ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಮ್ ಆದ್ಮಿ ಪಕ್ಷವು ಬೆಂಗಳೂರಿನಲ್ಲಿ ‘ಆಮ್ ಆದ್ಮಿ ಕ್ಲಿನಿಕ್’ ಆರಂಭಿಸಿದ್ದು, ಜನಸಾಮಾನ್ಯರಿಗೆ ಉಚಿತ ಚಿಕಿತ್ಸೆ ನೀಡಲು ಮುಂದಾಗಿದೆ.
ಬೆಂಗಳೂರಿನ ಶಾಂತಿ ನಗರದ ನಂ 54, ಬಸಪ್ಪ ರಸ್ತೆಯಲ್ಲಿ ಇರುವ ಆಮ್ ಆದ್ಮಿ ಕ್ಲಿನಿಕ್ನಲ್ಲಿ ಸುಮಾರು 60 ಬಗೆಯ ಲ್ಯಾಬ್ ಪರೀಕ್ಷೆಗಳು, ತಜ್ಞ ವೈದ್ಯರಿಂದ ಸಮಾಲೋಚನೆ, ನಿಯಮಿತವಾಗಿ ಪ್ರತಿಯೊಬ್ಬ ರೋಗಿಯ ಬಗ್ಗೆ ನಿಗಾವಹಿಸಲಾಗುವುದು. ಈ ಎಲ್ಲಾ ಸೌಲಭ್ಯಗಳು ಸಂಪೂರ್ಣ ಉಚಿತವಾಗಿ ನೀಡಲಾಗುವುದು ಎಂದು ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ತಿಳಿಸಿದ್ದಾರೆ.
ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದ ಅವರು, “ಜನ ಸಾಮಾನ್ಯನ ಸೇವೆಗೆ ಸಣ್ಣ ಕೊಡುಗೆ ನೀಡುವುದರ ಮೂಲಕ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗಿದೆ. ನಮ್ಮ ನಾಡಿಗೆ, ಜನರಿಗೆ ಸಲ್ಲಿಸುವ ನಿಜವಾದ ಸೇವೆ ಇದಾಗಿದೆ” ಎಂದಿದ್ದಾರೆ.
ಹತ್ತರಲ್ಲಿ ಎಂಟು ಜನ ಖಾಯಿಲೆಯ ಬಗ್ಗೆ ಮಾತನಾಡಿ ಅದು ಗುಣ ಆಗುವುದರ ಕಡೆ ಯೋಚಿಸುವುದಕ್ಕಿಂತ, ಖಾಯಿಲೆಗೆ ಖರ್ಚಾಗುವ ಹಣದ ಬಗ್ಗೆ ಯೋಚನೆ ಮಾಡುವಂತಹ ಪರಿಸ್ಥಿತಿ ನಮ್ಮ ಕಣ್ಣೆದುರಿಗಿದೆ. ಇದು ಬದಲಾಗದ ಹೊರತು ನಮ್ಮ ದೇಶದ ಜನ ಸಾಮಾನ್ಯನಿಗೆ ಭವಿಷ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ನಾವು ಮಾಡುತ್ತಿರುವ ಕೆಲಸ ಶಾಶ್ವತವಲ್ಲ, ಈ ಕೆಲಸ ಶಾಶ್ವತವಾಗುವುದು ಜನ ಸಾಮಾನ್ಯನ ಬದುಕನ್ನು ಉತ್ತಮಗೊಳಿಸುವಂತೆ ಯೋಚನೆ ಮಾಡುವ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಪೃಥ್ವಿ ರೆಡ್ಡಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ಮುಖಂಡರಾದ ಹರಿಹರನ್, ಗೋಪಾಲ್ ರೆಡ್ಡಿ, ರಾಜ್ಯ ಕಾರ್ಯದರ್ಶಿ ಸಂಚಿತ್ ಸಹಾನಿ, ಮುಖ್ಯ ವಕ್ತಾರ ಶರತ್ ಖಾದ್ರಿ, ಮಾಧ್ಯಮ ಸಂಯೋಜಕ ಸೋಮಶೇಖರ್ ಸಿರಾ ಇದ್ದರು.
ಇದನ್ನೂ ಓದಿ: ’ಬೆಂಗಳೂರಿನಲ್ಲಿ ಕಸದ ಭಯೋತ್ಪಾದನೆ ನಿಲ್ಲಿಸಿ’-ಆಮ್ಆದ್ಮಿ ಪಕ್ಷದಿಂದ ಪ್ರತಿಭಟನೆ