Homeಅಂಕಣಗಳುಗೌರಿ ಕಾರ್ನರ್: ಮರೆಮಾಚಿದ ಇತಿಹಾಸದ ಬಗ್ಗೆ....

ಗೌರಿ ಕಾರ್ನರ್: ಮರೆಮಾಚಿದ ಇತಿಹಾಸದ ಬಗ್ಗೆ….

"ಇತಿಹಾಸವು ನಡೆದಾಡುವ ವಿರೋಧಾಭಾಸವಿದ್ದಂತೆ ಮತ್ತು ಅಸಮಂಜಸತೆ ಅದರ ಕಾಲುಗಳನ್ನು ನಿಯಂತ್ರಿಸುತ್ತಿರುತ್ತದೆ. ಆ ಕಾರಣದಿಂದಾಗಿಯೇ ಇತಿಹಾಸದ ಮೌನದಲ್ಲೇ ಹಲವಾರು ಸತ್ಯಗಳು ಅಡಗಿರುತ್ತವೆ ಮತ್ತು ಕೆಲವೊಮ್ಮೆ ಸುಳ್ಳು ಹೇಳುವ ಮೂಲಕವೂ ಸತ್ಯವನ್ನು ತೆರೆದಿಡಲಾಗುತ್ತದೆ" ಎಂದು ಹೇಳಿರುವ ಗಲಿಯಾನೋ ಅಂತಹ ಹಲವು ಸತ್ಯಗಳನ್ನು ತಮ್ಮ ಪುಸ್ತಕದಲ್ಲಿ ಪಟ್ಟಿ ಮಾಡಿದ್ದಾರೆ.

- Advertisement -
- Advertisement -

ಪರ್ವತಾರೋಹಿ ಎಡ್ಮಂಡ್ ಹಿಲೇರಿ ತೀರಿಹೋಗಿದ್ದರ ಬಗ್ಗೆ ವರದಿ ಮಾಡಿದ ಎಲ್ಲಾ ಮಾಧ್ಯಮಗಳು ಮೌಂಟ್ ಎವರೆಸ್ಟ್ ಬಗ್ಗೆಯೂ ಬರೆದಿದ್ದವು. ಆದರೆ ಬಹಳಷ್ಟು ಜನಕ್ಕೆ ಗೊತ್ತಿಲ್ಲದಿರುವುದೇನೆಂದರೆ ಯಾವುದನ್ನು ನಾವೆಲ್ಲ ಇವತ್ತು ಮೌಂಟ್ ಎವರೆಸ್ಟ್ ಎಂದು ಕರೆಯುತ್ತೇವೆಯೋ ಆ ಶಿಖರವನ್ನು ನೇಪಾಳದ ಜನ ಸಾಗರಮಾತಾ ಎಂದೂ, ಟಿಬೆಟ್‌ನ ಜನ ಚಿಮೋಲುಂಗ್ಮಾ ಎಂದೂ, ಭಾರತದ ಜನ ಗೌರಿಶಂಕರ ಎಂದೂ ಕರೆಯುತ್ತಿದ್ದರು.

ಆದರೆ ಯಾವಾಗ 1865ರಲ್ಲಿ ಅಂದಿನ ಬ್ರಿಟಿಷ್ ಸಾಮ್ರಾಜ್ಯದ ಸರ್ವೇಯರ್ ಜನರಲ್ ಆಫ್ ಇಂಡಿಯಾ ಸರ್ ಜಾರ್ಜ್ ಎವರೆಸ್ಟ್ ಎಂಬ ಅಧಿಕಾರಿ ಆ ಶಿಖರವನ್ನು ಅಳತೆ ಮಾಡಿದನೋ, ಆನಂತರ ಅದಕ್ಕೆ ಆತನ ಹೆಸರನ್ನೇ ಬ್ರಿಟಿಷರು ಇಟ್ಟರು. ಈಗ ಅದರ ಸುತ್ತಮುತ್ತಲಿನ ಜನ ಇಟ್ಟಿದ್ದ ಹೆಸರು ಮಾಯವಾಗಿ ಎಲ್ಲರಿಗೂ ಅದು ಮೌಂಟ್ ಎವರೆಸ್ಟ್ ಎಂದೇ ಪರಿಚಿತವಾಗಿದೆ. ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ ಇತ್ತೀಚೆಗೆ ಎಡ್ವಾರ್ಡೋ ಗಲಿಯಾನೊ ಎಂಬ ಉರುಗ್ವೆ ದೇಶದ ಖ್ಯಾತ ಪತ್ರಕರ್ತ ಮತ್ತು ಬರಹಗಾರ ಜನರ ಇತಿಹಾಸವನ್ನು ಹೇಗೆ ಪಟ್ಟಭದ್ರ ಹಿತಾಸಕ್ತಿಗಳು ಮರೆಮಾಚುತ್ತವೆ ಎಂಬುದನ್ನು ಕುರಿತು ಒಂದು ಪುಸ್ತಕ ಬರೆದಿದ್ದಾರೆ.

“ಇತಿಹಾಸವು ನಡೆದಾಡುವ ವಿರೋಧಾಭಾಸವಿದ್ದಂತೆ ಮತ್ತು ಅಸಮಂಜಸತೆ ಅದರ ಕಾಲುಗಳನ್ನು ನಿಯಂತ್ರಿಸುತ್ತಿರುತ್ತದೆ. ಆ ಕಾರಣದಿಂದಾಗಿಯೇ ಇತಿಹಾಸದ ಮೌನದಲ್ಲೇ ಹಲವಾರು ಸತ್ಯಗಳು ಅಡಗಿರುತ್ತವೆ ಮತ್ತು ಕೆಲವೊಮ್ಮೆ ಸುಳ್ಳು ಹೇಳುವ ಮೂಲಕವೂ ಸತ್ಯವನ್ನು ತೆರೆದಿಡಲಾಗುತ್ತದೆ” ಎಂದು ಹೇಳಿರುವ ಗಲಿಯಾನೋ ಅಂತಹ ಹಲವು ಸತ್ಯಗಳನ್ನು ತಮ್ಮ ಪುಸ್ತಕದಲ್ಲಿ ಪಟ್ಟಿ ಮಾಡಿದ್ದಾರೆ. ಅವುಗಳಲ್ಲಿ ಒಂದು ಉದಾಹರಣೆ ಮೌಂಟ್ ಎವರೆಸ್ಟ್ ವೃತ್ತಾಂತವನ್ನೇ ಹೋಲುತ್ತದೆ. ಅದು ಬ್ರಿಟಿಷ್ ವಸ್ತುಸಂಗ್ರಹಾಲಯದಲ್ಲಿರುವ ಎಲ್ಜಿನ್ ಅಮೃತಶಿಲೆಗಳಿಗೆ ಸಂಬಂಧಪಟ್ಟಿದ್ದು. ಗ್ರೀಕ್ ದೇಶದಲ್ಲಿನ ಪ್ರಾರ್ಥೆನಾನ್ ಮೂಲದ ಈ ಶಿಲೆಗಳಿಗೆ ಇದ್ದ ಸ್ಥಳೀಯ ಹೆಸರು ಫಿಡಿಯಾಸ್. ಆದರೆ ಅವುಗಳನ್ನು ಎಲ್ಜಿನ್ ಎಂಬ ಬ್ರಿಟಿಷ್ ವ್ಯಕ್ತಿ ವಸ್ತುಸಂಗ್ರಹಾಲಯಕ್ಕೆ ಮಾರಿದ್ದರಿಂದ ಆತನ ಹೆಸರನ್ನೇ ಆದಕ್ಕೆ ನೀಡಲಾಗಿದೆ. ಆ ಮೂಲಕ ಅವುಗಳ ಸ್ಥಳೀಯ ಇತಿಹಾಸವನ್ನು ಮರೆಮಾಚಲಾಗಿದೆ.

ಗಲಿಯಾನೋ ಇಂತಹದ್ದೇ ಹಲವಾರು ಇತರೆ ಉದಾಹರಣೆಗಳನ್ನು ನೀಡಿದ್ದಾರೆ. ವಿಶ್ವ ಇತಿಹಾಸವನ್ನರಿಯಲು ಅವು ನೆರವಾಗಬಹುದೆಂಬ ಕಾರಣಕ್ಕೆ ಇಲ್ಲಿ ಹಲವನ್ನು ನೀಡಿದ್ದೇನೆ.

  • ಯೂರೋಪಿನ ಪುನರುಜ್ಜೀವನಕ್ಕಾಗಿ ನೆರವಾದದ್ದು ಗನ್ ಪೌಡರ್, ದಿಕ್ಸೂಚಿ ಮತ್ತು ಮುದ್ರಣ ಯಂತ್ರ ಎಂಬ ಸಂಶೋಧನೆಗಳು. ಆದರೆ ವಾಸ್ತವವಾಗಿ ಈ ಮೂರು ವಸ್ತುಗಳನ್ನು ಚೀನಾ ದೇಶದವರು ಅದಕ್ಕೂ ಮುನ್ನವೇ ಸಂಶೋಧಿಸಿದ್ದರು ಮಾತ್ರವಲ್ಲ, ಚೀನಿಯರ ಇತರೆ ಸಂಶೋಧನೆಗಳನ್ನು ಯೂರೋಪಿಯನ್ನರು ’ಮರು ಸಂಶೋಧಿಸುತ್ತಾ’ ಅವುಗಳು ತಮ್ಮ ಕೊಡುಗೆಗಳು ಎಂದು ಹೇಳಿದರು.
  • ಅರ್ಜೆಂಟೈನಾದಲ್ಲಿರುವ ಅತಿ ಎತ್ತರದ ಸ್ಮಾರಕಕ್ಕೆ ಜನರಲ್ ರೋಕಾನ ಹೆಸರಿಡಲಾಗಿದೆ. ಈ ಪ್ರದೇಶಕ್ಕೆ ರೋಕಾನ ಕೊಡುಗೆ ಏನೆಂದರೆ ಪಟಗೊನಿಯಾದಲ್ಲಿದ್ದ ಬುಡಕಟ್ಟು ಜನರನ್ನು 19ನೇ ಶತಮಾನದಲ್ಲಿ ನಿರ್ನಾಮ ಮಾಡಿದ್ದು.
  • ಗುಲಾಮರನ್ನು ಸಾಗಿಸಲು ಬಳಸುತ್ತಿದ್ದ ಹಲವು ಹಡಗುಗಳ ಹೆಸರುಗಳು ವೋಲ್ಟೇರ್, ಜೀಸಸ್, ವಿಶ್ವಾಸ, ಸಮಾನತೆ ಮತ್ತು ಸ್ನೇಹ ಎಂಬುದಾಗಿತ್ತು.
  • ಆಮೆರಿಕವನ್ನು ಸ್ಥಾಪಿಸಿದ ಇಬ್ಬರು ಹಿರಿಯರ ಹೆಸರುಗಳು ಅಧಿಕೃತ ಇತಿಹಾಸದಿಂದಲೇ ಮರೆಯಾಗಿವೆ. ಯಾಕೆಂದರೆ ಅವರಲ್ಲಿ ರಾಬರ್ಟ್ ಕಾರ್ಟರ್ ಎಂಬಾತ ತನಗಾಗಿ ದುಡಿಯುತ್ತಿದ್ದ ಕರಿಯರಿಗೂ ಸ್ವಾತಂತ್ರ್ಯ ನೀಡಿದ್ದ ಮತ್ತು ಗವರ್ನರ್ ಮೋರಿಸ್ ಎಂಬಾತ ಕರಿಯ ಗುಲಾಮರು ಇತರರಿಗಿಂತ ಕೀಳು ಎಂಬ ಅಂಶವನ್ನು ಸಂವಿಧಾನದಲ್ಲಿ ಸೇರಿಸುವುದನ್ನು ವಿರೋಧಿಸಿದ್ದ. ಅವರ ಈ ನಿಲುವಿನಿಂದಾಗಿ ಅವರಿಬ್ಬರನ್ನು ಈಗ ಸಾಮೂಹಿಕ ನೆನಪಿನಿಂದಲೇ ಗಡಿಪಾರು ಮಾಡಲಾಗಿದೆ.
  • 1234ರಿಂದ ಏಳು ಶತಮಾನಗಳ ಕಾಲ ಚರ್ಚ್‌ಗಳಲ್ಲಿ ಮಹಿಳೆಯರು ಹಾಡುವುದನ್ನು ನಿಷೇಧಿಸಲಾಗಿತ್ತು. ಕಾರಣ ಅವರ ದನಿಗಳು ಅಪವಿತ್ರವೆಂದು ಭಾವಿಸಲಾಗಿತ್ತು.
  • 1793ರ ಫ್ರೆಂಚ್ ಕ್ರಾಂತಿಯ ನಂತರ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಮೂರು ಸೂತ್ರಗಳನ್ನು ಘೋಷಿಸಿದಾಗ ‘ಪುರುಷರ ಹಕ್ಕುಗಳು’ ಎಂಬ ಕಾನೂನನ್ನು ಪ್ರಕಟಗೊಳಿಸಲಾಗಿತ್ತು. ಆಗ ಕ್ರಾಂತಿಕಾರಿ ತೀವ್ರವಾದಿ ಓಲಿಂಪಿಯಾ ದೆ ಗೂಬ್ ಎಂಬಾಕೆ ’ಮಹಿಳೆಯರ ಹಕ್ಕುಗಳು’ ಎಂಬ ಕಾನೂನನ್ನೂ ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದಳು. ಹಾಗೆ ಕೇಳಿದ್ದಕ್ಕೆ ಅವಳ ಶಿರಚ್ಛೇದನ ಮಾಡಲಾಯಿತು.
  • ರಾಣಿ ಥಿಯೋಡೋರಾಳನ್ನು ಯಾರೂ ಕ್ರಾಂತಿಕಾರಿ ಮಹಿಳಾವಾದಿ ಎಂದು ನೆನಪಿಸಿಕೊಳ್ಳುವುದಿಲ್ಲ. ಆದರೆ 1500 ವರ್ಷಗಳ ಹಿಂದೆ ಆಳಿದ್ದ ಈಕೆ ಮಹಿಳೆಯರಿಗೆ ಗರ್ಭಪಾತ ಮತ್ತು ವಿಚ್ಛೇದನಾ ಹಕ್ಕುಗಳನ್ನು ನೀಡಿದ್ದ ಪ್ರಥಮ ಮಹಿಳಾವಾದಿಯಾಗಿದ್ದಳು.
  • ಚೀನಾದ ಪೀಕಿಂಗ್‌ನಿಂದ ಯೂರೋಪಿಗೆ ತಂದ ಪ್ರಥಮ ಪೀಕಿನೀಸ್ ನಾಯಿಗೆ ಇಂಗ್ಲಿಷರು ’ಲೂಟಿ’ ಎಂದು ಹೆಸರಿಟ್ಟರು. ಬ್ರಿಟಿಷರು ಚೀನಾ ದೇಶವನ್ನು ಲೂಟಿ ಹೊಡೆದಿದ್ದರ ಸಂಕೇತವಾಗಿ ಆ ಹೆಸರು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
  • ಕುಖ್ಯಾತ ಚಿತ್ರಹಿಂಸೆಯ ಯಾತನಾ ಶಿಬಿರಗಳನ್ನು ಮೊದಲ ಬಾರಿ ಆಫ್ರಿಕಾದಲ್ಲಿ ಪ್ರಾರಂಭಿಸಿದವರು ಬ್ರಿಟಿಷರು. ಆನಂತರ 2ನೇ ವಿಶ್ವ ಮಹಾಯುದ್ಧದಲ್ಲಿ ಯಹೂದಿಯರನ್ನು ಕೊಲ್ಲಲು ಅದನ್ನು ಉಪಯೋಗಿಸಿದವರು ಜರ್ಮನ್ನರು.
  • 1936ರ ಒಲಂಪಿಕ್ಸ್‌ಅನ್ನು ಆಯೋಜಿಸಿದ್ದು ಹಿಟ್ಲರ್. ಅಂದು ಫುಟ್‌ಬಾಲ್‌ನಲ್ಲಿ ಆಸ್ಟ್ರಿಯಾ ದೇಶವನ್ನು ಪೆರು ದೇಶ ಸೋಲಿಸಿತ್ತು. ಹಿಟ್ಲರ್‌ನ ಜನ್ಮಭೂಮಿ ಆಸ್ಟ್ರಿಯಾ ಆಗಿದ್ದರಿಂದ ಆ ಮ್ಯಾಚ್‌ಅನ್ನೇ ಒಲಂಪಿಕ್ಸ್ ಸಮಿತಿ ರದ್ದುಗೊಳಿಸಿತ್ತು.
  • ಕೊಲೆಗಡುಕ ಹಿಟ್ಲರ್ ಕಾರ್ಪೊರೆಟ್ ಕಂಪನಿಗಳ ಮಿತ್ರನಾಗಿದ್ದ. ಎರಡನೇ ಮಹಾಯುದ್ಧ ನಡೆಯುತ್ತಿದ್ದಾಗಲೇ ಜರ್ಮನ್ ಮಾರುಕಟ್ಟೆಗೆಂದು ಕೋಕಾಕೋಲಾ ಕಂಪನಿ ಫಾಂಟಾ ಎಂಬ ಪಾನೀಯವನ್ನು ತಯಾರಿಸಿತ್ತು. ಹಾಗೆಯೇ ಐಬಿಎಂ ಕೂಡ ಯಹೂದಿಯರನ್ನು ಗುರುತಿಸುವ ಮತ್ತು ವರ್ಗೀಕರಿಸುವ ತಂತ್ರಜ್ಞಾನವನ್ನು ನೀಡಿತ್ತು.
  • 1953ರಲ್ಲಿ ಕಮ್ಯುನಿಸ್ಟ್ ಜರ್ಮನಿಯಲ್ಲಿ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸಿ ಬೀದಿಗಿಳಿದರು. ಆಗ ರಷ್ಯಾದ ಮಿಲಿಟರಿ ಟ್ಯಾಂಕ್‌ಗಳು ಅವರ ಬಾಯನ್ನು ಬಂದ್ ಮಾಡಿದವು. ಇದನ್ನು ನೋಡಿ ಬರ್ಟೋಲ್ಟ್ ಬ್ರೆಕ್ಟ್ ಎಂಬ ಖ್ಯಾತ ನಾಟಕಕಾರ ಒಂದು ಸಲಹೆಯನ್ನು ನೀಡಿದ್ದ: “ಸರ್ಕಾರವೇ ತನ್ನ ಪ್ರಜೆಗಳನ್ನು ನಿರ್ನಾಮ ಮಾಡಿ ತನಗೆ ಸೂಕ್ತವಾದ ಜನರನ್ನು ಆಯ್ಕೆಮಾಡಿಕೊಳ್ಳುವುದು ಸುಲಭವಲ್ಲವೆ?”
  • 1964ರಲ್ಲಿ ಟಾನ್ಕಿನ್ ಬೇ ಎಂಬಲ್ಲಿ ವಿಯೆಟ್ನಾಂ ಸೈನ್ಯವು ಆಮೆರಿಕದ ಎರಡು ಹಡಗುಗಳ ಮೇಲೆ ಯುದ್ಧ ದಾಳಿ ನಡೆಸಿದೆ ಎಂದು ಆರೋಪಿಸಿ, ಅಮೆರಿಕ ವಿಯೆಟ್ನಾಂ ಮೇಲೆ ಯುದ್ಧ ಸಾರಿತು. ಸಾವಿರಾರು ವಿಯೆಟ್ನಾಂ ಜನರನ್ನು ಹತ್ಯೆ ಮಾಡಿದ ನಂತರ ಅಮೆರಿಕದ ರಕ್ಷಣಾ ಸಚಿವ ಟಾನ್ಕಿನ್ ಬೇ ಮೇಲೆ ಯಾವುದೇ ದಾಳಿ ನಡೆದಿರಲಿಲ್ಲ ಎಂದು ಒಪ್ಪಿಕೊಂಡ.

ನಲವತ್ತು ವರ್ಷಗಳ ನಂತರ ಇರಾಕ್ ಮೇಲೂ ಇಂತಹದ್ದೇ ಕುತಂತ್ರವನ್ನು ಅಮೆರಿಕ ನಡೆಸಿತು.
ಇರಾಕಿನಲ್ಲಿ ’ನಾಗರಿಕತೆ’ಯನ್ನು ಸ್ಥಾಪಿಸಲೆಂದು ಅಮೆರಿಕ ದಾಳಿ ಮಾಡುವ ಸಾವಿರ ವರ್ಷಗಳ ಹಿಂದೆಯೇ ಈ ’ಹಿಂದುಳಿ’ದ ಪ್ರದೇಶದಲ್ಲಿ ಜಗತ್ತಿನ ಪ್ರಪ್ರಥಮ ಪ್ರೇಮ ಕವನವನ್ನು ರಚಿಸಲಾಗಿತ್ತು. ಸುಮೇರಿಯಾ ಭಾಷೆಯಲ್ಲಿರುವ ಈ ಕವನವನ್ನು ಮಣ್ಣಿನ ಮೇಲೆ ಬರೆಯಲಾಗಿತ್ತಲ್ಲದೆ ಅದು ದೇವತೆ ಮತ್ತು ಕುರುಬನೊಬ್ಬನ ಪ್ರೇಮ ಪ್ರಸಂಗ ಕುರಿತದ್ದಾಗಿತ್ತು.

ಪಟ್ಟಭದ್ರರ ದೃಷ್ಟಿಕೋನದಿಂದ ಬರೆದ ಇತಿಹಾಸದಲ್ಲಿ ಈ ಯಾವುದಕ್ಕೂ ಪ್ರಾಮುಖ್ಯತೆ ಇರುವುದಿಲ್ಲ.

(ಜನವರಿ 30, 2008ರಂದು ಬರೆದ ಗೌರಿಯವರ ಕಂಡಹಾಗೆ ಅಂಕಣದ ಆಯ್ದ ಭಾಗ ಇದು)


ಇದನ್ನೂ ಓದಿ: ಅಂದು ಟ್ಯಾಗೋರ್ ದ್ವೇಷ, ಇಂದು ಅವರನ್ನೇ ಅಪ್ರಾಪ್ರಿಯೇಟ್ ಮಾಡಿಕೊಳ್ಳಲು ಯತ್ನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....