Homeಮುಖಪುಟಅಂತಾರಾಷ್ಟ್ರೀಯ ಮಹಿಳಾ ದಿನ: ಸ್ತ್ರೀವಾದ ಸಮಾನ ಹಕ್ಕುಗಳ ಬೇಡಿಕೆಯಷ್ಟೆ ಅಲ್ಲ ಸಮಾನ ಗೌರವದ ಬೇಡಿಕೆ ಕೂಡ

ಅಂತಾರಾಷ್ಟ್ರೀಯ ಮಹಿಳಾ ದಿನ: ಸ್ತ್ರೀವಾದ ಸಮಾನ ಹಕ್ಕುಗಳ ಬೇಡಿಕೆಯಷ್ಟೆ ಅಲ್ಲ ಸಮಾನ ಗೌರವದ ಬೇಡಿಕೆ ಕೂಡ

- Advertisement -
- Advertisement -

ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿ ಗಂಡಸಿನಷ್ಟೇ ಹೆಣ್ಣಿಗೂ ಸಮಾನ ಹಕ್ಕು ಮತ್ತು ಅವಕಾಶಗಳು ಬೇಕು ಎಂಬುದು ಸ್ತ್ರೀವಾದ. ಅದರೊಟ್ಟಿಗೆ ಸಮಾನ ಗೌರವದ ಬೇಡಿಕೆ ಸ್ತ್ರೀವಾದದ ಪ್ರಮುಖ ಅಂಶ.

ಈ ಮಣ್ಣಿನ ಸ್ತ್ರೀವಾದ ಹುಟ್ಟಿದ್ದು ’ಕ್ವೀನ್ ಆಫ್ ಡೆಕ್ಕನ್ ಎಂದು ಕರೆಯಲ್ಪಡುವ ಪುಣೆಯಲ್ಲಿ. ಭಾರತದ ಸ್ತ್ರೀವಾದ ಎಂದರೆ ಮಹಿಳೆಯರ ಸಮ್ಮಾನಕ್ಕಾಗಿ ಹೆಣ್ಣಿನ ಜೊತೆ ಗಂಡೂ ಜೊತೆಯಾಗಿ ಸಮಬಾಳಿಗಾಗಿ ಹೋರಾಡುತ್ತಾ ಬಂದಿರುವ ಹಾದಿ. ರಾಜಾರಾಂ ಮೋಹನರಾಯ, ಜೋತಿರಾವ್ ಫುಲೆ, ಮನೋಕ್‌ಜೀ ಕುರ್‌ಸೇಟ್‌ಜೀ, ಬೆಹರಂಜಿ ಮಲಬಾರಿ, ಡಾ ಬಿ ಆರ್ ಅಂಬೇಡ್ಕರ್ ಇವರೆಲ್ಲಾ ಈ ಹೋರಾಟದ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ.

ಸ್ವಾತಂತ್ರ್ಯಪೂರ್ವದಲ್ಲಿ ಸ್ತ್ರೀವಾದ ಎಂದರೆ ರಾಜಾರಾಂ ಮೋಹನರಾಯರು ’ಸತಿ’ ಪದ್ಧತಿ, ಬಾಲ್ಯ ವಿವಾಹದ ವಿರುದ್ಧ ಧ್ವನಿ ಎತ್ತಿದ್ದು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ತೊಡಗಿಕೊಂಡಿದ್ದು ಎನ್ನಬಹುದಾದರೆ, ಇದೆರಡರ ಮಧ್ಯದಲ್ಲಿ ಭಾರತೀಯ ಸ್ತ್ರೀವಾದ ನಿಜವಾದ ಅರ್ಥದಲ್ಲಿ ಹುಟ್ಟಿದ್ದು ಪುಣೆಯಲ್ಲಿ.

ಸವರ್ಣೀಯರಿಗೆ ಅದರಲ್ಲೂ ಗಂಡುಮಕ್ಕಳಿಗೆ ಮಾತ್ರ ಸುಲಭವಾಗಿ ಶಿಕ್ಷಣ ಸಿಗುತ್ತಿದ್ದ ಕಾಲದಲ್ಲಿ ದಲಿತ ಹೆಣ್ಣೊಬ್ಬಳು ಶಿಕ್ಷಣ ಕಲಿತು ಹೆಣ್ಣುಮಕ್ಕಳ ಬಾಳಿಗೆ ದೀವಿಗೆಯಾಗಿದ್ದು ಇದೆ ನೆಲದಲ್ಲಿ. ಆಕೆಯೆ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ. ಬಾಲ್ಯವಿವಾಹದ ನಂತರ ಗಂಡನ ಸಹಾಯದಿಂದ ಶಿಕ್ಷಣ ಪಡೆದು ಕ್ರಾಂತಿಜ್ಯೋತಿಯಾದವರು. ಜಾತಿ ತಾರತಮ್ಯ ಮತ್ತು ಲಿಂಗ ಅಸಮಾನತೆ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ. ವಿಧವೆಯರ ಹತ್ಯೆ, ಅತ್ಯಾಚಾರಕ್ಕೊಳಪಟ್ಟು ಗರ್ಭಧರಿಸಿದ ಹೆಣ್ಣುಮಕ್ಕಳ ಹತ್ಯೆಯನ್ನು ತಡೆಯಲು “ಭಾರತೀಯ ಪ್ರತಿಬಂಧಕ ಗೃಹ” ಸ್ಥಾಪಿಸಿ ಅಲ್ಲಿ ಈ ಮಹಿಳೆಯರಿಹೆ ರಕ್ಷಣೆ ಜೊತೆ ಶಿಕ್ಷಣ ನೀಡಿದಾಕೆ ಅವರು.

ಈ ಹಾದಿಯಲ್ಲಿ ಸಾವಿತ್ರಿಬಾಯಿ ಫುಲೆ ಅವರೊಂದಿಗೆ ಕೈಜೋಡಿಸಿದ ಮತ್ತೊಬ್ಬ ಮಹಿಳೆ ಎಂದರೆ ಫಾತಿಮಾ ಶೇಕ್. ಸಾವಿತ್ರಿ ಬಾಯಿ ಫುಲೆಯವರ ಸಹೋದ್ಯೋಗಿ. ಇವರಿಬ್ಬರೂ ಸೇರಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶಾಲೆಗಳನ್ನು ಆರಂಭಿಸಿ ಖುದ್ದು ಶಾಲೆಗಳ ನಿರ್ವಹಣೆ ಮಾಡುತ್ತಾರೆ. ಫಾತಿಮಾ ಶೇಕ್ ಭಾರತದ ಮೊದಲ ಮುಸ್ಲಿಂ ಶಿಕ್ಷಕಿ ಕೂಡ.

ಸಾವಿತ್ರಿ ಬಾಯಿ ದಂಪತಿಗಳು ಸಮಾನತೆ ಮತ್ತು ಮಹಿಳಾ ಸಬಲೀಕರಣದ ಚಳವಳಿಗೆ ಧುಮುಕಿದ ಮೇಲೆ ತಮ್ಮ ಮನೆಯನ್ನು ಉದಾತ್ತ ಧ್ಯೇಯಗಳ ಕೇಂದ್ರವಾಗಿಸಿಕೊಂಡು ಮಹಿಳಾ ಸಮಾನತೆಗೆ ಒಂದು ಪರಂಪರೆಯನ್ನು ಹುಟ್ಟು ಹಾಕಿದರು. ಇದು ಧರ್ಮ ಸಮನ್ವಯತೆ, ಜಾತಿಸಮನ್ವಯ, ಶಿಕ್ಷಣ, ಮಹಿಳಾ ಸಬಲೀಕರಣ ಕೇಂದ್ರವಾಗಿತ್ತು. ಸಂಪ್ರದಾಯವಾದಿ ಮುಸ್ಲಿಂ ಮತ್ತು ಕೆಳ ಸಮುದಾಯದ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ದುಡಿದ ಈ ಮಹಿಳೆಯರು ಅಂದಿನ ಕಾಲಕ್ಕೆ ತೆಗೆದುಕೊಂಡ ನಿಲುವುಗಳಿಗಾಗಿ, ಮಾಡುತ್ತಿದ್ದ ಕೆಲಸಕ್ಕಾಗಿ ಒದಗುತ್ತಿದ್ದ ಅಪಾಯ ಊಹೆಗೂ ನಿಲುಕದ್ದು.

ಇದೇ ಪರಂಪರೆಯ ಮುಂದುವರೆದ ಭಾಗವಾಗಿ ತಾರಾಬಾಯಿ ಶಿಂಧೆ ಅವರು ಕಾಣಸಿಗುತ್ತಾರೆ. ಪುರುಷಾಧಿಪತ್ಯ (ಪಿತೃ ಪ್ರಧಾನ ವ್ಯವಸ್ಥೆ) ಮತ್ತು ಜಾತಿಯಾಧಾರಿತ ಭೇದಗಳ ವಿರುದ್ಧ ಹೋರಾಡಿದ ಮಹಿಳೆ ಈಕೆ. ಹಿಂದು ಪುರಾಣಗಳು ಹೇಳುವ ಪುರುಷ ಪ್ರಧಾನತೆ ಮತ್ತು ಮಹಿಳೆ ಅಸಮಾನತೆ ಕುರಿತಾಗಿ ಆಕೆ ಮರಾಠಿಯಲ್ಲಿ ಬರೆದ “ಸ್ತ್ರೀ ಪುರುಷ ತುಲನೆ” ಗಂಡು ಹೆಣ್ಣಿನ ನಡುವಿನ ಅಸಮಾನತೆಯನ್ನು ಮನಗಾಣಿಸುವ ಆಧುನಿಕ ಸ್ತ್ರೀವಾದದ ಮೊದಲ ಪುಸ್ತಕ ಎಂದು ಕರೆಯಲ್ಪಟ್ಟಿದೆ.

ತಾರಾಬಾಯಿ ಶಿಂಧೆ ಕೂಡ ಫುಲೆ ದಂಪತಿಗಳ ಒಡನಾಡಿ. ಭಾತದಲ್ಲಿ ಮಹಿಳೆಯರ ಹಕ್ಕಿಗಾಗಿ ತಾರಾಬಾಯಿ ಅವರು ಆರಂಭಿಸಿದ ಹೋರಾಟದಲ್ಲಿ ಫುಲೆ ದಂಪತಿಗಳು ಅವರ ಬೆನ್ನಿಗೆ ನಿಂತಿದ್ದರು. ಭಾರತದ ಮಹಿಳೆಯರು ಅಷ್ಟೇ ಅಲ್ಲ, ಪ್ರಪಂಚದ ಎಲ್ಲಾ ಮಹಿಳೆಯರು ಪಿತೃಪ್ರಧಾನ ವ್ಯವಸ್ಥೆಯಿಂದ ತುಳಿತಕ್ಕೆ ಒಳಗಾದವರು ಎಂಬ ಮಹಿಳೆಯರ ಬಗೆಗೆ ವಿಶ್ವವ್ಯಾಪಿ ಕಲ್ಪನೆಯಿದ್ದ ತಾರಾಬಾಯಿ ಜಗತ್ತಿನ ಎಲ್ಲಾ ಹೆಣ್ಣುಮಕ್ಕಳ ಹಕ್ಕಿಗಾಗಿ ಧ್ವನಿ ಎತ್ತಿದ ಮೊದಲ ಭಾರತೀಯ ಹೆಣ್ಣುಮಗಳು.

ಇದೇ ನೆಲದ ಇನ್ನೊಬ್ಬ ದಿಟ್ಟ ಮಹಿಳೆ ರಮಾಬಾಯಿ ರಾನಡೆ. ಕೌಶಲ್ಯದ ಮೂಲಕ ಹೆಣ್ಣುಮಕ್ಕಳ ಬದುಕಿನಲ್ಲಿ ಬದಲಾವಣೆ ತರಬಹುದು ಎಂದು ನಂಬಿದಾಕೆ. ಮುಂಬೈನ ’ಸೇವಾಸದನ’ ಸ್ಥಾಪಿಸುವ ಮೂಲಕ ಸಾವಿರಾರು ಮಹಿಳೆಯರಿಗೆ ಕೌಶಲ್ಯ ತರಬೇತಿಯನ್ನು ನೀಡಿದ್ದಾರೆ. ಮಹಿಳೆಯರನ್ನು ಸ್ವಾವಲಂಬಿಗಳಾಗಿಸುವುದು ಮತ್ತು ಆರ್ಥಿಕವಾಗಿ ಸ್ವತಂತ್ರರನ್ನಾಗಿ ಮಾಡುವ ಉದ್ದೇಶದಿಂದಲೆ ಮುಂಬೈ ಮತ್ತು ಪುಣೆಯಲ್ಲಿನ ಇವರ ಸಂಸ್ಥೆಗಳು ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡುತ್ತಿದ್ದವು.

ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರದಲ್ಲಿ ಮಹಿಳಾ ಸಮಾನತೆಗಾಗಿ ದುಡಿದವರಲ್ಲಿ ಡಾ. ವೀಣಾ ಮಜುಂದಾರ್, ಶರ್ಮಿಳಾ ರೇಗೆ ಪ್ರಮುಖರಾಗಿದ್ದಾರೆ. ಡಾ ವೀಣಾ ಮಜುಂದಾರ್ ಮಹಿಳಾ ಶಿಕ್ಷಣ ಮತ್ತು ಮಹಿಳಾ ಹೋರಾಟಗಳನ್ನು ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಷ್ಟೆ ಅಲ್ಲದೆ, ಮಹಿಳೆಯರ ಮೇಲೆ ಪಿತೃಪ್ರಧಾನ ವ್ಯವಸ್ಥೆಯ ಕಬಂಧಬಾಹುಗಳ ಕುರಿತಾಗಿ ಸುದೀರ್ಘ ಕಾಲದವರೆಗೆ ಆಳವಾದ ಅಧ್ಯಯನ ಮಾಡಿದ್ದಾರೆ. ಮಹಿಳೆಯರ ಸ್ಥಿತಿಗೆ ಅರಿವಿನ ಕೊರತೆ ಕಾರಣ ಎಂದು ಮಹಿಳಾ ಜಾಗೃತಿಯಲ್ಲಿ ತೊಡಗಿಸಿಕೊಂಡಿದ್ದರು. ಇದೇ ಕಾರಣಕ್ಕಾಗಿ ಸೆಂಟರ್ ಫಾರ್ ವಿಮೆನ್ಸ್ ಡೆವಲಪ್ ಮೆಂಟ್ ಸ್ಟಡೀಸ್‌ಅನ್ನು (CWDS) 1980ರಲ್ಲಿ ಸ್ಥಾಪಿಸಿದರು. 1982ರಲ್ಲಿ ಆರಂಭಿಸಿದ ಇಂಡಿಯನ್ ಅಸೋಸಿಯೇಷನ್ ಆಫ್ ವಿಮೆನ್ಸ್ ಸ್ಟಡೀಸ್ ಸಂಸ್ಥಾಪಕ ಸದಸ್ಯೆ ಕೂಡ ಹೌದು. ಈ ಸಂಸ್ಥೆ ಮಹಿಳೆಯರ ಅಧ್ಯಯನಕ್ಕಾಗಿ ಇಂದಿಗೂ ರಾಷ್ಟ್ರ ಮಟ್ಟದ ಕಾರ್ಯಾಗಾರಗಳನ್ನು ನಡೆಸುತ್ತದೆ.

ಮಹಿಳಾಪರ ಧ್ವನಿ ಎತ್ತಿದ ಮತ್ತು ಮಹಿಳೆಯರ ಸ್ಥಿತಿಗತಿಯ ಕುರಿತು ವಿವಿಧ ನೆಲೆಗಳಲ್ಲಿ ಅಧ್ಯಯನ ನಡೆಸಿದವರು ಶರ್ಮಿಳಾ ರೇಗೆ. ಇವರು ಪುಣೆ ವಿಶ್ವವಿದ್ಯಾಲಯದ ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಅಂಬೇಡ್ಕರರ ಸ್ತ್ರೀವಾದದ ಪ್ರತಿಪಾದಕಿಯಾಗಿ ಕೆಳ ಸಮುದಾಯ ಮತ್ತು ಬುಡಕಟ್ಟು ಹೆಣ್ಣು ಮಕ್ಕಳ ಧ್ವನಿಯಾದವರು. ದಲಿತ ಮಹಿಳೆಯರು ಸವರ್ಣೀಯ ಮಹಿಳೆಯರ ಬದುಕಿನ ವಿಧಾನ ಪಾಲಿಸಲು ಮುಂದಾಗುವುದರ ವಿರುದ್ಧ ಕಟುವಾಗಿ ಟೀಕಿಸಿದವರು ಶರ್ಮಿಳಾ ರೇಗೆ.

PC : Wikipedia (ಡಾ. ವೀಣಾ ಮಜುಂದಾರ್)

ಆ ನಂತರದಲ್ಲಿ ಸ್ವಾತಂತ್ರ್ಯೋತ್ತರ ಭಾರತದ ಸ್ತ್ರೀವಾದಿ ಚಳವಳಿಯಲ್ಲಿ ನಾಲ್ಕು ಅಲೆಗಳನ್ನು ಗುರುತಿಸಬಹುದು. ಸಂವಿಧಾನದ ಮೂಲಕ ಮಹಿಳಾ ಹಕ್ಕುಗಳನ್ನು ಸೇರಿಸಿದ್ದು ಮಹಿಳಾ ಸಮಾನತೆಯೆ ಮೊದಲನೆ ಹಂತ ಎಂದು ಗುರುತಿಸಬಹುದು.

ರಾಜ್ಯಗಳು ಜಾತಿ ವರ್ಗ ಸಾಂಸ್ಕೃತಿಕ ಆಧಾರದಲ್ಲಿ ಸಮುದಾಯಗಳನ್ನು ಗುರುತಿಸಿದ ನಂತರ ಆಡಳಿತಾತ್ಮಕವಾಗಿ ಮಹಿಳಾ ಸಬಲೀಕರಣದ ಹಾದಿ ಸುಲಭವಾಯಿತು. ಸಮಾನ ಹಕ್ಕುಗಳು, ವಿವಾಹ ವಿಚ್ಛೇದನ, ದತ್ತು ಪಡೆಯುವ ಹಕ್ಕು, ಉತ್ತರಾಧಿಕಾರ, ಆಸ್ತಿಯ ಹಕ್ಕು, ಲೈಂಗಿಕ ದೌರ್ಜನ್ಯದ ವಿರುದ್ಧದ ಕಾನೂನುಗಳು, ವರದಕ್ಷಿಣೆ ವಿರುದ್ಧದದ ಕಾನೂನು ಹೀಗೆ 1950ರ ಹಿಂದೂ ಕೋಡ್ ಬಿಲ್ ಇದಕ್ಕೆ ಒಂದು ಉದಾಹರಣೆ.

ಎರಡನೆ ಅಲೆ ಎಂದರೆ ಮಹಿಳಾ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಮಹಿಳಾ ಸಂಘಟನೆಗಳು ಸ್ಥಾಪನೆಯಾಗಿದ್ದು. ಮಹಿಳೆಯರ ಉದ್ಯೋಗ, ಸುರಕ್ಷತೆ, ಲಿಂಗ ಅಸಮಾನತೆ, ವರದಕ್ಷಿಣೆ, ರಾಜಕೀಯ ಪ್ರಾತಿನಿಧ್ಯದ ಕುರಿತು ಮಹಿಳೆಯರು ಧ್ವನಿ ಎತ್ತಿದ ಸಮಯ ಇದು. 1960ರಲ್ಲಿ ಕೆಳ ಮತ್ತು ಬುಡಕಟ್ಟು ಮಹಿಳೆಯರ ಸಬಲೀಕರಣ, ಜಾಗೃತಿ ಮತ್ತು ಸಂತಾನೋತ್ಪತ್ತಿ ಹಾಗೂ ಲೈಂಗಿಕತೆ ಕುರಿತಾದ ಜಾಗೃತಿ ಮೂಡಿಸಲು ಸಂಘಟನೆಗಳು ಮುಂದಾದವು. 1973-74ರಲ್ಲಿ ಮಾವೋಯಿಸ್ಟ್ ಮಹಿಳೆಯರು ಸೇರಿ ಸ್ಥಾಪಿಸಿದ ಮಹಿಳಾ ಪ್ರಗತಿಪರ ಸಂಸ್ಥೆ, ಸಿಪಿಐ(ಎಂ) ಮಹಿಳಾ ಶ್ರಮಿಕ ಸಂಘಟನೆ ಇದಕ್ಕೆ ಉದಾಹರಣೆ.

ಮೂರನೆಯ ಅಲೆ ಎಂದರೆ, 1980ರ ಪಂಚವಾರ್ಷಿಕ ಯೋಜನೆಯಲ್ಲಿ ಮಹಿಳೆಯರ ಅಭಿವೃದ್ಧಿಗಾಗಿ ಆರೋಗ್ಯ, ಉದ್ಯೋಗ ಶಿಕ್ಷಣದ ಕುರಿತಾಗಿ ಹಲವು ಯೋಜನೆಗಳನ್ನು ಸರ್ಕಾರ ರೂಪಿಸಿದ್ದು. ಎಂಟನೆ ಪಂಚವಾರ್ಷಿಕ ಯೋಜನೆಯಲ್ಲಿ (1992-97) ಮಹಿಳಾ ಅಭಿವೃದ್ಧಿ ಪದದ ಬದಲು ಮಹಿಳಾ ಸಬಲೀಕರಣ ಎಂದು ಸರ್ಕಾರ ತನ್ನ ಕಡತದಲ್ಲಿ ಹೊಸ ಶಬ್ದ ಸೇರಿಸಿಕೊಂಡಿತು. ಮಹಿಳೆಯರಿಗಾಗಿ ರಾಷ್ಟ್ರೀಯ ಮಹಿಳಾ ಆಯೋಗವನ್ನು ಇದೇ ಸಮಯದಲ್ಲಿ ಆರಂಭಿಸಲಾಯಿತು. ಬಡ ಮಹಿಳೆಯರಿಗಾಗಿ ರಾಷ್ಟ್ರೀಯ ಕೋಶ ಸ್ಥಾಪಿಸಲಾಯಿತು. ಹಲವಾರು ಯೋಜನೆಗಳು ಜಾರಿಯಾದವು. ಸರ್ಕಾರೇತರ ಸಂಸ್ಥೆಗಳು ಮಹಿಳೆಯರಿಗಾಗಿ ಕೆಲಸ ನಿರ್ವಹಿಸಲು ಆರಂಭಿಸಿದವು.

ನಾಲ್ಕನೆ ಅಲೆ ಎಂದರೆ, ಸೈಬರ್ ಸ್ತ್ರೀವಾದ. 2000 ಇಸವಿಯ ಹೊತ್ತಿಗೆ ಹೊಸ ತಂತ್ರಜ್ಞಾನ ಆಗಮನದಿಂದ ಮಹಿಳೆಯರು ತಮ್ಮ ವಿಚಾರಗಳನ್ನು ಮಂಡಿಸಲು, ಸಂಘಟಿತರಾಗಲು ಡಿಜಿಟಲ್ ವೇದಿಕೆಗಳ ನೂತನ ಮಾದರಿ ಕಂಡುಕೊಂಡರು. ಮಹಿಳೆಯ ಅಭಿವ್ಯಕ್ತಿ, ಅಭಿರುಚಿ ಮತ್ತು ಸ್ವಾತಂತ್ರ್ಯದ ಕುರಿತಾದ ಚರ್ಚೆಗೆ ದೊಡ್ಡ ವೇದಿಕೆ ನಿರ್ಮಾಣವಾದ ಕಾಲಘಟ್ಟ ಇದು.

ಈಗ ಸಾಮಾಜಿಕ ಜಾಲತಾಣಗಳ ಮೂಲಕ ಚಳವಳಿಗಳು ರೂಪುಗೊಳ್ಳುತ್ತಿವೆ. ಸ್ಯಾನಿಟರಿ ನ್ಯಾಪಕಿನ್ ಮೇಲೆ 12% ಟ್ಯಾಕ್ಸ್ ಹಾಕಿದ್ದನ್ನು ಪ್ರಶ್ನಿಸಿ ಟ್ವಿಟ್ಟರ್‌ನಲ್ಲಿ 2017ರಲ್ಲಿ #LahuKaLagaan ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿತ್ತು. ಇದೆ ಚಳವಳಿಯ ಪರಿಣಾಮ 2018ರಲ್ಲಿ ಋತುಸ್ರಾವದ ಮೇಲಿನ ತೆರಿಗೆಯನ್ನು ಸರ್ಕಾರ ಹಿಂಪಡೆಯಿತು.

2012ರ ನಿರ್ಭಯಾ ಚಳವಳಿ ಕೂಡ ದೊಡ್ಡ ಸದ್ದು ಮಾಡಿತು. ಸಂತ್ರಸ್ತೆ ಸಾವಿಗೆ ನ್ಯಾಯ ಕೋರಿ #Delhibraveheart ಎಂಬ ಹ್ಯಾಷ್‌ಟ್ಯಾಗ್ ಬಳಸಿ ಮಿಲಿಯನ್‌ಗಟ್ಟಲೆ ಜನರು ಟ್ವೀಟ್ ಮಾಡಿದರು. ಈ ಸಂಬಂಧಿತ ಕಾಯಿದೆಗಳಲ್ಲಿ ಬದಲಾವಣೆ ತರುವಂತೆ ಸರ್ಕಾರದ ಮೇಲೆ ಒತ್ತಡ ಹೇರಿತು. ಜಾಗತಿಕವಾಗಿ ಇದು ಗಮನ ಸೆಳೆಯಿತು.

ಶರ್ಮಿಳಾ ರೇಗೆ

2018ರ ಹೊತ್ತಿಗೆ ಹೆಣ್ಣು ಮಕ್ಕಳು ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಘಟನೆಗಳನ್ನು ಹೇಳಿಕೊಳ್ಳಲು #MeToo ಚಳವಳಿಗೆ ಸಾಮಾಜಿಕ ಜಾಲತಾಣ ದೊಡ್ಡ ವೇದಿಕೆಯಾಯಿತು. ಇದು ದೊಡ್ಡ ಸದ್ದು ಮಾಡಿತು. ಕೆಲಸದ ಸ್ಥಳಗಳಲ್ಲಿ ಆದ ಲೈಂಗಿಕ ದೌರ್ಜನ್ಯಗಳು ಬೆಳಕಿಗೆ ಬಂದವು. 2013ರಲ್ಲಿ ಜಾರಿಗೆ ತಂದ ಮಹಿಳಾ ದೌರ್ಜನ್ಯ ಕಾಯ್ದೆ ತಿದ್ದುಪಡಿಗೆ ಇದು ಸಹಾಯ ಮಾಡಿತು.

#MeToo ಚಳವಳಿಯ ಸಂದರ್ಭದಲ್ಲಿ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾಜಿ ಕೇಂದ್ರಮಂತ್ರಿ ಎಂ.ಜೆ ಅಕ್ಬರ್ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸಿದ ದೆಹಲಿ ನ್ಯಾಯಾಲಯ, ತನ್ನ ತೀರ್ಪಿನಲ್ಲಿ “ದಶಕಗಳ ನಂತರವೂ ಮಹಿಳೆಗೆ ತನ್ನ ನೋವನ್ನು ಹೇಳಿಕೊಳ್ಳುವ ಹಕ್ಕಿದೆ..” ಎಂಬುದನ್ನು ಉಲ್ಲೇಖಿಸಿರುವುದು ಗಮನಾರ್ಹ.

ಎನ್.ಆರ್.ಸಿ ವಿರುದ್ಧ ಶಾಹಿನ್ ಭಾಗ್ ಮಹಿಳೆಯರ ಹೋರಾಟ, ರೈತರ ದೆಹಲಿ ಚಲೋನಲ್ಲಿ ಮಹಿಳೆಯರು ಹೋರಾಟಕ್ಕಿಳಿದಿದ್ದು, ಟ್ರ್ಯಾಕ್ಟರ್ ರ್‍ಯಾಲಿ ಮಾಡಿದ್ದು, ಪ್ರಜಾಪ್ರಭುತ್ವದಲ್ಲಿ ಗಂಡಾಳ್ವಿಕೆಯ ಅನೀತಿ ವಿರೋಧದ ರಾಜಕೀಯ ಧ್ವನಿಯಾಗಿದೆ. ಮಹಿಳೆಯರ ಧ್ವನಿಗಳನ್ನು ಹತ್ತಿಕ್ಕಲು ಕೆಲಸ ಮಾಡುತ್ತಿರುವ ಪಿತೃಪ್ರಧಾನ ವ್ಯವಸ್ಥೆಯ ಬೇರುಗಳು ಇನ್ನೂ ಗಟ್ಟಿಯಾಗಿರುವುದು ಕೂಡ ಢಾಳವಾಗಿ ಕಾಣಸಿಗುತ್ತದೆ.

ಸ್ತ್ರೀವಾದವೆಂದರೆ ಗಂಡು ಮತ್ತು ಹೆಣ್ಣು ಸಮಾನ ತತ್ವದಡಿ ಬದುಕು ಕಟ್ಟಿಕೊಳ್ಳುವ ಸಮಬಾಳಿನ ತತ್ವ. ಸಮಾನ ಸಮ್ಮಾನದ ಬೇಡಿಕೆ.

ಚೈತ್ರಿಕಾ ಹರ್ಗಿ
ಯುವತಲೆಮಾರಿನ ಬರಹಗಾರ್ತಿ. ಪ್ರಸಕ್ತ ವಿದ್ಯಮಾನಗಳ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಚೈತ್ರಿಕಾ ಕನ್ನಡದ ಹಲವು ಪತ್ರಿಕೆಗಳಲ್ಲಿ ನಿಯತವಾಗಿ ಲೇಖನಗಳನ್ನು ಬರೆಯುತ್ತಿದ್ದಾರೆ.


ಇದನ್ನೂ ಓದಿ: ಒಳಗಣ ಹೆಣ್ಣಿನ ಮೊಳಕೆ; ಮಂಜಮ್ಮ ಜೋಗತಿ ಅವರ ಆತ್ಮಕಥನ ’ನಡುವೆ ಸುಳಿವ ಹೆಣ್ಣು’ವಿನಿಂದ ಆಯ್ದ ಅಧ್ಯಾಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...