ಶನಿವಾರ ನಾಸಿಕ್ನಿಂದ ಹೊರಟ ಮಹಾರಾಷ್ಟ್ರದ 21 ಜಿಲ್ಲೆಗಳ ಲಕ್ಷಾಂತರ ರೈತರ ರ್ಯಾಲಿಯು, 180 ಕಿ.ಮೀ. ದೂರದ ಮಹಾರಾಷ್ಟ್ರ ರಾಜಧಾನಿಯಾದ ಮುಂಬೈಗೆ ತಲುಪುತ್ತಿದೆ. ಸೋಮವಾರದಂದು ರೈತರು ನಗರದ ಹೆಸರಾಂತ ಆಜಾದ್ ಮೈದಾನದಲ್ಲಿ ಸೇರಲಿದ್ದಾರೆ. ಘೋಷಣೆ ಕೂಗುತ್ತಾ ಹೊರಟ ರೈತರ ರ್ಯಾಲಿಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ವೈರಲಾಗಿದೆ.
ರೈತರ ಈ ರ್ಯಾಲಿಯಲ್ಲಿ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ಸರ್ಕಾರದ ಮಿತ್ರಪಕ್ಷವಾಗಿರುವ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಕೂಡಾ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
ಅಖಿಲ ಭಾರತ ಕಿಸಾನ್ ಸಭಾದ ಅಡಿಯಲ್ಲಿ ಒಟ್ಟುಗೂಡಿಡಿರುವ ರೈತರು ಕೆಲವೇ ಗಂಟೆಗಳಲ್ಲಿ ಮುಂಬೈ ತಲುಪುವ ನಿರೀಕ್ಷೆಯಿದೆ. ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಯಲಿದ್ದು ಅದಕ್ಕೂ ಎರಡು ದಿನಗಳ ಮೊದಲೇ ರೈತರು ಇಲ್ಲಿ ರ್ಯಾಲಿ ಮಾಡುತ್ತಿದ್ದಾರೆ.
ಇದನ್ನೂ ಓದಿ: 69 ವರ್ಷಗಳ ಹಿಂದೆ ನಡೆದ ಗಣರಾಜ್ಯೋತ್ಸವದಂದು ಸಹ ಟ್ರ್ಯಾಕ್ಟರ್ ಪರೇಡ್ ನಡೆದಿತ್ತು!
ಜನವರಿ 26 ರಂದು ದೆಹಲಿಯ ಸುತ್ತಲೂ ಇರುವ ರಿಂಗ್ ರಸ್ತೆಯ ಉದ್ದಕ್ಕೂ ನಡೆಯಲಿರುವ ರ್ಯಾಲಿಯಲ್ಲಿ ಲಕ್ಷಾಂತರ ಟ್ರಾಕ್ಟರುಗಳು ಭಾಗವಹಿಸುವ ನಿರೀಕ್ಷೆಯಿದೆ ಮತ್ತು ಇದಕ್ಕಾಗಿ ದೆಹಲಿ ಪೊಲೀಸರಿಂದ ಅನುಮತಿ ಕೋರಲಾಗಿದೆ.
ಉದ್ದೇಶಿತ ರ್ಯಾಲಿಗೆ ತಾವು ಪೊಲೀಸ್ ಅನುಮತಿ ಪಡೆದಿದ್ದೇವೆ ಎಂದು ಶನಿವಾರ ರೈತರು ಹೇಳಿಕೊಂಡಿದ್ದರು. ಆದರೆ ಇದನ್ನು ದೆಹಲಿ ಪೊಲೀಸರು ವಿರೋಧಿಸಿದ್ದು, “ರೈತರು ನಮಗೆ ರ್ಯಾಲಿ ನಡೆಯುವ ಮಾರ್ಗದ ಬಗ್ಗೆ ಲಿಖಿತವಾಗಿ ತಿಳಿಸಿಲ್ಲ. ಅದನ್ನು ಲಿಖಿತವಾಗಿ ಸ್ವೀಕರಿಸಿದ ನಂತರ ಈ ಬಗ್ಗೆ ತಿಳಿಸುತ್ತೇವೆ” ಎಂದು ದೆಹಲಿ ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾಸ್ತವ ಹೇಳಿದ್ದಾರೆಂದು ಎನ್ಡಿಟಿವಿ ವರದಿ ಮಾಡಿದೆ.
ರ್ಯಾಲಿಯ ಬಗ್ಗೆ ದೆಹಲಿ ಪೊಲೀಸರು ಇಂದು ಸಂಜೆ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ.
ರೈತರೊಂದಿಗೆ ಕೇಂದ್ರ ಸರ್ಕಾರ ಇದುವರೆಗೂ 11 ವಿಫಲ ಮಾತುಕತೆಗಳನ್ನು ನಡೆಸಿದೆ. ರ್ಯಾಲಿಗೆ ಕೇಂದ್ರ ಸರ್ಕಾರ ವಿರುದ್ದವಾಗಿದ್ದು, ಸುಪ್ರೀಂಕೋರ್ಟ್ನಲ್ಲಿ ರ್ಯಾಲಿಯು “ರಾಷ್ಟ್ರಕ್ಕೆ ಮುಜುಗರ” ಉಂಟು ಮಾಡುತ್ತದೆ ಎಂದು ಹೇಳಿ, ರ್ಯಾಲಿಯನ್ನು ತಡೆಯುವಂತೆ ಮನವಿ ಸಲ್ಲಿಸಿತ್ತು. ಆದರೆ ಸುಪ್ರೀಂಕೋರ್ಟ್ ಕೇಂದ್ರದ ಮನವಿಯನ್ನು ತಿರಸ್ಕರಿಸಿದ್ದು, ಆಸ್ತಿಪಾಸ್ತಿ ಹಾಗೂ ಜೀವಗಳಿಗೆ ಹಾನಿಯಾಗದಂತೆ ಶಾಂತಿಯುತ ಪ್ರತಿಭಟನೆ ನಡೆಸುವ ರೈತರ ಹಕ್ಕನ್ನು ನ್ಯಾಯಾಲಯ ಎತ್ತಿಹಿಡಿದಿತ್ತು.
ಇದನ್ನೂ ಓದಿ: ಬಲವಂತವಾಗಿ ರೈತ ಜಾಥಾ ತಡೆದ ಪೊಲೀಸರು: ರೈತ ಮುಖಂಡರ ಆಕ್ಷೇಪ