ಮುಂಬೈ ಪೊಲೀಸರು ನಗರದ ಮಾಜಿ ಮೇಯರ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ನಾಯಕಿ ಕಿಶೋರಿ ಪೆಡ್ನೇಕರ್ ಮತ್ತು ಇತರ ನಾಲ್ವರ ವಿರುದ್ಧ ಸ್ಲಂ ನಿವಾಸಿಗಳಿಗೆ ಮೀಸಲಾದ ಫ್ಲಾಟ್ಗಳನ್ನು ವಂಚನೆಯಿಂದ ಸ್ವಾಧೀನಪಡಿಸಿಕೊಂಡಿದ್ದಾರೆ ಎಂಬ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸ್ಲಂ ಪುನರ್ವಸತಿ ಪ್ರಾಧಿಕಾರದ ಅಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಇದುವರೆಗೆ ಯಾವುದೇ ಬಂಧನವಾಗಿಲ್ಲ.ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಎಸ್ಆರ್ಎ [ಸ್ಲಂ ಪುನರ್ವಸತಿ ಪ್ರಾಧಿಕಾರ] ಅಧಿಕಾರಿ ಉದಯ್ ಪಿಂಗಳೆ ಅವರು ಸಲ್ಲಿಸಿದ ದೂರಿನ ಪ್ರಕಾರ, ಮಾಜಿ ಮೇಯರ್ ಪೆಡ್ನೇಕರ್ ಅವರು ಗೋಮಾತಾ ಸೊಸೈಟಿಯ ಗಂಗಾರಾಮ್ ಬೋಗ ಹೆಸರಿನಲ್ಲಿದ್ದ ಫ್ಲಾಟ್ ಅನ್ನು ಸ್ವಾಧೀನಪಡಿಸಿಕೊಂಡಿದ್ದಾರೆ” ಎಂದು ಹೆಸರು ಹೇಳಲು ಇಚ್ಚಿಸದ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
“2008 ರಲ್ಲಿ ಈ ಫ್ಲಾಟ್ ಅನ್ನು ಗಂಗಾರಾಮ್ ಬೋಗಾ ಅವರಿಗೆ ನೀಡಲಾಯಿತು. ಆದರೆ 2017 ರ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲಿ ಪೆಡ್ನೇಕರ್ ಅವರು ಇದನ್ನು ತನ್ನ ಆಸ್ತಿ ಎಂದು ಉಲ್ಲೇಖಿಸಿದ್ದಾರೆ” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಎಸ್ಆರ್ಎ ಅಧಿಕಾರಿ ಉದಯ್ ಪಿಂಗಳೆ ದೂರಿನ ಆಧಾರದ ಮೇಲೆ, ಕಿಶೋರಿ ಪೆಡ್ನೇಕರ್, ಅವರ ಮಗ ಸಾಯಿಪ್ರಸಾದ್ ಮತ್ತು ಇತರ ಮೂವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಾಜಿ ಮೇಯರ್ ಅವರ ಮಗ ನಡೆಸುತ್ತಿರುವ ಕಿಶ್ ಕಾರ್ಪೊರೇಟ್ ಸರ್ವಿಸಸ್ ಕಂಪನಿಯು ಫ್ಲಾಟ್ನಲ್ಲಿ ತನ್ನ ಕಚೇರಿಯನ್ನು ಹೊಂದಿದೆ ದೂರು ಉಲ್ಲೇಖಿಸಿದೆ.
2020 ರಲ್ಲಿ, ಭಾರತೀಯ ಜನತಾ ಪಕ್ಷದ ನಾಯಕ ಕಿರಿತ್ ಸೋಮಯ್ಯ ಅವರು ಬಾಂಬೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸಲ್ಲಿಸಿ, ಕಂಪನಿಯು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಸ್ಲಂ ಪುನರ್ವಸತಿ ಪ್ರಾಧಿಕಾರದ ಫ್ಲಾಟ್ ಅನ್ನು ಅದರ ವಿಳಾಸವಾಗಿ ತೋರಿಸಿದೆ ಎಂದು ಆರೋಪಿಸಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಪ್ರಕರಣದ ಇತರ ಮೂವರು ಆರೋಪಿಗಳಾದ ಪ್ರಶಾಂತ್ ಗವಾಸ್, ಶೈಲಾ ಗವಾಸ್ ಮತ್ತು ಗಿರೀಶ್ ರೇವಣಕರ್ ಅವರು ಕಿಶ್ ಕಾರ್ಪೊರೇಟ್ ಸೇವೆಗಳ ನಿರ್ದೇಶಕರಾಗಿದ್ದಾರೆ.
ಶನಿವಾರ ಸಂಜೆ ಎಫ್ಐಆರ್ ದಾಖಲಾಗಿರುವ ಬಗ್ಗೆ ತಿಳಿಸಲಾಯಿತು ಎಂದು ಕಿಶೋರಿ ಪೆಡ್ನೇಕರ್ ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದ್ದು, “ಇಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಎಲ್ಲರಿಗೂ ತಿಳಿದಿದೆ. ನಾವು ಅದರ ವಿರುದ್ಧ ಹೋರಾಡಲಿದ್ದೇವೆ’’ ಎಂದು ಅವರು ಹೇಳಿದ್ದಾರೆ.