ತುಮಕೂರು ನಗರದಲ್ಲಿ ಇತ್ತಿಚೆಗೆ ನಡೆದ ವಿಶ್ವ ಹಿಂದೂ ಪರಿಷತ್ ಶೌರ್ಯ ಯಾತ್ರೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕೋಮು ಸಹೌರ್ದತೆ ಹಾಳುವ ಯತ್ನ ಮಾಡಿದ್ದರು. ಇದೀಗ ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ ದಾಖಲಾಗಿದೆ.
ಮುಸ್ಲಿಂ ಸಂಘಟನೆಗಳ ಪದಾಧಿಕಾರಿಗಳು, ಪಂಪ್ವೆಲ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿದ್ದಾರೆ, ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ನಗರದ ತಿಲಕ್ ಪಾರ್ಕ್ ಠಾಣೆಗೆ ದೂರು ನೀಡಿದ್ದರು. ಅವರ ದೂರಿನ ಮೇರೆಗೆ ಇದೀಗ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಘಟನೆ ಹಿನ್ನೆಲೆ:
”ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಭಾಗಿಯಾಗಿರುವ ಮುಸ್ಲಿಂ ಜಿಹಾದಿಗಳಿಗೆ ಪ್ರತ್ಯುತ್ತರ ನೀಡಲು, ಸುರತ್ಕಲ್ನ ಬಿಸಿ ರಕ್ತದ ಯುವಕರು ಸೇಡು ತೀರಿಸಿಕೊಂಡರು” ಎಂದು ತುಮಕೂರು ನಗರದಲ್ಲಿ ಇತ್ತಿಚೆಗೆ ನಡೆದ ವಿಶ್ವ ಹಿಂದೂ ಪರಿಷತ್ ಶೌರ್ಯ ಯಾತ್ರೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿಕೆ ನೀಡಿದ್ದರು.
”ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಮುಸಲ್ಮಾನ್ ಜಿಹಾದಿಗಳಿದ್ದಾರೆ. ಅವರಿಗೆ ಉತ್ತರವನ್ನು ಕೊಡಬೇಕೆಂಬ ಕಾರಣಕ್ಕಾಗಿ ಸುರತ್ಕಲ್ನಲ್ಲಿದ್ದ ಬಿಸಿ ನೆತ್ತರಿನ ಯುವಕರು ಕೊಂದಿದ್ದಾರೆ. ಯಾರು ಇಲ್ಲದ ಸಮಯದಲ್ಲಿ ಅಲ್ಲ. ಮಾರ್ಕೆಟ್ನಲ್ಲಿ ಜನ ಇದ್ದಾಗಲೇ, ಅವರ ಎದುರಲ್ಲೇ ನುಗ್ಗಿ ನುಗ್ಗಿ ಅವರಿಗೆ ಹೊಡೆದು ಹತ್ಯೆಗೆ ಪ್ರತಿಕಾರವನ್ನು ತೋರಿಸಿದ್ದು ಹಿಂದೂ ಹುಡುಗರ ತಾಕತ್ತು” ಎಂದು ಪ್ರಚೋದಿಸಿದ್ದಾರೆ. ತುಮಕೂರಿನ ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮ ನಡೆದಿತ್ತು.
”ಶರಣ್ ಪಂಪ್ವೆಲ್ ಮಾಡಿದ ಆಪಾದಿತ ಪ್ರಚೋದಕ ಹೇಳಿಕೆಗಳ ಮೇಲೆ ಯಾವುದೇ ದೂರುಗಳು ದಾಖಲಾಗಿಲ್ಲ. ಅವರ ಭಾಷಣದಲ್ಲಿ ನಾವು ಸ್ವಯಂಪ್ರೇರಿತ ಪ್ರಕರಣಗಳನ್ನು ತೆಗೆದುಕೊಳ್ಳುವುದಿಲ್ಲ. ನಗರದಲ್ಲಿ ಕಾನೂನು ಸುವ್ಯವಸ್ಥೆ ಸ್ಥಿರವಾಗಿದೆ” ಎಂದು ತಿಲಕ್ ನಗರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹೇಳಿರುವುದಾಗಿ ವರದಿಯಾಗಿತ್ತು.
”ನಾನು ಯಾವುದೇ ಸೇಡಿನ ಹತ್ಯೆಗಳನ್ನು ಸಮರ್ಥಿಸಿಕೊಂಡಿಲ್ಲ. ನಾನು ಯುವಕರ ಶಕ್ತಿಯ ಬಗ್ಗೆ ಮಾತ್ರ ಮಾತನಾಡಿದ್ದೇನೆ. ಹಿಂದೂಗಳು ಸಹ ಮುಸ್ಲಿಮರ ದೌರ್ಜನ್ಯದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬಹುದು. ಸಮಾರಂಭದಲ್ಲಿ ನಾನು ಸತ್ಯವನ್ನಷ್ಟೇ ಮಾತನಾಡಿದ್ದೇನೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ನಾನು ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿಲ್ಲ ಅಥವಾ ಯಾವುದೇ ನಿರ್ದಿಷ್ಟ ಹತ್ಯೆಗಳನ್ನು ಎತ್ತಿ ತೋರಿಸಿಲ್ಲ” ಎಂದು ಪಂಪ್ವೆಲ್ ಸಮರ್ಥಿಸಿಕೊಂಡಿದ್ದರು.
ಶರಣ್ ಪಂಪ್ವೆಲ್ ಹೇಳಿಕೆಗೆ ಜನಾಕ್ರೋಶ ವ್ಯಕ್ತ:-
”ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯವನ್ನು ಧ್ರುವೀಕರಣಗೊಳಿಸುವ ಪ್ರಯತ್ನ ಇದಾಗಿದೆ. ಇದು ಆರೆಸ್ಸೆಸ್ ಮತ್ತು ಬಿಜೆಪಿಯ ಹಿಡನ್ ಅಜೆಂಡಾ. ಕಾನೂನು ಸುವ್ಯವಸ್ಥೆ ಹದಗೆಡಿಸಲು ಯತ್ನಿಸಿದ ಪಂಪ್ವೆಲ್ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ಕಾಂಗ್ರೆಸ್ ಆಗ್ರಹಿಸಿತ್ತು.
ಡಿವೈಎಫ್ಐ ಕರ್ನಾಟಕ ರಾಜ್ಯಾಧ್ಯಕ್ಷರಾದ ಮನೀರ್ ಕಾಟಿಪಳ್ಳ ಪ್ರತಿಕ್ರಿಯಿಸಿ, ”ಶರಣ್ ಪಂಪ್ ವೆಲ್ ತುಮಕೂರಿನಲ್ಲಿ ಸಂಫಪರಿವಾರದ ವೇದಿಕೆಯಲ್ಲಿ ಮಾಡಿದ ಭಾಷಣ ದುಷ್ಟತನದ ಪರಮಾವಧಿ” ಎಂದರು.
”ಇದು ತೀರಾ ಆತಂಕಕಾರಿ ಬೆಳವಣಿಗೆ. ನಾಗರಿಕ ಸಮಾಜದಲ್ಲಿ ಇದು ಭೀತಿಯನ್ನು ಮೂಡಿಸಿದೆ. ಫಾಝಿಲ್ ಕೊಲೆಗೆ ವಿಎಚ್ಪಿ, ಬಿಜೆಪಿ ಮುಖಂಡರ ಬೆಂಬಲ ದೊರಕಿರುವ ಅನುಮಾನ ಕೊಲೆ ನಡೆದ ಸಂದರ್ಭದಲ್ಲೇ ವ್ಯಕ್ತವಾಗಿತ್ತು. ಪೊಲೀಸರು ರಾಜಕೀಯ ಒತ್ತಡದಿಂದ ಕೊಲೆಯ ಪಿತೂರಿದಾರರನ್ನು ರಕ್ಷಿಸುತ್ತಿದ್ದಾರೆ ಎಂದು ಫಾಝಿಲ್ ಕುಟುಂಬ ಆರೋಪಿಸಿತ್ತು. ಶರಣ್ ಪಂಪ್ ವೆಲ್ ಭಾಷಣ ಈ ಅನುಮಾನ, ಆರೋಪವನ್ನು ಅನುಮಾನಕ್ಕೆ ಎಡೆಯಿಲ್ಲದಂತೆ ಪುಷ್ಟೀಕರಿಸಿದೆ” ಎಂದು ತಿಳಿಸಿದ್ದರು.
”ಶರಣ್ ಪಂಪ್ ವೆಲ್ ಅತಿರೇಕದ ದ್ವೇಷ ಭಾಷಣ, ಕೊಲೆಗಳ ಸಮರ್ಥನೆ, ಬೆದರಿಕೆ ಜನಾಂಗ ಹತ್ಯೆಗೆ ಪ್ರಚೋದನೆ ನೀಡುವಂತಿದೆ. ನಿರುದ್ಯೋಗ, ಬಡತನದಿಂದ ಹತಾಶಗೊಂಡಿರುವ ಯುವಕರ ಕೈಗೆ ತಲವಾರು ನೀಡಿ ಗಲಭೆಗಿಳಿಸುವ, ಇಡೀ ಸಮಾಜವನ್ನು ಕ್ರಿಮಿನಲೀಕರಣಗೊಳಿಸುವ, ಚುನಾವಣೆ ಸನಿಹದಲ್ಲಿರುವ ಸಂದರ್ಭ ಮತೀಯ ಧ್ರುವೀಕರಣ ರಾಜಕೀಯ ದುರುದ್ದೇಶಗಳನ್ನು ಹೊಂದಿದೆ. ಹಾಗೂ ಶರಣ್ ಪಂಪ್ ವೆಲ್ಗೆ ಬಿಜೆಪಿ ಸರಕಾರದ ಬೆಂಬಲವೂ ದೊರಕಿರುವುದು ಎದ್ದು ಕಾಣುತ್ತಿದೆ” ಎಂದು ಟೀಕಿಸಿದ್ದರು.
”ಅಮಾಯಕ ಫಾಝಿಲ್ ಕೊಲೆಯ ಸಂದರ್ಭ ರಾಜ್ಯ ಸರಕಾರ ಸಾಂತ್ವನ, ಪರಿಹಾರ ಒದಗಿಸದೆ ಫಾಝಿಲ್ ಕುಟುಂಬದೊಂದಿಗೆ ತಾರತಮ್ಯದಿಂದ ಕೆಟ್ಟದಾಗಿ ನಡೆದುಕೊಂಡಿತ್ತು. ಪ್ರಕರಣದ ತನಿಖೆಯೂ ದುರ್ಬಲ ನೆಲೆಯಲ್ಲಿ ನಡೆದಿತ್ತು. ಈಗ ಫಾಝಿಲ್ ಕೊಲೆಯನ್ನು ಭಜರಂಗ ದಳದ ಕಾರ್ಯಕರ್ತರ ಶೌರ್ಯದ ಸಂಕೇತ ಎಂದು ಭಾಷಣ ಬಿಗಿಯಲು ಅವಕಾಶ ಒದಗಿಸಿ ಆ ಸಂತ್ರಸ್ತ ಕುಟುಂಬವನ್ನು ಮತ್ತಷ್ಟು ನೋವುಣ್ಣುವಂಟು ಮಾಡಲಾಗುತ್ತಿದೆ. ಮುಸ್ಲಿಂ ಸಮುದಾಯದ ವಿರುದ್ದ ಇನ್ನಷ್ಟು ದ್ವೇಷ ಹರಡುವ ಯತ್ನವೂ ಇದರ ಹಿಂದಿದೆ. ಸರಕಾರಿ ಪ್ರಾಯೋಜಿತ ಇಂತಹ ಯೋಜನಾಬದ್ದ ಜನಾಂಗ ದ್ವೇಷದ ಕೆಲಸಗಳು ಮುಸ್ಲಿಂ ಸಮುದಾಯದೊಳಗಡೆ ನಕಾರಾತ್ಮಕ ಶಕ್ತಿಗಳ ಬೆಳವಣಿಗೆಗೂ ಕುಮ್ಮಕ್ಕು ನೀಡುತ್ತದೆ. ಇದು ನಮ್ಮ ಸಮಾಜವನ್ನು ಅಪಾಯಕಾರಿ ವಿಭಜನೆಯೆಡೆಗೆ ಒಯ್ಯುತ್ತದೆ” ಎಂದು ಆತಂಕ ವ್ಯಕ್ತಪಡಿಸಿದ್ದರು.
”ಕೊಲೆ, ನರಮೇಧದ ಸಮರ್ಥನೆಯ ಭಾಷಣಕ್ಕಾಗಿ ಶರಣ್ ಪಂಪ್ವೆಲ್ರನ್ನು ಕಠಿಣ ಕಾಯ್ದೆಯಡಿ ಬಂಧಿಸಬೇಕು, ಫಾಝಿಲ್ ಕೊಲೆಯಲ್ಲಿ ಶರಣ್ ಪಂಪ್ವೆಲ್ ಮತ್ತಿತರ ನಾಯಕರ ಪಾತ್ರದ ಕುರಿತು ಮರು ತನಿಖೆ ಮಾಡಬೇಕು ಎಂದು ಡಿವೈಎಫ್ಐ ಆಗ್ರಹಿಸುತ್ತದೆ. ನಾಗರಿಕ ಸಮಾಜ ಒಂದಾಗಿ ಶರಣ್ ಪಂಪ್ ವೆಲ್ ಭಾಷಣವನ್ನು ಖಂಡಿಸಬೇಕು ಹಾಗೂ ಕ್ರಮಕ್ಕಾಗಿ ಒತ್ತಾಯಿಸಬೇಕು” ಎಂದಿದ್ದರು.