Homeಪುಸ್ತಕ ವಿಮರ್ಶೆಮೂಡ್ನಾಕೂಡು ಚಿನ್ನಸ್ವಾಮಿಯವರ ’ಬುದ್ಧಾನುಸಾಸನಂ’: ಬೌದ್ಧ ಧಮ್ಮದ ಅರಿವಿನ ದರ್ಶನ

ಮೂಡ್ನಾಕೂಡು ಚಿನ್ನಸ್ವಾಮಿಯವರ ’ಬುದ್ಧಾನುಸಾಸನಂ’: ಬೌದ್ಧ ಧಮ್ಮದ ಅರಿವಿನ ದರ್ಶನ

- Advertisement -
- Advertisement -

ಕ್ರಿ.ಪೂ. 6ನೆಯ ಶತಮಾನ ಭಾರತದ ಚರಿತ್ರೆಯಲ್ಲಿ ಅಚ್ಚಳಿಯದಂತೆ ಉಳಿದುಬಿಡುವ ಕಾಲಮಾನ. ತಥಾಗತ ಬುದ್ಧನ ದರ್ಶನವು ವಿಕಾಸಗೊಂಡ ಕಾಲ. ನಂತರ ಆ ದರ್ಶನವು ಸಾಮ್ರಾಟ್ ಅಶೋಕನ ಮನಪರಿವರ್ತನೆಯಿಂದಾಗಿ ದಕ್ಷಿಣ ಏಷಿಯಾವನ್ನೇ ಆವರಿಸಿತು. ಅಷ್ಟಕ್ಕೆ ನಿಲ್ಲದೆ ಆಯಾ ನೆಲದ ಸಂಸ್ಕೃತಿಗಳೊಂದಿಗೆ ಕೊಡುಕೊಳ್ಳುವಿಕೆ ಮಾಡಿಕೊಂಡು ಬೆಳೆಯಿತು. ಇಂದು ಬೌದ್ಧ ದರ್ಶನವು ಹೀನಾಯಾನ, ಮಹಾಯಾನ, ತೇರಾವಾದ, ವಜ್ರಯಾನ, ಜೆನ್, ನವಯಾನ ಮುಂತಾದ ಹಲವು ಧಾರೆಗಳಾಗಿ ಬೆಳೆದಿದೆ. ಪ್ರಪಂಚದಾದ್ಯಂತ ತನ್ನ ಬೆಳಕನ್ನು ಚೆಲ್ಲುತ್ತಿದೆ. ಆದರೆ ಬೌದ್ಧ ದರ್ಶನ ಜೀವ ತಾಳಿದ ಭಾರತದಲ್ಲಿ 20ನೇ ಶತಮಾನದವರೆಗೂ ಅದರ ಸ್ಥಿತಿ ಶೋಚನೀಯವಾಗಿತ್ತು. ಬೋಧಿಸತ್ವ ಬಾಬಾಸಾಹೇಬ್ ಅಂಬೇಡ್ಕರರ ’ಮಹಾ ಮರಳುವಿಕೆ’ಯಿಂದಾಗಿ ಭಾರತೀಯರಿಗೆ ಬೌದ್ಧ ದರ್ಶನದ ವಿಸ್ಮೃತಿಯು ಕಳಚಿಬಿದ್ದಿತು. ಇದರ ಮುಂದುವರೆದ ಭಾಗವಾಗಿ ಹಲವು ವಿದ್ವಾಂಸರು ಬೌದ್ಧ ದರ್ಶನವನ್ನು ’ಧಮ್ಮ’ವನ್ನಾಗಿ ಅಭ್ಯಾಸ ಮಾಡಿದರು. ಅಂತಹವರಲ್ಲಿ ಕನ್ನಡನಾಡಿನ ಖ್ಯಾತ ಸಾಹಿತಿಗಳಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿಯವರೂ ಒಬ್ಬರು.

ವೇದೋಪನಿಷತ್ತುಗಳು ಜನಸಾಮಾನ್ಯರ ಭಾಷೆಯಲ್ಲದ ಸಂಸ್ಕೃತವನ್ನು ಮುಖ್ಯಭಾಷೆಯಾಗಿ ಪರಿಗಣಿಸಿ ಕಟ್ಟಿಕೊಂಡ ತಾತ್ವಿಕತೆಯನ್ನು ಅನುಸರಿಸದೆ ಬುದ್ಧಗುರು ಜನಸಾಮಾನ್ಯರ ಭಾಷೆಯಾದ ’ಪಾಲಿ’ಯಲ್ಲಿ ದುಃಖನಿವಾರಣೆಗಾಗಿ ತನ್ನ ಸಂಶೋಧನಾ ಮತ್ತು ಅನುಭವ ತತ್ವಗಳನ್ನು ಬೋಧಿಸಿದನು. ಶಾತವಾಹನರ ನಂತರದ ಕಾಲಘಟ್ಟದಲ್ಲಿ ಯಜಮಾನ್ಯ ಸಂಸ್ಕೃತಿಯ ಭಾಗವಾಗಿ ಬೌದ್ಧ ವಿಹಾರದ ಭಿಕ್ಕುಗಳೂ ಸಹ ಜನಸಾಮಾನ್ಯರಿಂದ ದೂರ ಸರಿದು ಸಂಸ್ಕೃತವನ್ನೇ ಬಳಸಿಕೊಂಡರು. ಬೌದ್ಧ ದರ್ಶನವನ್ನೇ ಜನಸಾಮಾನ್ಯರಿಂದ ದೂರಗೊಳಿಸಿದರು. ಆದರೆ ‘ಬುದ್ಧಾನುಸಾಸನಂ’ ಜನಸಾಮಾನ್ಯರಿಗೆ ಬೌದ್ಧ ದರ್ಶನವನ್ನು ಸರಳವಾಗಿ ಅರ್ಥಮಾಡಿಸುವಲ್ಲಿ ಖಂಡಿತವಾಗಿಯೂ ಗೆಲ್ಲುತ್ತದೆ.

ಸಾಮ್ರಾಟ್ ಅಶೋಕ

’ಬುದ್ಧಾನುಸಾಸನಂ’ ಬೌದ್ಧ ಚಿಂತನೆಗಳ ಬಗೆಗಿನ ಲೇಖನಗಳನ್ನು ಒಳಗೊಂಡಿದೆ. ಆದರೆ ಒಂದು ಲೇಖನದಿಂದ ಮತ್ತೊಂದು ಲೇಖನಕ್ಕೆ ಸಂಬಂಧವಿರುವುದರಿಂದ ಇಡೀ ಕೃತಿಯನ್ನು ಬೌದ್ಧ ಚಿಂತನೆಗಳ ಬುಟ್ಟಿ ಎಂದು ಕರೆಯಬಹುದು. ಕೃತಿಯ ಉದ್ದಕ್ಕೂ ಲೇಖಕರ ಅಗಾಧವಾದ ಓದು ಮತ್ತು ಜೀವನಾನುಭವ ಎದ್ದು ಕಾಣುತ್ತದೆ. ಜನಸಾಮಾನ್ಯರಿಗೆ ಮಾತ್ರವಲ್ಲ ಬೌದ್ಧ ತತ್ವಕ್ಕೆ ಸ್ವಲ್ಪ ಪ್ರವೇಶವಿರುವವರಿಗೂ ಇರಬಹುದಾದ ಹಲವು ಅನುಮಾನಗಳಿಗೆ ಮುಖಾಮುಖಿಯಾಗುತ್ತದೆ.

ಬೌದ್ಧ ಧಮ್ಮ ಮಾಂಸಾಹಾರ ಸೇವಿಸಲು ಅನುಮತಿಸಿದೆಯೇ? ಬೌದ್ಧ ಧಮ್ಮದಲ್ಲಿ ಆತ್ಮಕ್ಕೆ ಸ್ಥಾನವಿಲ್ಲವೇ? ಪುನರ್ಜನ್ಮವನ್ನು ಹೇಗೆ ವ್ಯಾಖ್ಯಾನಿಸಲಾಗಿದೆ? ದೇವರ ಬಗ್ಗೆ ಬುದ್ಧಗುರುವಿನ ಮಾತುಗಳೇನು? ಸ್ವರ್ಗ, ನರಕ, ಪಾಪ, ಪುಣ್ಯಗಳ ಕುರಿತು ಬುದ್ಧಗುರುವಿನ ನಿಲುವೇನು? ಚಾತುರ್ವರ್ಣವನ್ನು ಏಕೆ ಬುದ್ಧಗುರು ಪುರಸ್ಕರಿಸಲಿಲ್ಲ? ಹಿಂಸೆ ಮತ್ತು ಅಹಿಂಸೆಗಳ ಬಗ್ಗೆ ವ್ಯಾಖ್ಯಾನವೇನು? ಹೀಗೆ ಬೌದ್ಧ ದರ್ಶನದ ಬಗ್ಗೆ ತೂರಿಬರುವ ಸಾಮಾನ್ಯ ಪ್ರಶ್ನೆಗಳಿಗೆ ಇದುವರೆಗೆ ಹಲವರು ಉತ್ತರಿಸುತ್ತಲೇ ಬಂದಿದ್ದಾರೆ. ಆದರೆ ಇವುಗಳ ಬಗ್ಗೆ ಬುದ್ಧಗುರು ಯಾವ ಸುತ್ತದಲ್ಲಿ ಹಾಗೂ ಸನ್ನಿವೇಶದಲ್ಲಿ ಮಾತನಾಡಿದ್ದಾರೆ ಎಂಬುದಕ್ಕೆ ಸಾಕ್ಷಿ ನೀಡುವ ಬೆರಳೆಣಿಕೆಯಷ್ಟು ಕೃತಿಗಳಿರಬಹುದಷ್ಟೆ. ಅದರಲ್ಲೂ ಮೂಲ ಪಠ್ಯಗಳನ್ನಾಧರಿಸಿದ ವ್ಯಾಖ್ಯಾನ ಸಿಗುವುದು ಬಲು ಕಷ್ಟ. ಹಾಗಾಗಿ ’ಬುದ್ಧಾನುಸಾಸನಂ’ ಈ ಕೊರತೆಯನ್ನು ನೀಗಿಸುತ್ತದೆ. ಸ್ವತಃ ಲೇಖಕರೇ ’ದೇವರಿಲ್ಲದೆ, ಪವಾಡವಿಲ್ಲದೆ, ಯುದ್ಧಗಳಿಲ್ಲದೆ, ಕೇಡುಗಳಿಲ್ಲದೆ ಸೃಷ್ಟಿಯಾಗಿರುವ ಗ್ರಂಥವೇನಾದರೂ ಇದ್ದರೆ ಅದು ಧಮ್ಮಪದ’ ಎಂದು ಹೇಳುವ ಮೂಲಕ ಅವರ ಪ್ರತಿಯೊಂದು ಮಾತಿಗೂ ಜವಾಬ್ದಾರಿಯುತವಾಗಿ ಸಾಕ್ಷಿ ನೀಡುತ್ತಾರೆ. ಸಮಕಾಲೀನ ಯುವಬರೆಹಗಾರರು ಈ ಬದ್ಧತೆಯನ್ನು ಮೂಡ್ನಾಕೂಡರಿಂದ ಕಲಿಯಲೇಬೇಕಿದೆ.

ಬೌದ್ಧ ತಾತ್ವಿಕತೆಗೆ ಸಂಬಂಧಿಸಿದಂತೆ ಬುದ್ಧಿಜೀವಿಗಳ ವಲಯದಲ್ಲಿಯೂ ಸಾಕಷ್ಟು ಚರ್ಚೆಗಳಿವೆ ಹಾಗೂ ಪ್ರಶ್ನೆಗಳಿವೆ. ನಾಮರೂಪ ತತ್ವ, ಮಧ್ಯಮ ಮಾರ್ಗ, ಬುದ್ಧಗುರು ಕೇವಲ ದುಃಖದ ಬಗ್ಗೆಯೇ ಮಾತನಾಡಿದ್ದಾನೆ ಎಂಬ ವಿಚಾರಗಳ ಮೇಲೂ ’ಬುದ್ಧಾನುಸಾಸನಂ’ ಸ್ಪಷ್ಟವಾದ ಬೆಳಕನ್ನು ಚೆಲ್ಲುತ್ತದೆ.

ಇದರೊಂದಿಗೆ ಬೌದ್ಧ ಚಿಂತಕರು ಹೆಚ್ಚು ಪ್ರಚುರಪಡಿಸದ ವಿಚಾರಗಳು ಕೃತಿಯುದ್ದಕ್ಕೂ ಹರಡಿಕೊಂಡಿರುವುದರಿಂದ ಅಂತಹ ಒಂದೆರಡು ನಿದರ್ಶನಗಳನ್ನು ನೀಡಬೇಕೆನಿಸುತ್ತಿದೆ.

ಬೌದ್ಧ ಭಿಕ್ಕುಗಳು ಯಾರಿಂದಲಾದರೂ, ಯಾವ ಆಹಾರವಾದರೂ ಸರಿ ಸ್ವೀಕರಿಸಿ ಉಣ್ಣಬೇಕು. ಇದು ವಿಚಾರವಲಯದಲ್ಲಿರುವ ಗಟ್ಟಿಯಾದ ನಂಬಿಕೆ. ಆದರೆ ಲೇಖಕರು ಬೌದ್ಧ ಸಾಹಿತ್ಯದ ’ಮಾತಂಗ ಜಾತಕ’ದಲ್ಲಿನ ಐತಿಹ್ಯವೊಂದನ್ನು ತಿಳಿಸಿದ್ದಾರೆ. ಅಲ್ಲಿ ಮಾದಿಗ ಮಾತಂಗ ಮುನಿಯೊಂದಿಗೆ ಬ್ರಾಹ್ಮಣ ಕನ್ಯೆ ದಿಟ್ಟಮಂಗಲಿಕೆಯ ವಿವಾಹವಾಗುತ್ತದೆ. ಅವರಿಗೆ ಮಂಡವ್ಯ ಎಂಬ ಮಗ ಹುಟ್ಟುತ್ತಾನೆ. ಬೋಧಿಸತ್ವನಾದ ಮಾತಂಗನಿಗೆ ಮಂಡವ್ಯ ದಾನ ಕೊಡಲು ನಿರಾಕರಿಸಿದಾಗ, ಜಾತಿ ಎಂಬುದು ಅರಿಷಡ್ವರ್ಗಗಳಂತೆ ಒಂದು ಅವಗುಣ. ಅದು ಇರುವವರಿಂದ ದಾನ ಪಡೆಯುವುದು ಯೋಗ್ಯವಲ್ಲ. ಅಂತಹವರು ದಾನ ನೀಡಲೂ ಸಹ ಯೋಗ್ಯರಲ್ಲ ಎಂದು ಹೇಳುವ ಮಾತಂಗ ಗಾಥೆಯದು. ಈ ಗಾಥೆಯು ಏಕಕಾಲಕ್ಕೆ ಅನುಲೋಮ ವಿವಾಹ ಪದ್ಧತಿಯನ್ನೂ ಜೊತೆಗೆ ಅದೇ ಕಾಲಘಟ್ಟದಲ್ಲಿ ಜಡಗೊಂಡ ಸಮಾಜವನ್ನೂ ಪರಿಚಯಿಸುತ್ತದೆ. ಇನ್ನೂ ಮುಂದೆ ಹೋಗಿ ಮಾದಿಗರು ಬೌದ್ಧ ದರ್ಶನಕ್ಕೆ ಕೊಡುಗೆ ನೀಡಿರುವ ಬಗ್ಗೆ ಸಾಕ್ಷಿ ನುಡಿಯುತ್ತಿದೆ.

ಇನ್ನೊಂದು ನಿದರ್ಶನ ’ಕುಮಾರ ಪನ್ಹ’. ಇದು ಬೌದ್ಧ ಅರಹಂತನಾದ ಅಸ್ಪೃಶ್ಯ ಜಾತಿಗೆ ಸೇರಿದ್ದ ’ಸೋಪಾಕ’ ಎಂಬ ಬಾಲಕ ಬೌದ್ಧ ತಾತ್ವಿಕತೆಯನ್ನು ಒಂದು, ಎರಡು, ಮೂರು.. ಎಂದು ವಿವರಿಸುವ ಬಹಳ ಮಹತ್ವವಾದ ಸುತ್ತ. ಸ್ವತಃ ಬುದ್ಧಗುರು ಯಾವುದು ಒಂದು? ಯಾವುದು ಎರಡು? ಹೀಗೆ ಹತ್ತರವರೆಗೂ ಪ್ರಶ್ನೆಗಳನ್ನು ಕೇಳಿದಾಗ ಕುಮಾರ ಸೋಪಕ ಉತ್ತರಿಸುವ ಈ ಭಾಗ ನಿಜಕ್ಕೂ ಅದ್ಭುತವಾಗಿದೆ. ಇಡೀ ಬೌದ್ಧ ತಾತ್ವಿಕತೆಯನ್ನು ಹತ್ತು ವಾಕ್ಯಗಳಲ್ಲಿ ಅಸ್ಪೃಶ್ಯನಾಗಿದ್ದ ಸೋಪಕ ಕಟ್ಟಿಕೊಡುವುದು ವಿಸ್ಮಯ ಮೂಡಿಸುತ್ತದೆ. ಬುದ್ಧಗುರುವಿನ ಕಾಲಕ್ಕೆ ಚರ್ಮಗಾರರು ಹಾಗೂ ಊರು ಸ್ವಚ್ಚಗೊಳಿಸುವವರು ಇನ್ನೂ ಶೂದ್ರರಲ್ಲಿನ ಅಂತ್ಯಜರಾಗಿದ್ದು ಬೌದ್ಧ ದರ್ಶನಕ್ಕೆ ಅವರು ನೀಡಿರಬಹುದಾದ ಕೊಡುಗೆಯನ್ನು ಇದು ತಿಳಿಸುತ್ತದೆ. ಮತ್ತೊಂದು, ಬೌದ್ಧ ಸಾಹಿತ್ಯದಲ್ಲಿ ಅರಸನನ್ನು ’ಭಾಗದುಗ’ ಅಂದರೆ ಉತ್ಪಾದನೆಯ ಭಾಗವನ್ನು ಕಸಿಯುವವನು ಎಂದಿರುವುದು. ಎಮ್ಮೆ ಕಾಯುವ ಯುವಕ ’ನಂದ’ ಬೌದ್ಧ ಸಂಘಕ್ಕೆ ಸೇರಿಸಿಕೊಳ್ಳಲು ಕೇಳಿಕೊಂಡಾಗ ಸ್ವತಃ ಬುದ್ಧ ’ಎಮ್ಮೆಗಳನ್ನು ಕೊಟ್ಟಿಗೆಗೆ ಹಿಂದಿರುಗಿಸಿ ಒಡೆಯನ ಅಪ್ಪಣೆಯನ್ನು ಪಡೆದು ಬಾ’ ಎನ್ನುತ್ತಾರೆ. ಇವೆರಡೂ ಅಂದಿನ ಶೂದ್ರ ಸಮಾಜವನ್ನು ಪರಿಚಯಿಸುವುದರ ಜೊತೆಗೆ ಸ್ವತಃ ಬುದ್ಧನಿಗೂ ಇದ್ದ ಒತ್ತಡವನ್ನು ತಿಳಿಸುತ್ತದೆ. ’ಒಡೆಯನ ಅಪ್ಪಣೆ’ ಎನ್ನುವುದು ಸಮಾಜದ ಕೆಲವು ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಬುದ್ಧಗುರು ಗಟ್ಟಿಯಾಗಿ ಮಾತನಾಡಬೇಕಾದಷ್ಟು ಮಾತಾಡಲು ಆಗಲಿಲ್ಲವೇನೋ ಎಂಬುದನ್ನೂ ತಿಳಿಸುತ್ತದೆ.

ಲೇಖಕರು ಸಾಮ್ರಾಟ್ ಅಶೋಕ ತನ್ನಿಬ್ಬರು ಮಕ್ಕಳ ಸಮೇತ ಹನ್ನೆರಡು ಭಿಕ್ಕುಗಳನ್ನು ಒಂಬತ್ತು ಪ್ರದೇಶಗಳಿಗೆ ಧಮ್ಮ ಪ್ರಸಾರಕ್ಕಾಗಿ ಕಳುಹಿಸಿದ ಮಹತ್ವದ ಮಾಹಿತಿಯನ್ನು ಲೇಖಕರು ಹಂಚಿಕೊಂಡಿದ್ದಾರೆ. ಅವುಗಳು 1. ಕಾಶ್ಮೀರ – ಗಾಂಧಾರ 2. ಮಹಿಷಮಂಡಲ (ಮೈಸೂರು) 3. ಬನವಾಸಿ 4. ಅಪರಾಂತಕ (ಗುಜರಾತ್, ಕಚ್ ಮತ್ತು ಸಿಂದ್ ಪ್ರಾಂತ್ಯಗಳು) 5. ಮಹಾರಾಷ್ಟ್ರ 6. ಯೋನ (ಗ್ರೀಸ್) 7. ಹಿಮಾಲಯ (ಟಿಬೆಟ್) 8. ಸುವರ್ಣಭೂಮಿ (ಮ್ಯಾನ್ಮಾರ್ ಮತ್ತು ಥೈಲ್ಯಾಂಡ್) 9. ಶ್ರೀಲಂಕಾ. ಕ್ರಿ.ಪೂ 3ನೇ ಶತಮಾನದಲ್ಲಿಯೇ ಕರ್ನಾಟಕದ ಎರಡು ಪ್ರಸಿದ್ಧ ಸ್ಥಳಗಳಿಗೆ ಅಶೋಕನು ಬೌದ್ಧ ಧಮ್ಮವನ್ನು ಪರಿಚಯಿಸಿದ್ದಾನೆ ಎನ್ನುವ ಮಾಹಿತಿ ಸರ್ವವಿಧಿತವಾಗಿದೆ. ಇದರ ಬಗ್ಗೆ ಡಾ. ತಾಳ್ತಜೆ ವಸಂತಕುಮಾರ ಅವರೂ ಸಹ ತಮ್ಮ ’ಬೌದ್ಧಾಯನ’ ಕೃತಿಯಲ್ಲಿ ತಮ್ಮ ಸಾಕಷ್ಟು ಸಂಶೋಧನೆಗಳ ಮೂಲಕ ತಿಳಿಸಿದ್ದಾರೆ. 1986ರಲ್ಲಿಯೇ ಗುಲ್ಬರ್ಗಾದ ಸನ್ನತಿಯಲ್ಲಿ ಅಶೋಕನ ಮೂರ್ತಿಯನ್ನು ಹೊಂದಿದ್ದ ವಿಹಾರ ಪತ್ತೆಯಾಗಿದೆ. ಮಸ್ಕಿ, ಬ್ರಹ್ಮಗಿರಿ, ಜಟಿಂಗ ರಾಮೇಶ್ವರ, ನಿಟ್ಟೂರು, ಉಡೆಗೊಳ, ಪಾಲ್ಕಿ ಗುಂಡು, ಗವಿಸಿದ್ಧೇಶ್ವರ ಮಠ ಮುಂತಾದ ಕಡೆಗಳಲ್ಲಿ ಅಶೋಕನ ಶಾಸನಗಳು ದೊರೆತಿವೆ. ಆದಾಗ್ಯೂ ಕರ್ನಾಟಕದಲ್ಲಿ ಬೌದ್ಧ ಇತಿಹಾಸದ ಕಡೆ ಬೆಳಕು ಚೆಲ್ಲುವ ಗಂಭೀರ ಪ್ರಯತ್ನವನ್ನು ಯಾವುದೇ ಸರ್ಕಾರ ಮಾಡಿಲ್ಲದಿರುವುದು ಬೇಸರದ ಸಂಗತಿಯಾಗಿದೆ. ಇದರ ಬಗ್ಗೆ ಮೂಡ್ನಾಕೂಡುರವರು ಕೃತಿಗಳು ಮತ್ತಷ್ಟು ಬೆಳಕು ಚೆಲ್ಲಬಹುದಾಗಿದೆ.

ಬೌದ್ಧರಲ್ಲಿ ಬುದ್ಧ ಪೂರ್ಣಿಮೆಯನ್ನು ಬಿಟ್ಟರೆ ಬೇರೆ ಆಚರಣೆಗಳೇ ಇಲ್ಲವೆಂದು ನಂಬಲಾಗಿದೆ. ಆದರೆ ’ಬುದ್ಧಾನುಸಾಸನಂ’ ಬೌದ್ಧರ ಎರಡು ಮಹತ್ವವಾದ ಆಚರಣೆಗಳನ್ನು ವಿವರಿಸುತ್ತದೆ. ವರ್ಷದ ಕೊನೆಯ ಹುಣ್ಣಿಮೆಯಲ್ಲಿ ರಾತ್ರಿಯಿಡೀ ಜನಸಾಮಾನ್ಯರು ಒಂದೆಡೆ ಹಬ್ಬದಂತೆ ಸೇರಿ ಸ್ವತಃ ಕೈಯಾರೆ ತಯಾರಿಸಿದ ಚೀವರಗಳನ್ನು ಬೌದ್ಧ ಭಿಕ್ಕುಗಳಿಗೆ ದಾನ ನೀಡುವ ’ಕಠಿಣ ಚೀವರ ದಾನ’. ಮತ್ತೊಂದು ಯಾಜಮಾನ್ಯ ಸಂಸ್ಕೃತಿ ತನ್ನದೆಂದು ಬಿಂಬಿಸಿಕೊಂಡಿರುವ ’ಗುರುಪೂರ್ಣಿಮೆ’. ಆಷಾಢ ಹುಣ್ಣಿಮೆಯ ದಿನದಂದು ಬೌದ್ಧ ಪರಂಪರೆಯಲ್ಲಿ ಬುದ್ಧಗುರು ಮೊದಲ ’ಧಮ್ಮಚಕ್ಕಪವತ್ತನ’ ನೀಡಿದ ದಿನವನ್ನು ಗುರುಪೂರ್ಣಿಮೆಯಾಗಿ ಆಚರಿಸಲಾಗುತ್ತಿತ್ತು. ಈಗ ಈ ಆಚರಣೆ ಇದೆಯಾದರೂ ಬೌದ್ಧ ಪರಂಪರೆಯ ಕೊಡುಗೆಯನ್ನೇ ಮರೆಸುವಷ್ಟು ಪ್ರತ್ಯೇಕಗೊಂಡಿದೆ. ಅದೇನೇ ಇದ್ದರೂ ಬೌದ್ಧರೂ ಸೇರಿದಂತೆ ಮನುಜಪರರೆಲ್ಲರೂ ’ಗುರುವಿನ ಗೆಳೆಯರಾಗುವ ತನಕ ದೊರೆಯದಣ್ಣ ಮುಕ್ತಿ’ ಎನ್ನುತ್ತಾ ಗುರುವಿನ ಗುಲಾಮರಾಗದೇ ಈ ಎರಡು ಆಚರಣೆಗಳನ್ನು ಮುಂದುವರೆಸುವುದು ನಿಜಕ್ಕೂ ಬುದ್ಧಗುರುವಿಗೆ ಸಲ್ಲಿಸಬಹುದಾದ ಗೌರವವಾಗಿದೆ. ಜೊತೆಗೆ ಪ್ರಜ್ಞೆ, ಕರುಣಾ ಮತ್ತು ಮೈತ್ರಿಯನ್ನು ಆಚರಣೆಗೆ ತಂದಂತಾಗುತ್ತದೆ.

ಡಾ. ಮೂಡ್ನಾಕೂಡು ಚಿನ್ನಸ್ವಾಮಿ

ಹೀಗೆ ’ಬುದ್ಧಾನುಸಾಸನಂ’ ಹಳೆಯ ಬೇರಿನೊಂದಿಗೆ ಹೊಸ ಚಿಗುರನ್ನೂ ಪರಿಚಯಿಸುತ್ತ ಓದುಗರನ್ನು ವಿಸ್ಮಯಗೊಳಿಸುತ್ತದೆ. ಇಂತಹ ಮಹತ್ವದ ಕೃತಿಯನ್ನು ಕನ್ನಡಕ್ಕೆ ಕೊಟ್ಟಿದ್ದಕ್ಕೆ ಡಾ. ಮೂಡ್ನಾಕೂಡು ಚಿನ್ನಸ್ವಾಮಿಯವರಿಗೆ ಧನ್ಯವಾದಗಳು.

ಕಡೆಯದಾಗಿ, ಧರ್ಮವೆಂಬುದು ಇನ್ನಿತರ ಧರ್ಮಗಳನ್ನು ವಿರೋಧಿಸಿ ಬೆಳೆಯುತ್ತದೆ ಎಂಬ ಕ್ರೌರ್ಯವನ್ನು ಬಿತ್ತುತ್ತಿರುವ ಈ ಕಾಲಘಟ್ಟದಲ್ಲಿ ಲೇಖಕರೇ ತಿಳಿಸುವ ಜೆನ್ ಕತೆಯೊಂದಿಗೆ ಈ ಬರೆಹವನ್ನು ಮುಗಿಸುತ್ತೇನೆ.

ಪ್ರಾಚೀನ ಜಪಾನ್ ದೇಶದಲ್ಲಿ ಬಿದಿರು ಮತ್ತು ಕಾಗದದಿಂದ ಮಾಡಿದ ಲಾಟೀನುಗಳನ್ನು ಉಪಯೋಗಿಸುತ್ತಿದ್ದರು. ಒಳಗೆ ಉರಿಯುವ ದೀಪವಿದ್ದಿತು. ಕುರುಡನೊಬ್ಬ ಒಂದು ರಾತ್ರಿ ತನ್ನ ಸ್ನೇಹಿತನನ್ನು ನೋಡಲು ಹೊರಡಲನುವಾದಾಗ ಅವನಿಗೆ ಒಂದು ಲಾಟೀನು ತೆಗೆದುಕೊಂಡು ಹೋಗುವಂತೆ ಜೊತೆಯಲಿದ್ದ ಸ್ನೇಹಿತ ಹೇಳಿದ.

’ನನಗೆ ಲಾಟೀನಿನ ಅಗತ್ಯವಿಲ್ಲ; ಬೆಳಕು ಮತ್ತು ಕತ್ತಲೆ ಎರಡೂ ನನಗೆ ಒಂದೆ’ ಎಂದ ಕುರುಡ.

’ನಿನ್ನ ದಾರಿಯನ್ನು ಕ್ರಮಿಸಲು ಲಾಟೀನಿನ ಅವಶ್ಯಕತೆ ಇಲ್ಲ ಎಂದು ನನಗೆ ಗೊತ್ತು. ಅದಿಲ್ಲದಿದ್ದರೆ ಯಾರಾದರೂ ಎದುರಿನಿಂದ ಬಂದು ನಿನ್ನ ಮೇಲೆ ಬೀಳಬಹುದು. ಅದಕ್ಕಾಗಿ ನೀನು ಲಾಟೀನು ಹಿಡಿದುಕೊಂಡು ಹೋಗುವುದು ಒಳಿತು’ ಎಂದ ಗೆಳೆಯ.

ಕುರುಡ ಲಾಟೀನು ಹಿಡಿದು ಹೊರಟ, ಅನತಿ ದೂರದಲ್ಲಿಯೇ ಅಪರಿಚಿತನೊಬ್ಬ ಇವನ ಮೇಲೆ ಬಂದು ಎಡವಿದ. ನೋಡಿಕೊಂಡು ಹೋಗಬಾರದೆ, ಲಾಟೀನು ಕಾಣಿಸುವುದಿಲ್ಲವೆ ನಿನಗೆ ಎಂದು ಅಪರಿಚಿತನಿಗೆ ಗದರಿದ.

’ನಿನ್ನ ಲಾಟೀನಿನ ದೀಪ ಆರಿಹೋಗಿದೆ ಸೋದರ!’ ಅಪರಿಚಿತನೆಂದ.

ವಿಕಾಸ್ ಆರ್ ಮೌರ್‍ಯ
ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವ ಹೊಸ ತಲೆಮಾರಿನ ಬರಹಗಾರ ಮತ್ತು ಹೋರಾಟಗಾರ ವಿಕಾಸ್ ಆರ್ ಮೌರ್ಯ. ಗಣಿತ ಸ್ನಾತಕೋತ್ತರ ಪದವಿ ಮುಗಿಸಿರುವ ವಿಕಾಸ್ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಚಮ್ಮಟಿಕೆ’ ಪ್ರಕಟಿತ ಕೃತಿ


ಇದನ್ನೂ ಓದಿ: ಪುಸ್ತಕ ಪರಿಚಯ; ಭೌತಶಾಸ್ತ್ರದ ಪ್ರೊಫೆಸರ್‌ರ ಹೋರಾಟದ ಹಾದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...