ಮಹಾತ್ಮ ಗಾಂಧೀಜಿಯವರ ಹಂತಕ ನಾಥುರಾಮ್ ಗೋಡ್ಸೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಒಂದೇ ಸಿದ್ಧಾಂತವನ್ನು ನಂಬಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
“ನಾಥುರಾಮ್ ಗೋಡ್ಸೆ ಮತ್ತು ನರೇಂದ್ರ ಮೋದಿಯವರು ಒಂದೇ ಸಿದ್ಧಾಂತವನ್ನು ನಂಬುತ್ತಾರೆ, ಆದರೆ ನರೇಂದ್ರ ಮೋದಿಯವರಿಗೆ ಗೋಡ್ಸೆ ಮೇಲೆ ನಂಬಿಕೆ ಇದೆ ಎಂದು ಹೇಳುವ ಧೈರ್ಯವಿಲ್ಲ ಅಷ್ಟೇ ಎಂದು ಅವರು ಕೇರಳದ ತನ್ನ ಕ್ಷೇತ್ರವಾದ ವಯನಾಡಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ. ಜನವರಿ 30, 1948 ರಂದು ನಾಥುರಾಮ್ ಗೋಡ್ಸೆ ಹತ್ಯೆ ಮಾಡಿದ ಮಹಾತ್ಮ ಗಾಂಧಿಯವರ ಗೌರವಾರ್ಥವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮೇಲಿನ ಮಾತುಗಳನ್ನಾಡಿದ್ದಾರೆ.
“ನಾಥುರಾಮ್ ಗೋಡ್ಸೆ ಮಹಾತ್ಮ ಗಾಂಧಿಯವರನ್ನು ಗುಂಡಿಕ್ಕಿ ಕೊಂದರು, ಏಕೆಂದರೆ ಗೋಡ್ಸೆ ತನ್ನನ್ನು ನಂಬಲಿಲ್ಲ, ಯಾರನ್ನೂ ನಂಬಲಿಲ್ಲ, ಯಾರನ್ನೂ ಪ್ರೀತಿಸಲಿಲ್ಲ, ಯಾರನ್ನೂ ನೋಡಿಕೊಳ್ಳಲಿಲ್ಲ. ಅದೇ ರೀತಿ ನಮ್ಮ ಪ್ರಧಾನ ಮಂತ್ರಿಗಳು ಸಹ ಅವರು ತಮ್ಮನ್ನು ಮಾತ್ರ ಪ್ರೀತಿಸುತ್ತಾರೆ, ತಮ್ಮನ್ನು ಮಾತ್ರ ನಂಬುತ್ತಾರೆ” ಎಂದು ರಾಹುಲ್ ಆರೋಪಿಸಿದ್ದಾರೆ.
“ಸಿಎಎ ಮತ್ತು ಎನ್ಆರ್ಸಿ ಭಾರತದಲ್ಲಿ ಉದ್ಯೋಗ ಸೃಷ್ಟಿಸುವುದಿಲ್ಲ. ಕಾಶ್ಮೀರದ ಇಂದಿನ ಪರಿಸ್ಥಿತಿಯು ಸಹ ಉದ್ಯೋಗ ನೀಡುವುದಿಲ್ಲ. ಅಸ್ಸಾಂ ಅನ್ನು ಸುಡುವುದರಿಂದ ನಮ್ಮ ಯುವಜನರಿಗೆ ಉದ್ಯೋಗ ಸಿಗುವುದಿಲ್ಲ” ಎಂದು ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿಯ ಮೇಲೆ ದಾಳಿ ಮಾಡಿದ್ದಾರೆ.
“ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವಾಗ, ನಿರುದ್ಯೋಗವು ಕಳೆದ 45 ವರ್ಷಗಳಲ್ಲಿ ಅತಿ ಹೆಚ್ಚಾಗಿರುವಾಗ, ಯುವಜನರಿಗೆ ತಮ್ಮ ಭವಿಷ್ಯವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಭಾರತೀಯರು ತಾವು ಈ ದೇಶದ ಪ್ರಜೆಗಳು ಎಂದು ಸಾಬೀತುಪಡಿಸಲು ಒತ್ತಾಯಿಸಲಾಗುತ್ತಿದೆ. ನಾನು ಭಾರತೀಯನೇ ಎಂದು ನಿರ್ಧರಿಸಲು ನರೇಂದ್ರ ಮೋದಿ ಯಾರು? ಯಾರು ಭಾರತೀಯರು ಮತ್ತು ಯಾರು ಅಲ್ಲ ಎಂದು ನಿರ್ಧರಿಸಲು ಅವರಿಗೆ ಯಾರು ಪರವಾನಗಿ ನೀಡಿದ್ದಾರೆ? ನಾನು ಭಾರತೀಯನೆಂದು ನನಗೆ ತಿಳಿದಿದೆ ಮತ್ತು ಅದನ್ನು ನಾನು ಯಾರಿಗೂ ಸಾಬೀತುಪಡಿಸಬೇಕಾಗಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದರು.
ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ಮೊದಲು ಅವರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ‘ಸಂವಿಧಾನವನ್ನು ಉಳಿಸಿ ಮೆರವಣಿಗೆಯಲ್ಲಿ’ ಭಾಗವಹಿಸಿದರು.