ಅದಾನಿ ಹಗರಣ ಮತ್ತು ಹಿಂಡನ್ ಬರ್ಗ್ ವರದಿ ಸಂಬಂಧ ಏನು ಮಾಡಬೇಕೆಂಬುದನ್ನು ಪರಿಶೀಲಿಸುವ ತಜ್ಞರ ಸಮಿತಿಯ ಹೆಸರುಗಳನ್ನು ಒಳಗೊಂಡಂತೆ ಕೇಂದ್ರ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ವರದಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ (ಫೆಬ್ರುವರಿ 17) ತಿರಸ್ಕರಿಸಿದೆ.
“ನಾವು ನಿಮ್ಮಿಂದ ಮುಚ್ಚಿದ ಲಕೋಟೆಯ ಸಲಹೆಯನ್ನು ಸ್ವೀಕರಿಸುವುದಿಲ್ಲ. ಏಕೆಂದರೆ ನಾವು ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಬಯಸುತ್ತೇವೆ. ಮುಚ್ಚಿದ ಲಕೋಟೆಯಲ್ಲಿ ನಾವು ಸಲಹೆಗಳನ್ನು ಸ್ವೀಕರಿಸಿದರೆ, ಮತ್ತೊಂದು ದೃಷ್ಟಿಕೋನವನ್ನು ಮುಚ್ಚಿಟ್ಟಂತಾಗುತ್ತದೆ. ಏಕೆಂದರೆ ಇದು ಸರ್ಕಾರ ನೇಮಿಸಿದ ಸಮಿತಿ ಎಂದು ಜನರು ಭಾವಿಸುತ್ತಾರೆ” ಎಂದು ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ.ಪರ್ದಿವಾಲಾ ಅವರಿದ್ದ ಪೀಠ ಹೇಳಿದೆ.
ಪ್ರಕರಣ: ಅದಾನಿ ಗ್ರೂಪ್ ವಂಚನೆ ಮಾಡಿದೆ ಎಂದು ಆರೋಪಿಸಿ ಶಾರ್ಟ್-ಸೆಲ್ಲರ್ ಹಿಂಡೆನ್ಬರ್ಗ್ ರಿಸರ್ಚ್ ಪ್ರಕಟಿಸಿದ ವರದಿಗೆ ಸಂಬಂಧಿಸಿದ ನಾಲ್ಕು ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಹಿಂಡನ್ಬರ್ಗ್ ವರದಿ ಹೊರಬಿದ್ದ ಬಳಿಕ, ಅದಾನಿ ಸಂಸ್ಥೆಯು 100 ಶತಕೋಟಿ ಡಾಲರ್ಗಿಂತ ಹೆಚ್ಚಿನ ಮೌಲ್ಯದ ಷೇರುಗಳ ನಷ್ಟ ಅನುಭವಿಸಿದೆ.
ತಜ್ಞರ ಸಮಿತಿಯ ಸಲಹೆಗಳು ಎಲ್ಲಿಂದ ಬಂದವು? ಕೇಂದ್ರ ಮತ್ತು ಸೆಬಿಯಿಂದ ಸುಪ್ರೀಂ ಕೋರ್ಟ್ ಪೀಠವು ಸಲಹೆಗಳನ್ನು ಕೋರಿತ್ತು. ನಿಯಂತ್ರಕ ಚೌಕಟ್ಟನ್ನು ಬಲಪಡಿಸುವ ಮತ್ತು ಭಾರತೀಯ ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸುವ ಮಾರ್ಗಗಳನ್ನು ಸೂಚಿಸಲು ತಜ್ಞರ ಸಮಿತಿಯ ರಚನೆಯನ್ನು ಪ್ರಸ್ತಾಪಿಸಲಾಗಿತ್ತು.
ತಜ್ಞರ ಸಮಿತಿಯನ್ನು ರಚಿಸುವ ಕುರಿತು ನ್ಯಾಯಾಲಯದ ಸಲಹೆಗೆ ಕೇಂದ್ರವು ಒಪ್ಪಿಗೆ ನೀಡಿತ್ತು. ಆದರೆ ನಿಯಂತ್ರಣ ಚೌಕಟ್ಟಿನಲ್ಲಿ ಅಸಮರ್ಪಕತೆಗಳಿದ್ದು, ವಿದೇಶಿ ಮತ್ತು ದೇಶೀಯ ಹೂಡಿಕೆದಾರರಿಗೆ ತಿಳಿಸದ ರೀತಿಯಲ್ಲಿ ಸಮಿತಿಯನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿತ್ತು.
ಇದನ್ನೂ ಓದಿರಿ: 2018-2022ರ ನಡುವೆ 79% ಸವರ್ಣಿಯರು ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕ: ಪ್ರಾತಿನಿಧ್ಯದ ಪ್ರಶ್ನೆಗೆ ಉತ್ತರ ಸಿಗುವುದೇ?
ನ್ಯಾಯಾಲಯವು ಶುಕ್ರವಾರ ತನ್ನ ತೀರ್ಪನ್ನು ಕಾಯ್ದಿರಿಸಿದೆ. “ಅದು ಸರ್ಕಾರ ನೇಮಿಸಿದ ಸಮಿತಿ” ಎಂಬ ದೂಷಣೆಯಿಂದ ಪಾರಾಗಲು ತನ್ನದೇ ಆದ ಸಮಿತಿಯನ್ನು ನೇಮಿಸುವುದಾಗಿ ಹೇಳಿದೆ.
ಕೇಂದ್ರಕ್ಕೆ ಮತ್ತೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್: ಹಿಂಡನ್ಬರ್ಗ್ ವರದಿಯಿಂದ ಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಸರಕಾರ ತಿಳಿಸಿರುವುದನ್ನು ನ್ಯಾಯಾಲಯ ಪರಿಗಣಿಸಿಲ್ಲ.
“ಮಾರುಕಟ್ಟೆಯ ಮೇಲೆ ಯಾವುದೇ ಪರಿಣಾಮವಾಗಿಲ್ಲ ಎಂದು ನೀವು ಹೇಳುತ್ತಿದ್ದೀರಿ. ಆದರೆ ಅಂಕಿಅಂಶಗಳು ಹೇಳುವಂತೆ ಹೂಡಿಕೆದಾರರು ಲಕ್ಷ ಕೋಟಿ ಮೌಲ್ಯದ ನಷ್ಟವನ್ನು ಎದುರಿಸಿದ್ದಾರೆ” ಎಂದಿದೆ ಕೋರ್ಟ್.
ಸುಪ್ರೀಂ ಕೋರ್ಟ್ ಮುಂದಿವೆ ನಾಲ್ಕು ಅರ್ಜಿಗಳು
- ಹಿಂಡೆನ್ಬರ್ಗ್ ರಿಸರ್ಚ್ ಸಂಸ್ಥಾಪಕ ನಾಥನ್ ಆಂಡರ್ಸನ್ ಮತ್ತು ಭಾರತದಲ್ಲಿನ ಅವರ ಸಹಚರರ ವಿರುದ್ಧ ತನಿಖೆ ನಡೆಸಬೇಕು, ಪ್ರಥಮ ಮಾಹಿತಿ ವರದಿಯನ್ನು (ಎಫ್ಐಆರ್) ದಾಖಲಿಸಬೇಕು ಎಂದು ವಕೀಲ ಮನೋಹರ್ ಲಾಲ್ ಶರ್ಮಾ ಅವರು ಮನವಿ ಮಾಡಿದ್ದಾರೆ. ಅಂತಹ ವರದಿಗಳನ್ನು ಮೊದಲು ಸೆಬಿಗೆ ಸಲ್ಲಿಸಿ ಪರಿಶೀಲಿಸದ ಹೊರತು ಇಂತಹ ಕಂಪನಿಗಳ ಬಗ್ಗೆ ಮಾಧ್ಯಮಗಳು ವರದಿ ಮಾಡದಂತೆ ತಡೆಯಬೇಕು ಎಂದು ಶರ್ಮಾ ಅವರು ಅರ್ಜಿಯಲ್ಲಿ ಕೋರಿದ್ದಾರೆ.
- ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ವರದಿಯ ಬಗ್ಗೆ ತನಿಖೆ ನಡೆಸಬೇಕೆಂದು ವಕೀಲ ವಿಶಾಲ್ ತಿವಾರಿ ಅವರು ಕೋರಿದ್ದಾರೆ. 500 ಕೋಟಿಗೂ ಹೆಚ್ಚಿನ ಸಾಲ ಮಂಜೂರಾತಿ ನೀತಿಯನ್ನು ಮೇಲ್ವಿಚಾರಣೆ ಮಾಡಲು ವಿಶೇಷ ಸಮಿತಿಯನ್ನು ರಚಿಸುವಂತೆಯೂ ಅವರು ಕೇಳಿಕೊಂಡಿದ್ದಾರೆ.
- ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಅವರು ತಮ್ಮ ಅರ್ಜಿಯಲ್ಲಿ, “ಅದಾನಿ ಸಮೂಹವನ್ನು ಬಹು ಕಾನೂನುಗಳ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಬೇಕು” ಎಂದು ಆಗ್ರಹಿಸಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ (LIC) ಸಂಸ್ಥೆಗಳು ಅದಾನಿ ಷೇರುಗಳಲ್ಲಿ ಹೂಡಿಕೆ ಮಾಡಿರುವ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.
- ಹಿಂಡೆನ್ಬರ್ಗ್ ವರದಿಯನ್ನು ಆಧರಿಸಿ ಅದಾನಿ ಗುಂಪಿನ ವಿರುದ್ಧ ತನಿಖೆ ಮಾಡಬೇಕು ಎಂದು ಅನಾಮಿಕಾ ಜೈಸ್ವಾಲ್ ಸಲ್ಲಿಸಿದ ಮತ್ತೊಂದು ಅರ್ಜಿ ಒತ್ತಾಯಿಸಿದೆ.