ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಪೌರಕಾರ್ಮಿಕ ಸಮುದಾಯದ ಅಪ್ರಾಪ್ತ ಬಾಲಕಿಯ ಮೇಲಾದ ಲೈಂಗಿಕ ದೌರ್ಜನ್ಯ ಹಾಗೂ ಅಸಹಜ ಸಾವಿನ ವಿರುದ್ಧ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಒತ್ತಾಯ ಪತ್ರ ಸಲ್ಲಿಸಲಾಗಿದೆ.
ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ 14 ವರ್ಷದ ಬಾಲಕಿಯೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಇದು ಕೊಲೆ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದರು. ಘಟನೆಯನ್ನು ಜನಪರ ಸಂಘಟನೆಗಳು ಖಂಡಿಸಿ, ಇಂದು ಪ್ರತಿಭಟನೆಗೆ ಕರೆ ನೀಡಿದ್ದರು.
ಮಹಿಳಾ ಮುನ್ನಡೆ ಮತ್ತು ಲೈಂಗಿಕ ಹಿಂಸೆ ವಿರೋಧಿ ಜನಚಳವಳಿಯ ಕಾರ್ಯಕರ್ತರು, ’ಘಟನೆಯಲ್ಲಿ ಯಾರೇ ಯಾವುದೇ ರೀತಿಯಲ್ಲಿ ಪಾಲ್ಗೊಂಡಿದ್ದರೂ ಕಠಿಣ ಹಾಗೂ ನಿಷ್ಪಕ್ಷಪಾತ ತನಿಖೆಯಾಗಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು’ ಜಿಲ್ಲಾಧಿಕಾರಿಗಳಿಗೆ ಒತ್ತಾಯ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಹರಿಹರಪುರ ಅಟ್ರಾಸಿಟಿ ಪ್ರಕರಣ: ದಲಿತ ಮುಖಂಡರನ್ನು ಬಳಸಿ ಪ್ರಕರಣ ಮುಚ್ಚಲು ಯತ್ನ?
“ಕೆ.ಆರ್.ಪೇಟೆ ತಾಲೂಕು ಬೂಕನಕೆರೆ ಗ್ರಾಮದಲ್ಲಿ ಪೌರಕಾರ್ಮಿಕ ಸಮುದಾಯದ ಅಪ್ರಾಪ್ತ ಬಾಲಕಿ ಅಸಹಜ ಸಾವನ್ನಪ್ಪಿರುವ ಘಟನೆ ನಡೆದಿದೆ. ತಾಂತ್ರಿಕವಾಗಿ ಇದು ಕೊಲೆಯೋ ಅಲ್ಲವೋ ತನಿಖೆಯಿಂದ ತಿಳಿಯಬೇಕಾಗಿದೆಯಾದರೂ, ಇದು ವ್ಯವಸ್ಥೆಯ ವೈಫಲ್ಯದಿಂದ ಆಗಿರುವ ಕೊಲೆ ಎಂಬುದು ಸಾಂದರ್ಭಿಕ ಘಟನೆಗಳು ಹೇಳುತ್ತಿವೆ. ಈ ಬಾಲಕಿಯು ನಿರಂತರವಾಗಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವುದು, ಸತ್ತಾಗ ಗರ್ಭಿಣಿಯಾಗಿದ್ದದ್ದು, ಅದಕ್ಕೆ ಮುಂಚೆ ತನ್ನನ್ನು ಈ ಸ್ಥಿತಿಯಿಂದ ಪಾರು ಮಾಡಲು ಕೋರಿದ್ದಳು ಎಂಬುದು ಇವೆಲ್ಲವೂ ನಮ್ಮ ಸಾಮಾಜಿಕ ಸ್ಥಿತಿಯ ಕುರಿತೂ ಬೆಳಕು ಚೆಲ್ಲುತ್ತವೆ” ಎಂದು ಸಂಘಟನೆಗಳು ತಿಳಿಸಿವೆ.
ಮಕ್ಕಳು, ಮಹಿಳೆಯರು ತಮ್ಮ ಮೇಲಾಗುವ ದೌರ್ಜನ್ಯಗಳನ್ನು ಎದುರಿಸಲು ಬೇಕಾದ ಸಹಾಯವಾಣಿ, ಸಾಂತ್ವನ ಕೇಂದ್ರಗಳು, ಇಲಾಖೆಗಳು, ಸಮಿತಿಗಳು, ಪೊಲೀಸ್ ಠಾಣೆಗಳು, ಅಧಿಕಾರಿಗಳು – ತಮ್ಮ ಅಸ್ತಿತ್ವದ ಕುರಿತು ನೆರವು ಅಗತ್ಯವಿರುವವರಿಗೆ ಮೊದಲು ಮಾಹಿತಿ ಕೊಡಬೇಕಿದೆ ಎಂದು ತಿಳಿಸಿವೆ.
’ಮಂಡ್ಯ ಜಿಲ್ಲೆಯಲ್ಲಿ ಇಂತಹ ಹಲವಾರು ಪ್ರಕರಣಗಳು ಪದೇ ಪದೇ ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಪರಿಣಾಮಕಾರಿ ಕ್ರಮಗಳಿಗೆ ಮುಂದಾಗಬೇಕೆಂದು ನಾವು ಆಗ್ರಹಿಸುತ್ತೇವೆ. ಈ ವಿಚಾರದಲ್ಲಿ ನಾಗರಿಕ ಸಮಾಜದ್ದೂ ಪಾತ್ರವಿದೆ ಎಂದು ನಾವು ಭಾವಿಸುತ್ತೇವೆ. ಜನರಲ್ಲಿ ಅರಿವು ಮೂಡಿಸುವ, ದೌರ್ಜನ್ಯ ನಡೆದಾಗ ಅವರ ರಕ್ಷಣೆಗೆ ಧಾವಿಸುವ ವ್ಯವಸ್ಥೆ ಇದೆಯೆಂಬುದನ್ನು ಎಲ್ಲೆಡೆಗೆ ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಜೊತೆ ಕೈ ಜೋಡಿಸಲು ನಾವು ಸಿದ್ಧರಿದ್ದೇವೆ’ ಎಂದು ಸಂಘಟನೆಯ ಕಾರ್ಯಕರ್ತರು ತಿಳಿಸಿದ್ದಾರೆ.