ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಕಾನೂನು ಖಾತರಿ ನೀಡುವಂತೆ ಒತ್ತಾಯಿಸಿ ಹರಿಯಾಣ ಹಾಗೂ ಪಂಜಾಬಿನ 6 ರೈತರು ಭಾನುವಾರ ಸಿಂಘು ಗಡಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಡಿಸೆಂಬರ್ 7 ರವರೆಗೆ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.
ರಾಜೇಂದರ್ ಸಿಂಗ್ (ಸೋನಿಪತ್), ಕರ್ತಾರ್ ಸಿಂಗ್ (ಕೈತಾಲ್), ನರೇಶ್ ಸಂಗ್ವಾನ್ (ಅಂಬಾಲ), ಸತ್ನಾಮ್ ಸಿಂಗ್ (ಪಟಿಯಾಲ), ಬಿಕ್ರಮ್ ಸಿಂಗ್ (ಗುರ್ದಾಸ್ಪುರ್) ಮತ್ತು ಕುಲ್ದೀಪ್ ಸಿಂಗ್ (ಮೋಗಾ) ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತರು. ಸಿಂಘು ಗಡಿಯಲ್ಲಿ ಸತ್ಯಾಗ್ರಹ ಆರಂಭಿಸಿರುವ ಇವರು ತಮ್ಮನ್ನು ಸರಪಳಿಯಿಂದ ಬಂಧಿಸಿಕೊಂಡಿದ್ದಾರೆ.
ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರಾಜೇಂದರ್ ಮಾತನಾಡಿ, ನಮ್ಮ ಬಹುವರ್ಷಗಳ ಬೇಡಿಕೆಯಾದ ಎಂಎಸ್ಪಿಗೆ ಕೇಂದ್ರ ಸರ್ಕಾರವು ಕಾನೂನು ಭರವಸೆ ನೀಡುವವರೆಗೆ ತಮ್ಮ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.
“ಎಂಎಸ್ಪಿ ಬಗ್ಗೆ ಚರ್ಚಿಸುವ ಸಲುವಾಗಿ ಕೇಂದ್ರ ಸರ್ಕಾರವು ಸಮಿತಿಯನ್ನು ರಚಿಸಿದ್ದು, ಸಂಯುಕ್ತ ಕಿಸಾನ್ ಮೋರ್ಚಾ ಕಡೆಯಿಂದ ಐದು ಜನರನ್ನು ಈ ಸಮಿತಿಯಲ್ಲಿರಲು ಹೆಸರು ಸೂಚಿಸುವಂತೆ ಹೇಳಿದೆ. ಇದು ಎಂಎಸ್ಪಿ ಮೇಲಿನ ಕಾನೂನು ಖಾತರಿಯ ನಮ್ಮ ಬೇಡಿಕೆಯನ್ನು ಹೊರಗಿಟ್ಟು ಆಂದೋಲವನ್ನು ಹಿಂತೆಗೆದುಕೊಳ್ಳುವಂತೆ ಮಾಡುತ್ತಿರುವ ಪ್ರಯತ್ನವಾಗಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರವು ಕಾನೂನು ಭರವಸೆ ನೀಡುವವರೆಗೆ ನಾವು ನಮ್ಮ ದೇಹಗಳನ್ನು ಸರಪಳಿಯಿಂದ ಕಟ್ಟಿಕೊಂಡಿರುವುದನ್ನು ಮುಂದುವರಿಸುತ್ತೇವೆ ಎಂದು ಕುಲ್ದೀಪ್ ಹೇಳಿದ್ದಾರೆ.
ಎಂಎಸ್ಪಿ ಕಾನೂನು ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಸಲು ರೈತರು ಐದು ಜನರ ಪಟ್ಟಿ ಅಂತಿಮಗೊಳಿಸಿದ್ದಾರೆ. ರೈತ ಮುಖಂಡರಾದ ಗುರ್ನಮ್ ಸಿಂಗ್ ಚದುನಿ, ಬಲ್ಬೀರ್ ಸಿಂಗ್ ರಾಜೇವಾಲ್, ಯುದ್ಧವೀರ್ ಸಿಂಗ್, ಅಶೋಕ್ ಧವಳೆ ಮತ್ತು ಶಿವಕುಮಾರ್ ಕಕ್ಕಾರವರು ರೈತರನ್ನು ಪ್ರತಿನಿಧಿಸಲಿದ್ದಾರೆ ಎಂದು ಎಸ್ಕೆಎಂ ತನ್ನ ಸಭೆಯಲ್ಲಿ ನಿರ್ಧರಿಸಿದೆ.
ರೈತರು ಎಂಎಸ್ಪಿ, ಕೃಷಿ ಕಾನೂನುಗಳ ವಿರುದ್ಧದ ಚಳವಳಿಯ ಸಂದರ್ಭದಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು ಮತ್ತು ರೈತರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವುದು ಸೇರಿದಂತೆ ಬಾಕಿ ಉಳಿದಿರುವ ಬೇಡಿಕೆಗಳ ಕುರಿತು ಹೋರಾಟ ಮುಂದುವರೆಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ನಾಗಾಲ್ಯಾಂಡ್ ಹತ್ಯಾಕಾಂಡ: ಈಶಾನ್ಯ ಭಾರತದಲ್ಲಿ AFSPA ರದ್ದತಿ ಹೋರಾಟಕ್ಕೆ ಮತ್ತಷ್ಟು ಧ್ವನಿ