಳು ಮತ್ತು ಕಷ್ಟನಷ್ಟಗಳು

ಕಾಫಿ, ಯಾಲಕ್ಕಿ, ಮೆಣಸು, ವೆನಿಲ್ಲಾ, ಶುಂಠಿಯಂತಹ ಬೆಳೆ ಬದಲಾವಣೆಗಳು ಮತ್ತು ಕಷ್ಟನಷ್ಟಗಳು

- Advertisement -
- Advertisement -

ಕಳೆದು ಹೋದ ದಿನಗಳು….. ಭಾಗ -2, ಅಧ್ಯಾಯ -12

ಒಂದೇ ಸಮನೆ ಏರುಗತಿಯಲ್ಲಿದ್ದ ಕಾಫಿ ಬೆಲೆ ಇಳಿಯತೊಡಗಿತ್ತು. ಕಾಫಿ ಬೆಲೆ ಏರುತ್ತಲೇ ಇದ್ದಾಗ ನೂರಾರು ಜನ ಸಣ್ಣ ಸಣ್ಣ ವ್ಯಾಪಾರದಾರರೂ ಹುಟ್ಟಿಕೊಂಡಿದ್ದರು. ಬೆಳೆಗಾರರರಿಗೆ ಮುಂಗಡ ಕೊಡುವವರು, ಸಾಲ ಕೊಡುವವರು, ಮನೆ ಬಾಗಿಲಿಗೇ ಬಂದು ಕಾಫಿಯನ್ನು ಕೊಳ್ಳುವವರು ಎಲ್ಲರೂ ಇದ್ದರು. ಬ್ಯಾಂಕುಗಳು ಕೂಡಾ ಕೇಳಿದಷ್ಟು ಸಾಲ ಕೊಟ್ಟವು. ಹಲವಾರು ಜನರು ಕೊಟ್ಟವರಿಂದೆಲ್ಲ ಕೊಟ್ಟಷ್ಟು ಸಾಲ ಪಡೆದವರೂ ಇದ್ದರು.

ಆದರೆ ಕೆಲವರು ನತದೃಷ್ಟರು ಇದ್ದರು. ಅವರು ಕಾಫಿಗೆ ಉತ್ತಮ ಬೆಲೆ ಬಂತೆಂದು ಸಾಲ ಮಾಡಿ ಹೊಸದಾಗಿ ತೋಟ ಮಾಡಿದರು. ಹಳೆಯ ತೋಟಗಳನ್ನು ಅಭಿವೃದ್ಧಿಪಡಿಸಿದರು. ಈಗ ಫಸಲು ಕೈಗೆ ಹತ್ತುವ ವೇಳೆ ಬೆಲೆ ಇಳಿಯತೊಡಗಿತ್ತು. ಅಂತವರು ಮುಂದೇನು ಎಂಬ ಚಿಂತೆಗೊಳಗಾದರು.

ಯಾಲಕ್ಕಿ ತೋಟ

ಅನೇಕ ದೊಡ್ಡ ಕಂಪನಿಗಳ ಏಜೆಂಟರುಗಳಿದ್ದರು. ಕೊಮಾರ್ಕ್ ಪರವಾಗಿಯೂ ಹಲವರಿದ್ದರು. ಇವರಲ್ಲಿಯೂ ಕೆಲವರು ನಾನಾ ರೀತಿಯ ವ್ಯವಹಾರಗಳನ್ನು ಮಾಡುತ್ತಿದ್ದರು. ಬೆಳೆಗಾರನೊಬ್ಬ ಕಾಫಿ ತಂದರೆ ಕೊಮಾರ್ಕ್ ಸಂಸ್ಥೆಗೆಂದು ಖರೀದಿಸಿದಂತೆ ಮಾಡಿ ಬೇರೆ ವ್ಯಾಪಾರಿಗಳಿಗೆ ಹೆಚ್ಚಿನ ಬೆಲೆಗೆ ಕೊಡುತ್ತಿದ್ದರು. ಕೆಲವು ಸಲ ಬೆಳೆಗಾರರಿಗೂ ಸ್ವಲ್ಪ ಹೆಚ್ಚಿಗೆ ನೀಡುತ್ತಿದ್ದರು. ಸದ್ಯದ ಲಾಭಕ್ಕೆ ಅವರೂ ಸುಮ್ಮನಾಗುತ್ತಿದ್ದರು. ಈ ನಡುವಿನ ಲಾಭ ಆ ಏಜೆಂಟನದಾಗುತ್ತಿತ್ತು. ಇದರಿಂದಲೂ ಕೊಮಾರ್ಕ್ ಸಂಸ್ಥೆಗೆ ನಷ್ಟವಾಗತೊಡಗಿತು. ಇಂಥ ಹಲವಾರು ಅವ್ಯವಹಾರಗಳು ನಡೆದವು. ಬೆಲೆಗಳು ಇಳಿಯತೊಡಗಿದಾಗ ಇಂತಹ ಹಲವಾರು ಜನ ವ್ಯಾಪಾರಿ, ಏಜೆಂಟರುಗಳು ಬೆಳೆಗಾರರರಿಗೆ ಲಕ್ಷಾಂತರ ರೂಗಳಿಗೆ ಕೈಯೆತ್ತಿ ಊರು ಬಿಟ್ಟರು. ಕೆಲವರು ಜೀವವನ್ನೇ ಬಿಟ್ಟರು.

ಬೆಳೆಗಾರರಲ್ಲಿ ಹೆಚ್ಚಿನವರಿಗಂತೂ ಯಾವುದೇ ರೀತಿಯ ಮಾರುಕಟ್ಟೆ ಜ್ಞಾನವಾಗಲೀ, ಅನುಭವವಾಗಲಿ ಇಲ್ಲದಿದ್ದುದರಿಂದ, ನಮಗೆ ಕಾಫಿ ಬೋರ್ಡೇ ಒಳ್ಳೆಯದಿತ್ತು. ಇವರೆಲ್ಲ ಸೇರಿ ಹಾಳುಮಾಡಿದರು ಎಂದು ತಮ್ಮನ್ನು ಬಿಟ್ಟು ಬೇರೆ ಎಲ್ಲರನ್ನು ಬೈಯುತ್ತ ಕೂತರು.

ಖಾಸಗಿ ಕಂಪೆನಿಗಳು ವ್ಯಾಪಾರವನ್ನು ಮುಂದಕ್ಕೆ ಹಾಕುತ್ತಿದ್ದವು. ಇಲ್ಲವೇ ಹಣವನ್ನು ಕೊಡುವುದನ್ನು ಮುಂದೂಡುತ್ತಿದ್ದವು. ಆದರೆ ಸಹಕಾರಿ ಸಂಸ್ಥೆಯಾದ ಕೊಮಾರ್ಕ್ ಹಾಗೆ ಮಾಡಲೇ ಇಲ್ಲ. ಖರೀದಿಯನ್ನು ನಿರಂತರವಾಗಿ ಮುಂದುವರೆಸಿತ್ತು.

ಕೃಷಿ ಉತ್ಪನ್ನಕ್ಕೆ ಏಕಾಏಕಿ ಬೆಲೆ ಬಂದು ಈ ರೀತಿಯ ಏರುಪೇರುಗಳಾದಾಗ ಕೃಷಿಕರ ಬದುಕಿನಲ್ಲಿ ಆಗುವ ಪರಿಣಾಮಗಳು ಹೆಚ್ಚಿನ ಸಂದರ್ಭಗಳಲ್ಲಿ ಕೆಟ್ಟದ್ದೇ ಆಗಿರುತ್ತದೆ. ಇದಕ್ಕೆ ಹಲವಾರು ಉದಾಹರಣೆಗಳಿವೆ. ಹಿಂದೊಮ್ಮೆ ಯಾಲಕ್ಕಿ ಬೆಳೆಯಲ್ಲಿಯೂ ಇದೇ ರೀತಿ ಆಗಿತ್ತು. ಆಗಿನ ಒಂದು ಘಟನೆಯನ್ನು ಇಲ್ಲಿ ಹೇಳಿದರೆ  ಪರಿಸ್ಥಿತಿ ಅರ್ಥವಾಗಬಹುದು.

ನಮ್ಮ ತಾಲ್ಲೂಕಿನ ಕೆಲವು ಭಾಗಗಳು ಕಾಫಿ ಬೆಳೆಗೆ ಸೂಕ್ತವಲ್ಲ. ಹೇಮಾವತಿ ನದಿಯ ಪಶ್ಚಿಮ ಭಾಗವಾಗಿರುವ ಮಂಜ್ರಾಬಾದ್ ಪ್ರದೇಶ ಹಿಂದಿನಿಂದಲೂ ಯಾಲಕ್ಕಿ ಬೆಳೆಗೆ ಪ್ರಸಿದ್ಧ. ರಾಜರುಗಳ ಕಾಲದಲ್ಲಿಯೂ ವಿದೇಶಗಳಲ್ಲಿ ಕೂಡಾ ಈ ಪ್ರದೇಶದ ಯಾಲಕ್ಕಿಗೆ ವಿಶೇಷ ಮನ್ನಣೆ. ಇಲ್ಲಿ ಮಳೆಯೂ ಹೆಚ್ಚು, ಹಾಗೂ ದಟ್ಟ ಅರಣ್ಯದ ನೆಲ.

ಕಾಫಿ ಬೆಳೆ ನಾಡಿನಲ್ಲಿ ಹಬ್ಬುತ್ತ ಬಂದಂತೆ ಇಲ್ಲಿಯೂ ಕಾಫಿ ಬೆಳೆಗೆ ಪ್ರಯತ್ನಿಸಿದರು. ಆದರೆ ಇಲ್ಲಿನ ಹೆಚ್ಚಿನ ಮಳೆ ಮತ್ತು ವಾತಾವರಣಕ್ಕೆ ಅರೆಬಿಕಾ ಕಾಫಿಗಿಂತ ರೊಬಸ್ಟ ತಳಿಯೇ ಸೂಕ್ತ.

ಹಲವು ವರ್ಷಗಳಿಂದ ಯಾಲಕ್ಕಿಯ ಬೆಲೆ ಒಂದೇ ರೀತಿಯಲ್ಲಿ ಇತ್ತು. ಆದರೆ ಕೃಷಿ ಖರ್ಚುಗಳು ಏರುತ್ತ ಹೋಗಿದ್ದವು. ಹಲವು ಹೊಸ ರೀತಿಯ ರೋಗಗಳು ಯಾಲಕ್ಕಿ ಬೆಳೆಗೆ ಬಂದ್ದರಿಂದಲೂ ಬೆಳೆ ಕಡಿಮೆಯಾಗಿ ಆದಾಯ ಖರ್ಚಿಗೇ ಸಾಲದ ಪರಿಸ್ಥಿತಿ ಬಂದಿತ್ತು. 1980ರ ಸುಮಾರಿಗೆ ಯಾಲಕ್ಕಿ ಬೆಲೆ ಕಿಲೋ ಒಂದಕ್ಕೆ ನೂರು ರೂಪಾಯಿ ಒಳಗೇ ಇತ್ತು. ಆಗ ರೈತ ಚಳುವಳಿಯ ಸಮಯದಲ್ಲಿ ಮಲೆನಾಡಿನ ಭಾಗದ ರೈತ ನಾಯಕರು ಯಾಲಕ್ಕಿಗೆ ಕಿಲೊ ಒಂದಕ್ಕೆ ಇನ್ನೂರು ರೂ ಸಿಗಬೇಕು ಎಂದು ಹೇಳುತ್ತಿದ್ದರು. ಆದರೆ 1984ರ ವೇಳೆಗೆ ಯಾರೂ ಊಹಿಸದ ರೀತಿಯಲ್ಲಿ ಯಾಲಕ್ಕಿ ಬೆಲೆ 700 ರೂಗಳ ವರೆಗೆ ಏರಿತು. ಆಗ ಕೆಲವರು ಗಡಿಬಿಡಿಯಲ್ಲಿ ಮತ್ತೆ ಯಾಲಕ್ಕಿ ಗಿಡ ಹಾಕಲು ಪ್ರಾರಂಭಿಸಿದರು. ಆಡು ಮಾತಿನಲ್ಲಿ ಹೇಳುವುದಾದರೆ “ಮನೆ ಹೆಂಚಿನ ಮೇಲೂ ಯಾಲಕ್ಕಿ ಗಿಡ ನೆಟ್ರು”.

ಯಾಲಕ್ಕಿಗೆ ಊಹೆಗೂ ಮೀರಿದ  ಬೆಲೆ ಬಂದಿದ್ದರಿಂದ ಆಗಲೂ ಹೀಗೇ ಆಯಿತು ಕೆಲವರು ಬೇಕಾಬಿಟ್ಟಿಯಾಗಿ ಖರ್ಚು ಮಾಡಿದರು. ಇನ್ನುಕೆಲವರು ಒಳ್ಳೊಳ್ಳೆಯ ಮನೆಗಳನ್ನು ಕಟ್ಟಿದರು. ಜೀಪುಗಳನ್ನು ಕೊಂಡುಕೊಂಡರು. ಮುಂದೆ ಆಪತ್ತು ಬಂದರೆ ಇರಲಿ ಎಂದು ಉಳಿತಾಯವನ್ನೋ, ಬೇರೆಕಡೆ ಹೂಡಿಕೆಯನ್ನೋ ಮಾಡಿದವರು ಬಹಳ ಕಡಿಮೆ.

ಆ ಸಮಯದಲ್ಲಿ ಒಬ್ಬ ಗಾರೆ ಮೇಸ್ತ್ರಿ ಹೇಳಿದ ಕಥೆಯಿದು.

ನಮ್ಮ ತಾಲ್ಲೂಕಿನ ಹೆಚ್ಚು ಯಾಲಕ್ಕಿ ಬೆಳೆಯುವ ಹೆತ್ತೂರು ಪ್ರದೇಶದ ಕಥೆಯಿದು. ಅಲ್ಲಿ ಒಬ್ಬ ಬೆಳೆಗಾರರು ದೊಡ್ಡದೊಂದು ಮನೆ ಕಟ್ಟಿಸಿದರು. ಸುಮಾರು ಇಪ್ಪತ್ತು ಚದರದ ತಾರಸಿ ಮನೆ. ಮನೆಯ ಕೆಲಸ ಮಾಡಿದ ಮೇಸ್ತ್ರಿಗೂ ಚೆನ್ನಾಗಿಯೇ ಸಂಬಳ ಕೊಟ್ಟರು.

ಕಾಫಿಯ ನಡುವೆ ಯಾಲಕ್ಕಿ ಮಿಶ್ರ ಬೆಳೆ

ನಾಲ್ಕು ವರ್ಷ ಕಳೆದಿತ್ತು. ಯಾಲಕ್ಕಿ ಬೆಲೆ ಮತ್ತೆ ನೆಲಕಚ್ಚಿತ್ತು. ಈ ಗಾರೆ ಮೇಸ್ತ್ರಿಗೂ ಎಲ್ಲೂ ಕೆಲಸ ಇರಲಿಲ್ಲ.  ಹಳೆಯ ಬೆಳೆಗಾರರನ್ನು ನೆನಪು ಮಾಡಿಕೊಂಡು ಅವರನ್ನು ಮಾತಾಡಿಸಿದ ಹಾಗೂ ಆಯಿತು ಜೊತೆಗೆ ಏನಾದರೂ ಕೆಲಸ ಇದ್ದರೆ ಕೊಟ್ಟಾರೆಂದು ಆ ಬೆಳೆಗಾರರ ಮನೆಗೆ ಗಾರೆ ಮೇಸ್ತ್ರಿ ಹೋದ.

ಮಳೆಗಾಲ ಮುಗಿದಿತ್ತಷ್ಟೆ. ಅವರ ಮನೆ ಅಂಗಳದಲ್ಲೆಲ್ಲ ಹುಲ್ಲು ಬೆಳೆದಿತ್ತು. ಮಳೆಯಿಂದ ಮನೆಯ ಬಣ್ಣವೂ ಮಾಸಿತ್ತು. ಸುತ್ತ ಮತ್ತೆಲ್ಲ ಹಾಳುಬಿದ್ದಂತೆ ತೋರುತ್ತಿತ್ತು. ಜಗಲಿಯ ಮೂಲೆಯಲ್ಲಿ ಒಬ್ಬಾತ ಗಡ್ಡದ ವ್ಯಕ್ತಿ, ಹಳೆಯ ಲುಂಗಿ ಉಟ್ಟುಕೊಂಡು ಬೀಡಿ ಸೇದುತ್ತ ಕುಳಿತಿದ್ದ.

ಮನೆಯ ಅಂಗಳದಲ್ಲಿ ನಿಂತು ಮೇಸ್ತ್ರಿ ಆ ವ್ಯಕ್ತಿಯಲ್ಲಿ. “ಗೌಡ್ರು ಮನೇಲಿಲ್ವ”? ಎಂದ.

“ಯಾರು ಬೇಕಾಗಿತ್ತು”? ಎಂದು ಆ ವ್ಯಕ್ತಿ ಬೀಡಿ ಎಸೆದು ಎದ್ದು ಬಂದರು.

ಅವರೇ ಮನೆ ಯಜಮಾನ, “ಗೌಡರು” !

ಅವರ ಪರಿಸ್ಥಿತಿ ಅಲ್ಲಿಗೆ ಬಂದಿತ್ತು. ಮೇಸ್ರ್ತಿಗೆ ಊಟ ಹಾಕಿಸಿ “ಇವಾಗ ಯಾವುದೂ ಚೆನ್ನಾಗಿ ನಡೀತಿಲ್ಲ ಇನ್ಯಾವಾಗಾದ್ರೂ ಬಾ ನೋಡಣ” ಎಂದು ಕಳುಹಿಸಿಕೊಟ್ಟರು.

ಬೆಲೆಯ ಅತಿಯಾದ ಏರಿಳಿತ ಹೆಚ್ಚಾಗಿ ಇಂತದ್ದೇ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ. ಕಾಫಿಯಲ್ಲೂ ಇದೇ ಆಯಿತು.

ಮಲೆನಾಡಿನಲ್ಲಿ ಶುಂಠಿ ಬೆಳೆ

ಕಾಫಿಯ ಬೆಲೆ ನಿರಂತರವಾಗಿ ಇಳಿಯತೊಡಗಿದಾಗ ಬೆಳೆಗಾರರರೂ ಅನಿವಾರ್ಯವಾಗಿ ಬೇರೆ ಬೆಳೆಗಳತ್ತ  ಗಮನ ಹರಿಸಲೇ ಬೇಕಾಯಿತು. ಮಲೆನಾಡಿನ ಪಾರಂಪರಿಕ ಬೆಳೆಯಾದ ಯಾಲಕ್ಕಿಯ ಬೆಲೆಯೂ ನೆಲಕಚ್ಚಿತ್ತು. ಜೊತೆಗೆ ಕೊಕ್ಕೆ ಕಂದು ರೋಗವೆಂಬ ಹೊಸ ರೋಗವೊಂದು ಯಾಲಕ್ಕಿ ಬೆಳೆಯಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿಯನ್ನು ನಿರ್ಮಾಣಮಾಡಿತ್ತು. ಈ ಹಿಂದೆ ಯಾಲಕ್ಕಿಗಿದ್ದ ಹಲವು ಬಾಧೆಗಳನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ತಂದಿದ್ದರು. ಬಹಳ ವರ್ಷಗಳಿಂದಲೂ ಇರುವ ‘ಕಟ್ಟೆರೋಗ’ ಅಥವಾ ‘ಮೊಸಾಯಿಕ್ ರೋಗ’ ಬಂದರೆ ಫಸಲು ಕಮ್ಮಿಯಾಗುತ್ತ ಹೋಗಿ ಗಿಡಗಳು ಸಾಯುತ್ತಿದ್ದವೇ ವಿನಃ ಒಮ್ಮೆಗೇ ನಾಶವಾಗುತ್ತಿರಲಿಲ್ಲ. ಆದರೆ ಹೊಸದಾಗಿ ಬಂದ ಕೊಕ್ಕೆ ಕಂದು ರೋಗದ ಗಿಡಗಳಲ್ಲಿ ಸುಳಿಗಳು ಮುರುಟಿಕೊಂಡು ಗಿಡ ಬೆಳವಣಿಗೆಯನ್ನೇ ಕಾಣದೆ ಫಸಲೇ ಬರುತ್ತಿರಲಿಲ್ಲ.

ಯಾಲಕ್ಕಿ ಕಟ್ಟರೋಗ ಮತ್ತು ಕೊಕ್ಕೆ ಕಂದು ರೋಗ
ಕಟ್ಟೆ ರೋಗ ಪೀಡಿತವಾಗುತ್ತಿರುವ ತೋಟ

ಕಾಫಿಯ ಜೊತೆಗಾರ ಬೆಳೆಯಾದ ಮೆಣಸಿನ ಬೆಲೆಯೂ ಕನಿಷ್ಟ ಮಟ್ಟದಲ್ಲಿತ್ತು. ಆ ಸಮಯದಲ್ಲಿ ಮಲೆನಾಡನ್ನು ಪ್ರವೇಶ ಮಾಡಿದ್ದು ಎರಡು ಹೊಸ ಬೆಳೆಗಳು. ಈ ಎರಡೂ ಬೆಳೆಗಳು ಕೇರಳದ ಮೂಲಕ ಇಲ್ಲಿಗೆ ಬಂದವು. ಅವೆಂದರೆ ಶುಂಠಿ ಮತ್ತು ವೆನಿಲ್ಲಾ.

ಈಗ ಅಪರೂಪವಾಗಿರುವ ವೆನಿಲ್ಲಾ

ವೆನಿಲ್ಲಾ ಒಂದು ಹಂತದಲ್ಲಿ ಹಲವರಿಗೆ ಅದೃಷ್ಟದ ಬೆಳೆಯಾಗಿ ನಾಲ್ಕೈದು ವರ್ಷಗಳ ಕಾಲ ವಿಜೃಂಭಿಸಿ ಮರೆಯಾಯಿತು. ಶುಂಠಿ ಅನೇಕರಿಗೆ ಜೀವನೋಪಾಯವನ್ನೂ, ಕೆಲವರಿಗೆ ಅದೃಷ್ಟವನ್ನೂ ತಂದಿತು. ಇದೊಂದು ಜೂಜಿನ ಬೆಳೆಯಂತಾಗಿ ಕೆಲವರು ಕೈಸುಟ್ಟುಕೊಂಡರು. ಇನ್ನು ಕೆಲವರು ಪ್ರಾಣವನ್ನೇ ಕಳೆದುಕೊಂಡರು.

ಇದೆಲ್ಲದರ ಜೊತೆಯಲ್ಲಿ ಈಗಲೂ ಮಲೆನಾಡಿನಲ್ಲಿ ಅಲ್ಲಲ್ಲಿ ಮಾಡುತ್ತಿರುವ, ಅಪಾರ ಪ್ರಮಾಣದ ರಾಸಾಯನಿಕ ಮತ್ತು ಕೃಷಿವಿಷಗಳನ್ನು ಬಳಸಿ ಬೆಳೆಯುವ ಶುಂಠಿ ಬೆಳೆ ಮಲೆನಾಡಿನ ಜೀವ ವೈವಿಧ್ಯಕ್ಕೆ ಮಾಡಿದ- ಮಾಡುತ್ತಿರುವ ಹಾನಿಯೂ ಅಪಾರವಾದುದು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)

ಕಳೆದುಹೋದ ದಿನಗಳು ಹಿಂದಿನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.


ಇದನ್ನೂ ಓದಿ: ಕಾಫಿ ವಲಯದಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳು: ಪ್ರಸಾದ್ ರಕ್ಷಿದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...