ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಹೋರಾಟ ನಡೆಸುತ್ತಿರುವ ರೈತರು ಜ. 26ರಂದು ಟ್ರ್ಯಾಕ್ಟರ್ ಪರೇಡ್ ನಡೆಸುತ್ತಿರುವುದು ತಿಳಿದೇ ಇದೆ. ಆದರೆ 69 ವರ್ಷಗಳ ಹಿಂದೆ ನಡೆದ ಗಣರಾಜ್ಯೋತ್ಸವಂದು ನಡೆದ ಪರೇಡ್ನಲ್ಲಿ ಟ್ಯಾಕ್ಟರ್ಗಳು ಸಂಚರಿಸಿದ್ದವು!
ಜ. 26ರಂದು ಗಣರಾಜ್ಯೋತ್ಸವಂದು ಪರೇಡ್ ನಡೆಸುವುದು ರೂಢಿ. ಆ ದಿನ ವಿದೇಶಿ ಗಣ್ಯರೊಬ್ಬರು ಅತಿಥಿಯಾಗಿ ಪಾಲ್ಗೊಳ್ಳುತ್ತಾರೆ ಮತ್ತು ಪರೇಡ್ಗೆ ಸಾಕ್ಷಿಯಾಗುತ್ತಾರೆ. ಆದರೆ ಈ ಬಾರಿ ಪರೇಡ್ ಸಂದರ್ಭದಲ್ಲಿ ರೈತರು ತಮ್ಮ ಹೋರಾಟದ ಭಾಗವಾಗಿ ಟ್ರ್ಯಾಕ್ಟರ್ ಪರೇಡ್ ನಡೆಸುವುದಾಗಿ ಘೋಷಿಸಿದ್ದಾರೆ. ಇದನ್ನು ಒಪ್ಪದ ಕೇಂದ್ರ ಸರ್ಕಾರ ಈ ಪರೇಡ್ ದೇಶಕ್ಕೆ ಮಾಡುವ ಅವಮಾನ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ.
ಆದರೆ 1952ರಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ನಲ್ಲಿ ಟ್ಯಾಕ್ಟರ್ಗಳ ಸಾಲು ಸಾಲು ಮೆರವಣಿಗೆ ನಡೆದಿತ್ತು ಎಂಬುದು ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಟ್ರ್ಯಾಕ್ಟರ್ ಪರೇಡ್ ಹೊಸದಲ್ಲ. ಸರ್ಕಾರ ಇದನ್ನು ಅವಮಾನದ ಸಂಗತಿಯಾಗಿ, ಮುಜುಗರದ ವಿಷಯವಾಗಿ ನೋಡುವ ಅಗತ್ಯವಿಲ್ಲ. ಗಣತಂತ್ರ ಪ್ರತಿಯೊಬ್ಬನ ಹಕ್ಕನ್ನು ಎತ್ತಿಹಿಡಯುವ ದಿನ. ಹಾಗಾಗಿ ಅಂದು ಟ್ರ್ಯಾಕ್ಟರ್ ಪರೇಡ್ ನಡೆಸುವುದೂ ರೈತರ ಹಕ್ಕು ಎಂಬ ಪ್ರತಿಪಾದಿಸಲಾಗುತ್ತಿದೆ.
ಆಗ ಪರೇಡ್ನಲ್ಲಿ ಪಾಲ್ಗೊಂಡಿದ್ದ ಟ್ರ್ಯಾಕ್ಟರ್ನ ಕಪ್ಪುಬಿಳುಪಿನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ದೆಹಲಿ ಗಡಿಗಳಲ್ಲಿ ಜ. 26ರ ಪರೇಡ್ಗೆ ತಮ್ಮ ಟ್ರ್ಯಾಕ್ಟರ್ಗಳಿಗೆ ಅಲಂಕಾರ ಮಾಡುವ ಮೂಲಕ ಸಿದ್ಧತೆ ನಡೆಸುತ್ತಿರುವಾಗ ಐತಿಹಾಸಿಕ ಚಿತ್ರಗಳು ಹರಿದಾಡುತ್ತಿರುವುದು ರೈತರ ಹೋರಾಟಕ್ಕೆ ಹೊಸ ಹುರುಪು ತುಂಬಿದೆ.
ಇನ್ನು ಇಂದು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ಕುರಿತು ರೈತ ಮುಖಂಡರು ಮತ್ತು ಕೇಂದ್ರ ಸಚಿವರೊಂದಿಗೆ ನಡೆದ 11 ನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ. 18 ತಿಂಗಳುಗಳ ಕಾಲ ಕೃಷಿ ಕಾಯ್ದೆಗಳನ್ನು ತಡೆಹಿಡಿಯುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಒಪ್ಪಿಕೊಳ್ಳುವಂತೆ ಇಂದಿನ ಸಭೆಯಲ್ಲಿ ಸಚಿವರು ಒತ್ತಾಯಿಸಿದ್ದು, ರೈತರು ಅದನ್ನು ನಿರಾಕರಿಸಿ ಮೂರು ಕಾಯ್ದೆಗಳ ಸಂಪೂರ್ಣ ರದ್ದತಿ ಮತ್ತು ಎಂಎಸ್ಪಿಗಾಗಿ ಹೊಸ ಕಾಯ್ದೆಗಾಗಿ ಆಗ್ರಹಿಸಿದ್ದಾರೆ.
ಹಾಗಾಗಿ ದೆಹಲಿ ಒಳಕ್ಕೆ ಬರುವ ರಿಂಗ್ ರೋಡ್ ನಲ್ಲಿಯೇ ರೈತರ ಟ್ರಾಕ್ಟರ್ ರ್ಯಾಲಿ ನಡೆಯುತ್ತದೆ ಮತ್ತು ಅದು ಕಿಸಾನ್ಘಾಟ್ವರೆಗೂ ಮುಂದುವರೆಯಲಿದೆ ಎಂದು ಕ್ರಾಂತಿಕಾರಿ ಕಿಸಾನ್ ಯೂನಿಯನ್ ಮುಖ್ಯಸ್ಥ ದರ್ಶನ್ ಪಾಲ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಗಣರಾಜ್ಯೋತ್ಸವ ನಡೆಯುವ ಸಮಯದಲ್ಲಿಯೇ ರೈತರ ಟ್ರಾಕ್ಟರ್ ಪೆರೇಡ್ ಸಹ ನಡೆಯಲಿದೆ.
- ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್’ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ, ಸಿದ್ಧಪಡಿಸಿದೆ
ಇದನ್ನೂ ಓದಿ: 11 ನೇ ಸುತ್ತಿನ ಮಾತುಕತೆಯೂ ವಿಫಲ: ಚಳವಳಿ ತೀವ್ರಗೊಳಿಸಲು ರೈತರ ನಿರ್ಧಾರ