ಹರಿಯಾಣದ ಭಿವಾನಿ ಜಿಲ್ಲೆಯ ದಾದಾಮ್ ಗಣಿಗಾರಿಕೆ ವಲಯದಲ್ಲಿ ಶನಿವಾರ ಸಂಭವಿಸಿದ ಭೂಕುಸಿತದಲ್ಲಿ ಒಬ್ಬರು ಸಾವನ್ನಪ್ಪಿದ್ದು ಮತ್ತು ಸುಮಾರು 15 ರಿಂದ 20 ಜನರು ಮಣ್ಣಿನ ಅಡಿಯಲ್ಲಿ ಸಿಲುಕಿರುವ ಶಂಕೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇಷ್ಟೇ ಅಲ್ಲದೆ ಗಣಿಗಾರಿಕೆಯಲ್ಲಿ ತೊಡಗಿದ್ದ ಸುಮಾರು 12 ವಾಹನಗಳು ಭೂಕುಸಿತದಲ್ಲಿ ಹೂತು ಹೋಗಿವೆ ಎನ್ನಲಾಗಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ.
ಇದುವರೆಗೆ ಮೂವರನ್ನು ರಕ್ಷಿಸಲಾಗಿದ್ದು, ಓರ್ವ ಮೃತದೇಹವನ್ನು ಹೊರತೆಗೆಯಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಹರಿಯಾಣ: ದುಷ್ಕರ್ಮಿಗಳಿಂದ ಯೇಸು ಕ್ರಿಸ್ತನ ಪ್ರತಿಮೆ ಧ್ವಂಸ
ಕೃಷಿ ಸಚಿವ ಜೆಪಿ ದಲಾಲ್ ಮತ್ತು ಎಸ್ಪಿ ಅಜಿತ್ ಸಿಂಗ್ ಶೇಖಾವತ್ ಅವರು ಪರಿಹಾರ ಕಾರ್ಯಗಳ ಮೇಲ್ವಿಚಾರಣೆಗಾಗಿ ಘಟನಾ ಸ್ಥಳದಲ್ಲಿದ್ದಾರೆ.
“ಕೆಲವರು ಸಾವನ್ನಪ್ಪಿದ್ದಾರೆ. ಸದ್ಯಕ್ಕೆ ನಿಖರವಾದ ಅಂಕಿಅಂಶಗಳನ್ನು ನೀಡಲು ಸಾಧ್ಯವಿಲ್ಲ. ವೈದ್ಯರ ತಂಡ ಆಗಮಿಸಿದೆ. ಸಾಧ್ಯವಾದಷ್ಟು ಜನರನ್ನು ಉಳಿಸಲು ನಾವು ಪ್ರಯತ್ನಿಸುತ್ತೇವೆ” ಎಂದು ಸಚಿವ ಜೆಪಿ ದಲಾಲ್ ಹೇಳಿದ್ದಾರೆ.
ಭೂಕುಸಿತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.
ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಟ್ವಿಟರ್ನಲ್ಲಿ ದುರ್ಘಟನೆಗೆ ತೀವ್ರ ದುಃಖವನ್ನು ವ್ಯಕ್ತಪಡಿಸಿದ್ದು, ಪರಿಸ್ಥಿತಿಯನ್ನು ಗಮನಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸಾರ್ವಜನಿಕ ಸ್ಥಳಗಳಲ್ಲಿನ ನಮಾಜ್ ಅನ್ನು ಸಹಿಸುವುದಿಲ್ಲ: ಹರಿಯಾಣ ಸಿಎಂ
ಭಿವಾನಿಯಲ್ಲಿರುವ ಖಾನಕ್ ಮತ್ತು ದಾದಾಮ್ ಬೆಟ್ಟಗಳಲ್ಲಿ ದೊಡ್ಡ ಪ್ರಮಾಣದ ಗಣಿಗಾರಿಕೆ ನಡೆಸಲಾಗುತ್ತದೆ. ಹೆಚ್ಚುತ್ತಿರುವ ಮಾಲಿನ್ಯದ ಮಟ್ಟದಿಂದ ಗಣಿಗಾರಿಕೆ ಕೆಲಸವನ್ನು ಎರಡು ತಿಂಗಳ ಹಿಂದೆ ನಿಷೇಧಿಸಲಾಗಿತ್ತು.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಪ್ರದೇಶದಲ್ಲಿ ಗಣಿಗಾರಿಕೆ ಕಾರ್ಯಾಚರಣೆಯನ್ನು ಪುನರಾರಂಭಿಸಲು ಗುರುವಾರ ಅನುಮತಿ ನೀಡಿತ್ತು. ಇದರ ಮರುದಿನ ಕೆಲಸ ಪ್ರಾರಂಭವಾಗಿತ್ತು.
ಎರಡು ತಿಂಗಳಿನಿಂದ ಗಣಿಗಳನ್ನು ಮುಚ್ಚಿದ್ದರಿಂದ ಕಟ್ಟಡ ನಿರ್ಮಾಣ ಸಾಮಗ್ರಿಗಳ ಕೊರತೆ ಉಂಟಾಗಿದೆ. ಈ ಕೊರತೆಯನ್ನು ನೀಗಿಸುವ ಸಲುವಾಗಿ ಸ್ಫೋಟಗಳನ್ನು ನಡೆಸಲಾತ್ತು, ಇದರಿಂದಾಗಿ ಭೂಕುಸಿತ ಉಂಟಾಗಿದೆ ಎಂದು ಊಹಿಸಲಾಗಿದೆ.
ಇದನ್ನೂ ಓದಿ:ಹರಿಯಾಣದ ಹಳ್ಳಿಗಳಿಗೆ ತೆರಳಿ ಧನ್ಯವಾದ ತಿಳಿಸುತ್ತಿರುವ ಪಂಜಾಬ್ ರೈತರು!


