ಹಾಸನ ಜಿಲ್ಲೆಯ ಬೇಲೂರಿನಲ್ಲಿ ಕ್ರಿಶ್ಚಿಯನ್ನರ ಪ್ರಾರ್ಥನಾ ಮಂದಿರಕ್ಕೆ ನುಗ್ಗಿ ಪ್ರಾರ್ಥನೆಗೆ ಅಡ್ಡಿಪಡಿಸಿದ ಬಿಜೆಪಿ ಬೆಂಬಲಿತ ಬಜರಂಗದಳ ಸಂಘಟನೆಯ ಕಾರ್ಯಕರ್ತರಿಗೆ ಮಹಿಳೆಯರು ಛೀಮಾರಿ ಹಾಕಿರುವ ಘಟನೆ ನಡೆದಿದೆ.
ಮತಾಂತರದ ಹೆಸರಿನಲ್ಲಿ ಚರ್ಚ್ಗಳನ್ನು ಟಾರ್ಗೆಟ್ ಮಾಡಲಾಗುತ್ತಿದ್ದು, ಮತೀಯ ಗಲಭೆಗಳನ್ನು ಸೃಷ್ಟಿಸಲು ಯತ್ನಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಬೇಲೂರಿನಲ್ಲಿ ಪ್ರಾರ್ಥನಾ ಮಂದಿರಕ್ಕೆ ಮುತ್ತಿಗೆ ಹಾಕಲು ಯತ್ನಿಸಿ, ಬಜರಂಗದಳ ಮಹಿಳೆಯರಿಂದ ಛೀ ಮಾರಿ ಹಾಕಿಸಿಕೊಂಡಿದ್ದಾರೆ ಎನ್ನಲಾಗಿದೆ. ಮಹಿಳೆಯರು ಬಜರಂಗದಳ ಕಾರ್ಯಕರ್ತರನ್ನು ಪ್ರಶ್ನಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
Members of Hindutva group Bajrang Dal raided a Christian prayer group in Belur, after falsely accusing them of forcibly converting Hindus.
— CJ Werleman (@cjwerleman) November 30, 2021
But the Christian women fought back against their cowardly attackers!
(h/t @KeypadGuerilla) pic.twitter.com/lLryUIVyRP
ಬಲಪಂಥೀಯ ಹಿಂದುತ್ವ ಕಾರ್ಯಕರ್ತರು ಪ್ರಾರ್ಥನಾ ಮಂದಿರದಲ್ಲಿ ಸೇರಿದ್ದ ಮಹಿಳೆಯರೊಂದಿಗೆ ಜಗಳವಾಡಿದ್ದು, ಮಾತಿನ ಚಕಮಕಿಯಲ್ಲಿ ತೊಡಗಿದ್ದರು. ಕೇಸರಿ ವಸ್ತ್ರಗಳನ್ನು ಧರಿಸಿರುವ ಯುವಕರು ಮಹಿಳೆಯರ ಮೇಲೆ ಜಗಳವಾಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ತಮ್ಮ ಮೇಲೆ ದಬ್ಬಾಳಿಕೆ ಮಾಡಲು ಬಂದವರ ವಿರುದ್ಧ ಮಹಿಳೆಯರು ತಿರುಗಿಬಿದ್ದು ಪ್ರಶ್ನಿಸುತ್ತಿರುವುದು ವಿಡಯೊದಲ್ಲಿ ಸೆರೆಯಾಗಿದೆ.
ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ಸುಮಾರು 30 ಬಜರಂಗದಳ ಕಾರ್ಯಕರ್ತರು ಏಕಾಏಕಿ ನುಗ್ಗಿದರು ಎಂದು ಪ್ರಾರ್ಥನಾ ಮಂದಿರದ ಉಸ್ತುವಾರಿ ಪಾದ್ರಿ ಸುರೇಶ್ ಪೌಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸಭಾಂಗಣವನ್ನು ಲೈಫ್ ಟು ದಿ ನೇಷನ್ಸ್ ಮಿನಿಸ್ಟ್ರೀಸ್ ಎಂಬ ಕ್ರಿಶ್ಚಿಯನ್ ಸಂಸ್ಥೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಪೌಲ್ ಮತ್ತು ಅಲ್ಲಿ ಸೇರಿದ್ದವರು “ಹಿಂದೂಗಳನ್ನು ಮತಾಂತರಗೊಳಿಸಿದ್ದಾರೆ”, ಅಕ್ರಮವಾಗಿ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಬಜರಂಗದಳ ಕಾರ್ಯಕರ್ತರು ಆರೋಪಿಸಿದ್ದಾರೆ.
ಇದನ್ನೂ ಓದಿರಿ: ಮಂಗಳೂರಿನಲ್ಲಿ ಮತೀಯ ಗೂಂಡಾಗಿರಿ: ಅನ್ಯಧರ್ಮದ ಗೆಳತಿಯನ್ನು ಡ್ರಾಪ್ ಮಾಡುತ್ತಿದ್ದ ಮುಸ್ಲಿಂ ಯುವಕನ ಮೇಲೆ ಹಲ್ಲೆ
ಪ್ರಾರ್ಥನ ಮಂದಿರಕ್ಕೆ ನುಗ್ಗಿದ ಬಜರಂಗದಳ ಕಾರ್ಯಕರ್ತರು ‘ಜೈ ಶ್ರೀ ರಾಮ್’ ಎಂದು ಕೂಗುತ್ತಿದ್ದರು, ತೊಂದರೆ ಉಂಟು ಮಾಡಲೆಂದು ಈ ಗುಂಪು ಪ್ರಾರ್ಥನಾ ಮಂದಿರಕ್ಕೆ ಬಂದಿತ್ತು ಎಂದು ಪೌಲ್ ಆರೋಪಿಸಿದ್ದಾರೆ.
ಭಜರಂಗದಳದ ರಾಜ್ಯ ಸಂಯೋಜಕ ರಘು ಸಕಲೇಶಪುರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, “ಚರ್ಚ್ನಲ್ಲಿ ಹಿಂದೂ ದೇವರುಗಳನ್ನು ಕೀಳಾಗಿ ಕಾಣುತ್ತಿರುವುದನ್ನು ಕೇಳಿದ ವ್ಯಕ್ತಿಯೊಬ್ಬರು ನಮಗೆ ಮಾಹಿತಿ ನೀಡಿದರು” ಎಂದಿದ್ದಾರೆ. ಎರಡೂ ಕಡೆಯಿಂದ ಯಾವುದೇ ದೂರು ದಾಖಲಾಗಿಲ್ಲ ಎಂದು ಬೇಲೂರು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಡಿಸೆಂಬರ್ 13 ರಿಂದ ಪ್ರಾರಂಭವಾಗುವ ಮುಂದಿನ ಅಧಿವೇಶನದಲ್ಲಿ ‘ಲವ್ ಜಿಹಾದ್’ ಕಾನೂನು ಎಂದು ಕರೆಯಲ್ಪಡುವ ಮತಾಂತರ ವಿರೋಧಿ ಮಸೂದೆಯನ್ನು ತರಲು ಕರ್ನಾಟಕ ಉತ್ಸುಕವಾಗಿದೆ. ಇದನ್ನು ವಿರೋಧಿಸಿ ಬೆಂಗಳೂರು ಆರ್ಚ್ ಬಿಷಪ್ ರೆವರೆಂಡ್ ಪೀಟರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು.
ಅಕ್ಟೋಬರ್ನಲ್ಲಿ ವಿಶ್ವ ಹಿಂದೂ ಪರಿಷತ್ನ ಸದಸ್ಯರು ಹುಬ್ಬಳ್ಳಿಯ “ಸರ್ವಧರ್ಮ” ಪ್ರಾರ್ಥನಾ ಮಂದಿರಕ್ಕೆ ನುಗ್ಗಿದ್ದರು.
ಚುನಾವಣೆ ಹತ್ತಿರವಾಗುತ್ತಿರುವ ಈ ದಿನಗಳಲ್ಲಿ ಧರ್ಮಾಧಾರಿತ ಕ್ರೌರ್ಯ, ಮತೀಯ ಗಲಭೆ ಸೃಷ್ಟಿಸುವ ಯತ್ನಗಳು ಪದೇ ಪದೇ ವರದಿಯಾಗುತ್ತಿವೆ. ಬಲಪಂಥೀಯ ಸಂಘಟನೆಗಳು ಬಲಿಷ್ಠವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ಗೂಂಡಾಗಿರಿ (ಮಾರಲ್ ಪೊಲೀಸಿಂಗ್) ಪ್ರಕರಣಗಳು ಮಿತಿ ಮೀರುತ್ತಿವೆ. ಹೀಗಿರುವಾಗ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ರಾಜ್ಯದ ಮುಖ್ಯಮಂತ್ರಿಯವರೇ ‘ಕ್ರಿಯೆಗೆ-ಪ್ರತಿಕ್ರಿಯೆ’ ಎಂಬ ಅರ್ಥದಲ್ಲಿ ಮತೀಯ ಗೂಂಡಾಗಿರಿಯನ್ನು ಸಮರ್ಥಿಸಿದ್ದು, ಭಾರೀ ಟೀಕೆಗಳು ವ್ಯಕ್ತವಾಗಿವೆ.
ಹೆಚ್ಚುತ್ತಿದೆ ಕೋಮುದ್ವೇಷ: ಆತಂಕ
ಪೀಪಲ್ಸ್ ಯೂನಿಯನ್ ಫಾರ್ ಲಿಬರ್ಟೀಸ್ ಕರ್ನಾಟಕ (ಪಿಯುಸಿಎಲ್-ಕ) ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್ (ಎಐಎಲ್ಎಜೆ), ಆಲ್ ಇಂಡಿಯಾ ಪೀಪಲ್ಸ್ ಫೋರಮ್ (ಎಐಪಿಎಫ್) ಮತ್ತು ಗೌರಿ ಲಂಕೇಶ್ ನ್ಯೂಸ್.ಕಾಂ (gaurilankeshnews.com) ಬಿಡುಗಡೆ ಮಾಡಿರುವ ವರದಿಯು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ‘ಕೋಮುದ್ವೇಷ ಅಪರಾಧ’ಗಳ ಕುರಿತು ಆತಂಕ ವ್ಯಕ್ತಪಡಿಸಿದೆ.
ಈ ವರದಿಯು ದಕ್ಷಿಣ ಕನ್ನಡದಲ್ಲಿ ಜನವರಿ 2021ರಿಂದ ಸೆಪ್ಟೆಂಬರ್ 2021ರವರೆಗೆ ನಡೆದ ಮತೀಯ ಗೂಂಡಾಗಿರಿ ಮತ್ತು ದ್ವೇಷದ ಅಪರಾಧಿಕ ಘಟನೆಗಳನ್ನು ವಿಶ್ಲೇಷಿಸಿದೆ. ಒಟ್ಟು 71 ಕೋಮುದ್ವೇಷ ಪ್ರಕರಣಗಳು ಈ ಅವಧಿಯಲ್ಲಿ ವರದಿಯಾಗಿವೆ. ಆರು ವಿಭಿನ್ನ ಮಾದರಿಯ ಘಟನೆಗಳನ್ನು ಸಂಶೋಧನಾ ವರದಿ ಗುರುತಿಸುತ್ತದೆ. ಅವುಗಳೆಂದರೆ, 1. ಸಾಮಾಜಿಕ ಪ್ರತ್ಯೇಕತೆಯನ್ನು ಜಾರಿಗೊಳಿಸುವುದು 2. ಆತ್ಮೀಯ ಸಂಬಂಧಗಳನ್ನು ನಿಯಂತ್ರಿಸುವುದು. 3. ಆರ್ಥಿಕ ಸಾಮಾಜಿಕ ಬಹಿಷ್ಕಾರ. 4. ಗೋವಿನ ಹೆಸರಲ್ಲಿ ದಾಳಿಗಳು. 5. ಧಾರ್ಮಿಕ ಸ್ವಾತಂತ್ರ್ಯವನ್ನು ನಿಗ್ರಹಿಸುವುದು. 6. ದ್ವೇಷ ಹರಡುವ ಭಾಷಣಗಳನ್ನು ಮಾಡುವುದು.
ಕೋಮುದ್ವೇಷವನ್ನು ತಡೆಯುವಲ್ಲಿ ಪೊಲೀಸರ ಪಾತ್ರವನ್ನು ಈ ವರದಿ ಉಲ್ಲೇಖಿಸಿದೆ. ಜೊತೆಗೆ ಪೊಲೀಸರ ತಪ್ಪುಗಳನ್ನು ವರದಿ ಉಲ್ಲೇಖಿಸಿದೆ. ಅಂತರ ಧರ್ಮೀಯ ಸಂಬಂಧಗಳಿಗೆ ತೊಂದರೆಯುಂಟುಮಾಡಿದ ಹೆಚ್ಚಿನ ಸಂಖ್ಯೆಯ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿಲ್ಲ. ಬದಲಾಗಿ ಅಂತರ ಧರ್ಮೀಯ ಸ್ನೇಹಿತರು ಅಥವಾ ದಂಪತಿಗಳನ್ನೇ ಪೊಲೀಸ್ ಠಾಣೆಗೆ ಕರೆಸಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಒಂದೆಡೆ ಹಿಂಸಾಚಾರ ಎಸಗಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೂ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ ಸಂತ್ರಸ್ತರನ್ನು ಠಾಣೆಗೆ ಕರೆದೊಯ್ದು ಪ್ರಶ್ನಿಸುವ ಮೂಲಕ ತಪ್ಪಿತಸ್ಥರೆಂದು ಪರಿಗಣಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅಂತರ ಧರ್ಮೀಯ ಸಂಬಂಧಗಳನ್ನು ಬಲವಂತವಾಗಿ ಪ್ರತ್ಯೇಕಿಸುವ ಪ್ರಕ್ರಿಯೆಯಲ್ಲಿ ಪೊಲೀಸರು ಆರೋಪಿಗಳ ಮಿತ್ರರಾಗಿದ್ದಾರೆ ಎಂದು ವರದಿಯು ಆತಂಕ ವ್ಯಕ್ತಪಡಿಸಿದೆ.
ಅಕ್ರಮವಾಗಿ ಮತಾಂತರ ಮಾಡಿದವರಿಗೆ ಕಾನೂನು ರೀತಿ ಬುದ್ದಿ ಕಲಿಸಬೇಕಿತ್ತು