2019ರ ಲೋಕಸಭಾ ಚುನಾವಣೆ ಸೋಲಿನ ನಂತರ ರಾಹುಲ್ ಗಾಂಧಿ ತಮ್ಮ ಕ್ಷೇತ್ರವನ್ನು ಅಮೇಥಿಯಿಂದ ಕೇರಳದ ವಯನಾಡಿಗೆ ಸ್ಥಳಾಂತರಿಸಿದ್ದಾರೆ. ಆದರೆ, ಬಿಜೆಪಿ ಹಾಲಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದು ಮಾತ್ರ ಇನ್ನೂ ಅಂತಿಮವಾಗಿಲ್ಲ. ಈ ನಡುವೆ, ಕ್ಷೇತ್ರದಲ್ಲಿ ರಾಬರ್ಟ್ ವಾದ್ರಾ ಕಣಕ್ಕಿಳಿಯಬೇಕು ಎಂದು ಪೋಸ್ಟರ್ ಅಭಿಯಾನ ಆರಂಭವಾಗಿದೆ.
ಕಾಂಗ್ರೆಸ್ನ ಅಮೇಥಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕೂತೂಹಲದ ನಡುವೆ, ಸ್ಥಳೀಯ ಪಕ್ಷದ ಕಚೇರಿಯ ಹೊರಗೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ಅವರಿಗೆ ಚುನಾವಣಾ ಪ್ರವೇಶಕ್ಕೆ ಒತ್ತಾಯಿಸುವ ಪೋಸ್ಟರ್ಗಳು ಕಂಡುಬಂದಿವೆ. ಪೋಸ್ಟರ್ಗಳಲ್ಲಿ “ಅಮೇಥಿ ಕಿ ಜನತಾ ಕರೇ ಪುಕಾರ್, ರಾಬರ್ಟ್ ವಾದ್ರಾ ಅಬ್ ಕಿ ಬಾರ್”, ಅಂದರೆ “ಅಮೇಥಿಯ ಜನರು ಈ ಬಾರಿ ರಾಬರ್ಟ್ ವಾದ್ರಾ ಅವರನ್ನು ಬಯಸುತ್ತಾರೆ” ಎಂದು ಬರೆಯಲಾಗಿದೆ.
ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನದಲ್ಲಿ ಮೇ 20 ರಂದು ಅಮೇಥಿ ಮತದಾನ ನಡೆಯಲಿದ್ದು, ಮೇ 3 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಬಿಜೆಪಿ ಹಾಲಿ ಸಂಸದೆ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ತನ್ನ ಅಭ್ಯರ್ಥಿ ಎಂದು ಘೋಷಿಸಿದ್ದರೂ, ಕಾಂಗ್ರೆಸ್ ತನ್ನ ಆಯ್ಕೆಯನ್ನು ಇನ್ನೂ ಹೆಸರಿಸಿಲ್ಲ.
ಅಮೇಥಿಯು ಗಾಂಧಿ ಕುಟುಂಬದ ಸ್ಥಾನವಾಗಿದ್ದು, ಹಿಂದೆ ಸಂಜಯ್ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಪ್ರತಿನಿಧಿಸಿದ್ದರು. 2019ರ ಚುನಾವಣೆಯಲ್ಲಿ, ಕೇರಳದ ವಯನಾಡಿನಲ್ಲಿ ಗೆಲುವು ಸಾಧಿಸಲು ಯಶಸ್ವಿಯಾದ ರಾಹುಲ್ ಗಾಂಧಿ ವಿರುದ್ಧ ಅಮೇಥಿಯಲ್ಲಿ ಸ್ಮೃತಿ ಇರಾನಿ ಅದ್ಭುತ ಜಯ ಸಾಧಿಸಿದರು. ಈ ವರ್ಷವೂ, ರಾಹುಲಗ ಗಾಂಧಿ ಶುಕ್ರವಾರ ಮತ ಚಲಾಯಿಸುವ ವಯನಾಡ್ನಿಂದ ಸ್ಪರ್ಧಿಸುತ್ತಿದ್ದಾರೆ. ಮೇ 3 ರವರೆಗೆ ಅಮೇಥಿಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಕೇರಳದ ಚುನಾವಣೆಯ ನಂತರ ಗಾಂಧಿ ಅವರು ತಮ್ಮ ನಾಮಪತ್ರ ಸಲ್ಲಿಸಬಹುದು ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಅಮೇಥಿಯಲ್ಲೂ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗುತ್ತೀರಾ ಎಂದು ಕೇಳಲಾಗಿತ್ತು. ಪಕ್ಷ ಏನು ಆದೇಶ ನೀಡುತ್ತದೋ ಅದನ್ನು ಮಾಡುತ್ತೇನೆ ಎಂದು ಉತ್ತರಿಸಿದರು.
ಈ ಎಲ್ಲ ಬೆಳವಣಿಗೆಗಳ ನಡುವೆ, “ವಾದ್ರಾ ಅವರು ಅಮೇಥಿಯಲ್ಲಿ ಸ್ಪರ್ಧಿಸಿದರೆ,ಸ್ಮೃತಿ ಆಯ್ಕೆ ಮಾಡುವ ತಮ್ಮ ತಪ್ಪನ್ನು ಸರಿಪಡಿಸುವ ಆಯ್ಕೆ ಜನರಿಗೆ ಇರುತ್ತದೆ ಎಂದು ಅಮೇಥಿಯ ಜನರು ಭಾವಿಸುತ್ತಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಬಳಿಕ, ವಾದ್ರಾ ಕಾಂಗ್ರೆಸ್ ಅಭ್ಯರ್ಥಿ ಎಂದು ಆಗ್ರಹಿಸಿ ಕೆಲವು ಪೋಸ್ಟರ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದವು.
ಕ್ಷೇತ್ರದಲ್ಲಿ ಇರಾನಿ ಅವರ ಪ್ರಚಾರವು ಭರದಿಂದ ಸಾಗುತ್ತಿದೆ, ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸುವಲ್ಲಿ ವಿಳಂಬವಾಗಿದೆ ಎಂದು ಟೀಕಿಸಿದ್ದಾರೆ. ರಾಹುಲ್ ಗಾಂಧಿ ಮತ್ತು ಅವರ ಬಾವ ವಾದ್ರಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ಜಿಜಾಜಿ ಕಿ ನಜರ್ ಹೈ, ಸಾಲೇ ಸಾಹಬ್ ಕ್ಯಾ ಕರೆಂಗೆ. (ಬಾವ ಸೀಟಿನ ಮೇಲೆ ಕಣ್ಣಿಟ್ಟಿದ್ದಾರೆ, ಅವರು (ಗಾಂಧಿ) ಏನು ಮಾಡುತ್ತಾರೆ?) ಬಸ್ಗಳಲ್ಲಿ ಪ್ರಯಾಣಿಸುವ ಜನರು ತಮ್ಮ ಆಸನವನ್ನು ಗುರುತಿಸಲು ತಮ್ಮ ಕರವಸ್ತ್ರವನ್ನು ಬಿಡುವ ಕಾಲವಿತ್ತು. ಅವರ ಬಾವ ಈ ಆಸನದ ಮೇಲೆ ಕಣ್ಣಿಟ್ಟಿರುವ ಕಾರಣ ರಾಹುಲ್ ಗಾಂಧಿ ಕೂಡ ತಮ್ಮ ಆಸನವನ್ನು ಗುರುತಿಸಲು ಬರುವುದಿಲ್ಲ” ಎಂದು ಅವರು ಇತ್ತೀಚೆಗೆ ಅಮೇಥಿಯಲ್ಲಿ ಹೇಳಿದರು.
“ಇದು ಎಂದಾದರೂ ನಡೆದಿದೆಯೇ? ಚುನಾವಣೆಗೆ ಕೇವಲ 27 ದಿನಗಳು ಉಳಿದಿವೆ. ಆದರೆ, ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ. ನಾನು ಐದು ವರ್ಷಗಳಲ್ಲಿ ಮಾಡಿದ್ದನ್ನು, ರಾಹುಲ್ ಗಾಂಧಿ 15 ವರ್ಷಗಳಲ್ಲಿ ಮಾಡಲು ಸಾಧ್ಯವಾಗಲಿಲ್ಲ” ಎಂದು ಅವರು ಹೇಳಿದರು.
ಏಪ್ರಿಲ್ 26ರ ನಂತರ ರಾಹುಲ್ ಗಾಂಧಿ ಅಮೇಥಿಗೆ ಬರುತ್ತಾರೆ ಮತ್ತು ಜಾತಿಯ ಹೆಸರಿನಲ್ಲಿ ಜನರನ್ನು ಒಡೆಯಲು ಪ್ರಯತ್ನಿಸುತ್ತಾರೆ ಎಂದು ಕೇಂದ್ರ ಸಚಿವರು ಆರೋಪಿಸಿದ್ದಾರೆ.
“ಏಪ್ರಿಲ್ 26 ರಂದು ವಯನಾಡಿನಲ್ಲಿ ಮತದಾನದ ನಂತರ, ರಾಹುಲ್ ಗಾಂಧಿ ಇಲ್ಲಿಗೆ ಬಂದು ಅಮೇಥಿ ತನ್ನ ಕುಟುಂಬ ಎಂದು ಎಲ್ಲರಿಗೂ ಹೇಳಲು ಮತ್ತು ಜಾತಿವಾದದ ಬೆಂಕಿಯನ್ನು ಹೊತ್ತಿಸಲಿದ್ದಾರೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಪ್ರತಿಷ್ಠಾಪನಾ ಸಮಾರಂಭದ ಆಹ್ವಾನವನ್ನು ತಿರಸ್ಕರಿಸಿದೆ. ಆದರೆ, ಅವರು ಅಮೇಠಿಯಲ್ಲಿ ದೇವಸ್ಥಾನಗಳ ಸುತ್ತಲೂ ತಿರುಗಾಡುವುದನ್ನು ಕಾಣಬಹುದು, ಆದ್ದರಿಂದ ಎಚ್ಚರಿಕೆಯಿಂದ ಮತ್ತು ಜಾಗರೂಕರಾಗಿರಬೇಕು” ಎಂದು ಅವರು ಸ್ಥಳೀಯ ಸಭೆಯಲ್ಲಿ ಹೇಳಿದರು.
ಇದನ್ನೂ ಓದಿ; ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ