“2002ರ ನರೋಡಾ ಗಾಮ್ ದಂಗೆ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ 67 ಆರೋಪಿಗಳನ್ನು ಖುಲಾಸೆಗೊಳಿಸಿರುವುದು ಕಾನೂನು ಮತ್ತು ಸಂವಿಧಾನದ ಕೊಲೆ” ಎಂದು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಬಣ್ಣಿಸಿದ್ದಾರೆ.
ಉಪನಗರ ಘಾಟ್ಕೋಪರ್ನಲ್ಲಿ ನಡೆದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದ್ದಾರೆ.
ಖಾರ್ಘರ್ನಲ್ಲಿ ನಡೆದ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಸನ್ಸ್ಟ್ರೋಕ್ನಿಂದ ಜನರು ಸಾವಿಗೀಡಾಗಿರುವ ಕುರಿತೂ ಪ್ರತಿಕ್ರಿಯಿಸಿರುವ ಅವರು, “ಜನರ ಸಾವಿಗೆ ಮಹಾರಾಷ್ಟ್ರ ಸರ್ಕಾರವೇ ನೇರ ಹೊಣೆ. ಹೀಗಾಗಿ ನ್ಯಾಯಾಂಗ ತನಿಖೆ ನಡೆಯಬೇಕು” ಎಂದು ಒತ್ತಾಯಿಸಿದ್ದಾರೆ.
ಗೋಧ್ರಾ ರೈಲು ದಹನ ಘಟನೆಯ ನಂತರ 2002ರಲ್ಲಿ ಅಹಮದಾಬಾದ್ನ ನರೋದಾ ಗಾಮ್ ಪ್ರದೇಶದಲ್ಲಿ ನಡೆದ ಗಲಭೆಯಲ್ಲಿ 11 ಮುಸ್ಲಿಮರ ಹತ್ಯೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದಿರುವ ಎಲ್ಲಾ 67 ಆರೋಪಿಗಳನ್ನು ಗುಜರಾತ್ನ ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿದೆ.
“ಕಾನೂನು ಮತ್ತು ಸಂವಿಧಾನವನ್ನು ಕೊಲೆ ಮಾಡಲಾಗಿದೆ. ಇದು ನಿನ್ನೆಯ ತೀರ್ಪಿನಿಂದ ಸಾಬೀತಾಗಿದೆ” ಎಂದು ಪವಾರ್ ಆರೋಪಿಸಿದ್ದಾರೆ.
ಖಾರ್ಘರ್ ಸನ್ಸ್ಟ್ರೋಕ್ ಸಾವಿನ ಕುರಿತು ಮಾತನಾಡಿದ ಎನ್ಸಿಪಿ ಮುಖ್ಯಸ್ಥರು, “ಏಪ್ರಿಲ್ 16 ರಂದು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸುವಲ್ಲಿ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ನಿರ್ಲಕ್ಷ್ಯ ವಹಿಸಿದೆ” ಎಂದು ದೂರಿದ್ದಾರೆ.
ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆದರೆ ಮಾತ್ರ ದುರಂತಕ್ಕೆ ನ್ಯಾಯ ಸಿಗುತ್ತದೆ. ವಿರೋಧ ಪಕ್ಷಗಳನ್ನು ಮುಗಿಸಲು ಭಾರತೀಯ ಜನತಾ ಪಕ್ಷ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಪವಾರ್ ಹೇಳಿದ್ದಾರೆ.
“(ಎನ್ಸಿಪಿ ನಾಯಕ) ಅನಿಲ್ ದೇಶಮುಖ್ 100 ಕೋಟಿ ರೂಪಾಯಿ ಲಂಚ ಪಡೆದ ಆರೋಪದ ಮೇಲೆ 13 ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದರು. ಅವರ ಶಿಕ್ಷಣ ಸಂಸ್ಥೆಗೆ ಬಂದಿರುವ ಒಂದೂವರೆ ಕೋಟಿ ರೂಪಾಯಿ ದೇಣಿಗೆಯನ್ನು ಲಂಚ ಎಂದು ಚಾರ್ಜ್ ಶೀಟ್ನಲ್ಲಿ ತನಿಖಾ ಸಂಸ್ಥೆ ವಿವರಿಸಿದೆ. ನಾನು ಕೂಡ ಮುಖ್ಯಸ್ಥನಾಗಿದ್ದೇನೆ. ಹಲವಾರು ಶಿಕ್ಷಣ ಸಂಸ್ಥೆಗಳಿಗೆ ನಾನು ದೇಣಿಗೆ ತೆಗೆದುಕೊಂಡರೆ, ಅದು ಲಂಚವೇ?” ಎಂದು ಪ್ರಶ್ನಿಸಿದ್ದಾರೆ.
ಮತ್ತೊಬ್ಬ ಎನ್ಸಿಪಿ ನಾಯಕ ನವಾಬ್ ಮಲಿಕ್ ಇನ್ನೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ ಎಂದು ಪವಾರ್ ಬೇಸರ ವ್ಯಕ್ತಪಡಿಸಿದ್ದಾರೆ. “ದೇಶದಲ್ಲಿ ಮೂಲಭೂತವಾದ ಬೆಳೆಯುತ್ತಿದ್ದು, ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ಯಾವುದೇ ಬೆಲೆ ತೆತ್ತಾದರೂ ಅದರ ವಿರುದ್ಧ ಹೋರಾಡಬೇಕಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿರಿ: ಪುಲ್ವಾಮ ದಾಳಿ ಸಂದರ್ಶನ: ದೇಶದ ಮುಂದೆ ಮೋದಿಯನ್ನು ಬೆತ್ತಲುಗೊಳಿಸಿದ್ದಕ್ಕೆ ಸತ್ಯಪಾಲ್ಗೆ ಸಿಬಿಐ ನೋಟಿಸ್ ಎಂದ ಕಾಂಗ್ರೆಸ್