ಕೋವಿಡ್ನ ಓಮಿಕ್ರಾನ್ ರೂಪಾಂತರ ಸೋಂಕನ್ನು ತಡೆಯಲಾಗದು. ಪ್ರತಿಯೊಬ್ಬರೂ ಅಂತಿಮವಾಗಿ ಸೋಂಕಿಗೆ ಒಳಗಾಗುತ್ತಾರೆ. ಬೂಸ್ಟರ್ ಲಸಿಕೆ ಡೋಸ್ಗಳು ವೈರಸ್ನ ವೇಗದ ಹರಡುವಿಕೆಯನ್ನು ತಡೆಯುವುದಿಲ್ಲ ಎಂದು ಉನ್ನತ ಸರ್ಕಾರಿ ತಜ್ಞರು ತಿಳಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
“ಬೂಸ್ಟರ್ ಡೋಸ್ ನೀಡಿದರೂ ಯಾವುದೇ ವ್ಯತ್ಯಾಸವಾಗುವುದಿಲ್ಲ. ಸೋಂಕು ಸಂಭವಿಸುತ್ತದೆ. ಪ್ರಪಂಚದಾದ್ಯಂತ ಇದು ಸಂಭವಿಸಿದೆ. ಕೊರೊನಾ ಇನ್ನು ಮುಂದೆ ಭಯಾನಕ ರೋಗವಲ್ಲ. ಕೋವಿಡ್ನ ಈ ಹೊಸ ರೂಪಾಂತರ ಸೌಮ್ಯವಾಗಿದ್ದು, ಸೋಂಕಿತರು ಆಸ್ಪತ್ರೆಗೆ ಸೇರಬೇಕಾಗಿಲ್ಲ. ಕಡಿಮೆ ಸಂಖ್ಯೆಯಲ್ಲಿ ಆಸ್ಪತ್ರೆಗೆ ಸೇರುವ ಅನಿವಾರ್ಯತೆ ಇರುತ್ತದೆ. ಇದು ನಾವು ನಿಭಾಯಿಸಬಹುದಾದ ಕಾಯಿಲೆಯಾಗಿದೆ” ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರ ಸಂಸ್ಥೆಯ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ.ಜೈಪ್ರಕಾಶ್ ಮುಳಿಯಿಲ್ ಹೇಳಿದ್ದಾರೆ.
“ಇತರ ದೇಶಗಳಂತೆ ಭಾರತಕ್ಕೆ ಈ ವೈರಸ್ ಕೆಟ್ಟದಾಗಿ ಪರಿಣಾಮ ಬೀರಿಲ್ಲ. ದೇಶದಲ್ಲಿ ಕೊರೊನಾ ಲಸಿಕೆಗಳನ್ನು ಪರಿಚಯಿಸುವ ಮೊದಲೇ ದೇಶದ ಶೇಕಡಾ 85 ರಷ್ಟು ಜನರು ಸೋಂಕಿಗೆ ಒಳಗಾಗಿದ್ದರು. ಆದ್ದರಿಂದ, ಮೊದಲ ಡೋಸ್ ಮೂಲಭೂತವಾಗಿಯೇ ಒಂದು ಬೂಸ್ಟರ್ ಡೋಸ್” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ: ’ಸಂತ್ರಸ್ತೆಯಾಗಿ ಬದುಕುವುದು ಸುಲಭವಲ್ಲ’ 5 ವರ್ಷಗಳ ಪ್ರಯಾಣ ನೆನಪಿಸಿಕೊಂಡ ನಟಿ ಭಾವನಾ
“ನಮ್ಮಲ್ಲಿ ಬಹುಪಾಲು ಜನರಿಗೆ ನಾವು ಸೋಂಕಿಗೆ ಒಳಗಾಗಿದ್ದೇವೆ ಎಂದು ತಿಳಿದಿರುವುದಿಲ್ಲ, ಬಹುಶಃ 80% ಕ್ಕಿಂತ ಹೆಚ್ಚು ಜನರು ಸೋಂಕಿತರಾಗಿದ್ದರೂ ಸಹ ತಿಳಿದಿರುವುದಿಲ್ಲ” ಎಂದು ಹೇಳಿದ್ದಾರೆ.
“ನಾವು ಇಲ್ಲಿಯವರೆಗೆ ಸರ್ಕಾರದ ಯಾವುದೇ ಸಂಸ್ಥೆಗಳಿಂದ ಬೂಸ್ಟರ್ ಡೋಸ್ ಅನ್ನು ಸೂಚಿಸಿಲ್ಲ. ಮುನ್ನೆಚ್ಚರಿಕೆ ಡೋಸ್ ಅನ್ನು ಸೂಚಿಸಲಾಗಿದೆ, ಏಕೆಂದರೆ ಕೆಲವು ಜನರು ಅದರಲ್ಲೂ ಹೆಚ್ಚಾಗಿ 60 ವರ್ಷಕ್ಕಿಂತ ಮೇಲ್ಪಟ್ಟವರು, ಎರಡನೇ ಡೋಸ್ಗೆ ಪ್ರತಿಕ್ರಿಯಿಸಲಿಲ್ಲ ಎಂಬ ವರದಿಗಳಿವೆ” ಎಂದಿದ್ದಾರೆ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ.ಜೈಪ್ರಕಾಶ್ ಮುಳಿಯಿಲ್.
ದೇಶದಲ್ಲಿ ದೈನಂದಿನ ಕೊರೊನಾ ಪ್ರಕರಣಗಳು 2 ಲಕ್ಷ ಗಡಿಯತ್ತ ಇದ್ದು, ಕಳೆದ 24 ಗಂಟೆಗಳಲ್ಲಿ 1,94,720 ಕೊರೊನಾ ಪ್ರಕರಣಗಳು ವರದಿಯಾಗಿವೆ. ಮಂಗಳವಾರ ವರದಿಯಾಗಿದ್ದ 1.68 ಲಕ್ಷ ಪ್ರಕರಣಗಳಿಗಿಂತ ಶೇಕಡಾ 15.8 ಹೆಚ್ಚಾಗಿದೆ. ಇಲ್ಲಿಯವರೆಗೆ 4,868 ಓಮಿಕ್ರಾನ್ ಸೋಂಕಿನ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ 1,281,ರಾಜಸ್ಥಾನದಲ್ಲಿ 645 ಓಮಿಕ್ರಾನ್ ಸೋಂಕಿತರಿದ್ದಾರೆ.
ರಾಜ್ಯದಲ್ಲಿಯೂ ಕೊರೋನಾ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿದ್ದು, ಒಂದೇ ದಿನ 14,473 ಹೊಸ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ 10,800 ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ 10.30% ಇದೆ.



Dirty group.
Hi