ಪ್ರಸ್ತುತ ಸುಪ್ರೀಂಕೋರ್ಟ್ ಅಂಗಳದಲ್ಲಿರುವ ‘ತಪ್ಪು ದಾರಿಗೆಳೆಯುವ ಜಾಹೀರಾತುಗಳ’ ಕುರಿತು ಪತಂಜಲಿ ಆಯುರ್ವೇದ, ಆಚಾರ್ಯ ಬಾಲಕೃಷ್ಣ ಮತ್ತು ಸ್ವಾಮಿ ರಾಮ್ದೇವ್ ಅವರು ಹೊಸದಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ನಿನ್ನೆ ಸುಪ್ರೀಂಕೋರ್ಟ್, ಪತ್ರಿಕೆಗಳಲ್ಲಿ ಮುದ್ರಿತ ಹಿಂದಿನ ಸಾರ್ವಜನಿಕ ಕ್ಷಮೆಯಾಚನೆಯು ಅವರ ಜಾಹೀರಾತುಗಳಷ್ಟು ದೊಡ್ಡದಾಗಿದೆಯೇ ಎಂದು ಕೇಳಿತ್ತು. ಇದರ ಬೆನ್ನಲ್ಲಿ ಮತ್ತೆ ಪತಂಜಲಿ ಆಯುರ್ವೇದ, ಆಚಾರ್ಯ ಬಾಲಕೃಷ್ಣ ಮತ್ತು ಸ್ವಾಮಿ ರಾಮ್ದೇವ್ ಅವರು ಹೊಸ ಸಾರ್ವಜನಿಕ ಕ್ಷಮೆಯಾಚನೆಯನ್ನು ಪ್ರಕಟಿಸಿದ್ದಾರೆ.
ಮಂಗಳವಾರ ಜಾಹೀರಾತುಗಳ ಗಾತ್ರದ ಬಗ್ಗೆ ಸುಪ್ರೀಂಕೋರ್ಟ್ ಪ್ರಶ್ನಿಸಿದಾಗ, ಪತಂಜಲಿಯ ಪರ ವಕೀಲ ಮುಕುಲ್ ರೋಹಟಗಿ, 67 ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಲಾಗಿದೆ ಮತ್ತು ಅದಕ್ಕೆ “ಹತ್ತಾರು ಲಕ್ಷ” ವೆಚ್ಚವಾಗುತ್ತದೆ ಎಂದು ಪೀಠಕ್ಕೆ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕೊಹ್ಲಿ, ನೀವು ಪ್ರಕಟಿಸಿದ ಪೂರ್ಣ ಪುಟದ ಜಾಹೀರಾತುಗಳಿಗೆ ಸಮಾನವಾದ ವೆಚ್ಚ ಕ್ಷಮೆಯಾಚನೆಯ ಜಾಹೀರಾತಿಗೆ ವೆಚ್ಚವಾಗಿದೆಯಾ ಎಂದು ಪ್ರಶ್ನಿಸಿದ್ದು, ಪತಂಜಲಿಯ ವಕೀಲರು ಪ್ರಕಟಿಸಿದ ಕ್ಷಮಾಪಣೆಯ ಪ್ರತಿಯನ್ನು ನೀಡದಿದ್ದಕ್ಕಾಗಿ ಪೀಠವು ಛೀಮಾರಿ ಹಾಕಿದೆ.
ಭಾರತದ ಕೋವಿಡ್-19 ವ್ಯಾಕ್ಸಿನೇಷನ್ ಮತ್ತು ಪತಂಜಲಿ ಆಯುರ್ವೇದ ಉತ್ಪನ್ನಗಳ ಬಗ್ಗೆ ತಪ್ಪುದಾರಿಗೆಳೆಯುವ ಜಾಹೀರಾತುಗಳು ಸೇರಿದಂತೆ ಆಧುನಿಕ ಔಷಧದ ಬಗ್ಗೆ ರಾಮ್ದೇವ್ ಅವರ ವಿವಾದಾತ್ಮಕ ಹೇಳಿಕೆಗಳ ವಿರುದ್ಧದ ಭಾರತೀಯ ವೈದ್ಯಕೀಯ ಸಂಘ ಅರ್ಜಿಗೆ ಸಂಬಂಧಿಸಿದ ವಿಚಾರಣೆ ವೇಳೆ ಕೋರ್ಟ್ ಈ ಮಹತ್ವದ ಅಂಶವನ್ನು ಗಮನಿಸಿದೆ.
ನವೆಂಬರ್ 21ರಂದು, ಆಧುನಿಕ ವೈದ್ಯಕೀಯ ವ್ಯವಸ್ಥೆಗಳ ವಿರುದ್ಧ ತಪ್ಪುದಾರಿಗೆಳೆಯುವ ಮಾಹಿತಿ ಮತ್ತು ಜಾಹೀರಾತುಗಳನ್ನು ಪ್ರಕಟಿಸುವುದನ್ನು ತಕ್ಷಣವೇ ನಿಲ್ಲಿಸುವಂತೆ ಪತಂಜಲಿಯನ್ನು ಸುಪ್ರೀಂ ಕೋರ್ಟ್ ಕೇಳಿದೆ, ಇಲ್ಲದಿದ್ದರೆ ಭಾರಿ ದಂಡವನ್ನು ವಿಧಿಸುವುದಾಗಿ ಎಚ್ಚರಿಸಿತ್ತು. ಇದಲ್ಲದೆ ನವೆಂಬರ್ 22ರಂದು ರಾಮ್ದೇವ್ ಅವರು ನಡೆಸಿದ ಪತ್ರಿಕಾಗೋಷ್ಠಿಯ ವೀಡಿಯೊ ಕ್ಲಿಪ್ನ್ನು IMA ಮತ್ತೆ ಪೀಠದ ಮುಂದಿಟ್ಟಿತ್ತು. ಇದಲ್ಲದೆ, ರಾಮ್ದೇವ್ ಅವರ ಸಂಸ್ಥೆಯು ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಖಾಯಿಲೆಗಳನ್ನು ಶಾಶ್ವತವಾಗಿ ಗುಣಪಡಿಸುವುದಾಗಿ ಹೇಳಿಕೊಂಡು ಹಲವಾರು ಸುಳ್ಳು ಜಾಹೀರಾತುಗಳನ್ನು ಪ್ರಸಾರ ಮಾಡುವುದನ್ನು ಮುಂದುವರೆಸಿದೆ ಎಂದು ವೈದ್ಯಕೀಯ ಸಂಸ್ಥೆ ಕೊರ್ಟ್ ಗಮನಸೆಳೆದಿದೆ.
ಫೆಬ್ರವರಿ 27ರಂದು ಪತಂಜಲಿ ಆಯುರ್ವೇದ್ ಮತ್ತು ಬಾಲಕೃಷ್ಣ ಅವರಿಗೆ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಮುಂದುವರೆಸಿದ್ದಕ್ಕಾಗಿ ಸುಪ್ರೀಂಕೋರ್ಟ್ ನಿಂದನೆ ನೋಟಿಸ್ ಜಾರಿಗೊಳಿಸಿದೆ ಮತ್ತು ತಾತ್ಕಾಲಿಕವಾಗಿ ವೈದ್ಯಕೀಯ ಜಾಹೀರಾತುಗಳನ್ನು ಪ್ರಕಟಿಸದಂತೆ ನಿಷೇಧ ವಿಧಿಸಿತ್ತು. ಜಾಹೀರಾತುಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳದ ಕೇಂದ್ರ ಸರಕಾರವನ್ನು ಸುಪ್ರೀಂ ಕೋರ್ಟ್ ಕಟುವಾಗಿ ಟೀಕಿಸಿತ್ತು. ಮಾರ್ಚ್ 19, ಏಪ್ರಿಲ್ 2 ಮತ್ತು ಏಪ್ರಿಲ್ 10ರಂದು ವಿಚಾರಣೆಯ ಸಂದರ್ಭದಲ್ಲಿ, ಪೀಠವು ರಾಮ್ದೇವ್ ಮತ್ತು ಬಾಲಕೃಷ್ಣ ಅವರನ್ನು ಖುದ್ದಾಗಿ ಕರೆದು, ನ್ಯಾಯಾಲಯದ ನಿಂದನೆಗಾಗಿ ಏಕೆ ಶಿಕ್ಷಿಸಬಾರದು ಎಂದು ಕಾರಣವನ್ನು ನೀಡುವಂತೆ ಹೇಳಿತ್ತು. ನ್ಯಾಯಾಲಯವು ಇಲ್ಲಿಯವರೆಗೆ ರಾಮ್ದೇವ್ ಮತ್ತು ಬಾಲಕೃಷ್ಣ ಅವರು ನೀಡಿದ ಎರಡು ಕ್ಷಮೆಯಾಚನೆಗಳನ್ನು ತಿರಸ್ಕರಿಸಿದೆ.
New Public Apology published by Patanjali Ayurved, Acharya Balkrishna and Swami Ramdev in relation to the contempt case in #SupremeCourt over misleading ads.
Yesterday, SC had asked if their earlier public apology was as big as their advertisements.https://t.co/DIjFpn2YZP pic.twitter.com/GziXsw9Px1
— Live Law (@LiveLawIndia) April 24, 2024
ಇದನ್ನು ಓದಿ: ನೇಹಾ ಕೊಲೆ ಪ್ರಕರಣ: ‘ತನಿಖೆ ದಿಕ್ಕು ತಪ್ಪುತ್ತಿದೆ’ ಎಂದು ಆರೋಪಿಸಿದ್ದ ತಂದೆ ಕ್ಷಮೆಯಾಚನೆ