Homeಅಂಕಣಗಳುಗೌರಿ ಕಾರ್ನರ್: ಓರ್ವ ಜನಪರ ನ್ಯಾಯಮೂರ್ತಿಯವರನ್ನು ಕುರಿತು

ಗೌರಿ ಕಾರ್ನರ್: ಓರ್ವ ಜನಪರ ನ್ಯಾಯಮೂರ್ತಿಯವರನ್ನು ಕುರಿತು

ತಮ್ಮ ವೃತ್ತಿಜೀವನದ ಉದ್ದಕ್ಕೂ ಜಸ್ಟೀಸ್ ಷಾ ಅವರು ಸಾರ್ವಜನಿಕ ಮತ್ತು ಬಂಡವಾಳಶಾಹಿ ಹಿತಾಸಕ್ತಿಗಳ ನಡುವೆ, ಸಾರ್ವಜನಿಕ ಮತ್ತು ಪ್ರಭುತ್ವ ಹಿತಾಸಕ್ತಿಗಳ ನಡುವಿನ ಸಂಘರ್ಷದಲ್ಲಿ ನಿಸ್ಸಂದೇಹವಾಗಿ ಸಾರ್ವಜನಿಕ ಹಿತಾಸಕ್ತಿಯ ಪರವಾಗಿಯೇ ನಿಂತರು.

- Advertisement -
- Advertisement -

ನಮ್ಮ ಸುತ್ತಲೂ ಈಗ ಎಲ್ಲವೂ ಗಬ್ಬೆದ್ದು ನಾರುತ್ತಿರುವಾಗ, ಓರ್ವ ಪ್ರಾಮಾಣಿಕ ಮತ್ತು ಜನಪರ ನ್ಯಾಯಮೂರ್ತಿಯ ಮನಮುಟ್ಟುವ ಕತೆ ಹೇಳಿದರೆ, ಈ ದೇಶದ ಭವಿಷ್ಯದ ಬಗ್ಗೆ ನಮ್ಮಲ್ಲಿ ಇನ್ನೂ ಉಳಿದಿರುವ ಆಶಾಕಿರಣಗಳು ಜೀವಂತವಾಗಿರಲು ನೆರವಾಗುತ್ತದೆ ಎನಿಸುತ್ತಿದೆ.

ಅವರ ಹೆಸರು ಜಸ್ಟಿಸ್ ಅಜಿತ್ ಪ್ರಕಾಶ್ ಷಾ. ಇತ್ತೀಚಿನತನಕ ದೆಹಲಿ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ಷಾ ಅವರು ಮೊನ್ನೆ ನಿವೃತ್ತಿ ಹೊಂದಿದಾಗ ಅವರಿಗೆ ವಿದಾಯ ಸೂಚಿಸಲು, ಧನ್ಯವಾದಗಳನ್ನು ಹೇಳಲು ಸಂಪ್ರದಾಯದಂತೆ ಕೋರ್ಟಿನ ಇತರೆ ನ್ಯಾಯಾಧೀಶರು ಮತ್ತು ವಕೀಲರು ಮಾತ್ರ ಹಾಜರಾಗಿರಲಿಲ್ಲ. ಬದಲಾಗಿ ಅದೆಷ್ಟೋ ಜನಸಾಮಾನ್ಯರು, ನೂರಾರು ಪ್ರಗತಿಪರರು, ಜನಪರ ಹೋರಾಟಗಾರರೂ ಭಾಗಿಯಾಗಿ ಅವರನ್ನು ಬೀಳ್ಕೊಟ್ಟರು.

ನಮ್ಮ ದೇಶದಲ್ಲಿ ನೂರಾರು ನ್ಯಾಯಾಧೀಶರಿರುವಾಗ ಇವರು ಮಾತ್ರ ಇಷ್ಟು ಸ್ಪೆಷಲ್ ಆಗಿದ್ದು ಹೇಗೆ ಎಂಬ ಪ್ರಶ್ನೆಗೆ ಜಸ್ಟೀಸ್ ಷಾ ಅವರು ನೀಡಿದ ಬಹಳಷ್ಟು ತೀರ್ಪುಗಳೇ ಕಾರಣ ಎನ್ನಬಹುದು.

ದೆಹಲಿಯ ಸೌಂದರ್ಯಕ್ಕೆ ಅಲ್ಲಿನ ಭಿಕ್ಷುಕರು ಕಪ್ಪುಚುಕ್ಕೆಯಂತಿದ್ದಾರೆ ಎಂದು ಇತ್ತೀಚೆಗೆ ದೆಹಲಿ ಸರ್ಕಾರ ಅವರೆಲ್ಲರನ್ನು ಹಿಡಿದು ಅವರವರ ಮೂಲ ರಾಜ್ಯಗಳಿಗೆ ವಾಪಸ್ಸು ಕಳುಹಿಸಬೇಕೆಂದು ನಿರ್ಧರಿಸಿತು. ಈ ನಿರ್ಧಾರವನ್ನು ಕುರಿತ ವರದಿಗಳು ಪತ್ರಿಕೆಗಳಲ್ಲೂ ಪ್ರಕಟಗೊಂಡವು. ಆದರೆ ದೆಹಲಿ ಸರ್ಕಾರದ ಈ ಕ್ರಮ ಅಮಾನವೀಯವೆಂದು ಕೆಲವರು ಕೋರ್ಟಿನ ಮೆಟ್ಟಿಲೇರಿದರು. ಆ ದೂರಿನ ವಿಚಾರಣೆ ನಡೆಸಿದ ಜಸ್ಟೀಸ್ ಷಾ ಅವರು ದೆಹಲಿ ಸರ್ಕಾರದ ವಿರುದ್ಧ ತೀರ್ಪಿತ್ತರು. ಅಷ್ಟೇ ಅಲ್ಲ, ಆ ತೀರ್ಪಿನಲ್ಲಿ “ಭಿಕ್ಷೆ ಬೇಡುವುದು ಅಪರಾಧವಲ್ಲ. ಭಿಕ್ಷುಕರು ಅಪರಾಧಿಗಳಲ್ಲ. ಅಪರಾಧಿಗಳು ನಗರದಲ್ಲಿ ಬಿಂದಾಸಾಗಿ ನೆಲೆಸಬಹುದಾದರೆ ಅಪರಾಧಿಗಳಲ್ಲದ ಮುಗ್ಧ ಭಿಕ್ಷುಕರನ್ನೇಕೆ ನಗರದಿಂದ ಹೊರದಬ್ಬಬೇಕು? ಭಿಕ್ಷುಕರನ್ನು ಬಲವಂತವಾಗಿ ಹೊರದಬ್ಬುವುದು ಮಾನವೀಯತೆ ವಿರೋಧಿ ಅಪರಾಧ” ಎಂದು ಹೇಳಿದರು.

ಕಳೆದ ತಿಂಗಳಲ್ಲಿ ಇಡೀ ಉತ್ತರ ಭಾರತದಾದ್ಯಂತ ಮೈಕೊರೆಯುವ ಚಳಿಯಿಂದ ತತ್ತರಿಸಿ ನೂರಾರು ಜನರು ಸತ್ತುಹೋದರು. ದೆಹಲಿಯಲ್ಲಂತೂ ಉಷ್ಣಾಂಶವು ನಾಲ್ಕು ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯಿತು. ಅಂತಹ ಪರಿಸ್ಥಿತಿ ಇರುವಾಗಲೂ ದೆಹಲಿ ಸರ್ಕಾರ ಪುಶಾ ರಸ್ತೆಯಲ್ಲಿರುವ ಬಡಜನರ ಗುಡಿಸಲುಗಳನ್ನು ಧ್ವಂಸ ಮಾಡಿ ಅವರನ್ನು ಬೀದಿಪಾಲು ಮಾಡಿತು. ಕಾರಣ ಇಷ್ಟೇ: ಇನ್ನು ಹತ್ತು ತಿಂಗಳುಗಳಲ್ಲಿ ದೆಹಲಿಯಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟಗಳು ನಡೆಯಲಿದ್ದು, ಈ ಕ್ರೀಡಾಕೂಟಕ್ಕೆ ದೇಶವಿದೇಶಗಳಿಂದ ಬರುವ ಜನ ನಮ್ಮ ಬಡವರ ಗುಡಿಸಲುಗಳನ್ನು ನೋಡಿದರೆ ’ಮಹಾನ್’ ಭಾರತಕ್ಕೆ ಅವಮಾನವಾಗುತ್ತದೆ ಎಂದು. ಹಾಗಾಗಿ ಜೆಸಿಬಿ ಯಂತ್ರಗಳನ್ನು ಕಳುಹಿಸಿ ಆ ಗುಡಿಸಲುಗಳನ್ನು ನೆಲಸಮ ಮಾಡಿ ದಹಲಿಯ ’ಅಂದ’ವನ್ನು ಹೆಚ್ಚಿಸಿದರು. ಬಡತನ ನಿರ್ಮೂಲನೆ ಬಗ್ಗೆ ಇದು ಅಲ್ಲಿನ ಸರ್ಕಾರದ ಸೂತ್ರ.

ಹೀಗೆ ಬಡವರ ಗುಡಿಸಲುಗಳನ್ನು ಧ್ವಂಸ ಮಾಡಿ ಅವರನ್ನೆಲ್ಲ ಚಳಿಗಾಲದಲ್ಲಿ ಬೀದಿ ಪಾಲು ಮಾಡಿದ್ದರ ಕುರಿತೂ ಪತ್ರಿಕೆಗಳು ವರದಿ ಮಾಡಿದವು. ಅದನ್ನು ನೋಡಿದ್ದೇ ತಡ ಜಸ್ಟೀಸ್ ಷಾ ಅವರು ಯಾವ ಅರ್ಜಿಗೂ ಕಾಯದೇ “ಯಾರ್‍ಯಾರ ಗುಡಿಸಲುಗಳನ್ನು ನೆಲಸಮ ಮಾಡಲಾಗಿದೆಯೋ ಅವರೆಲ್ಲರಿಗೂ ಕೂಡಲೇ ಮನಕಟ್ಟಿಸಿಕೊಡಬೇಕು” ಎಂದು ದೆಹಲಿ ಮುನಿಸಿಪಲ್ ಕಾರ್ಪೋರೇಷನ್‌ಗೆ ಆದೇಶ ಕೊಟ್ಟರು.

ತಮ್ಮ ವೃತ್ತಿಜೀವನದ ಉದ್ದಕ್ಕೂ ಜಸ್ಟೀಸ್ ಷಾ ಅವರು ಸಾರ್ವಜನಿಕ ಮತ್ತು ಬಂಡವಾಳಶಾಹಿ ಹಿತಾಸಕ್ತಿಗಳ ನಡುವೆ, ಸಾರ್ವಜನಿಕ ಮತ್ತು ಪ್ರಭುತ್ವ ಹಿತಾಸಕ್ತಿಗಳ ನಡುವಿನ ಸಂಘರ್ಷದಲ್ಲಿ ನಿಸ್ಸಂದೇಹವಾಗಿ ಸಾರ್ವಜನಿಕ ಹಿತಾಸಕ್ತಿಯ ಪರವಾಗಿಯೇ ನಿಂತರು. ಕಳೆದ ವರ್ಷದ ಕೊನೆಯ ಭಾಗದಲ್ಲಿ ಅಪೊಲೋ ಆಸ್ಪತ್ರೆ ಮತ್ತು ಸರ್ಕಾರೇತರ ಸಂಘಟನೆಯ ನಡುವೆ ಹನ್ನೆರಡು ವರ್ಷಗಳಿಂದ ನಡೆಯುತ್ತಿದ್ದ ವ್ಯಾಜ್ಯದ ವಿಚಾರಣೆ ನಡೆಸಿದ ಜಸ್ಟೀಸ್ ಷಾ ಅವರು ಒಂದು ಮಹತ್ವಪೂರ್ಣ ತೀರ್ಪನ್ನಿತ್ತರು. “ಆರೋಗ್ಯ ಎಂಬುದು ಒಂದು ಮೂಲಭೂತ ಹಕ್ಕು. ಅದನ್ನು ಯಾರೂ ನಿರಾಕರಿಸುವಂತಿಲ್ಲ ಎಂದು ಆದೇಶ ಕೊಟ್ಟರಲ್ಲದೇ, ಅಪೊಲೋ ಆಸ್ಪತ್ರೆಯ ಶೇ.33ರಷ್ಟು ಹಾಸಿಗೆಗಳನ್ನು ಹಾಗೂ ಹೊರರೋಗಿ ಸೇವೆಯ ಶೇ.44ರಷ್ಟು ಹಾಸಿಗೆಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಒದಗಿಸಬೇಕೆಂದು ತಾಕೀತು ಮಾಡಿದರು.

ಅವರು ದಹಲಿಯ ಮುಖ್ಯ ನ್ಯಾಯಾಧೀಶರಾಗುವ ಮುನ್ನ ಮುಂಬೈ ಹೈಕೋರ್ಟಿನ ನ್ಯಾಯಮೂರ್ತಿಗಳಾಗಿದ್ದಾಗಲೂ ಮಹತ್ವದ ತೀರ್ಪುಗಳನ್ನು ನೀಡಿದ್ದರು. ಉದಾಹರಣೆಗೆ “ಯಾವುದೇ ರಾಜಕೀಯ ಪಕ್ಷ ಬಂದ್ ಕರೆನೀಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಏಕೆಂದರೆ ಅದು ಮುಂಬೈ ಜನತೆಯ ಮೂಲಭೂತ ಹಕ್ಕುಗಳಿಗೆ ಚ್ಯುತಿ ತರುತ್ತದೆ” ಎಂದಿದ್ದ ಅವರು, ಬಲವಂತದ ಬಂದ್ ಆಚರಿಸುವ ಮೂಲಕ ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದಕ್ಕಾಗಿ ಬಿಜೆಪಿ ಮತ್ತು ಶಿವಸೇನೆಗೆ ಇಪ್ಪತ್ತು ಲಕ್ಷ ರೂಪಾಯಿಗಳ ದಂಡ ವಿಧಿಸಿದ್ದರು. ಜೊತೆಗೆ ಆ ಹಣ ಸಾರ್ವಜನಿಕ ಅಭಿವೃದ್ಧಿಗೆ ಬಳಕೆ ಆಗಬೇಕೆಂದು ಸರ್ಕಾರಕ್ಕೆ ತಾಕೀತು ಮಾಡಿದ್ದರು.

ಒಮ್ಮೆ ಪಂಜಾಬ್‌ನ ಭಯೋತ್ಪಾದನೆಯ ಕುರಿತ ಚಲನಚಿತ್ರವನ್ನು ಮತ್ತು ಅಯೋಧ್ಯ ವಿವಾದಕ್ಕೆ ಸಂಬಂಧಿಸಿದಂತೆ ಆನಂದ್ ಪಟವರ್ಧನ್‌ರ ’ರಾಮ್ ಕೆ ನಾಮ್’ ಸಾಕ್ಷ್ಯಚಿತ್ರವನ್ನು ದೂರದರ್ಶನ ಪ್ರಸಾರ ಮಾಡದಂತೆ ಮಹಾರಾಷ್ಟ್ರ ಸರ್ಕಾರ ಷಡ್ಯಂತ್ರ ನಡೆಸಿತ್ತು. ಅದನ್ನು ತೀವ್ರವಾಗಿ ಖಂಡಿಸಿದ ಜಸ್ಟೀಸ್ ಷಾ ಅವರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ತೀರ್ಪಿತ್ತು ಆ ಎರಡೂ ಚಿತ್ರಗಳ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದರು.

ಅವರ ಇನ್ನೊಂದು ತೀರ್ಪು 30 ಅಮಾಯಕ ಮುಟ್ಟಪುಟ್ಟ ಮಕ್ಕಳಿಗೆ ಹೊಸ ಪ್ರಪಂಚವನ್ನು ತೆರೆದಿತ್ತು. ಮುಂಬೈನ ಬೈಖಲಾ ಜೈಲಿನಲ್ಲಿ ಮೂವತ್ತು ಪುಟ್ಟ ಮಕ್ಕಳು ತಮ್ಮ ತಾಯಂದಿರೊಂದಿಗೆ ಇದ್ದರು. ಅವರಲ್ಲಿ ಬಹುತೇಕರು ಎಂದೂ ಜೈಲುಕೋಣೆಯ ಆಚೆಗಿನ ಪ್ರಪಂಚವನ್ನೇ ನೋಡಿರಲಿಲ್ಲ. ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಜಸ್ಟೀಸ್ ಷಾ ಜೈಲು ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ನಿರ್ಮಿಸಲಾಗಿರುವ ಕ್ವಾಟ್ರಸ್ ಬಳಿಯೇ ಈ ಮಕ್ಕಳಿಗೂ ಓದುವುದಕ್ಕೆ ಅಂಗನವಾಡಿ ತೆರೆಯಬೇಕೆಂದೂ, ಜೈಲು ಆಡಳಿತ ವರ್ಗವೇ ಈ ಮಕ್ಕಳಿಗೆ ಆಟದ ಸಾಮಗ್ರಿಗಳನ್ನು, ಪೀಠೋಪಕರಣಗಳನ್ನು ಒದಗಿಸಬೇಕೆಂದೂ, ಮಕ್ಕಳಿಗೆ ಕಲಿಸುವುದಕ್ಕಾಗಿ ಬರುವ ಟೀಚರ್‌ಗಳಿಗೆ ಸಂಬಳವನ್ನು ಸರ್ಕಾರ ಭರಿಸಬೇಕೆಂದೂ ತೀರ್ಪಿತ್ತಿದ್ದರೆಂದರೆ ಅವರದ್ದು ಅದೆಂಥ ಸಂವೇದನಾಶೀಲ ಮನಸ್ಸಿರಬೇಕು ಯೋಚಿಸಿ.

ಜಸ್ಟೀಸ್ ಷಾ ಅವರು ಮದ್ರಾಸ್ ಹೈಕೋರ್ಟಿನಲ್ಲಿ ಎರಡು ವರ್ಷಗಳ ಕಾಲ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದಾಗಲೂ ಅವರು ಕೌಟುಂಬಿಕ ನ್ಯಾಯಾಲಯದಲ್ಲಿ ಮಕ್ಕಳ ಕೇಂದ್ರವನ್ನು, ಜಿಲ್ಲಾ ಕೇಂದ್ರಗಳಲ್ಲಿ ಸಂಧಾನ ಕೇಂದ್ರಗಳನ್ನು ಹಾಗೂ ನ್ಯಾಯಾಧೀಶರಿಗಾಗಿ ವಿಕೇಂದ್ರೀಕೃತ ತರಬೇತಿ ಶಿಬಿರಗಳನ್ನು ಸ್ಥಾಪಿಸುವ ಮೂಲಕ ನ್ಯಾಯಾಂಗ ವ್ಯವಸ್ಥೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಸುಧಾರಣಾ ಕ್ರಮಗಳಿಗೆ ಪ್ರಯತ್ನಿಸಿದ್ದರು.

ಷಾ ಅವರು ನೀಡಿದ ತೀರ್ಪುಗಳಲ್ಲಿ ಅತ್ಯಂತ ಮುಖ್ಯವಾದದ್ದು ಮತ್ತು ಸಾರ್ವಜನಿಕ-ಮಾಧ್ಯಮ ಚರ್ಚೆಗೆ ಗ್ರಾಸವಾಗಿದ್ದು ಭಾರತೀಯ ದಂಡಸಂಹಿತೆಯ (ಐಪಿಸಿ) ಸೆಕ್ಷನ್ 377 ಪ್ರಕಾರ ಸಲಿಂಗಕಾಮ ಅಪರಾಧವಲ್ಲ ಎಂಬ ಚಾರಿತ್ರಿಕ ತೀರ್ಪು. ನೂರೈವತ್ತು ವರ್ಷಗಳಿಂದ ಭಾರತದಲ್ಲಿ ಸಲಿಂಗಕಾಮದ ಮೇಲೆ ಹೇರಿರುವ ನಿರ್ಬಂಧ ವಾಸ್ತವದಲ್ಲಿ ತಾರತಮ್ಯದಿಂದ ಕೂಡಿದ್ದರಿಂದ ಅದು ಪ್ರಜೆಗಳ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ತೀರ್ಪಿನಲ್ಲಿ ಹೇಳಿದ್ದರು. ಹೀಗೆ ಈ ಚಾರಿತ್ರಿಕ ತೀರ್ಪಿನ ಮೂಲಕ ಜಸ್ಟೀಸ್ ಷಾ ಅವರು ಲೈಂಗಿಕ ವಿಚಾರವು ವ್ಯಕ್ತಿಯೊಬ್ಬನ/ಳ ವೈಯಕ್ತಿಕ ಆಯ್ಕೆಗೆ ಸಂಬಂಧಪಟ್ಟ ವಿಚಾರ ಎಂಬ ಮೂಲಭೂತ ವ್ಯಕ್ತಿಸ್ವಾತಂತ್ರ್ಯವನ್ನು, ಪ್ರಜಾತಾಂತ್ರಿಕ ನಿಲುವನ್ನು ಎತ್ತಿಹಿಡಿದಿದ್ದರು.

ಇಷ್ಟೊಂದು ಜನಪರವಾಗಿದ್ದ, ಪ್ರಗತಿಪರವಾಗಿದ್ದ, ನ್ಯಾಯಮೂರ್ತಿಯಾಗಿ ನಿಜಕ್ಕೂ ನ್ಯಾಯ ಒದಗಿಸುತ್ತಿದ್ದ ಜಸ್ಟೀಸ್ ಷಾ ಅವರಿಗೆ ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗುವುದಕ್ಕೆ ಎಲ್ಲಾ ಅರ್ಹತೆಗಳಿದ್ದರೂ ಅವರನ್ನು ಆ ಸ್ಥಾನಕ್ಕೆ ಯಾರೂ ಪರಿಗಣಿಸಲೇ ಇಲ್ಲ. ಅದರ ಬಗ್ಗೆ ಜಸ್ಟೀಸ್ ಷಾ ಹೀಗೆ ಹೇಳಿದ್ದಾರೆ: “ನನಗೆ ಆಗಿರುವ ನೋವನ್ನು ಬಚ್ಚಿಟ್ಟು ನನಗೆ ನೋವೇ ಆಗಿಲ್ಲ ಎಂದು ನಾನು ನಾಟಕ ಮಾಡುವುದಿಲ್ಲ. ನೋವು ಆಗಿದ್ದು ನಿಜ. ಆದರೆ ಆ ನೋವು ನ್ಯಾಯಕ್ಕಾಗಿನ ನನ್ನ ಬದ್ಧತೆಯನ್ನು ಎಂದೂ ಕಡಿಮೆ ಮಾಡಲಿಲ್ಲ. ಈಗ ನನ್ನ ಮಟ್ಟಿಗದು ಮುಗಿದ ಅಧ್ಯಾಯ. ನಮ್ಮ ದೇಶದಲ್ಲಿ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯೇ ದೋಷಪೂರಿತವಾಗಿದೆ. ಅಮೆರಿಕ, ಬ್ರಿಟನ್‌ಗಳಂಥ ಮುಂದುವರಿದ ದೇಶಗಳಲ್ಲಿ ನ್ಯಾಯಾಧೀಶರ ನೇಮಕ ಬಹಳ ಮುಕ್ತವಾಗಿ, ಪಾರದರ್ಶಕವಾಗಿ ನಡೆಯುತ್ತದೆ. ಆದರೆ ನಮ್ಮಲ್ಲಿ ಅದು ಮುಚ್ಚಿದ ಕೋಣೆಯೊಳಗೆ ನಡೆಯುತ್ತದೆ. ಇದು ಬದಲಾಗಬೇಕು.”

(ಮಾರ್ಚ್ 3, 2010ರಂದು ಗೌರಿಯವರು ಬರೆದ ಕಂಡಹಾಗೆ ಅಂಕಣದ ಆಯ್ದ ಭಾಗ ಇದು)


ಇದನ್ನೂ ಓದಿ: ಗೌರಿ ಕಾರ್ನರ್: ಮರೆಮಾಚಿದ ಇತಿಹಾಸದ ಬಗ್ಗೆ….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...