1994ರಲ್ಲಿ ಪಂಜಾಬ್ ಪೊಲೀಸರು ಉಗ್ರ ಎಂದು ನಡೆಸಿದ ಎನ್ಕೌಂಟರ್ನಲ್ಲಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿ, ಸತ್ತಿರುವವನು ಭಯೋತ್ಪಾದಕನೆಂದು ಅಣೆಪಟ್ಟಿ ಕಟ್ಟಿದ್ದರು. ಆ ಸಂದರ್ಭದಲ್ಲಿ ಆತನ ಪತ್ನಿ ದಲ್ಬೀರ್ ಕೌರ್ ಕೇವಲ 19 ವರ್ಷ ಪ್ರಾಯದವರಾಗಿದ್ದು, ಎರಡು ತಿಂಗಳ ಗರ್ಭಿಣಿಯಾಗಿದ್ದಳು.
ಆದರೆ, ಎನ್ಕೌಂಟರ್ ನಡೆದ ನಾಲ್ಕು ವರ್ಷಗಳ ನಂತರ ಪೊಲೀಸರು ಹತ್ಯೆ ಮಾಡಿದ್ದೇವೆ ಎಂದು ಹೇಳಿದ್ದ ಭಯೋತ್ಪಾದಕ ಜೀವಂತವಾಗಿ ಪತ್ತೆಯಾಗಿದ್ದ. ಆ ನಂತರ, ಕೌರ್ ಮತ್ತು ಆಕೆಯ ಅತ್ತೆ ಪ್ರಯಾಸಕರವಾದ ಸುದೀರ್ಘ ಕಾನೂನು ಹೋರಾಟ ನಡೆಸಬೇಕಾಯಿತು. ಅಂತಿಮವಾಗಿ 29 ವರ್ಷಗಳ ನಂತರ ವಿಶೇಷ ತನಿಖಾ ತಂಡವು ಎನ್ಕೌಂಟರ್ ನಕಲಿ ಎಂದು ಹೈಕೋರ್ಟಿಗೆ ತಿಳಿಸಿದ್ದು, ಮಾಜಿ ಇನ್ಸ್ಪೆಕ್ಟರ್ ಜನರಲ್ ಮತ್ತು ಇತರ ಪೊಲೀಸ್ ಅಧಿಕಾರಿಗಳ ವಿರುದ್ಧ ಈಗ ಪ್ರಕರಣ ದಾಖಲಾಗಿದೆ.
ಮೃತ ಸುಖಪಾಲ್ ಸಿಂಗ್ ಅವರು ಗುರುದಾಸ್ಪುರ ಜಿಲ್ಲೆಯ ಕಲಾ ಆಫ್ಘಾನಾ ಗ್ರಾಮದ ನಿವಾಸಿಯಾಗಿದ್ದು, 1994 ರಲ್ಲಿ ಪೊಲೀಸ್ ಅಧಿಕಾರಿಗಳಿಂದ ಅಪಹರಣಕ್ಕೊಳಗಾಗಿದ್ದರು. ನಂತರ, ಅವರಿಗೆ ಬೇಕಾಗಿದ್ದ ಭಯೋತ್ಪಾದಕ ಗುರ್ನಾಮ್ ಸಿಂಗ್ ಬಂಡಾಲಾಗೆ ಹತ್ಯೆಗೆ ಬಹುಮಾನವನ್ನು ಪಡೆಯಲು ಈತನನ್ನು ಗುಂಡಿಕ್ಕಿ ಕೊಂದರು. ಸುಖಪಾಲ್ ಹತ್ಯೆ ನಂತರ ಕೌರ್ ಮತ್ತು ಅವರ ಕುಟುಂಬಕ್ಕೆ ಅಗ್ನಿಪರೀಕ್ಷೆ ಆರಂಭವಾಗಿತ್ತು.
‘ನನ್ನ ಅತ್ತೆ ನ್ಯಾಯಕ್ಕಾಗಿ ಬೀದಿಬೀದಿ ಅಲೆದಿದ್ದಾರೆ. ಅವರು ನಡೆಸಿದ ಕಾನೂನು ಹೋರಾಟಕ್ಕೆ ನ್ಯಾಯ ಸಿಗಲು 29 ವರ್ಷ ತೆಗೆದುಕೊಂಡಿದ್ದು, ಅಂತಿಮವಾಗಿ ಈಗ ಎಸ್ಐಟಿ ಎನ್ಕೌಂಟರ್ ನಕಲಿ ಎಂದು ಹೇಳಿದೆ. ದುರಾದೃಷ್ಟವೆಂದರೆ ನಾನು ನನ್ನ ಅತ್ತೆಯನ್ನೂ ಕಳೆದುಕೊಂಡಿದ್ದೇನೆ’ ಎಂದು ಹೇಳಿದರು.
ತಂದೆ ಹತ್ಯೆಯಾದಾಗ ಕೌರ್ ಅವರ ಮಗಳು ಕೇವಲ ಒಂದು ವರ್ಷ ವಯಸ್ಸಿನವರಾಗಿದ್ದರು. ತಂದೆಯ ಬಗ್ಗೆ ಅವರಿಗೆ ಯಾವುದೇ ನೆನಪುಗಳಿಲ್ಲ. ‘ತಂದೆ ಇಲ್ಲದೆ ನಾನು ಯಾವ ರೀತಿಯ ಜೀವನವನ್ನು ನಡೆಸಿದ್ದೇನೆ ಎಂದು ನೀವು ಊಹಿಸಬಹುದು. ಅವರ ಬಗ್ಗೆ ನನಗೆ ಯಾರು ಏನೂ ಹೇಳಲಿಲ್ಲ; ಸಮಯ ಕಳೆದಂತೆ ನನಗೆ ಏನಾಯಿತು ಎಂದು ತಿಳಿದಿದೆ’ ಎಂದು ಜೀವನಜ್ಯೋತ್ ಕೌರ್ ಹೇಳಿದರು.
1994ರಲ್ಲಿ ಪಂಜಾಬ್ ಪೊಲೀಸ್ ಅಧಿಕಾರಿಗಳ ತಂಡ ಉಗ್ರ ಬಂದಾಲನನ್ನು ಕೊಂದಿರುವುದಾಗಿ ಹೇಳಿಕೊಂಡಿತು. ಕೆಲವು ಪೊಲೀಸ್ ಅಧಿಕಾರಿಗಳು ಅವರನ್ನು ಅಪಹರಿಸಿ ನಕಲಿ ಎನ್ಕೌಂಟರ್ನಲ್ಲಿ ಕೊಂದಿದ್ದಾರೆ ಎಂದು ಆರೋಪಿಸಿ ಸುಖಪಾಲ್ ಸಿಂಗ್ ಅವರ ಕುಟುಂಬ ಅದೇ ವರ್ಷ ಜುಲೈ 29 ರಂದು ಪ್ರಕರಣ ದಾಖಲಿಸಿತು. ಆದರೆ ಘಟನೆ ನಡೆದ ನಾಲ್ಕು ವರ್ಷಗಳ ನಂತರ, 1998ರಲ್ಲಿ ಬಂಡಾಲನನ್ನು ಜೀವಂತವಾಗಿ ಹಿಡಿಯಲಾಯಿತು. ‘ನನ್ನ ಮಗ ಎಲ್ಲಿದ್ದಾನೆ ಎಂಬುದರ ಬಗ್ಗೆ ಏನಾದರೂ ತಿಳಿದಿದೆಯೇ ಎಂದು ಕೇಳಲು, ನನ್ನ ಅತ್ತೆ ಭಯೋತ್ಪಾದಕ ಬಂಡಾಲನನ್ನು ಜೈಲಿನಲ್ಲಿ ಭೇಟಿಯಾದರು. ಆದರೆ, ಅವರಿಗೆ ಯಾವುದೇ ಮಾಹಿತಿ ಸಿಗಲಿಲ್ಲ’ ಎಂದು ದಲ್ಬೀರ್ ಕೌರ್ ಹೇಳಿದರು.
‘ಎನ್ಕೌಂಟರ್ ನಡೆದ 13ವರ್ಷಗಳ ನಂತರ 2007ರಲ್ಲಿ ಆಗಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜೆಪಿ ವಿರ್ದಿ ಅವರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಯಿತು. 2010ರಲ್ಲಿ ವಿರ್ದಿ ನಿಧನರಾದರು. ಇದು ತನಿಖೆಯ ಹಿನ್ನಡೆಗೆ ಕಾರಣವಾಯಿತು. 2013ರಲ್ಲಿ, ಕೌರ್ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟಿಗೆ ಅರ್ಜಿ ಸಲ್ಲಿಸಿ ಸಿಬಿಐ ತನಿಖೆಗೆ ಮನವಿ ಮಾಡಿದರು. ಈ ಬೇಡಿಕೆಗೆ ಸ್ಪಂದಿಸಿದ ಪಂಜಾಬ್ ಪೊಲೀಸರು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸಹೋಟಾ ನೇತೃತ್ವದಲ್ಲಿ ಮತ್ತೊಂದು ತನಿಖೆಯನ್ನು ಆರಂಭಿಸಿದರರು. ಅದೇ ವರ್ಷದ ನಂತರ, ಪೊಲೀಸರು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ಸಹ ರಚಿಸಿದರು.
ಈ ತಂಡ ತನಿಖೆಗೆ 10 ವರ್ಷಗಳನ್ನು ತೆಗೆದುಕೊಂಡಿತು. ಆದರೆ, ಡಿಸೆಂಬರ್ 10, 2023 ರಂದು, ಡಿಜಿಪಿ ಗುರುಪ್ರೀತ್ ಕೌರ್ ಡಿಯೋ ನೇತೃತ್ವದ ಎಸ್ಐಟಿ ತಂಡವು, ಸುಖಪಾಲ್ ಅವರ ಎನ್ಕೌಂಟರ್ ಪ್ರಕರಣದ ಆರಂಭಿಕ ಪೊಲೀಸ್ ಎಫ್ಐಆರ್ ಅನ್ನು ಹಂತ-ಹಂತವಾಗಿ ತಿದ್ದುಪಡಿ ಮಾಡಿ, ಸತ್ಯಾಂಶವನ್ನು ಸುಳ್ಳು ಮಾಡಿ ಪ್ರಕರಣ ದಾಖಲಿಸಲಾಗಿದೆ‘ ಎಂದು ಹೈಕೋರ್ಟಿಗೆ ಅಫಿಡವಿಟ್ ಸಲ್ಲಿಸಿತು.
ಮಾಜಿ ಇನ್ಸ್ಪೆಕ್ಟರ್ ಜನರಲ್ ಪರಮರಾಜ್ ಸಿಂಗ್ ಉಮ್ರಾನಂಗಲ್, ಮೊರಿಂಡಾದ ಅಂದಿನ ಉಪ ಪೊಲೀಸ್ ವರಿಷ್ಠಾಧಿಕಾರಿ ಜಸ್ಪಾಲ್ ಸಿಂಗ್ ಮತ್ತು ಸಹಾಯಕ ಪೊಲೀಸರ ವಿರುದ್ಧ ಅಕ್ಟೋಬರ್ನಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಸಾಕ್ಷ್ಯ ನಾಶ ಮತ್ತು ಕಟ್ಟುಕಥೆಗಾಗಿ ಹೊಸ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಆಗ ಸಬ್ ಇನ್ಸ್ಪೆಕ್ಟರ್ ಆಗಿದ್ದ ಗುರುದೇವ್ ಸಿಂಗ್ ಅವರು ಈಗ ನಿಧನರಾಗಿದ್ದಾರೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟಿನ ಹಿರಿಯ ವಕೀಲ ಪ್ರದೀಪ್ ವಿರ್ಕ್ ಅವರು ಪ್ರಕರಣವನ್ನು ಪಟ್ಟುಬಿಡದೆ ಮುಂದುವರಿಸಿದ್ದಕ್ಕಾಗಿ ಮೃತನ ಕುಟುಂಬವನ್ನು ಶ್ಲಾಘಿಸಿದ್ದಾರೆ. ‘ಈ ಪ್ರಕರಣವನ್ನು ಮುಂದುವರಿಸಿದ ಕೀರ್ತಿ ಈ ಕುಟುಂಬಕ್ಕೆ ಸಲ್ಲುತ್ತದೆ, ಕುಟುಂಬವು ಹಾಗೆ ಮಾಡಿದಾಗ ಮಾತ್ರ ವಕೀಲರು ಪ್ರಕರಣದಲ್ಲಿ ಹೋರಾಡಬಹುದು. ನೀವು ಪ್ರಕರಣವನ್ನು ಮುಂದುವರಿಸಿದರೆ ದೇವರೂ ನ್ಯಾಯ ನೀಡುತ್ತಾನೆ’ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ; ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುವುದು; ಸಂಸತ್ ಸದಸ್ಯರಿಗೆ ಪತ್ರ ಬರೆದ ಸ್ಪೀಕರ್