ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಏಕನಾಥ್ ಶಿಂದೆ ಸಚಿವರಾಗಿದ್ದಾಗ, ಅವರನ್ನು ಬಂಧಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಜಿಸಿತ್ತು ಎಂದು ಮಂಗಳವಾರ ಶಿವಸೇನೆ (ಯುಬಿಟಿ) ನಾಯಕ ಹಾಗೂ ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ.
“ಏಕನಾಥ್ ಶಿಂದೆ ಅವರನ್ನು ಬಂಧಿಸಲು ಮೋದಿ ಸರ್ಕಾರ ಯೋಜಿಸಿತ್ತು. ಇದು ಸತ್ಯವೋ, ಸುಳ್ಳೋ ಎಂಬುವುದನ್ನು ಮುಖ್ಯಮಂತ್ರಿ ಅವರನ್ನೇ ಕೇಳಬೇಕು” ಎಂದು ರಾವತ್ ಹೇಳಿದ್ದಾರೆ. ಶಿಂದೆ ಅವರನ್ನು ಯಾವ ಪ್ರಕರಣದಲ್ಲಿ ಬಂಧಿಸುತ್ತಿದ್ದರು ಎಂಬ ಪ್ರಶ್ನೆಗೆ, “ಅವರು ಹಲವಾರು ಅಕ್ರಮಗಳನ್ನು ನಡೆಸಿದ್ದಾರೆ. ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆ” ಎಂದು ರಾವತ್ ಹೇಳಿದ್ದಾರೆ.
ಹಲವಾರು ಶಾಸಕರೊಂದಿಗೆ ಮಹಾ ವಿಕಾಸ್ ಅಘಾಡಿಯನ್ನು ತೊರೆಯದಿದ್ದರೆ, ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಿಂದೆಯನ್ನು ಬೆದರಿಸಲಾಗಿತ್ತು. ನೀವು ಶಿವಸೇನೆಯನ್ನು ವಿಭಜಿಸಿ, ಇಲ್ಲವೆ ಬಂಧನ ಎದುರಿಸಿ ಎಂದು ಶಿಂದೆಗೆ ಹೇಳಲಾಗಿತ್ತು” ಎಂದು ಸಂಜಯ್ ರಾವತ್ ತಿಳಿಸಿದ್ದಾರೆ.
ಬಿಜೆಪಿ ಜೊತೆ ಕೈ ಜೊಡಿಸುವಂತೆ ಶಿಂದೆ ಕಣ್ಣೀರಿಟ್ಟಿದ್ದರು : ಆದಿತ್ಯ ಠಾಕ್ರೆ
ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಏಕನಾಥ್ ಶಿಂಧೆ ಅವರು ಸಚಿವರಾಗಿದ್ದಾಗ ಅವರು ಬಿಜೆಪಿಯೊಂದಿಗೆ ಕೈಜೋಡಿಸುವಂತೆ ಸಿಎಂ ಉದ್ಧವ್ ಠಾಕ್ರೆ ಅವರ ಮುಂದೆ ಗದ್ಗದಿತರಾಗಿ ಹತಾಶ ಪ್ರಯತ್ನಗಳನ್ನು ಮಾಡಿದ್ದರು ಎಂದು ಶಿವಸೇನಾ (ಯುಬಿಟಿ) ಶಾಸಕ ಆದಿತ್ಯ ಠಾಕ್ರೆ ಹೇಳಿದ್ದಾರೆ.
ಏಕನಾಥ್ ಶಿಂಧೆ ಅವರು ‘ಮಾತೋಶ್ರೀ’ ಗೆ ಬಂದು ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿದ್ದರು. ಆ ಸಮಯದಲ್ಲಿ ಅವರು ಅಳುತ್ತಿದ್ದರು. ಬಿಜೆಪಿಯೊಂದಿಗೆ ಕೈಜೋಡಿಸುವಂತೆ ನನ್ನ ತಂದೆಯನ್ನು ಹತಾಶವಾಗಿ ಒತ್ತಾಯಿಸುತ್ತಿದ್ದರು ಎಂದು ಆದಿತ್ಯ ಠಾಕ್ರೆ ತಿಳಿಸಿದ್ದಾರೆ.
ಬಿಜೆಪಿ ಜೊತೆ ಸೇರಿಕೊಳ್ಳಿ, ಇಲ್ಲದಿದ್ದರೆ ಬಂಧನ ಎದುರಿಸಿ ಎಂದು ಶಿಂದೆ ಅವರಿಗೆ ಮೋದಿ ಸರ್ಕಾರ ಬೆದರಿಕೆಯೊಡ್ಡಿತ್ತು ಎಂದು ಆದಿತ್ಯ ಠಾಕ್ರೆ ಆರೋಪಿಸಿದ್ದಾರೆ.
ಇದನ್ನೂ ಓದಿ : ಜಾಗತಿಕ ಮಾದ್ಯಮಗಳಲ್ಲಿ ಸುದ್ದಿಯಾದ ಪ್ರಧಾನಿಯ ದ್ವೇಷ ಭಾಷಣ: ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಟೀಕೆಗೆ ಗುರಿಯಾದ ಮೋದಿ