ಭಾರತೀಯ ಯುವ ಕಾಂಗ್ರೆಸ್ ಮುಖ್ಯಸ್ಥ ಬಿ.ವಿ.ಶ್ರೀನಿವಾಸ್ ಅವರು ಮಹಿಳೆ ಮೇಲೆ ಹಲ್ಲೆ ಮತ್ತು ಕಿರುಕುಳ ನೀಡಿದ್ದಾರೆಂಬ ಆರೋಪದ ಮೇಲೆ ಅಸ್ಸಾಂ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿದ್ದಾರೆ.
ಅಸ್ಸಾಂ ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಅಂಗಿತಾ ದತ್ತಾ ಅವರು ನೀಡಿದ ದೂರಿನ ಅನ್ವಯ ಎಫ್ಐಆರ್ ದಾಖಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.
ಕಿರುಕುಳ, ಹಲ್ಲೆ ಮತ್ತು ಮಹಿಳೆಯ ನಮ್ರತೆಯನ್ನು ಆಕ್ರೋಶಗೊಳಿಸುವ ಉದ್ದೇಶದಿಂದ ಪದ ಬಳಕೆ ಅಥವಾ ಸನ್ನೆ ಮಾಡಿರುವ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳ ಅಡಿಯಲ್ಲಿ ದಿಸ್ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಶ್ರೀನಿವಾಸ್ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67ರ ಅಡಿಯಲ್ಲಿಯೂ ಆರೋಪ ಮಾಡಲಾಗಿದೆ. ಎಲೆಕ್ಟ್ರಾನಿಕ್ ವಸ್ತುವಿನ ಮೂಲಕ ಅಶ್ಲೀಲ ಸಂಗತಿಯನ್ನು ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದನ್ನು ಈ ಸೆಕ್ಷನ್ ಶಿಕ್ಷಿಸುತ್ತದೆ.
“ಶ್ರೀನಿವಾಸ್ ನನಗೆ ಮಾನಸಿಕ ಕಿರುಕುಳ ನೀಡಿದ್ದಾರೆ, ಆರು ತಿಂಗಳ ಕಾಲ ನನ್ನ ವಿರುದ್ಧ ತಾರತಮ್ಯ ಎಸಗಿದ್ದಾರೆ. ನನಗೆ ಮೌನವಾಗಿರಲು ಹೇಳಲಾಯಿತು. ನನ್ನ ಆರೋಪಗಳ ಬಗ್ಗೆ ಯಾವುದೇ ತನಿಖೆಯನ್ನು ಪ್ರಾರಂಭಿಸಲಿಲ್ಲ” ಎಂದು ದತ್ತಾ ಏಪ್ರಿಲ್ 18 ರಂದು ದೂರಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಲಾಗಿದೆ ಎಂದು ದತ್ತಾ ಅವರನ್ನು ಆರು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಲಾಯಿತು.
ಶ್ರೀನಿವಾಸ್ ಅವರು ಆರೋಪಗಳನ್ನು ನಿರಾಕರಿಸಿದ್ದಾರೆ. ಏಪ್ರಿಲ್ 18 ರಂದು ದತ್ತಾ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. “ನನ್ನ ವಿರುದ್ಧ ಸಂಪೂರ್ಣವಾಗಿ ಅಸಂಸದೀಯ, ಅಮಾನವೀಯ, ಮಾನಹಾನಿಕರ, ದುರುದ್ದೇಶಪೂರಿತ ಪದಗಳನ್ನು ದತ್ತಾ” ಬಳಸಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
“ನೀವು [ದತ್ತಾ] ಅಸ್ಸಾಂನ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೀರಿ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆಯುವ ವಾತಾವರಣವನ್ನು ಸೃಷ್ಟಿಸಲು ನೀವು ಈ ಅಪಪ್ರಚಾರ, ಮಾನಹಾನಿ ಮಾಡುವ ಕಸರತ್ತನ್ನು ನಡೆಸುತ್ತಿದ್ದೀರಿ ಎಂದು ಖಚಿತವಾಗಿ ತಿಳಿದುಬಂದಿದೆ. ಬಿಜೆಪಿಗೆ ಸೇರಿಕೊಳ್ಳಿ” ಎಂದು ನೋಟಿಸ್ನಲ್ಲಿ ಸೂಚಿಸಲಾಗಿದೆ.
“ಬಿಜೆಪಿ ನಾಯಕರನ್ನು ಭೇಟಿಯಾಗಿದ್ದಾರೆ ಎಂದು ಹೇಳಿಕೊಳ್ಳುವವರು ನನ್ನ ಮನೆ ಮತ್ತು ಕಚೇರಿಯಲ್ಲಿ ಕ್ಲೋಸ್-ಸರ್ಕ್ಯೂಟ್ ಟೆಲಿವಿಷನ್ ದೃಶ್ಯಗಳನ್ನು ಪರಿಶೀಲಿಸಬೇಕು” ಎಂದು ದತ್ತಾ ಸವಾಲು ಹಾಕಿದ್ದಾರೆ.
“ಇದು ನನ್ನ ರಾಜಕೀಯ ಜೀವನದ ಅಂತ್ಯಕ್ಕೆ ಕಾರಣವಾಗಬಹುದು ಎಂದು ಪ್ರಾಮಾಣಿಕವಾಗಿ ನನಗೆ ತಿಳಿದಿದೆ” ಎಂದು ಅವರು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. “ಇದು ನಾನು ತೆರಬೇಕಾದ ದಂಡವಾಗಿದ್ದರೆ ಹಾಗೆಯೇ ಆಗಲಿ” ಎಂದು ತಿಳಿಸಿದ್ದಾರೆ.
ಉಚ್ಚಾಟನೆಯ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ಜನತಾ ಪಕ್ಷದ ನಾಯಕ ಅಮಿತ್ ಮಾಳವಿಯಾ, ಇದು ಕಾಂಗ್ರೆಸ್ನ ಮಹಿಳಾ ಸಬಲೀಕರಣದ ಮಾದರಿಗೆ ಉದಾಹರಣೆಯಾಗಿದೆ ಎಂದು ಟೀಕಿಸಿದ್ದಾರೆ.
ಕಿರುಕುಳ ಆರೋಪ ಮಾಡಿದ ಮಹಿಳೆಯ ಕುಂದುಕೊರತೆಗಳನ್ನು ಆಲಿಸಲು ವೇದಿಕೆ ಕಲ್ಪಿಸುವ ಬದಲು ಅವರನ್ನು ವಜಾಗೊಳಿಸಿದ್ದಾರೆ. ಅಂಕಿತಾ ದತ್ತಾ ಅವರನ್ನು ಕಾಂಗ್ರೆಸ್ನಿಂದ ತೆಗೆದುಹಾಕಿರುವ ರೀತಿ ಮಹಿಳೆಯರಿಗೆ ಸ್ಫೂರ್ತಿಯನ್ನು ತರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿರಿ: ವಿಡಿಯೊ ತಿರುಚಲಾಗಿದೆ, ಲಿಂಗಾಯತರೆಲ್ಲ ಭ್ರಷ್ಟರೆಂದು ಹೇಳಿಲ್ಲ: ಸಿದ್ದರಾಮಯ್ಯ